ನಾಗಮಂಗಲ: ತಾಲೂಕಿನ ಆದಿಚುಂಚನಗಿರಿಯಲ್ಲಿ ಜಾತ್ರಾ ಮಹೋತ್ಸವದ ಅಂಗವಾಗಿ ನಡೆದ ರಾಜ್ಯ ಮಟ್ಟದ ಬಿಜಿಎಸ್ ಕಪ್-2017 ಕಬಡ್ಡಿ ಪಂದ್ಯಾವಳಿಯಲ್ಲಿ ಬೆಂಗಳೂರಿನ ವಿಜಯಾ ಬ್ಯಾಂಕ್ ತಂಡ ಸತತ ಎರಡನೇ ಬಾರಿಗೆ ಪ್ರಶಸ್ತಿ ಮುಡಿಗೇರಿಸಿಕೊಂಡಿತು.
ಫೈನಲ್ ಪಂದ್ಯದಲ್ಲಿ ವಿಜಯಾ ಬ್ಯಾಂಕ್ ಮತ್ತು ಕಸ್ಟಮ್ಸ್ ತಂಡಗಳ ನಡುವೆ ಹೋರಾಟ ನಡೆಯಿತು. ಅಂತಿಮವಾಗಿ ವಿಜಯಾ ಬ್ಯಾಂಕ್ 42-19 ಅಂತರದಲ್ಲಿ ಗೆಲುವಿನ ನಗೆ ಬೀರಿತು. ವಿಜೇತ ವಿಜಯಾ ಬ್ಯಾಂಕ್ ತಂಡಕ್ಕೆ 73 ಸಾವಿರ ರೂ. ನಗದು, ಟ್ರೋಫಿ ಮತ್ತು ಕಸ್ಟಮ್ಸ್ ತಂಡಕ್ಕೆ 43 ಸಾವಿರ ರೂ., ಟ್ರೋಫಿ ವಿತರಿಸಲಾಯಿತು.
ಎಚ್ಎಎಲ್ ತಂಡ ಮತ್ತು ರಾಮನಗರ ಜಿಲ್ಲಾ ತಂಡಗಳು ಸಮಾಧಾನಕರ ಬಹುಮಾನ ಪಡೆದವು. ಇವುಗಳಿಗೆ ಕ್ರಮವಾಗಿ 25 ಸಾವಿರ ರೂ.ನಗದು ಮತ್ತು ಟ್ರೋಫಿಗಳನ್ನು ನೀಡಲಾಯಿತು.
ಎಚ್ಎಎಲ್ ತಂಡದ ಸುರೇಶ್ ಬೆಸ್ಟ್ ಕ್ಯಾಚರ್ ಪ್ರಸ್ತಿಗೆ ಭಾಜನರಾದರೆ, ಕಸ್ಟಮ್ಸ್ ತಂಡದ ರವೀಂದ್ರ ಬೆಸ್ಟ್ ರೈಡರ್ ಪ್ರಶಸ್ತಿಗೆ ಪಾತ್ರರಾದರು. ವಿಜಯಾ ಬ್ಯಾಂಕ್ ತಂಡದ ಸಚಿನ್ ಸುವರ್ಣ ಅವರು ಈ ಬಾರಿಯ ಸರ್ವೋತ್ತಮ ಆಟಗಾರನಾಗಿ ಹೊರಹೊಮ್ಮಿದರು.
ರಾಜ್ಯದ ಪ್ರತಿಷ್ಠಿತ ತಂಡಗಳಾದ ಬೆಂಗಳೂರಿನ ಎಚ್ಎಎಲ್, ಕಸ್ಟಮ್ಸ್, ಬಿಎಂಟಿಸಿ, ಕೇಶವ ಕ್ಲಬ್, ಎಚ್ಎಂಟಿ ಕಾಲೋನಿ, ಬಿವೈಎಸ್, ವೈಎಫ್ಎ ತಂಡಗಳು ಸೇರಿದಂತೆ 28 ತಂಡಗಳು ಭಾಗವಹಿಸಿದ್ದವು. ಮೂರು ದಿನಗಳ ಕಾಲ ರಾತ್ರಿ ವೇಳೆ ಪಂದ್ಯಗಳು ಜರುಗಿದವು.
ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ಶ್ರೀ ಡಾ.ನಿರ್ಮಲಾನಂದನಾಥ ಸ್ವಾಮೀಜಿ ಮತ್ತು ಇಂಧನ ಸಚಿವ ಡಿ.ಕೆ.ಶಿವಕುಮಾರ್ ಬಹುಮಾನ ವಿತರಿಸಿದರು.
ಪ್ರೋ ಕಬಡ್ಡಿ ಆಟಗಾರರಿಗೆ ಸನ್ಮಾನ: ಪಂದ್ಯಾವಳಿಯಲ್ಲಿ ಪ್ರೋ ಕಬಡ್ಡಿ ಲೀಗ್ ನಲ್ಲಿ ಆಡಿದ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಆಟಗಾರರಾದ ಸುಖೇಶ್ ಹೆಗ್ಡೆ, ಪ್ರಶಾಂತ್ ರೈ, ಸುನೀಲ್ ಹನುಮಂತಯ್ಯ ರವೀಂದ್ರ ಮತ್ತು ಸಚ್ಚಿನ್ ಸೇರಿದಂತೆ ಖ್ಯಾತನಾಮ ಆಟಗಾರರಿಗೆ ಡಾ. ನಿರ್ಮಲಾನಂದನಾಥ ಸ್ವಾಮೀಜಿ ಸನ್ಮಾನಿಸಿ ಗೌರವಿಸಿದರು.
ಸಮಾರೋಪ: ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಡಾ. ನಿರ್ಮಲಾನಂದನಾಥ ಸ್ವಾಮೀಜಿ, ''ಗ್ರಾಮೀಣ ಪ್ರದೇಶದ ಕಬಡ್ಡಿ ಅತ್ಯಂತ ಮಹತ್ವದ ಕ್ರೀಡೆಯಾಗಿದೆ. ಇದನ್ನು ಉಳಿಸಿ, ಬೆಳೆಸುವ ಕೆಲಸವಾಗಬೇಕು,'' ಎಂದರು.
ಇಂಧನ ಸಚಿವ ಡಿ.ಕೆ.ಶಿವಕುಮಾರ್ ಮಾತನಾಡಿ, ''ಆದಿಚುಂಚನಗಿರಿ ಜಾತ್ರಾ ಮಹೋತ್ಸವದಂದು ಧಾರ್ಮಿಕ ಸಮಾರಂಭದ ಜತೆಗೆ ಕ್ರೀಡಾಕೂಟಕ್ಕೂ ಒತ್ತು ನೀಡುವ ಮೂಲಕ ಶ್ರೀ ಮಠ ಮಾದರಿ ಕಾರ್ಯ ಮಾಡುತ್ತಿದೆ. ಎಲ್ಲಾ ವರ್ಗದ ಅಭ್ಯುದಯಕ್ಕೆ ಮಠ ಶ್ರಮಿಸುತ್ತಿರುವುದು ಶ್ಲಾಘನೀಯ,'' ಎಂದರು.
ಸಂಸದ ಸಿ.ಎಸ್.ಪುಟ್ಟರಾಜು, ವಿಧಾನ ಪರಿಷತ್ ಸದಸ್ಯ ಮರಿತಿಬ್ಬೇಗೌಡ, ಶಾಸಕ ಸಿ.ಎನ್.ಬಾಲಕೃಷ್ಣ, ಮಾಜಿ ಶಾಸಕರಾದ ಎಲ್.ಆರ್.ಶಿವರಾಮೇಗೌಡ, ಸುರೇಶ್ ಗೌಡ, ಅಪೆಕ್ಸ್ ಬ್ಯಾಂಕ್ ಮಾಜಿ ಅಧ್ಯಕ್ಷ ಮಂಜುನಾಥ್ ಗೌಡ, ಕರ್ನಾಟಕ ರಾಜ್ಯ ಅಮೆಚೂರ್ ಕಬಡ್ಡಿ ಅಸೋಸಿಯೇಷನ್ ಉಪಾಧ್ಯಕ್ಷ ಜಯರಾಮು, ಕರ್ನಾಟಕ ರಾಜ್ಯ ಅಮೆಚೂರ್ ಕಬಡ್ಡಿ ತೀರ್ಪುಗಾರರ ಮಂಡಳಿ ಅಧ್ಯಕ್ಷ ಷಣ್ಮುಗಂ, ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ಮತ್ತು ಬೆಂಗಳೂರು ನಗರ ಕಬಡ್ಡಿ ಸಂಸ್ಥೆಯ ಗೌರವಾಧ್ಯಕ್ಷ , ಆದಿಚುಂಚನಗಿರಿ ಮಠದ ಕಾರ್ಯದರ್ಶಿ ಶ್ರೀ ಪ್ರಸನ್ನನಾಥ ಸ್ವಾಮೀಜಿ, ಮಂಡ್ಯ ಜಿಲ್ಲಾ ದೈಹಿಕ ಶಿಕ್ಷ ಣ ಶಿಕ್ಷ ಕರ ಸಂಘದ ಅಧ್ಯಕ್ಷ ಶಿವಣ್ಣಗೌಡ, ತಾಲೂಕು ದೈಹಿಕ ಶಿಕ್ಷ ಕರ ಸಂಘದ ಅಧ್ಯಕ್ಷ ಎಂ.ಎನ್.ಪರಮಶಿವಯ್ಯ ಸೇರಿದಂತೆ ಅನೇಕ ಗಣ್ಯರು ಇದ್ದರು.