ಆ್ಯಪ್ನಗರ

ಅಪಘಾತ ಪ್ರಕರಣ: ವಿದೇಶಿ ಪ್ರಜೆಗೆ 2 ವರ್ಷ ಜೈಲು

ಕಳೆದ ವರ್ಷ ನಡೆದಿದ್ದ ಅಪಘಾತ ಪ್ರಕರಣಕ್ಕೆ ಸಂಬಂಧಿಸಿದಂತೆ ವಿದೇಶಿ ಪ್ರಜೆಗೆ ಪಟ್ಟಣದ ಹಿರಿಯ ನ್ಯಾಯಾಲಯ 2 ವರ್ಷ 2 ತಿಂಗಳು ಜೈಲು ಹಾಗೂ 10,500 ರೂ. ದಂಡ ವಿಧಿಸಿ ತೀರ್ಪು ನೀಡಿದೆ.

Vijaya Karnataka 14 Apr 2018, 8:08 am
ಶ್ರೀರಂಗಪಟ್ಟಣ: ಕಳೆದ ವರ್ಷ ನಡೆದಿದ್ದ ಅಪಘಾತ ಪ್ರಕರಣಕ್ಕೆ ಸಂಬಂಧಿಸಿದಂತೆ ವಿದೇಶಿ ಪ್ರಜೆಗೆ ಪಟ್ಟಣದ ಹಿರಿಯ ನ್ಯಾಯಾಲಯ 2 ವರ್ಷ 2 ತಿಂಗಳು ಜೈಲು ಹಾಗೂ 10,500 ರೂ. ದಂಡ ವಿಧಿಸಿ ತೀರ್ಪು ನೀಡಿದೆ.
Vijaya Karnataka Web jail punishment


ಇಸ್ರೇಲ್‌ ಪ್ರಜೆ ಹಾಗೂ ಮಾಜಿ ಸೈನಿಕ ವಾಸ್ರನ್‌ ಮೆನ್‌ ಆಲ್‌ಮೋಘ್‌ (22) ಎಂಬಾತ ಶಿಕ್ಷೆಗೆ ಗುರಿಯಾಗಿದ್ದು, ಪಟ್ಟಣದ ಹಿರಿಯ ಜೆಎಂಎಫ್‌ಸಿ ನ್ಯಾಯಾಲಯ ಈ ಆದೇಶ ನೀಡಿದೆ.

ತಾಲೂಕಿನ ಕೋಡಿಶೆಟ್ಟಿಪುರದಲ್ಲಿ 2017ರ ಡಿ.6ರ ಸಂಜೆ 6.45ರ ವೇಳೆ ಇಸ್ರೇಲ್‌ ಪ್ರಜೆ ಆಲ್‌ಮೋಘ್‌ ಬೆಂಗಳೂರಿನಿಂದ ಮೈಸೂರಿಗೆ ಬೈಕಿನಲ್ಲಿ ಬರುತ್ತಿದ್ದಾಗ ಹೆದ್ದಾರಿ ದಾಟುತ್ತಿದ್ದ ಅದೇ ಗ್ರಾಮದ ನಂಜೇಗೌಡ ಎಂಬುವವರಿಗೆ ಡಿಕ್ಕಿಯೊಡೆದ ಪರಿಣಾಮ ಅವರು ಸ್ಥಳದಲ್ಲೇ ಮೃತಪಟ್ಟಿದ್ದರು. ಈ ಸಂಬಂಧ ಸ್ಥಳ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡ ಶ್ರೀರಂಗಪಟ್ಟಣ ಗ್ರಾಮಾಂತರ ಠಾಣೆಯ ಪಿಎಸ್ಸೈ ಹಾಗೂ ತನಿಖಾಧಿಕಾರಿ ಸಿಪಿಐ ಸಿ.ಎಂ.ರವೀಂದ್ರ ನ್ಯಾಯಾಲಯಕ್ಕೆ ವರದಿ ಸಲ್ಲಿಸಿದ್ದರು.

ವಾಸ್ರನ್‌ ಭಾರತಕ್ಕೆ ಪ್ರವಾಸಕ್ಕೆಂದು ಆಗಮಿಸಿದ್ದು, ಅಂತಾರಾಷ್ಟ್ರೀಯ ವಾಹನ ಚಾಲನೆಯ ಪರವಾನಗಿ ಪಡೆಯದೆ ಕಾನೂನು ಬಾಹಿರವಾಗಿ ಬೈಕ್‌ ಗುತ್ತಿಗೆ ಪಡೆದು ಹೆದ್ದಾರಿಯಲ್ಲಿ ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಾಲನೆ ಮಾಡಿರುವುದು ತನಿಖೆ ವೇಳೆ ಬೆಳಕಿಗೆ ಬಂದಿದೆ. ಪೊಲೀಸರು ಸಲ್ಲಿಸಿದ ವರದಿ ಹಾಗೂ ಘಟನೆಗೆ ಸಂಬಂಧಿಸಿದ ಸಾಕ್ಷಿಗಳನ್ನು ಆಲಿಸಿದ ಹಿರಿಯ ಪ್ರಧಾನ ಜೆಎಂಎಫ್‌ಸಿ ನ್ಯಾಯಾಲಯದ ನ್ಯಾಯಾಧೀಶರಾದ ಪ್ರಶೀಲಾ ಕುಮಾರಿ ಅವರು ಆರೋಪಿಗೆ ಐಪಿಸಿ304 (ಎ) ಅಡಿಯಲ್ಲಿ 2 ವರ್ಷ ಜೈಲುವಾಸ, 10 ಸಾವಿರ ರೂ. ದಂಡ ಹಾಗೂ ಕಾನೂನು ಉಲ್ಲಂಘನೆಗೆ ಭಾರತೀಯ ಮೋಟಾರು ವಾಹನ ಕಾಯಿದೆ 181 ಅಡಿಯಲ್ಲಿ 2 ತಿಂಗಳ ಸೆರೆವಾಸ ಮತ್ತು 500 ರೂ. ವಿಧಿಸಿ ಆದೇಶಿಸಿದೆ. ದಂಡವನ್ನು ಮೃತ ನಂಜೇಗೌಡರ ವಾರಸುದಾರರ ಹೆಸರಲ್ಲಿ ಠೇವಣಿ ಮಾಡುವಂತೆ ಅಪರಾಧಿಗೆ ಸೂಚಿಸಿದ್ದಾರೆ. ಪ್ರಕರಣದ ಸಂಬಂಧ ಸರಕಾರದ ಪರವಾಗಿ ಸಹಾಯಕ ಸರಕಾರಿ ವಕೀಲರಾದ ನಜೀಮಾ ಬೇಗಂ ವಾದ ಮಂಡಿಸಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ