ಆ್ಯಪ್ನಗರ

ಸಾಲ ತೀರಿಸಲು ಕಿಡ್ನಿ ಮಾರಾಟಕ್ಕಿಟ್ಟ ಯುವಕ!

'ನನ್ನ ಕಿಡ್ನಿ ಮಾರಾಟಕ್ಕಿದೆ, ಸಂಪರ್ಕಿಸಿ' ಎಂದು ಬೋರ್ಡ್‌ ಹಾಕಿದ್ದ ಯುವಕನೊಬ್ಬ ಇದೀಗ ನಿಮ್ಹಾನ್ಸ್‌ ಸೇರಿದ್ದಾನೆ!

Vijaya Karnataka 30 Sep 2018, 5:00 am
ಮಂಡ್ಯ: 'ನನ್ನ ಕಿಡ್ನಿ ಮಾರಾಟಕ್ಕಿದೆ, ಸಂಪರ್ಕಿಸಿ' ಎಂದು ಬೋರ್ಡ್‌ ಹಾಕಿದ್ದ ಯುವಕನೊಬ್ಬ ಇದೀಗ ನಿಮ್ಹಾನ್ಸ್‌ ಸೇರಿದ್ದಾನೆ!
Vijaya Karnataka Web a young man on kidney sales to pay off debt
ಸಾಲ ತೀರಿಸಲು ಕಿಡ್ನಿ ಮಾರಾಟಕ್ಕಿಟ್ಟ ಯುವಕ!


ಹೌದು, ಆಶ್ಚರ್ಯವಾದರೂ ಇದು ಸತ್ಯ ಘಟನೆ. ಮಂಡ್ಯ ತಾಲೂಕು ತಗ್ಗಹಳ್ಳಿ ನಿವಾಸಿ ವಿನೋದ್‌ಕುಮಾರ್‌(24) ಎಂಬಾತ ಕಿಡ್ನಿ ಮಾರಾಟಕ್ಕೆ ಯತ್ನಿಸಿ ಆಸ್ಪತ್ರೆ ಸೇರಿದ್ದಾನೆ. ನಗರದ ಬಿ.ಜಿ.ದಾಸೇಗೌಡ ವೃತ್ತದ ಬಳಿ ಮಧುರಾ ಟೀಸ್ಟಾಲ್‌ ನಡೆಸುತ್ತಿದ್ದ ಈತ ಶನಿವಾರ ಬೆಳಗ್ಗೆ ಟೀಸ್ಟಾಲ್‌ನ ಬಾಗಿಲು ತೆರೆಯುತ್ತಿದ್ದಂತೆ ಕಂಪ್ಯೂಟರ್‌ನಲ್ಲಿ ಪ್ರಿಂಟ್‌ ತೆಗೆದಿದ್ದ 'ಧಿನನ್ನ ಕಿಡ್ನಿ ಮಾರಾಟಕ್ಕಿದೆ, ಸಂಪರ್ಕಿಸಿ' ಎಂದು ಮೊಬೈಲ್‌ ನಂಬರ್‌ ಹಾಕಿದ್ದ ಹಾಳೆಯನ್ನು ಕ್ಯಾಂಟೀನ್‌ನ ಗೋಡೆಗೆ ಅಂಟಿಸಿದ್ದಾನೆ.

ಇದನ್ನು ನೋಡಿದ ಸ್ಥಳೀಯರು, ಪರಿಚಯಸ್ಥರು ಆತನಿಗೆ ಬುದ್ಧಿ ಹೇಳಲು ಪ್ರಯತ್ನಿಸಿದ್ದಾರೆ. ಆದರೆ, ಬುದ್ಧಿ ಹೇಳಲು ಬಂದವರ ವಿರುದ್ಧವೇ ವಿನೋದ್‌ಕುಮಾರ್‌ ತಿರುಗಿ ಬಿದ್ದಿದ್ದಾನೆ. ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಪೊಲೀಸರು, ಕ್ಯಾಂಟೀನ್‌ ಬಾಗಿಲು ಮುಚ್ಚಿಸಿ ಅಂಟಿಸಿದ್ದ ಚೀಟಿಯನ್ನು ಕಿತ್ತು ಹಾಕಿದ್ದಾರೆ. ತಕ್ಷಣವೇ ಯುವಕನನ್ನು ವಶಕ್ಕೆ ಪಡೆದು, ಠಾಣೆಗೆ ಕರೆತಂದಿದ್ದಾರೆ.

''ನಾನು ಮನೆ ನಿರ್ಮಾಣಕ್ಕಾಗಿ ಸಾಲ ಮಾಡಿದ್ದು, ಬಡ್ಡಿ ಕಟ್ಟಲು ಕಷ್ಟವಾಗುತ್ತಿದೆ. ಜಮೀನನ್ನು ಮಾರಾಟ ಮಾಡಿ ಅಥವಾ ಅಡಮಾನವಿಟ್ಟು ಸಾಲ ತೀರಿಸೋಣವೆಂದರೆ ನಾಡಕಚೇರಿಯಲ್ಲಿ ಜಮೀನಿನ ಸ್ಕೆಚ್‌ ಕೊಡುತ್ತಿಲ್ಲ. ನನ್ನ ಚಿಕ್ಕಪ್ಪನಿಂದ(ಚಿಕ್ಕಮ್ಮನ ಪತಿ) 50 ಸಾವಿರ ರೂ. ಸಾಲ ಪಡೆದಿದ್ದು, ಅವರೂ ಅದನ್ನು ಕೇಳಿದ್ದಾರೆ. ಏನಾದರೂ ಮಾಡಿ ಅವರಿಗೆ ಹಣ ಕೊಟ್ಟುಬಿಡಬೇಕು. ಸಾಲಕ್ಕೆ ಹೆದರಿ ನಾನು ಆತ್ಮಹತ್ಯೆ ಮಾಡಿಕೊಳ್ಳುವುದಿಲ್ಲ. ಕಿಡ್ನಿಯನ್ನಾದರೂ ಮಾರಾಟ ಮಾಡಿ ಸಾಲ ತೀರಿಸುತ್ತೇನೆ. ಇದಕ್ಕಾಗಿಯೇ ಕಿಡ್ನಿ ಮಾರಾಟ ಮಾಡಲು ನಿರ್ಧರಿಸಿದ್ದೇನೆ,'' ಎಂದು ಪೊಲೀಸರಿಗೆ ಹೇಳಿಕೆ ನೀಡಿದ್ದಾನೆ.

ಬಳಿಕ ಯುವಕನ ಪೋಷಕರನ್ನು ಪೊಲೀಸರು ಸಂಪರ್ಕಿಸಿ ಮಾಹಿತಿ ನೀಡಿದ್ದಾರೆ. ಪೋಷಕರು ನೀಡಿದ ಮಾಹಿತಿ ಹಾಗೂ ಯುವಕನ ವರ್ತನೆಯನ್ನು ಗಮನಿಸಿದ ಪೊಲೀಸರು, ಯುವಕನನ್ನು ಜಿಲ್ಲಾಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿದ್ದಾರೆ. ''ಯುವಕನು ಮಾನಸಿಕವಾಗಿ ಡಿಸ್ಟರ್ಬ್‌ ಆಗಿದ್ದಾನೆ. ಹೀಗಾಗಿ ಆತನಿಗೆ ಹೆಚ್ಚಿನ ಚಿಕಿತ್ಸೆ ಅಗತ್ಯವಿದೆ,'' ಎಂದೇಳಿ ನಿಮ್ಹಾನ್ಸ್‌ಗೆ ಕರೆದೊಯ್ಯುವಂತೆ ಮಿಮ್ಸ್‌ ವೈದ್ಯರು ಪೊಲೀಸರಿಗೆ ಸಲಹೆ ನೀಡಿದ್ದಾರೆ. ಅದರಂತೆ ಆತನನ್ನು ಪೊಲೀಸರು ಶನಿವಾರ ಸಂಜೆ ಮಂಡ್ಯದಿಂದ ಅ್ಯಂಬುಲೆನ್ಸ್‌ ಮೂಲಕ ಬೆಂಗಳೂರಿನ ನಿಮ್ಹಾನ್ಸ್‌ಗೆ ಕಳುಹಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ