ಕಿಕ್ಕೇರಿ: ಕಬ್ಬಿನ ಗದ್ದೆಯಲ್ಲಿ ನ.9ರಂದು ಚಿರತೆ ಮರಿಗಳು ಪತ್ತೆಯಾದ ಹಿನ್ನೆಲೆಯಲ್ಲಿ ಜಮೀನಿನಲ್ಲಿ ಇಟ್ಟಿದ್ದ ಬೋನಿಗೆ ತಾಯಿ ಚಿರತೆ ಸೆರೆಯಾಗಿದೆ.
ಕೆ.ಆರ್.ಪೇಟೆ ತಾಲೂಕು ಕಿಕ್ಕೇರಿಯ ಕಳ್ಳನ ಕೆರೆ ಗ್ರಾಮದ ದೇವರಾಜೇಗೌಡ ಎಂಬುವರ ಜಮೀನಿನಲ್ಲಿ ಬೆಳೆದಿದ್ದ ಕಬ್ಬಿನ ಗದ್ದೆಯಲ್ಲಿ ಕೆಲದಿನಗಳ ಹಿಂದಷ್ಟೇ ಜನಿಸಿದ್ದ ಮೂರು ಚಿರತೆ ಮರಿಗಳು ಪತ್ತೆಯಾಗಿದ್ದವು. ತಾಯಿ ಚಿರತೆ ವಾಪಸ್ ಬರುತ್ತದೆ ಎಂದು ಬೋನಿನಲ್ಲಿ ಮರಿಗಳನ್ನು ಬಿಟ್ಟು ಚಿರತೆ ಸೆರೆಗೆ ಯೋಜನೆ ರೂಪಿಸಲಾಗಿತ್ತು. ಎರಡು ದಿನಗಳ ಬಳಿಕ ತಾಯಿ ಚಿರತೆ ಬೋನಿಗೆ ಬಿದ್ದಿದೆ.
ಗ್ರಾಮಸ್ಥರ ಒತ್ತಾಯದ ಮೇರೆಗೆ ಅರಣ್ಯ ಇಲಾಖೆ ಅಧಿಕಾರಿಗಳು ಜಮೀನಿನಲ್ಲಿ ಬೋನ್ ಇಟ್ಟು ಚಿರತೆಯ ಚಲನವಲನ ಪರಿಶೀಲ ನಡೆಸಿದರು. ಶುಕ್ರವಾರ ಮಧ್ಯಾಹ್ನ ಚಿರತೆ ಮರಿಗಳು ಕೂಗಲು ಆರಂಭಿಸಿದವು. ರಾತ್ರಿ ಸಮಯದಲ್ಲಿ ಮರಿಗಳಿಗೆ ಹಾಲು ನೀಡುವ ಸಲುವಾಗಿ ತಾಯಿ ಚಿರತೆ ಬೋನಿನ ಬಳಿ ಬಂದಾಗ ಸೆರೆಯಾಗಿದೆ.
ಶನಿವಾರ ಬೆಳಗ್ಗೆ ಬೋನಿನಲ್ಲಿ ಚಿರತೆ ಸೆರೆ ಸಿಕ್ಕಿರುವುದನ್ನು ಗ್ರಾಮಸ್ಥರು ತಿಳಿದು ಅರಣ್ಯ ಇಲಾಖೆ ಸಿಬ್ಬಂದಿಗೆ ವಿಷಯ ತಿಳಿಸಿದ್ದಾರೆ. ಕೂಡಲೇ ಸ್ಥಳಕ್ಕೆ ಆಗಮಿಸಿದ ಅರಣ್ಯ ಇಲಾಖೆ ಸಿಬ್ಬಂದಿ ಚಿರತೆ ಹಾಗೂ ಅದರ ಮರಿಗಳನ್ನು ಸುರಕ್ಷಿತವಾಗಿ ರಕ್ಷಣೆ ಮಾಡುವಲ್ಲಿ ಯಶಸ್ವಿಯಾದರು.
ಹೆಚ್ಚಿನ ಜನ: ಚಿರತೆ ಬೋನಿಗೆ ಬಿದ್ದ ಹಿನ್ನೆಲೆಯಲ್ಲಿ ಸುತ್ತಮುತ್ತಲ ಗ್ರಾಮಸ್ಥರು ಜಮೀನಿನ ಬಳಿ ಚಿರತೆ ನೋಡಲು ಜಮಾಯಿಸಿದರು. ಬೋನಿಗೆ ಬಿದ್ದ ಚಿರತೆಯನ್ನು ರಕ್ಷಣೆ ಮಾಡುವ ಕಾರಾರಯಚರಣೆ ವೇಳೆ ಜನರ ಸಂಖ್ಯೆ ಹೆಚ್ಚಾದ ಹಿನ್ನೆಲೆಯಲ್ಲಿ ಪೊಲೀಸರ ನೆರವಿನಿಂದ ಜನರನ್ನು ನಿಯಂತ್ರಿಸಲಾಯಿತು.
ಉಪ ವಲಯ ಅರಣ್ಯಾಧಿಕಾರಿ ರಾಘವೇಂದ್ರ, ಅರಣ್ಯ ಸಂರಕ್ಷಣಾಧಿಕಾರಿ ಧನಂಜಯ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಅನಂತರಾಮು, ಅರಣ್ಯ ರಕ್ಷಕ ಕುಮಾರ್, ಸಿಬ್ಬಂದಿ ಹಾಜರಿದ್ದರು.
ತಾಯಿ ಚಿರತೆ, ಮರಿಗಳು ಆರೋಗ್ಯ
ವಲಯ ಅರಣ್ಯಾಧಿಕಾರಿ ಜಿ.ರವೀಂದ್ರ ಮಾತನಾಡಿ, ''ಜಮೀನಿನಲ್ಲಿ ಕಾಣಿಸಿಕೊಂಡ ಚಿರತೆ ಸೆರೆ ಸಿಕ್ಕಿದೆ. ಚಿರತೆ ಮೂರು ಮರಿಗಳಿಗಿಂತ ಹೆಚ್ಚು ಮರಿಗಳನ್ನು ಹಾಕುವುದಿಲ್ಲ. ಈಗಾಗಲೇ ಮೂರು ಮರಿ ಹಾಗೂ ತಾಯಿ ಚಿರತೆಯನ್ನು ಯಶಸ್ವಿಯಾಗಿ ರಕ್ಷಿಸಲಾಗಿದೆ. ಯಾವುದೇ ಮರಿಗಳು ಕಬ್ಬಿನ ಗದ್ದೆಯಲ್ಲಿ ತಪ್ಪಿಸಿಕೊಂಡಿಲ್ಲ,''ಎಂದು ತಿಳಿಸಿದರು.
''ಸದ್ಯಕ್ಕೆ ತಾಯಿ ಹಾಗೂ ಮರಿ ಚಿರತೆಗಳು ಆರೋಗ್ಯವಾಗಿದ್ದು, ವೈದ್ಯರು ತಪಾಸಣೆ ಮಾಡಿದ್ದಾರೆ. ಈಗಾಗಲೇ ಚಿರತೆಗೆ ಆಹಾರ ನೀಡಲಾಗಿದೆ. ಚಿರತೆ ಸೆರೆ ಸಿಕ್ಕಿರುವ ಬಗ್ಗೆ ಮೇಲಧಿಕಾರಿಗಳಿಗೆ ಮಾಹಿತಿ ನೀಡಲಾಗಿದ್ದು, ಅವರ ಮಾರ್ಗದರ್ಶನದಂತೆ ಮುಂದಿನ ಕ್ರಮಕೈಗೊಳ್ಳಲಾಗುವುದು,'' ಎಂದು ಹೇಳಿದರು.