ಆ್ಯಪ್ನಗರ

ಆಟೋಗೆ ಟಿಪ್ಪರ್‌ ಡಿಕ್ಕಿ: ಐವರ ಸಾವು

ನಾಗಮಂಗಲ ತಾಲೂಕು ಸಂಕನಹಳ್ಳಿ ಗೇಟ್‌ ಬಳಿ ಶುಕ್ರವಾರ ರಾತ್ರಿ ಆಟೋಗೆ ಟಿಪ್ಪರ್‌ ಡಿಕ್ಕಿಯಾಗಿ ಸಂಭವಿಸಿದ ಭೀಕರ ಅಪಘಾತದಲ್ಲಿ ಸಂತೆಗೆ ಬಂದಿದ್ದ ಐವರು ಮೃತಪಟ್ಟು, ನಾಲ್ವರು ಗಾಯಗೊಂಡಿದ್ದಾರೆ.

Vijaya Karnataka 23 Mar 2019, 5:00 am
ಮಂಡ್ಯ/ನಾಗಮಂಗಲ: ನಾಗಮಂಗಲ ತಾಲೂಕು ಸಂಕನಹಳ್ಳಿ ಗೇಟ್‌ ಬಳಿ ಶುಕ್ರವಾರ ರಾತ್ರಿ ಆಟೋಗೆ ಟಿಪ್ಪರ್‌ ಡಿಕ್ಕಿಯಾಗಿ ಸಂಭವಿಸಿದ ಭೀಕರ ಅಪಘಾತದಲ್ಲಿ ಸಂತೆಗೆ ಬಂದಿದ್ದ ಐವರು ಮೃತಪಟ್ಟು, ನಾಲ್ವರು ಗಾಯಗೊಂಡಿದ್ದಾರೆ.
Vijaya Karnataka Web auto tipper crashes five deaths
ಆಟೋಗೆ ಟಿಪ್ಪರ್‌ ಡಿಕ್ಕಿ: ಐವರ ಸಾವು


ಆಟೋ ಚಾಲಕ ಹಂದೇನಹಳ್ಳಿ ಸತೀಶ್‌(40), ಸುಖಧರೆ ಗ್ರಾಮದ ಸುರೇಶ್‌(30), ಕಾಳೇನಹಳ್ಳಿಯ ಬಸವ ಎಂಬುವರ ಪತ್ನಿ ಅರಸಮ್ಮ(25), ಕಾಂತಾಪುರದ ಬೋರಲಿಂಗ(40), ಸಂಕನಹಳ್ಳಿ ಕ್ವಾರೆಯಲ್ಲಿ ಕೆಲಸ ಮಾಡುತ್ತಿದ್ದ ತಮಿಳುನಾಡು ಮೂಲದ ಸೇಟು(40) ಮೃತರು. ದೇವನಹೊಸೂರು ಗ್ರಾಮದ ಪುಟ್ಟೇಗೌಡ(40), ಮಲ್ಲಸಂದ್ರದ ನಾಗರಾಜು(37) ಸೇರಿದಂತೆ ನಾಲ್ವರು ಗಾಯಗೊಂಡಿದ್ದಾರೆ.

ಮೃತರು ಹಾಗೂ ಗಾಯಾಳುಗಳೆಲ್ಲರೂ ಶುಕ್ರವಾರ ಸಂತೆ ನಡೆಯುತ್ತಿದ್ದ ಹಿನ್ನೆಲೆಯಲ್ಲಿ ನಾಗಮಂಗಲಕ್ಕೆ ಆಗಮಿಸಿದ್ದರು. ಕೆಲಸ, ಕಾರ‍್ಯಗಳನ್ನು ಮುಗಿಸಿ ತಮ್ಮೂರುಗಳಿಗೆ ತೆರಳಲು ಎಲ್ಲರೂ ಬೋಗಾದಿಯತ್ತ ಹೋಗುತ್ತಿದ್ದ ಆಟೋ ಹತ್ತಿದ್ದರು. ರಾತ್ರಿ 7.45ರ ಸಮಯದಲ್ಲಿ ಆಟೋ ಸಂಕನಹಳ್ಳಿ ಗೇಟ್‌ ಬಳಿ ಬರುತ್ತಿದ್ದಂತೆ ಎದುರಿನಿಂದ ಬಂದ ಟಿಪ್ಪರ್‌ ಮುಖಾಮುಖಿ ಡಿಕ್ಕಿ ಹೊಡೆದಿದೆ. ಟಿಪ್ಪರ್‌ನ ಕೆಳಗೆ ಆಟೋ ತೂರಿದ್ದರಿಂದ 10 ಮೀಟರ್‌ ದೂರದವರೆಗೆ ಆಟೋವನ್ನು ಟಿಪ್ಪರ್‌ ಎಳೆದೊಯ್ದಿದೆ. ಟಿಪ್ಪನ್‌ ಕೆಳಗೆ ಸಿಲುಕಿದ ಆಟೋದಲ್ಲಿದ್ದ ಐವರು ಸ್ಥಳದಲ್ಲೇ ಕೊನೆಯುಸಿರೆಳೆದರು. ಮೃತರ ದೇಹಗಳು ಛಿದ್ರ ಛಿದ್ರವಾಗಿ ರಸ್ತೆಯಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿರುವುದು ಅಪಘಾತದ ತೀವ್ರತೆಗೆ ಸಾಕ್ಷಿ.

ಬಾಲಾಜಿ ಕನ್ಸ್‌ಸ್ಟ್ರಕ್ಷನ್‌ಗೆ ಸೇರಿದ ಟಿಪ್ಪರ್‌ ಹೆವಿಲೋಡ್‌ ಜಲ್ಲಿಯನ್ನು ತುಂಬಿಕೊಂಡು ನಾಗಮಂಗಲದತ್ತ ಬರುತ್ತಿದ್ದಾಗ ಈ ಅಪಘಾತ ಸಂಭವಿಸಿದೆ. ಟಿಪ್ಪರ್‌ನಲ್ಲಿ ತುಂಬಿದ್ದ ಹೆವಿಲೋಡ್‌, ಚಾಲಕನ ಅಜಾಗರೂಕ ಚಾಲನೆ ಘಟನೆಗೆ ಕಾರಣ ಎನ್ನಲಾಗಿದೆ. ಎರಡು ಆಂಬ್ಯುಲೆನ್ಸ್‌ಗಳು ಹಾಗೂ ಪೊಲೀಸರು ಸ್ಥಳಕ್ಕೆ ಆಗಮಿಸಿ, ಗಾಯಾಳುಗಳನ್ನು ರಕ್ಷಿಸುವ ಕಾರ‍್ಯ ಮಾಡಿದರು.

ನಾಲ್ವರು ಗಾಯಾಳುಗಳನ್ನು ಆಂಬ್ಯುಲೆನ್ಸ್‌ನಲ್ಲಿ ಮೊದಲು ನಾಗಮಂಗಲ ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ಕರೆದೊಯ್ದು ಪ್ರಥಮ ಚಿಕಿತ್ಸೆ ಕೊಡಿಸಿ, ನಂತರ ಹೆಚ್ಚಿನ ಚಿಕಿತ್ಸೆಗಾಗಿ ಬಿ.ಜಿ.ನಗರದಲ್ಲಿನ ಆದಿಚುಂಚನಗಿರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸಿಪಿಯ ನಂಜಪ್ಪ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ನಾಗಮಂಗಲ ಟೌನ್‌ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಸಂಚಾರ ಸ್ಥಗಿತ

ಅಪಘಾತದಿಂದಾಗಿ ರಸ್ತೆಯಲ್ಲೇ ಮೃತರ ದೇಹಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು. ಎರಡೂ ವಾಹನಗಳು ರಸ್ತೆಯಲ್ಲೇ ಇದ್ದುದರಿಂದ ನಾಗಮಂಗಲ-ಕೆ.ಆರ್‌.ಪೇಟೆ ಮುಖ್ಯ ರಸ್ತೆಯಲ್ಲಿ ವಾಹನಗಳ ಸಂಚಾರ ಅಸ್ತವ್ಯಸ್ತಗೊಂಡಿತ್ತು. ಮೃತರ ಎಲ್ಲ ದೇಹಗಳನ್ನು ಪಟ್ಟಣದ ಸಾರ್ವಜನಿಕ ಆಸ್ಪತ್ರೆಯ ಶವಾಗಾರದಲ್ಲಿರಿಸಲಾಗಿದೆ.

ಮುಗಿಲು ಮುಟ್ಟಿದ ಆಕ್ರಂದನ

ಅಪಘಾತದ ಸುದ್ದಿ ತಿಳಿಯುತ್ತಿದ್ದಂತೆ ನೂರಾರು ಮಂದಿ ಸ್ಥಳದಲ್ಲಿ ಜಮಾಯಿಸಿದ್ದರು. ಮೃತರ ಸಂಬಂಧಿಕರು ಅಪಘಾತ ಸ್ಥಳದಲ್ಲಿ ಮೃತ ದೇಹಗಳ ಎದುರು ಕುಳಿತು ಗೋಳಾಡುತ್ತಿದ್ದ ದೃಶ್ಯ ಮನಕಲಕುವಂತಿತ್ತು. ಟಿಪ್ಪರ್‌ ಚಾಲಕ ಪರಾರಿಯಾಗಿದ್ದಾನೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ