ಆ್ಯಪ್ನಗರ

ಡೊಣ್ಣೆಗುಡ್ಡ ಜಾತ್ರೆ ಭಕ್ತರಿಗೆ ನೀರಿನ ಸಮಸ್ಯೆ

ಮೂರು ವರ್ಷಗಳಿಗೊಮ್ಮೆ ಆಚರಣೆಯಾಗುವ ತಾಲೂಕಿನ ಡೊಣ್ಣೆಗುಡ್ಡದ ದುರ್ಗಾದೇವಿ ಜಾತ್ರೆಗೆ ಪ್ರತಿ ವರ್ಷ ಲಕ್ಷಾಂತರ ಭಕ್ತರು ಸೇರುತ್ತಿದ್ದು, ಇದೀಗ ಮಾ 6,7 ಮತ್ತು 8ರಂದು ನಡೆಯಲಿರುವ ಜಾತ್ರೆಗೆ ಕುಡಿವ ನೀರು ಒದಗಿಸುವುದು ತಾಲೂಕು ಆಡಳಿತಕ್ಕೆ ದೊಡ್ಡ ಸವಾಲಾಗಿ ಪರಿಣಮಿಸಿದೆ.

Vijaya Karnataka 2 Mar 2019, 5:00 am
ಕುಷ್ಟಗಿ : ಮೂರು ವರ್ಷಗಳಿಗೊಮ್ಮೆ ಆಚರಣೆಯಾಗುವ ತಾಲೂಕಿನ ಡೊಣ್ಣೆಗುಡ್ಡದ ದುರ್ಗಾದೇವಿ ಜಾತ್ರೆಗೆ ಪ್ರತಿ ವರ್ಷ ಲಕ್ಷಾಂತರ ಭಕ್ತರು ಸೇರುತ್ತಿದ್ದು, ಇದೀಗ ಮಾ 6,7 ಮತ್ತು 8ರಂದು ನಡೆಯಲಿರುವ ಜಾತ್ರೆಗೆ ಕುಡಿವ ನೀರು ಒದಗಿಸುವುದು ತಾಲೂಕು ಆಡಳಿತಕ್ಕೆ ದೊಡ್ಡ ಸವಾಲಾಗಿ ಪರಿಣಮಿಸಿದೆ.
Vijaya Karnataka Web KPL-KPL1KST02


ಗ್ರಾಮದ ಜನಸಂಖ್ಯೆ ಅಂದಾಜು 800 ರಿಂದ 900 ಇದೆ. ಇಷ್ಟು ಜನರಿಗೆ ಸಾಕಾಗುವಷ್ಟು ನೀರು ಈಗ ದೊರೆಯುತ್ತಿಲ್ಲ. ಗ್ರಾಮದ ಯಲಬುಣಚಿ ರಸ್ತೆಯಲ್ಲಿರುವ ಕಿರು ನೀರು ಪೂರೈಕೆ ತೊಟ್ಟಿಯಿಂದ ಜನರು ನೀರು ಪಡೆಯುತ್ತಿದ್ದಾರೆ. ಈ ವರ್ಷ ಮಳೆಯಾಗದ್ದಕ್ಕೆ ಅಂತರ್ಜಲ ಮಟ್ಟ ತೀವ್ರ ಕುಸಿತ ಕಂಡಿದ್ದು, ಗ್ರಾಮಸ್ಥರಿಗೆ ಮತ್ತು ಜಾತ್ರೆಗೆ ಬರಲಿರುವ ಲಕ್ಷಾಂತರ ಭಕ್ತರಿಗೆ ಕುಡಿವ ನೀರು ಒದಗಿಸಲು ತಾಲೂಕಾಡಳಿತ ಕೊಳವೆಬಾವಿ ಕೊರೆಯಿಸಿದರೂ ಸೆಲೆ ದೊರೆತಿಲ್ಲ. ಸತತ 5 ರಿಂದ 6 ದಿನ ಗ್ರಾಮದಲ್ಲೇ ನೆಲೆಸುವ ತಾಲೂಕು ಮತ್ತು ಬೇರೆ ಕಡೆಯ ಭಕ್ತರಿಗೆ ಕುಡಿವ ನೀರಿನ ವ್ಯವಸ್ಥೆ ಮಾಡುವುದು ಹೇಗೆ ಎಂಬುದು ಚರ್ಚೆಯಾಗುತ್ತಿದೆ.

ಸಮಿತಿ ಸಭೆ: ಇತ್ತೀಚೆಗೆ ಗ್ರಾಮದಲ್ಲಿ ಜಾತ್ರೆ ಹಿನ್ನೆಲೆಯಲ್ಲಿ ಶಾಸಕ ಅಮರೇಗೌಡ ಬಯ್ಯಾಪುರ, ಸಿಪಿಐ ಸುರೇಶ ತಳವಾರ, ಎಸ್‌ಐ ವಿಶ್ವನಾಥ ಹಿರೇಗೌಡ್ರ, ಕಂದಾಯ ಇಲಾಖೆ ಮತ್ತು ದೇವಾಲಯ ಸಮಿತಿಯ ಸಭೆ ನಡೆಯಿತು. ಸಭೆಯಲ್ಲಿ ಭಕ್ತರಿಗೆ ನೀರಿನ ವ್ಯವಸ್ಥೆ ಕಲ್ಪಿಸುವುದು ಹೇಗೆ ಎಂಬುದು ಚರ್ಚೆಯಾಯಿತು. ಗ್ರಾ.ಪಂ.ಹಾಗೂ ತಾಲೂಕು ಆಡಳಿತ ಸೇರಿ 30 ಟ್ಯಾಂಕ್‌ ನೀರಿನ ವ್ಯವಸ್ಥೆ ಮಾಡಲು ನಿರ್ಣಯಿಸಲಾಯಿತು. ಎಲ್ಲ 30 ಟ್ಯಾಂಕರ್‌ಗಳಿಂದ ನಿರಂತರವಾಗಿ ನೀರು ಪೂರೈಸಬೇಕು. ಜತೆಗೆ ಗ್ರಾಮಕ್ಕೆ ಸಮೀಪ ಇರುವ ತೋಟಗಳ ಪಂಪ್‌ಸೆಟ್‌ಗಳಿಂದ ಕುಡಿವ ನೀರಿನ ಸಮಸ್ಯೆ ನಿವಾರಿಸಬೇಕು ಎಂಬ ತೀರ್ಮಾನಿಸಲಾಯಿತು.

ಪ್ರಾಣಿ ಬಲಿ ನಿಷೇಧ: ಡೊಣ್ಣೆಗುಡ್ಡ ದುರ್ಗಾದೇವಿ ಜಾತ್ರೆ ಮೊದಲಿನಿಂದಲೂ ಪ್ರಾಣಿ ಬಲಿಗೆ ಹೆಸರಾಗಿದೆ. ಹಿಂದಿನ ಜಾತ್ರೆಗಳಲ್ಲಿ ಸಾವಿರಾರು ಪ್ರಾಣಿಗಳ ಬಲಿ ನಡೆದಿತ್ತು. ಈ ವರ್ಷ ಜಿಲ್ಲಾಧಿಕಾರಿ ಪಿ.ಸುನಿಲ್‌ಕುಮಾರ್‌ ಅವರು ಆದೇಶ ಜಾರಿಗೊಳಿಸಿ ದೇವಾಲಯ ಸುತ್ತಮುತ್ತ ಎಲ್ಲೂ ಪ್ರಾಣಿಬಲಿ ನಡೆಸದಂತೆ ಸೂಚಿಸಿದ್ದಾರೆ. ಪ್ರಾಣಿ ಬಲಿ ನಡೆಸುವುದು ಕಂಡು ಬಂದರೆ ಪ್ರಾಣಿಬಲಿ ನಿಷೇಧ ಕಾಯಿದೆಯಡಿ ನಿರ್ದಾಕ್ಷಿಣ್ಯ ಕ್ರಮ ಜರುಗಿಸಲು ಸೂಚಿಸಿದ್ದಾರೆ. ಡಿಸಿ ಅವರ ಆದೇಶವನ್ನು ಸ್ವಾಗತಿಸಿರುವ ದೇವಾಲಯ ಟ್ರಸ್ಟ್‌ನವರು ಈಗಾಗಲೇ ಕರಪತ್ರಗಳನ್ನು ಮುದ್ರಿಸಿ, ಜಾತ್ರೆ ವೇಳೆ ಪ್ರಾಣಿ ಬಲಿ ನಿಷೇಧಿಸಲಾಗಿದೆ. ಇದಕ್ಕೆ ಭಕ್ತರು ಸಹಕರಿಸಬೇಕು. ಪ್ರತಿ ಸಲ ಜಾತ್ರೆ ಬಂದಾಗ ದೇವಾಲಯ ಸಮಿತಿ ಮತ್ತು ಜಿಲ್ಲಾಧಿಕಾರಿಗಳು ಪ್ರಾಣಿಬಲಿ ನಿಷೇಧದ ಕುರಿತು ಆದೇಶ ಜಾರಿ ಮಾಡುತ್ತಾರೆ. ಆದರೆ ಭಕ್ತರು ಈ ಆದೇಶ ಧಿಕ್ಕರಿಸಿ ಹರಕೆ ತೀರಿಸಲು ಮುಂದಾಗುವ ಪರಿಪಾಠ ಇದೆ. ಈ ವರ್ಷ ಇದಕ್ಕೆ ಅವಕಾಶ ನೀಡುವುದಿಲ್ಲ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ವ್ಯವಸ್ಥೆ: ಗ್ರಾಮದ ಶಾಲೆ ಬಳಿ ವಾಹನಗಳ ನಿಲುಗಡೆಗೆ ವ್ಯವಸ್ಥೆ ಮಾಡಲಾಗುತ್ತಿದೆ. ದೇವಾಲಯ ಟ್ರಸ್ಟ್‌ ನಡೆಸಿರುವ ಸಭೆಯಲ್ಲಿ ಭಕ್ತರು ತಮ್ಮೂರಿನಿಂದಲೇ ನೀರಿನ ಟ್ಯಾಂಕರ್‌ ತರುವಂತೆ ಸೂಚಿಸಿದ್ದಾರೆ. ಡಿಸಿ ಇನ್ನೊಂದು ಆದೇಶ ಜಾರಿಗೊಳಿಸಿ ಡೊಣ್ಣೆಗುಡ್ಡ ಗ್ರಾಮದಲ್ಲಿ ಮಾ.5 ರಿಂದ 8 ವರೆಗೆ ಮದ್ಯ ಮಾರಾಟ ನಿಷೇಧಿಸಿದ್ದಾರೆ.

ಸಾಕಷ್ಟು ಸಂಖ್ಯೆಯ ಭಕ್ತರನ್ನು ಹೊಂದಿರುವ ಈ ದೇವಾಲಯದ ಜಾತ್ರೆಯಲ್ಲಿ ಪ್ರಾಣಿ ಬಲಿ ತೊಲಗಿ, ಭಕ್ತರು ಬೇರೆ ರೀತಿಯಲ್ಲಿ ತಮ್ಮ ಹರಕೆ ತೀರಿಸಿಕೊಳ್ಳಲು ಅವಕಾಶ ಇದ್ದರೂ ಮೌಢ್ಯಕ್ಕೆ ಶರಣಾಗಿರುವ ಭಕ್ತರು ಪ್ರಾಣಿಬಲಿಯಂತಹ ಕಾನೂನು ಬಾಹಿರ ಚಟುವಟಿಕೆಯಲ್ಲಿ ತೊಡಗುವುದು ನಿಲ್ಲಬೇಕಾಗಿದೆ.

---

ಕುಡಿವ ನೀರಿಗಾಗಿ ಸರಕಾರದವರು 30 ಟ್ಯಾಂಕರ್‌ ವ್ಯವಸ್ಥೆ ಮಾಡುವುದಾಗಿ ಹೇಳಿದ್ದಾರೆ. ಗ್ರಾಮದ ಸುತ್ತಲಿನ ತೋಟಗಳಲ್ಲಿನ ಕೊಳವೆಬಾವಿಗಳ ಪಂಪ್‌ಸೆಟ್‌ ಚಾಲೂ ಇಡಲು ತಿಳಿಸಲಾಗಿದೆ. ಪ್ರಾಣಿ ಬಲಿ ನಿಷೇಧಿಸಿ ಪ್ರಕಟಣೆ ಹೊರಡಿಸಲಾಗಿದೆ. ಮೂರು ವರ್ಷಕ್ಕೊಮ್ಮೆ ನಡೆಯುವ ಜಾತ್ರೆ ಶಾಂತಿಯಿಂದ ನಡೆಯಬೇಕು ಎಂಬುದು ಟ್ರಸ್ಟ್‌ ಸೇರಿದಂತೆ ಗ್ರಾಮಸ್ಥರ ಅಭಿಪ್ರಾಯವಾಗಿದೆ.

-ಉಮೇಶಪ್ಪ ದೇಸಾಯಿ, ಕಾರ್ಯದರ್ಶಿ, ದುರ್ಗಾದೇವಿ ದೇವಸ್ಥಾನ ಟ್ರಸ್ಟ್‌, ಡೊಣ್ಣೆಗುಡ್ಡ.



ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ