ಆ್ಯಪ್ನಗರ

20ರಿಂದ ಎಡ, ಬಲದಂಡೆ ಕಾಲುವೆಗೆ ನೀರು

ತುಂಗಭದ್ರಾ ಜಲಾಶಯದಿಂದ ಕೃಷಿಗಾಗಿ ಎಡದಂಡೆ ಹಾಗೂ ಬಲದಂಡೆ ಕಾಲುವೆಗಳಿಗೆ ಜುಲೈ 20 ರಿಂದ ನವೆಂಬರ್ 30ರವರೆಗೆ ನೀರು ಬಿಡಲು ತೀರ್ಮಾನಿಸಲಾಗಿದೆ ಎಂದು ಪಶುಸಂಗೋಪನಾ ಮತ್ತು ಮೀನುಗಾರಿಕೆ ಸಚಿವ ವೆಂಕಟರಾವ್ ನಾಡಗೌಡ ಹೇಳಿದರು.

Vijaya Karnataka 17 Jul 2018, 12:00 am
ಕೊಪ್ಪಳ: ತುಂಗಭದ್ರಾ ಜಲಾಶಯದಿಂದ ಕೃಷಿಗಾಗಿ ಎಡದಂಡೆ ಹಾಗೂ ಬಲದಂಡೆ ಕಾಲುವೆಗಳಿಗೆ ಜುಲೈ 20 ರಿಂದ ನವೆಂಬರ್ 30ರವರೆಗೆ ನೀರು ಬಿಡಲು ತೀರ್ಮಾನಿಸಲಾಗಿದೆ ಎಂದು ಪಶುಸಂಗೋಪನಾ ಮತ್ತು ಮೀನುಗಾರಿಕೆ ಸಚಿವ ವೆಂಕಟರಾವ್ ನಾಡಗೌಡ ಹೇಳಿದರು.
Vijaya Karnataka Web KPL-KPL16PHOTO01


ತಾಲೂಕಿನ ಮುನಿರಾಬಾದಿನ ಕಾಡಾ ಕಚೇರಿಯಲ್ಲಿ ಸೋಮವಾರ ನಡೆದ ತುಂಗಭದ್ರಾ ಯೋಜನೆಯ 11ನೇ ನೀರಾವರಿ ಸಲಹಾ ಸಮಿತಿ ಸಭೆಯ ಬಳಿಕ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ‘‘ತುಂಗಭದ್ರಾ ಎಡದಂಡೆ ಮುಖ್ಯ ಕಾಲುವೆಗೆ ಜುಲೈ 20ರಿಂದ ನವೆಂಬರ್ 30 ರವರೆಗೆ 4,100 ಕ್ಯೂಸೆಕ್ ಅಥವಾ ಲಭ್ಯತೆ ಆಧರಿಸಿ ನೀರು ಬಿಡಲಾಗುವುದು. ಬಲದಂಡೆ ಮೇಲ್ಮಟ್ಟದ ಕಾಲುವೆಗೆ ಜು.20 ರಿಂದ ನ.30 ರವರೆಗೆ 1,200 ಕ್ಯೂಸೆಕ್, ಬಲದಂಡೆ ಕೆಳಮಟ್ಟದ ಕಾಲುವೆಗೆ ಜು.20 ರಿಂದ ನ.30 ರವರೆಗೆ 750 ಕ್ಯೂಸೆಕ್, ಎಡದಂಡೆ ಮೇಲ್ಮಟ್ಟದ ಕಾಲುವೆಗೆ ಜು.20 ರಿಂದ ನ.30 ರವರೆಗೆ 200 ಕ್ಯೂಸೆಕ್ ಹಾಗೂ ರಾಯ ಬಸವಣ್ಣ ಕಾಲುವೆಗೆ ಜೂನ್ 1ರಿಂದ ಡಿಸೆಂಬರ್ 10 ರವರೆಗೆ 200 ಕ್ಯೂಸೆಕ್‌ನಂತೆ ಲಭ್ಯತೆ ಆಧರಿಸಿ ನೀರು ಬಿಡಲಾಗುವುದು. ಹಿಂಗಾರು ಹಂಗಾಮಿನ ಬೆಳೆಗಳಿಗೆ ನೀರು ಹರಿಸುವ ಕುರಿತು ಮುಂದಿನ ಸಭೆಯಲ್ಲಿ ತೀರ್ಮಾನ ತೆಗೆದುಕೊಳ್ಳಲಾಗುತ್ತದೆ’’ ಎಂದರು.

ಪರ್ಯಾಯ ವ್ಯವಸ್ಥೆ: ‘‘ತುಂಗಭದ್ರಾ ಜಲಾಶಯದಲ್ಲಿ ತುಂಬಿರುವ ಹೂಳು ತೆಗೆಯುವುದು ಅಸಾಧ್ಯ ಎನ್ನುವುದು ಸರಕಾರದ ಮಟ್ಟದಲ್ಲಿ ತೀರ್ಮಾನವಾಗಿದೆ. ಹಿಂದಿನ ಸರಕಾರಗಳು ಗ್ಲೋಬಲ್ ಟೆಂಡರ್ ಕರೆದರೂ ಯಾರೊಬ್ಬರೂ ಮುಂದೆ ಬಂದಿರಲಿಲ್ಲ. ಹೂಳು ತಡೆಗಟ್ಟುವ ಹಾಗೂ ನೀರು ಹಿಡಿದಿಟ್ಟುಕೊಳ್ಳುವುದಕ್ಕೆ ಪರ್ಯಾಯ ವ್ಯವಸ್ಥೆ ಕಲ್ಪಿಸಲು ಚಿಂತನೆ ನಡೆಸಲಾಗುವುದು. ನವಲಿ ಬಳಿ ಸಮನಾಂತರ ಜಲಾಶಯ ನಿರ್ಮಾಣಕ್ಕೆ ಸಂಬಂಧಿಸಿದ ಪ್ರಸ್ತಾವನೆ ಸರಕಾರದ ಮುಂದಿದೆ. ಜಲಾಶಯದ ನೀರಿನ ಸದ್ಬಳಕೆಗೆ ಎಲ್ಲ ರೀತಿಯ ಪ್ರಯತ್ನವನ್ನು ಸರಕಾರ ಮಾಡಲಿದೆ’’ ಎಂದು ತಿಳಿಸಿದರು.

ಪುನರ್‌ಪರಿಶೀಲನೆಗೆ ಮನವಿ:‘‘ಪಾವಗಡ ತಾಲೂಕಿಗೆ ತುಂಗಭದ್ರಾ ಜಲಾಶಯದ ನೀರೊದಗಿಸುವ ಕುರಿತು ಅಂತಿಮ ತೀರ್ಮಾನವಾಗಿಲ್ಲ. ಹಿಂದಿನ ಸರಕಾರದ ತೀರ್ಮಾನ ಪುನರ್‌ಪರಿಶೀಲಿಸುವಂತೆ ಸಿಎಂ ಹಾಗೂ ಜಲಸಂಪನ್ಮೂಲ ಸಚಿವರಲ್ಲಿ ಮನವಿ ಮಾಡಲಾಗುವುದು. ಜಲಾಶಯದಲ್ಲಿ ನೀರಿನ ಸಂಗ್ರಹ ಸಾಮರ್ಥ್ಯ ಕಡಿಮೆಯಾಗಿರುವುದರಿಂದ ಈ ಭಾಗದ ಜನರಿಗೆ ಸಮರ್ಪಕವಾಗಿ ನೀರು ಸಿಗುತ್ತಿಲ್ಲ’’ ಎಂದರು.

ಈ ಸಂದರ್ಭದಲ್ಲಿ ಸಂಸದರಾದ ಸಂಗಣ್ಣ ಕರಡಿ, ಬಿ.ವಿ.ನಾಯಕ್, ಶಾಸಕರಾದ ಕೆ.ರಾಘವೇಂದ್ರ ಹಿಟ್ನಾಳ್, ಪರಣ್ಣ ಮುನವಳ್ಳಿ, ಬಸವರಾಜ ದಢೇಸೂಗೂರು, ಜಿ.ಸೋಮಶೇಖರ ರೆಡ್ಡಿ, ಗಣೇಶ, ಸೋಮಲಿಂಗಪ್ಪ, ಬಸವರಾಜ ಪಾಟೀಲ್ ಇಟಗಿ, ಬಸವನಗೌಡ ದದ್ದಲ್, ಮೂರು ಜಿಲ್ಲೆಗಳ ಜಿಲ್ಲಾಧಿಕಾರಿಗಳು ಸೇರಿ ಇತರರಿದ್ದರು.

...........
ಗಣೇಕಲ್ ಜಲಾಶಯಕ್ಕೆ ನೀರು

‘‘ರಾಯಚೂರು ಜಿಲ್ಲಾಧಿಕಾರಿ ಮನವಿ ಮೇರೆಗೆ ಕುಡಿಯುವ ನೀರಿನ ಉದ್ದೇಶಕ್ಕಾಗಿ ಜುಲೈ 16ರಿಂದಲೇ ಎಡದಂಡೆ ನಾಲೆಗೆ 1 ಟಿಎಂಸಿ ನೀರು ಹರಿಸಲು ತೀರ್ಮಾನಿಸಿದೆ. ಗಣೇಕಲ್ ಜಲಾಶಯ ಹಾಗೂ ಕೆರೆಗಳನ್ನು ತುಂಬಿಸಲು ಈ ನೀರನ್ನು ಬಳಸಿಕೊಳ್ಳಲಾಗುವುದು’’ ಎಂದು ಸಚಿವ ವೆಂಕಟರಾವ್ ನಾಡಗೌಡ ಹೇಳಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ