ಆ್ಯಪ್ನಗರ

ಗರ್ಭಿಣಿ ಬಾಲಕಿಯರು: ಕೊಪ್ಪಳ ಫಸ್ಟ್‌

ಆಟ, ಪಾಠ ಜತೆಗೆ ಪಾಲಕರೊಂದಿಗೆ ಕಾಲ ಕಳೆಯಬೇಕಾದ ವಯಸ್ಸಿನಲ್ಲಿ, ಗರ್ಭಧಾರಣೆ ಮೂಲಕ ತಾನೇ ಮಕ್ಕಳು ಹೆರುವ ಪರಿಸ್ಥಿತಿಗೆ ಎದುರಾದವರ ಪ್ರಮಾಣದಲ್ಲಿ ಕೊಪ್ಪಳ ಪ್ರಥಮ ಸ್ಥಾನದಲ್ಲಿದೆ.

ವಿಕ ಸುದ್ದಿಲೋಕ 21 Apr 2017, 9:59 am

-ಜಿ.ಕೆ. ಮಂಜುನಾಥ್‌ ಚಿಕ್ಕಬಳ್ಳಾಪುರ

ಆಟ, ಪಾಠ ಜತೆಗೆ ಪಾಲಕರೊಂದಿಗೆ ಕಾಲ ಕಳೆಯಬೇಕಾದ ವಯಸ್ಸಿನಲ್ಲಿ, ಗರ್ಭಧಾರಣೆ ಮೂಲಕ ತಾನೇ ಮಕ್ಕಳು ಹೆರುವ ಪರಿಸ್ಥಿತಿಗೆ ಎದುರಾದವರ ಪ್ರಮಾಣದಲ್ಲಿ ಕೊಪ್ಪಳ ಪ್ರಥಮ ಸ್ಥಾನದಲ್ಲಿದೆ.

ಹದಿಹರೆಯದ ವಯಸ್ಸಿನಲ್ಲಿ ಗರ್ಭಧಾರಣೆಯಿಂದಾಗುವ ಪರಿಣಾಮ ಕುರಿತು ಅರಿವು ಮೂಡಿಸಲು ಹಲವು ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ. ಆದರೂ, ರಾಜ್ಯದ 7 ಜಿಲ್ಲೆಯಲ್ಲಿ ಶೇ. 30ಕ್ಕಿಂತ ಹೆಚ್ಚು ಮಂದಿ ಗರ್ಭಧಾರಣೆಯಾಗಿರುವ ಮಾಹಿತಿ ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ(ಎನ್‌ಎಫ್‌ಎಚ್‌ಎಸ್‌)ವರದಿಯಲ್ಲಿ ಲಭ್ಯವಾಗಿದೆ.

ಪ್ರತಿ ಮನೆ ಸಮೀಕ್ಷೆ ಕೈಗೊಳ್ಳುವ ಎನ್‌ಎಫ್‌ಎಚ್‌ಎಸ್‌, ಲಿಂಗಾನುಪಾತ, ಸಾಕ್ಷರತೆ ಪ್ರಮಾಣ, ಬಾಲ್ಯವಿವಾಹ, ತಾತ್ಕಾಲಿಕ, ಕಾಯಂ ಸಣ್ಣ ಕುಟುಂಬ, ತಾಯಂದಿರ ಆರೋಗ್ಯ, ಗರ್ಭಿಣಿಯಾದಾಗ ಎಷ್ಟು ಬಾರಿ ತಪಾಸಣೆ ಮಾಡಿಸಿಕೊಳ್ಳಲಾಗಿತ್ತು, ಚುಚ್ಚು ಮದ್ದು ಪಡೆದಿರುವುದು, ಆಸ್ಪತ್ರೆಯಲ್ಲಿ ಹೆರಿಗೆ, ಮಕ್ಕಳಿಗೆ ಪೋಲಿಯೋ ಲಸಿಕೆ, ರಕ್ತಹೀನತೆ, ರಕ್ತದೊತ್ತಡದಿಂದ ಬಳಲುತ್ತಿರುವುದು ಮತ್ತಿತರ ಹಲವು ಮಾಹಿತಿಯ ಜತೆಗೆ ಹದಿಹರೆಯ ವಯೋಮಾನದಲ್ಲಿ ಗರ್ಭಧಾರಣೆ ಮಾಡಿದವರ ಕುರಿತು ಸಮೀಕ್ಷಾ ವರದಿಯಲ್ಲಿ ನಮೂದಿಸಲಾಗುತ್ತದೆ.

1992-1993ನೇ ಸಾಲಿನಲ್ಲಿ ಮೊದಲ ಬಾರಿ ಸಮೀಕ್ಷೆ ಕೈಗೊಂಡಿತ್ತು. ಎರಡನೆ ಬಾರಿ 1998-1999ನೇ ಸಾಲಿನಲ್ಲಿ, ಮೂರನೆ ಬಾರಿ 2005-2006ನೇ ಸಾಲಿನಲ್ಲಿ ಹಾಗೂ 2015-16ನೇ ಸಾಲಿನಲ್ಲಿ ನಾಲ್ಕನೇ ಬಾರಿ ಸಮೀಕ್ಷೆ ಕೈಗೊಂಡಿತ್ತು.

2005-2006ನೇ ಸಾಲಿನಲ್ಲಿನ ಮೂರನೇ ಸಮೀಕ್ಷೆ ಪ್ರಕಾರ ರಾಜ್ಯದಲ್ಲಿ 18 ವರ್ಷ ವಯೋಮಾನಕ್ಕೂ ಮೊದಲೇ ಗರ್ಭಿಣಿಯರಾದವರ ಪ್ರಮಾಣ ಶೇ.41.2ರಷ್ಟಿತ್ತು. 2015-2016ನೇ ಸಾಲಿನಲ್ಲಿ ಇದರ ಪ್ರಮಾಣ ಶೇ.23.2ಕ್ಕೆ ಕುಸಿದಿದೆಯಾದರೂ, ಹಲವು ಜಿಲ್ಲೆಯಲ್ಲಿ ಶೇ.30ಕ್ಕಿಂತ ಹೆಚ್ಚಿರುವುದು ಆಘಾತಕಾರಿ ವಿಷಯವಾಗಿದೆ.

ಏಳು ಜಿಲ್ಲೇಲಿ ಶೇ.30ಕ್ಕಿಂತ ಹೆಚ್ಚು: ರಾಜ್ಯದ ಏಳು ಜಿಲ್ಲೆಯಲ್ಲಿ ಶೇ.30ಕ್ಕಿಂತ ಹೆಚ್ಚು ಹೆಣ್ಣು ಮಕ್ಕಳಲ್ಲಿ ಗರ್ಭಧಾರಣೆಯಾಗಿದೆ.

18 ವರ್ಷ ವಯೋಮಾನಕ್ಕೂ ಮೊದಲೇ ವಿವಾಹ ಬಂಧನಕ್ಕೊಳಗಾಗುತ್ತಾರೆ. ಆಟವಾಡುವ ವಯಸ್ಸಿನಲ್ಲಿ ಕೂಸು ಹೆರುವ ಪರಿಸ್ಥಿತಿಗೆ ತಲುಪುತ್ತಿದ್ದಾರೆ. ಇಂತಹವರನ್ನು ಹೆಚ್ಚಾಗಿ ಒಳಗೊಂಡ ಜಿಲ್ಲೆಯಲ್ಲಿ ಕೊಪ್ಪಳ ಪ್ರಥಮ ಸ್ಥಾನದಲ್ಲಿದೆ.

ಕೊಪ್ಪಳದಲ್ಲಿ ಶೇ.35.9ರಷ್ಟಿರುವ ಪೈಕಿ, ಗ್ರಾಮೀಣ ಭಾಗದಲ್ಲೆ ಶೇ.36ರಷ್ಟು ಮಂದಿ ಇದ್ದಾರೆ. ಎರಡನೇ ಸ್ಥಾನದಲ್ಲಿರುವ ಬಾಗಲಕೋಟೆಯಲ್ಲಿ ಶೇ.35.8(ಗ್ರಾಮೀಣ ಭಾಗದಲ್ಲಿ ಶೇ.41.1), ಯಾದಗರಿಯಲ್ಲಿ ಶೇ.35.5(ಗ್ರಾಮೀಣ ಭಾಗದಲ್ಲಿ ಶೇ.37.8), ಬೆಳಗಾವಿಯಲ್ಲಿ ಶೇ.34.9(ಗ್ರಾಮೀಣ ಭಾಗದಲ್ಲಿ ಶೇ.34.8), ಬಿಜಾಪುರದಲ್ಲಿ 33.6(ಗ್ರಾಮೀಣ ಭಾಗದಲ್ಲಿ ಶೇ. 36), ಚಾಮರಾಜನಗರದಲ್ಲಿ ಶೇ.32.3(ಗ್ರಾಮೀಣ ಭಾಗದಲ್ಲಿ 33.9), ಬಳ್ಳಾರಿಯಲ್ಲಿ ಶೇ. 31.4(ಗ್ರಾಮೀಣ ಭಾಗದಲ್ಲಿ 37.7)ರಷ್ಟು ಮಂದಿ ಗರ್ಭಧಾರಣೆಯಾದವರಿದ್ದಾರೆ.

ಇನ್ನುಳಿದ ಜಿಲ್ಲೆಗಳಾದ ಚಿಕ್ಕಬಳ್ಳಾಪುರದಲ್ಲಿ ಶೇ.23.9(ಗ್ರಾಮೀಣ ಭಾಗದಲ್ಲಿ ಶೇ.27.5), ಬೆಂಗಳೂರು ನಗರದಲ್ಲಿ ಶೇ. 14.9, ಬೆಂಗಳೂರು ಗ್ರಾಮಾಂತರದಲ್ಲಿ ಶೇ. 25.8(ಗ್ರಾಮೀಣ ಭಾಘದಲ್ಲಿ ಶೇ.28.5), ಬೀದರ್‌ನಲ್ಲಿ ಶೇ. 21.7(ಗ್ರಾಮೀಣ ಭಾಗದಲ್ಲಿ ಶೇ.28), ಚಿಕ್ಕಮಗಳೂರಿನಲ್ಲಿ ಶೇ.23.8(ಗ್ರಾಮೀಣ ಭಾಗದಲ್ಲಿ ಶೇ.24), ಚಿತ್ರದುರ್ಗದಲ್ಲಿ ಶೇ.23.9(ಗ್ರಾಮೀಣ ಭಾಗದಲ್ಲಿ ಶೇ.24.4), ದಕ್ಷಿಣ ಕನ್ನಡದಲ್ಲಿ ಶೇ. 8.5(ಗ್ರಾಮೀಣ ಭಾಗದಲ್ಲಿ ಶೇ.11.2), ದಾವಣಗೆರೆಯಲ್ಲಿ ಶೇ.25.4(ಗ್ರಾಮೀಣ ಭಾಗದಲ್ಲಿ ಶೇ. 31.4), ಧಾರವಾಡದಲ್ಲಿ ಶೇ. 23.1(ಗ್ರಾಮೀಣ ಭಾಗದಲ್ಲಿ ಶೇ. 23.4), ಗದಗದಲ್ಲಿ ಶೇ. 22.7(ಗ್ರಾಮೀಣ ಭಾಗದಲ್ಲಿ ಶೇ. 23.8), ಕಲಬುರುಗಿಯಲ್ಲಿ ಶೇ. 27.9(ಗ್ರಾಮೀಣ ಭಾಗದಲ್ಲಿ ಶೇ. 30.5), ಹಾಸನದಲ್ಲಿ ಶೇ. 14.8(ಗ್ರಾಮೀಣ ಭಾಗದಲ್ಲಿ ಶೇ. 15.2), ಹಾವೇರಿಯಲ್ಲಿ ಶೇ. 22(ಗ್ರಾಮೀಣ ಭಾಗದಲ್ಲಿ ಶೇ. 24.5), ಕೊಡಗುನಲ್ಲಿ ಶೇ. 11.7(ಗ್ರಾಮೀಣ ಭಾಗದಲ್ಲಿ ಶೇ. 12.9), ಕೋಲಾರದಲ್ಲಿ ಶೇ. 20(ಗ್ರಾಮೀಣ ಭಾಗದಲ್ಲಿ 20.5) ಮಂದಿ ಇದ್ದಾರೆ.

ಮಂಡ್ಯ ಜಿಲ್ಲೆಯಲ್ಲಿ ಶೇ. 22.2(ಗ್ರಾಮೀಣ ಭಾಗದಲ್ಲಿ ಶೇ. 21.6), ಮೈಸೂರಿನಲ್ಲಿ ಶೇ. 23.4(ಗ್ರಾಮೀಣ ಭಾಗದಲ್ಲಿ ಶೇ. 26.8), ರಾಯಚೂರಿನಲ್ಲಿ ಶೇ. 28.3(ಗ್ರಾಮೀಣ ಭಾಗದಲ್ಲಿ ಶೇ. 31.2), ರಾಮನಗರದಲ್ಲಿ ಶೇ. 23.7(ಗ್ರಾಮೀಣ ಭಾಗದಲ್ಲಿ ಶೇ. 24.1), ಶಿವಮೊಗ್ಗದಲ್ಲಿ ಶೇ.11.6(ಗ್ರಾಮೀಣ ಭಾಗದಲ್ಲಿ ಶೇ. 11.2), ತುಮಕೂರಿನಲ್ಲಿ ಶೇ. 19.3(ಗ್ರಾಮೀಣ ಭಾಗದಲ್ಲಿ ಶೇ. 21.7), ಉಡುಪಿಯಲ್ಲಿ ಶೇ. 6.3(ಗ್ರಾಮೀಣ ಭಾಗದಲ್ಲಿ ಶೇ. 5), ಉತ್ತರ ಕನ್ನಡದಲ್ಲಿ ಶೇ. 15.2(ಗ್ರಾಮೀಣ ಭಾಗದಲ್ಲಿ ಶೇ. 16.7) ಮಂದಿ ಇರುವುದಾಗಿ ಸಮೀಕ್ಷೆ ವರದಿಯಲ್ಲಿ ವಿವರಿಸಲಾಗಿದೆ.

ಬಾಲ್ಯ ವಿವಾಹ, ಹದಿಹರೆಯ ವಯಸ್ಸಿನಲ್ಲಿ ಗರ್ಭಧಾರಣೆಯಾದರೆ, ಆರೋಗ್ಯದ ಮೇಲೆ ಪರಿಣಾಮ ಬೀರಲಿದೆ. ಈ ಕುರಿತು ಜಾಗೃತಿ ಮೂಡಿಸಲಾಗುತ್ತಿದೆಯಾದರೂ, ಸಂಪೂರ್ಣ ನಿಯಂತ್ರಣ ಸಾಧ್ಯವಾಗದಿರುವುದು ಈ ವರದಿಯಿಂದಲೇ ತಿಳಿಯಲಿದೆ. ಆರೋಗ್ಯ ಇಲಾಖೆ ವರದಿಯೂ ಇದಕ್ಕೆ ಪೂರಕವಾಗಿದೆ.

ಹದಿಹರೆಯ ವಯಸ್ಸಿನಲ್ಲಿ ಗರ್ಭಧಾರಣೆಗೆ ಬಾಲ್ಯ ವಿವಾಹದ ಜತೆಗೆ ಹಲವು ಕಾರಣವಿದೆ.

ಬಡತನ, ಮೂಢನಂಬಿಕೆ ಮತ್ತಿತರ ಕಾರಣದಿಂದ ಬಾಲ್ಯ ವಿವಾಹ ಮಾಡಲಾಗುತ್ತದೆ. ಜತೆಗೆ, ಪ್ರೀತಿ, ಪ್ರೇಮದ ಬಲೆಗೆ ಸಿಲುಕಿ, ಅಪ್ರಾಪ್ತ ವಯಸ್ಸಿನಲ್ಲಿ ವಿವಾಹವಾಗಿರುವವರು ಜಿಲ್ಲೆಯಲ್ಲಿದ್ದಾರೆ. ಅತ್ಯಾಚಾರ ಕೃತ್ಯಕ್ಕೆ ಬಲಿಯಾಗಿ, ಗರ್ಭಿಣಿಯರಾಗಿರುವ ಉದಾಹರಣೆಯೂ ಇಲ್ಲಿದೆ. ಹೀಗೆ ಹಲವು ಕಾರಣ ನೀಡಬಹುದಾಗಿದ್ದು, ಬಾಲ್ಯ ವಿವಾಹ ನಿಯಂತ್ರಣಕ್ಕೆ ಕಟ್ಟುಇಟ್ಟಿನ ಕ್ರಮ ಕೈಗೊಳ್ಳಲಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಮುನಿರಾಜು ತಿಳಿಸಿದ್ದಾರೆ.

Vijaya Karnataka Web teen pregnancy pregnancies in koppal
ಗರ್ಭಿಣಿ ಬಾಲಕಿಯರು: ಕೊಪ್ಪಳ ಫಸ್ಟ್‌


ಬಾಲ್ಯ ವಿವಾಹದಿಂದ ಆರೋಗ್ಯದ ಮೇಲೆ ಪರಿಣಾಮ ಬೀರಲಿದೆ. ನಿಯಂತ್ರಿಸುವ ನಿಟ್ಟಿನಲ್ಲಿ ಹಲವು ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ. ಜತೆಗೆ, ಆಶಾ, ಅಂಗನವಾಡಿ ಕಾರ್ಯಕರ್ತೆಯರು ಪ್ರತಿ ತಿಂಗಳು 3ನೇ ಶನಿವಾರ ಗ್ರಾಮ ಆರೋಗ್ಯ ಪೌಷ್ಟಿಕ ದಿನ ಆಚರಿಸಿ, ಬಾಲ್ಯವಿವಾಹದಿಂದಾಗುವ ದುಷ್ಪರಿಣಾಮ ಕುರಿತು ಅರಿವು ಮೂಡಿಸುತ್ತಿದ್ದಾರೆ. ಈ ಹಿಂದಿನ ಅಂಕಿ ಅಂಶಕ್ಕೆ ಹೋಲಿಕೆ ಮಾಡಿದರೆ, ಗರ್ಭಧಾರಣೆಯಾಗುವ 18 ವರ್ಷದೊಳಗಿನವರ ಸಂಖ್ಯೆ ಕಡಿಮೆಯಾಗಿದೆ.

-ಡಾ.ರವಿಶಂಕರ್‌, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ