ಆ್ಯಪ್ನಗರ

‘ಹೈ-ಕ ಅಭಿವೃದ್ಧಿಗೆ ವಿಶೇಷ ಯೋಜನೆ’

ಹೈದರಾಬಾದ್‌ ಕರ್ನಾಟಕ ಭಾಗದ ಜಿಲ್ಲೆಗಳ ಹಿಂದುಳಿದಿರುವಿಕೆ ಮನಗಂಡಿರುವ ಸರಕಾರ, ವಿಶೇಷ ಅಭಿವೃದ್ಧಿ ಹೊಸ ಯೋಜನೆ ಜಾರಿಗೊಳಿಸುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರ್‌.ಶಂಕರ್‌ ಹೇಳಿದರು.

Vijaya Karnataka 18 Sep 2018, 5:00 am
ಕೊಪ್ಪಳ : ಹೈದರಾಬಾದ್‌ ಕರ್ನಾಟಕ ಭಾಗದ ಜಿಲ್ಲೆಗಳ ಹಿಂದುಳಿದಿರುವಿಕೆ ಮನಗಂಡಿರುವ ಸರಕಾರ, ವಿಶೇಷ ಅಭಿವೃದ್ಧಿ ಹೊಸ ಯೋಜನೆ ಜಾರಿಗೊಳಿಸುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರ್‌.ಶಂಕರ್‌ ಹೇಳಿದರು.
Vijaya Karnataka Web KPL-KPL17PHOTO01


ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಹೈದರಾಬಾದ್‌ -ಕರ್ನಾಟಕ ವಿಮೋಚನಾ ದಿನಾಚರಣೆ ನಿಮಿತ್ತ ರಾಷ್ಟ್ರಧ್ವಜಾರೋಹಣ ನೆರವೇರಿಸಿ ಸೋಮವಾರ ಮಾತನಾಡಿದರು.

ಹೈದರಾಬಾದ್‌ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ಸ್ಥಾಪಿಸಿ ನಾನಾ ಯೋಜನೆಗಳನ್ನು ಕೈಗೊಂಡು ಜನಪರ ನೀತಿ, ಸಾಮಾಜಿಕ ನ್ಯಾಯ ಮತ್ತು ರೈತರ ಹಿತಾಸಕ್ತಿಗೆ ಆದ್ಯತೆ ನೀಡುತ್ತ ಬಂದಿದ್ದು, ಮೂಲ ಸೌಕರ್ಯ ಕಲ್ಪಿಸಲಾಗುತ್ತಿದೆ.

ಹೈದರಾಬಾದ್‌ ಕರ್ನಾಟಕ ಪ್ರದೇಶ ಅಭಿವೃದ್ಧಿ ಯೋಜನೆಯಡಿ 2018-19 ನೇ ಸಾಲಿನಲ್ಲಿ ಜಿಲ್ಲೆಗೆ ಸಾಂಸ್ಥಿಕ ವಲಯದಲ್ಲಿ 5584.69 ಲಕ್ಷ ರೂ., ಮೂಲ ಸೌಕರ್ಯ ವಲಯದಲ್ಲಿ 4556.95 ಲಕ್ಷ ರೂ. ಅನುದಾನ ನಿಗದಿಪಡಿಸಿದೆ. ಅನುದಾನಕ್ಕೆ ಕ್ರಿಯಾ ಯೋಜನೆ ಅನುಮೋದನೆ ಹಂತದಲ್ಲಿದೆ.

ನಗರೋತ್ಥಾನ ಹಂತ-3 ರಡಿ ಜಿಲ್ಲೆಯ 9 ನಗರ ಸ್ಥಳೀಯ ಸಂಸ್ಥೆಗಳಿಗೆ 109.50 ಕೋಟಿ ರೂ.ಅನುದಾನ ಹಂಚಿಕೆಯಾಗಿದ್ದು, ಈಗಾಗಲೇ ಕಾಮಗಾರಿ ಪ್ರಗತಿಯಲ್ಲಿವೆ. ಎಸ್‌ಎಫ್‌ಸಿ ಮುಕ್ತನಿಧಿಯಡಿ ನಗರ ಸ್ಥಳೀಯ ಸಂಸ್ಥೆಗಳಿಗೆ 12.54 ಕೋಟಿ ರೂ. ಹಂಚಿಕೆಯಾಗಿದ್ದು, 101 ಕಾಮಗಾರಿಗಳಿಗೆ ಮಂಜೂರಾತಿ ನೀಡಿ ಕೆಲಸ ಪ್ರಗತಿಯಲ್ಲಿದೆ.

14 ನೇ ಹಣಕಾಸು ಸಾಮಾನ್ಯ ಮೂಲ ಅನುದಾನದಲ್ಲಿ 18.88 ಕೋಟಿ ರೂ. ಹಂಚಿಕೆಯಂತೆ 117 ಕಾಮಗಾರಿ ಪ್ರಗತಿಯಲ್ಲಿವೆ. ನರೇಗಾ ಯೋಜನೆಯಡಿ ಜಿಲ್ಲೆಯಲ್ಲಿ 2,12,497 ಕುಟುಂಬಗಳನ್ನು ನೋಂದಾಯಿಸಿ ಜಾಬ್‌ ಕಾರ್ಡ್‌ ನವೀಕರಿಸಿ ದೃಢೀಕರಣಗೊಳಿಸಿದೆ. ಗುಳೆ ತಡೆಗಟ್ಟಲು 2018-19 ನೇ ಸಾಲಿಗೆ 155 ಕೋಟಿ ರೂ.ಗೆ ಕ್ರಿಯಾ ಯೋಜನೆ ತಯಾರಿಸಿ ಸೆಪ್ಟೆಂಬರ್‌ 14 ರ ವರೆಗೆ ಉದ್ಯೋಗ ನೀಡಿ 13.97 ಲಕ್ಷ ಮಾನವ ದಿನ ಸೃಜಿಸಲಾಗಿದೆ. ಇದಕ್ಕಾಗಿ 72.19 ಕೋಟಿ ರೂ. ಅನುದಾನ ಬಳಕೆ ಮಾಡಿದೆ.

ಶಾಸಕ ಕೆ.ರಾಘವೇಂದ್ರ ಹಿಟ್ನಾಳ್‌ ಅಧ್ಯಕ್ಷತೆ ವಹಿಸಿದ್ದರು.

ಸಂಸದ ಸಂಗಣ್ಣ ಕರಡಿ, ಜಿ.ಪಂ.ಅಧ್ಯಕ್ಷ ಕೆ.ರಾಘವೇಂದ್ರ ಹಿಟ್ನಾಳ್‌, ತಾ.ಪಂ.ಅಧ್ಯಕ್ಷ ಬಾಲಚಂದ್ರನ್‌, ಜಿಲ್ಲಾಧಿಕಾರಿ ಪಿ.ಸುನಿಲ್‌ಕುಮಾರ್‌, ಜಿ.ಪಂ.ಸಿಇಒ ವೆಂಕಟರಾಜಾ, ಎಸ್ಪಿ ರೇಣುಕಾ ಸುಕುಮಾರ್‌, ಸಹಾಯಕ ಆಯುಕ್ತೆ ಸಿ.ಡಿ.ಗೀತಾ ಇದ್ದರು. ಮಕ್ಕಳಿಂದ ನಾನಾ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.

===
ಕೊಪ್ಪಳ ಜಿಲ್ಲೆಗೆ ಸಮರ್ಪಕ ಕುಡಿವ ನೀರಿನ ಪೂರೈಕೆಗಾಗಿ ರಾಷ್ಟ್ರೀಯ ಗ್ರಾಮೀಣ ಕುಡಿವ ನೀರು ಸರಬರಾಜು ಯೋಜನೆಯಡಿ 141.93 ಕೋಟಿ ರೂ.ಗೆ ಕ್ರಿಯಾ ಯೋಜನೆ ತಯಾರಿಸಿದೆ. ಕುಷ್ಟಗಿ ಹಾಗೂ ಯಲಬುರ್ಗಾ ತಾಲೂಕಿನ 331 ಗ್ರಾಮಗಳ ಡಿಬಿಪಟಿ ಆಧರಿತ ಕುಡಿಯುವ ನೀರು ಸರಬರಾಜು ಯೋಜನೆ 697.90 ಕೋಟಿ ರೂ. ಮೊತ್ತದಲ್ಲಿ ಕೈಗೊಳ್ಳಲಾಗುತ್ತಿದೆ.

-ಆರ್‌.ಶಂಕರ್‌ ,ಉಸ್ತುವಾರಿ ಸಚಿವ



ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ