ಆ್ಯಪ್ನಗರ

ನಿಡಶೇಸಿ : ಮಾದರಿ ತೋಟಗಾರಿಕೆ ಫಾರ್ಮ್‌

ತಾಲೂಕಿನ ನಿಡಶೇಸಿ ಗ್ರಾಮದಲ್ಲಿರುವ ತೋಟಗಾರಿಕೆ ಇಲಾಖೆ ರಾಜ್ಯವಲಯದ ಫಾರ್ಮ್‌ನ್ನು ಮಾದರಿ(ಮಾಡೆಲ್‌) ತೋಟಗಾರಿಕೆ ಫಾರ್ಮ್‌ ಆಗಿ ಅಭಿವೃದ್ಧಿಪಡಿಸುವ ಪೂರಕ ಕಾಮಗಾರಿಗಳು ಆರಂಭವಾಗಿವೆ ಎಂದು ಜಿಲ್ಲಾ ತೋಟಗಾರಿಕೆ ಉಪ ನಿರ್ದೇಶಕ ಕೃಷ್ಣ ಉಕ್ಕುಂದ ಹೇಳಿದರು.

Vijaya Karnataka 6 Jul 2018, 5:00 am
ಕುಷ್ಟಗಿ ; ತಾಲೂಕಿನ ನಿಡಶೇಸಿ ಗ್ರಾಮದಲ್ಲಿರುವ ತೋಟಗಾರಿಕೆ ಇಲಾಖೆ ರಾಜ್ಯವಲಯದ ಫಾರ್ಮ್‌ನ್ನು ಮಾದರಿ(ಮಾಡೆಲ್‌) ತೋಟಗಾರಿಕೆ ಫಾರ್ಮ್‌ ಆಗಿ ಅಭಿವೃದ್ಧಿಪಡಿಸುವ ಪೂರಕ ಕಾಮಗಾರಿಗಳು ಆರಂಭವಾಗಿವೆ ಎಂದು ಜಿಲ್ಲಾ ತೋಟಗಾರಿಕೆ ಉಪ ನಿರ್ದೇಶಕ ಕೃಷ್ಣ ಉಕ್ಕುಂದ ಹೇಳಿದರು.
Vijaya Karnataka Web KPL-KPL5KST04


ಇಲ್ಲಿನ ತಹಸಿಲ್‌ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಗುರುವಾರ ಮಾತನಾಡಿದರು. ಸರಕಾರ ನಿಡಶೇಸಿ ತೋಟಗಾರಿಕೆ ಫಾರ್ಮ್‌ನ್ನು ಮಾದರಿ ತೋಟಗಾರಿಕೆ ಫಾರ್ಮ್‌ನ್ನಾಗಿ ಅಭಿವೃದ್ಧಿಪಡಿಸಲು ಅಂದಾಜು 4ಕೋಟಿ ರೂ.ಗಳಲ್ಲಿ ನಾನಾ ಕಾಮಗಾರಿ ಕೈಗೆತ್ತಿಕೊಳ್ಳಲು ಮುಂದಾಗಿದೆ. 58 ಎಕರೆ ವಿಸ್ತೀರ್ಣ ಹೊಂದಿರುವ ಈ ಫಾರ್ಮ್‌ ಸುತ್ತ ಈಗಾಗಲೇ ಆವರಣಗೋಡೆ ನಿರ್ಮಾಣ ಕಾಮಗಾರಿ ಆರಂಭಗೊಂಡಿದೆ. ಆವರಣಗೋಡೆ ನಿರ್ಮಾಣಕ್ಕೆ ಹಿಂದೆ ಗುತ್ತಿಗೆ ಪಡೆದಿದ್ದ ಗುತ್ತಿಗೆದಾರ ಕೈಬಿಟ್ಟಿದ್ದು, ಬೇರೆಯವರಿಗೆ ಕಾಮಗಾರಿಯನ್ನು ವಹಿಸಲಾಗಿದೆ. ಪಾಲಿಹೌಸ್‌ ನಿರ್ಮಾಣ ಕೆಲಸ ಮುಗಿದಿದೆ. ಗಾಳಿ ರಭಸಕ್ಕೆ ಪಾಲಿಹೌಸ್‌ಗಳು ಕಿತ್ತಿದ್ದು ಇನ್ನೂ ಹಸ್ತಾಂತರವಾಗಿಲ್ಲ. ಪಾಲಿ ಹೌಸ್‌ ದುರಸ್ತಿಗೊಳಿಸಿಯೇ ಗುತ್ತಿಗೆದಾರರು ಇಲಾಖೆಗೆ ಹಸ್ತಾಂತರಿಸಲು ಸೂಚಿಸಲಾಗಿದೆ.

ಇಸ್ರೇಲ್‌ ತಂತ್ರಜ್ಞಾನ: ಒಣಬೇಸಾಯದ ತೋಟಗಾರಿಕೆ(ಡ್ರೈಲ್ಯಾಂಡ್‌ ಹಾರ್ಟಿಕಲ್ಚರ್‌) ವ್ಯವಸ್ಥೆಯನ್ನು ನಿಡಶೇಸಿ ಫಾರ್ಮ್‌ನಲ್ಲಿ ಜಾರಿಗೊಳಿಸಲಾಗುತ್ತಿದೆ. ಫಾರ್ಮ್‌ನಲ್ಲಿ ನಾನಾ ಸಸ್ಯಕ್ಷೇತ್ರಗಳನ್ನು ರಚಿಸಿ ಅವುಗಳಿಗೆ ಇಸ್ರೇಲ್‌ ಮಾದರಿಯಲ್ಲಿ ಸ್ವಯಂಚಾಲಿತ ಹನಿ ನೀರಾವರಿ ವ್ಯವಸ್ಥೆಯನ್ನು ಅಳವಡಿಸಲಾಗುತ್ತಿದೆ. ಕಡಿಮೆ ನೀರಿನಲ್ಲಿ ಹೆಚ್ಚು ವಿಸ್ತೀರ್ಣದ ಪ್ರದೇಶವನ್ನು ತೋಟಗಾರಿಕೆಗೆ ಒಳಪಡಿಸುವ ಆಧುನಿಕ ತಂತ್ರಜ್ಞಾನವನ್ನು ಬಳಸಲಾಗುತ್ತಿದೆ.

ಸಸ್ಯ ಕ್ಷೇತ್ರ: ಫಾರ್ಮ್‌ನಲ್ಲಿ 8ಬಗೆಯ ದ್ರಾಕ್ಷಿ ಬಳ್ಳಿ ಬೆಳೆಸುವುದು, ಸೀತಾಫಲ, ಕವಳೆಹಣ್ಣು ಕ್ಷೇತ್ರಗಳಿಗೆ ಪ್ರಾಶಸ್ತ್ಯ ನೀಡಲಾಗುತ್ತಿದೆ. ಇವು ಕಡಿಮೆ ನೀರಿನಲ್ಲಿ ಬೆಳೆಯಬಹುದಾದ ಸಸ್ಯಗಳಾಗಿವೆ. ಇವುಗಳೊಂದಿಗೆ ಗೋಡಂಬಿ, ಮಾವು, ಅಂಜೂರ, ಟರ್ಕಿ ಅಂಜೂರ ಕ್ಷೇತ್ರಗಳನ್ನು ರಚಿಸಲಾಗುವುದು. ಪಾಲಿಹೌಸ್‌ಗಳಲ್ಲಿ ನಾನಾ ಬಗೆಯ ತರಕಾರಿ, ಕ್ಯಾಪ್ಸಿಕ್ಯಾಮ್‌, ಹೂವು ಬೆಳೆಯಲಾಗುವುದು.

ಅಭಿವೃದ್ಧಿ: ತೋಟಗಾರಿಕೆ ಫಾರ್ಮ್‌ನಲ್ಲಿ ರಚಿಸುವ ನಾನಾ ಕ್ಷೇತ್ರಗಳಿಗೆ ಹೋಗಿ ಬರಲು ರಸ್ತೆ ವ್ಯವಸ್ಥೆ ಮಾಡಲಾಗುವುದು. ಫಾರ್ಮ್‌ ಮಧ್ಯೆ ಇರುವ ನಾಲೆಗೆ ತಡೆಗೋಡೆ ನಿರ್ಮಿಸಿ ನೀರು ನಿಲ್ಲಿಸಲಾಗುವುದು. ವಾಟರ್‌ಶೆಡ್‌(ಜಲಾನಯನ) ಕೆಲಸಗಳನ್ನೂ ಮಾಡಲಾಗುತ್ತಿದೆ. ಫಾರ್ಮ್‌ನಲ್ಲಿನ ಮಣ್ಣು ಫಲವತ್ತಾಗಿಲ್ಲ. ಸೌಳು ಭೂಮಿಯಲ್ಲೇ ತೋಟಗಾರಿಕೆ ಬೆಳೆಗಳನ್ನು ಅಭಿವೃದ್ಧಿಪಡಿಸುವುದು ಹೇಗೆ ಎಂಬುದನ್ನು ರೈತರಿಗೆ ತೋರಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಇಲ್ಲಿ ರೈತರಿಗೆ ತರಬೇತಿ ಶಿಬಿರಗಳನ್ನೂ ಆಯೋಜಿಸಲಾಗುವುದು. ಇಲ್ಲಿ ಬೆಳೆಯುವ ನಾನಾ ಹಣ್ಣು, ತರಕಾರಿ, ಹೂಗಳನ್ನು ಮಾರಾಟ ಮಾಡಲು ಗಜೇಂದ್ರಗಡ ರಸ್ತೆ ಬದಿ ಜಮೀನು ಖರೀದಿಸಿ ಮಾರಾಟ ಹಾಗೂ ಸಂಸ್ಕರಣ ಘಟಕವನ್ನು ಆರಂಭಿಸಲಾಗುವುದು ಎಂದರು.

ಈ ಸಂದರ್ಭದಲ್ಲಿ ತೋಟಗಾರಿಕೆ ಹಿರಿಯ ಸಹಾಯಕ ನಿರ್ದೇಶಕ ಕೆ.ಎಂ.ರಮೇಶ ಮತ್ತು ಸಿಬ್ಬಂದಿ ಹಾಜರಿದ್ದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ