ಆ್ಯಪ್ನಗರ

5 ರೂಪಾಯಿ ಡಾಕ್ಟ್ರು ಡಾ.ಶಂಕರೇಗೌಡರು ಮಂಡ್ಯದ ಹೆಮ್ಮೆ

ಹಣವೇ ಪ್ರಧಾನವಾಗಿರುವ ಪ್ರಸ್ತುತ ದಿನಗಳಲ್ಲಿ ಕೇವಲ 5 ರೂ. ಶುಲ್ಕ ಪಡೆದು ಚಿಕಿತ್ಸೆ ನೀಡುವ ಡಾ.ಶಂಕರಗೌಡರ ಸೇವಾ ಮನೋಭಾವ, ಬಡವರ ಬಗೆಗಿನ ಕಾಳಜಿ ಅನನ್ಯ. ಅವರಿಗೆ ಯಾವ ಪ್ರಶಸ್ತಿಗಳನ್ನು ಕೊಟ್ಟರೂ ಕಡಿಮೆಯೇ.

Vijaya Karnataka Web 11 Feb 2021, 12:34 am
ಮಂಡ್ಯ: ಶ್ರೀಸಾಮಾನ್ಯರ ಸೇವೆಗಾಗಿ ತಮ್ಮ ಬದುಕನ್ನೇ ಮೀಸಲಿಟ್ಟಿರುವ, 5 ರೂ. ವೈದ್ಯ ಎಂದೇ ಹೆಸರಾದ ಡಾ.ಎಸ್‌.ಸಿ.ಶಂಕರಗೌಡರಿಗೆ ರಾಜ್ಯೋತ್ಸವ ಹಾಗೂ ಪದ್ಮಶ್ರೀ ಪ್ರಶಸ್ತಿ ದೊರಕಿಸಿಕೊಡಲು ಕ್ರಮ ವಹಿಸಲಾಗುವುದು ಎಂದು ಉಪ ಮುಖ್ಯಮಂತ್ರಿ ಡಾ.ಸಿ.ಎನ್‌.ಅಶ್ವತ್ಥನಾರಾಯಣ ತಿಳಿಸಿದರು.
Vijaya Karnataka Web ವೈದ್ಯ
ವೈದ್ಯ


ಮಂಡ್ಯ ನಗರದ ಕಲಾಮಂದಿರದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಬುಧವಾರ ಏರ್ಪಡಿಸಿದ್ದ '5 ರೂಪಾಯಿ ಡಾಕ್ಟ್ರು' ಡಾ.ಎಸ್‌.ಸಿ. ಶಂಕರೇಗೌಡ ಅಭಿನಂದನಾ ಗ್ರಂಥ ಲೋಕಾರ್ಪಣೆ ಮತ್ತು ಅಭಿನಂದನಾ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ''ಡಾ.ಶಂಕರಗೌಡರು ಪದ್ಮಶ್ರೀ ಪ್ರಶಸ್ತಿಗೆ ಅರ್ಹರು. ಈ ವಿಚಾರದಲ್ಲಿ ನಾನು ಮತ್ತು ಸರಕಾರದಿಂದ ಪ್ರಾಮಾಣಿಕ ಪ್ರಯತ್ನ ನಡೆಸಲಾಗುತ್ತದೆ'' ಎಂದು ಹೇಳಿದರು.

''ಹಣವೇ ಪ್ರಧಾನವಾಗಿರುವ ಪ್ರಸ್ತುತ ದಿನಗಳಲ್ಲಿ ಕೇವಲ 5 ರೂ. ಶುಲ್ಕ ಪಡೆದು ಚಿಕಿತ್ಸೆ ನೀಡುವ ಡಾ.ಶಂಕರಗೌಡರ ಸೇವಾ ಮನೋಭಾವ, ಬಡವರ ಬಗೆಗಿನ ಕಾಳಜಿ ಅನನ್ಯ. ಅವರಿಗೆ ಯಾವ ಪ್ರಶಸ್ತಿಗಳನ್ನು ಕೊಟ್ಟರೂ ಕಡಿಮೆಯೇ. ಅವರ ವಿಚಾರದಲ್ಲಿ ಸರಕಾರ ಯಾವ ರೀತಿ ನಡೆದುಕೊಳ್ಳಬೇಕೋ ಅದೇ ರೀತಿ ನಡೆದು ಅವರಿಗೆ ಎಲ್ಲ ರೀತಿಯ ಗೌರವ ಸಿಗುವಂತೆ ಮಾಡಲಾಗುವುದು''ಎಂದು ಭರವಸೆ ನೀಡಿದರು.

''ಕೇವಲ 5 ರೂ. ತೆಗೆದುಕೊಂಡು ವೈದ್ಯ ವೃತ್ತಿ ಮಾಡಿ ಜೀವನ ನಡೆಸುವುದು ಹೇಗೆಂಬುದೇ ಆಶ್ಚರ್ಯವಾಗಿದೆ. ಪ್ರಸ್ತುತ ವೈದ್ಯ ವೃತ್ತಿ ಮಾಡುತ್ತಿರುವ ಬಹುತೇಕರು ಐಷಾರಾಮಿ ಜೀವನದತ್ತ ಆಕರ್ಷಿತರಾಗಿ ಹಣ ಮಾಡಲು ಮುಂದಾಗುತ್ತಾರೆ. ಆದರೆ, ಶಂಕರೇಗೌಡರು ಕಳೆದ 40 ವರ್ಷ ಗಳಿಂದಲೂ ಕೇವಲ 5 ರೂ. ಪಡೆದುಕೊಂಡು ತಮ್ಮ ಜೀವನವನ್ನು ಸಮಾಜಕ್ಕಾಗಿ ಮೀಸಲಿಟ್ಟಿದ್ದಾರೆ,''ಎಂದು ಶ್ಲಾಘಿಸಿದರು.

ಸರಕಾರದ ಗೌರವ ಸಲ್ಲಲಿ

ಅಧ್ಯಕ್ಷತೆ ವಹಿಸಿದ್ದ ಶಾಸಕ ಸಿ.ಎಸ್‌. ಪುಟ್ಟರಾಜು ಮಾತನಾಡಿ, ಡಾ.ಶಂಕರೇಗೌಡ ಅವರಿಗೆ ರಾಜ್ಯ ಸರಕಾರದ ರಾಜ್ಯೋತ್ಸವ ಹಾಗೂ ಪದ್ಮಶ್ರೀ ಪ್ರಶಸ್ತಿಗಳನ್ನು ದೊರಕಿಸಿಕೊಡುವ ನಿಟ್ಟಿನಲ್ಲಿ ಡಿಸಿಎಂ ಡಾ. ಅಶ್ವತ್ಥನಾರಾಯಣ ಕ್ರಮ ವಹಿಸಬೇಕೆಂದು ಮನವಿ ಮಾಡಿದರು. ಇದೇ ವೇಳೆ ಡಾ.ಶಂಕರಗೌಡ-ರುಕ್ಮಿಣಿ ದಂಪತಿಯನ್ನು ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ಡಾ.ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಮತ್ತು ಗಣ್ಯರು ಸನ್ಮಾನಿಸಿ ಗೌರವಿಸಿದರು.

ಸಾಹಿತಿ ಪ್ರದೀಪ್‌ ಕುಮಾರ ಹೆಬ್ರಿ ಪ್ರಾಸ್ತಾವಿಕವಾಗಿ ಮಾತನಾಡಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ