ಆ್ಯಪ್ನಗರ

ಸೇವೆ ಒರೆಗೆ ಹಚ್ಚಿದ ಸಾರಿಗೆ

ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ತನ್ನ ಸೇವೆಯನ್ನು ತಾನೇ ಒರೆಗೆ ಹಚ್ಚಿದೆ. ಟ್ವಿಟರ್‌ ಮೂಲಕ ಪ್ರಯಾಣಿಕರ ಮುಕ್ತ ಅಭಿಪ್ರಾಯ ಸಂಗ್ರಹಕ್ಕೆ ಮುಂದಾಗಿರುವ ಕೆಎಸ್‌ಆರ್‌ಟಿಸಿ, ಮೂರೇ ದಿನಗಳಲ್ಲಿ ಶೇ.40ರಷ್ಟು ಅಂಕ ಪಡೆದು ಉತ್ತೀರ್ಣವಾಗಿದೆ.

vijaya karnataka 29 Jan 2018, 3:58 pm

ಗಂಗಾಧರ ಬಂಡಿಹಾಳ, ಕೊಪ್ಪಳ

ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ತನ್ನ ಸೇವೆಯನ್ನು ತಾನೇ ಒರೆಗೆ ಹಚ್ಚಿದೆ. ಟ್ವಿಟರ್‌ ಮೂಲಕ ಪ್ರಯಾಣಿಕರ ಮುಕ್ತ ಅಭಿಪ್ರಾಯ ಸಂಗ್ರಹಕ್ಕೆ ಮುಂದಾಗಿರುವ ಕೆಎಸ್‌ಆರ್‌ಟಿಸಿ, ಮೂರೇ ದಿನಗಳಲ್ಲಿ ಶೇ.40ರಷ್ಟು ಅಂಕ ಪಡೆದು ಉತ್ತೀರ್ಣವಾಗಿದೆ.

ಸರಕಾರಿ ಸಂಸ್ಥೆಗಳು ಈಗಾಗಲೇ ಸಾಮಾಜಿಕ ಜಾಲತಾಣದ ಮೊರೆಹೋಗಿವೆ. ತಮ್ಮ ಸೇವೆಯ ಗುಣಮಟ್ಟ ಹೆಚ್ಚಿಸಿಕೊಳ್ಳಲು ಸಾರ್ವಜನಿಕರಿಂದ ಅಭಿಪ್ರಾಯ ಸಂಗ್ರಹಿಸಲು ಯೋಜಿಸಿವೆ. ಬರೀ ರಾಜಕೀಯ ಚಟುವಟಿಕೆಗಳ ಬಗ್ಗೆ ಚರ್ಚೆಯಾಗುತ್ತಿದ್ದ ಸಾಮಾಜಿಕ ಜಾಲತಾಣದಲ್ಲಿ ಸರಕಾರಿ ಸೇವೆಗಳ ಬಗ್ಗೆಯೂ ಇತ್ತೀಚೆಗೆ ಚರ್ಚೆಯಾಗುತ್ತಿದೆ. ರಾಜ್ಯ ರಸ್ತೆ ಸಾರಿಗೆ ಸಂಸ್ಥೆ, ರಾಜ್ಯಾದ್ಯಂತ ತನ್ನ ಸೇವಾ ಜಾಲ ಹೊಂದಿದೆ. ಸಾರಿಗೆ ಸಂಸ್ಥೆಯ ಬಸ್‌ಗಳು ಗ್ರಾಮೀಣ ಭಾಗದಿಂದ ನಗರ, ಮಹಾನಗರ, ಹೊರ ರಾಜ್ಯಗಳಿಗೂ ಸಂಚರಿಸುತ್ತಿವೆ. ಸಾಮಾನ್ಯ ಬಸ್‌ಗಳಿಂದ ಹಿಡಿದು ಐಶಾರಾಮಿ ಬಸ್‌ ಸೇವೆ ಒದಗಿಸುತ್ತಿದೆ.

ಸಾರಿಗೆ ಅಚ್ಚುಮೆಚ್ಚು: ರೈಲ್ವೆ ಸೌಲಭ್ಯಕ್ಕಿಂತ ರಾಜ್ಯದ ಜನ ಬಸ್‌ ಸೌಲಭ್ಯವನ್ನೇ ಹೆಚ್ಚು ನೆಚ್ಚಿದ್ದಾರೆ. ಬಹುತೇಕ ಕಡೆ ರೈಲ್ವೆ ಮಾರ್ಗಗಳಿಲ್ಲದೇ ಇರುವುದು ಸಾರಿಗೆ ಸಂಸ್ಥೆಯ ಬಸ್‌ ಸೌಲಭ್ಯಕ್ಕೆ ಸಹಜವಾಗಿ ಬೇಡಿಕೆ ಬಂದಿದೆ. ಬಹುತೇಕ ಪ್ರಯಾಣಿಕರು ಬಸ್‌ಗಳಲ್ಲೇ ಪ್ರಯಾಣಿಸುತ್ತಿದ್ದಾರೆ. ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (ಕೆಎಸ್‌ಆರ್‌ಟಿಸಿ) ಟ್ವಿಟರ್‌ ಹಾಗೂ ಫೇಸ್‌ಬುಕ್‌ ಖಾತೆ ಹೊಂದಿದೆ. ಟ್ವಿಟರ್‌ ಹಾಗೂ ಫೇಸ್‌ಬುಕ್‌ ಖಾತೆ ಮೂಲಕ ಸಾರ್ವಜನಿಕರಿಗೆ ತನ್ನ ಸೇವೆಯನ್ನು ಪ್ರಚುರಪಡಿಸುತ್ತಿದೆ. ಜನವರಿ 25ರಂದು ತನ್ನ ಟ್ವಿಟರ್‌ ಖಾತೆಯಲ್ಲಿ ಪ್ರಯಾಣಿಕರ ಅಭಿಪ್ರಾಯ ಸಂಗ್ರಹಿಸುತ್ತಿದೆ. ಈ ಕುರಿತು ಸಂಸ್ಥೆ, ಪ್ರಯಾಣಿಕರ ಪ್ರತಿಕ್ರಿಯೆಗಳನ್ನು ದಾಖಲಿಸಲಾಗುತ್ತಿದೆ. ಸಾರಿಗೆ ಸಂಸ್ಥೆ ಸೇವೆಯ ಬಗ್ಗೆ ನಾಲ್ಕು ಪ್ರತಿಕ್ರಿಯೆಗಳಿಗೆ ಅವಕಾಶ ಕಲ್ಪಿಸಿದೆ. ಮೊದಲ ಆಯ್ಕೆ 'ಕಳಪೆ', ಎರಡನೇ ಆಯ್ಕೆ 'ಪರವಾಗಿಲ್ಲ', ಮೂರನೇ ಆಯ್ಕೆ 'ಉತ್ತಮ' ಹಾಗೂ ನಾಲ್ಕನೇ ಉತ್ತರವಾಗಿ 'ಅತ್ಯುತ್ತಮ' ಎಂಬ ಆಯ್ಕೆಗೆ ಪ್ರಯಾಣಿಕರು ತಮ್ಮ ಮತ ಹಾಕಬೇಕಿದೆ.

ಮಿಶ್ರ ಅಭಿಪ್ರಾಯ: ಕೆಎಸ್‌ಆರ್‌ಟಿಸಿಯ ಟ್ವಿಟರ್‌ ಖಾತೆಯಲ್ಲಿ ಪ್ರಯಾಣಿಕರ ಪ್ರತಿಕ್ರಿಯೆಗಳ ಏರಿಳಿತ ಕಂಡುಬರುತ್ತಿದೆ. ಬಹುತೇಕ ಪ್ರಯಾಣಿಕರು 'ಉತ್ತಮ' ಎನ್ನುವ ಅಭಿಪ್ರಾಯವನ್ನೇ ಆಯ್ಕೆಮಾಡಿಕೊಂಡಿದ್ದಾರೆ. 'ವಿಜಯ ಕರ್ನಾಟಕ'ಕ್ಕೆ ಲಭ್ಯವಾದ ಮಾಹಿತಿ ಪ್ರಕಾರ, ಜ.27ರಂದು ಮಧ್ಯಾಹ್ನ 12.30ರ ವೇಳೆಗೆ 260 ಜನ ಮತ ಚಲಾಯಿಸಿದ್ದರು. ಇದಕ್ಕೂ ಮುನ್ನ 257 ಜನ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಹೆಚ್ಚೆಚ್ಚು ಸಾರ್ವಜನಿಕರು ಅಭಿಪ್ರಾಯಗಳನ್ನು ದಾಖಲಿಸುತ್ತಿದ್ದಾರೆ. ಅವುಗಳಲ್ಲಿ ಮಿಶ್ರ ಅಭಿಪ್ರಾಯ ಕಂಡುಬಂದಿದೆ.

ಶೇ.13ರಷ್ಟು ಜನರು ಸಾರಿಗೆ ಸಂಸ್ಥೆ ಸೇವೆ 'ಕಳಪೆ' ಎಂದಿದ್ದರೆ, ಶೇ.24ರಷ್ಟು ಜನರು, 'ಪರವಾಗಿಲ್ಲ' ಎಂದಿದ್ದಾರೆ. ಶೇ.40ರಷ್ಟು 'ಉತ್ತಮ' ಎಂಬ ಅಭಿಪ್ರಾಯ ವ್ಯಕ್ತವಾಗಿದ್ದರೆ, ಶೇ.23ರಷ್ಟು ಜನರು, 'ಅತ್ಯುತ್ತಮ' ಎಂದು ಶಹಬ್ಬಾಸ್‌ಗಿರಿ ಕೊಟ್ಟಿದ್ದಾರೆ. ಸರಾಸರಿ ಪ್ರತಿಕ್ರಿಯೆ ಪರಿಶೀಲಿಸಿದಾಗ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಸೇವೆ 'ಉತ್ತಮ' ಎನ್ನುವ ಅಭಿಪ್ರಾಯ ಮೂಡಿಬಂದಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ