ಆ್ಯಪ್ನಗರ

ಸಿಎಂ ದಂಗೆ ಹೇಳಿಕೆ ವಿರುದ್ಧ ಬಿಜೆಪಿ ಪ್ರತಿಭಟನೆ

ವಿಕ ಸುದ್ದಿಲೋಕ ಮಂಡ್ಯ ದಂಗೆ ಏಳುವಂತೆ ರಾಜ್ಯದ ಜನರಿಗೆ ಕರೆ ನೀಡಬೇಕಾಗುತ್ತದೆ ಎಂದು ಮುಖ್ಯಮಂತ್ರಿ ನೀಡಿರುವ ಹೇಳಿಕೆ ಖಂಡಿಸಿ ಬಿಜೆಪಿ ಕಾರ‍್ಯಕರ್ತರು ನಗರದಲ್ಲಿ ಶುಕ್ರವಾರ ...

Vijaya Karnataka 22 Sep 2018, 5:00 am
ಮಂಡ್ಯ: ದಂಗೆ ಏಳುವಂತೆ ರಾಜ್ಯದ ಜನರಿಗೆ ಕರೆ ನೀಡಬೇಕಾಗುತ್ತದೆ ಎಂದು ಮುಖ್ಯಮಂತ್ರಿ ನೀಡಿರುವ ಹೇಳಿಕೆ ಖಂಡಿಸಿ ಬಿಜೆಪಿ ಕಾರ‍್ಯಕರ್ತರು ನಗರದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿದರು.
Vijaya Karnataka Web bjp protests against cms statement in mandya
ಸಿಎಂ ದಂಗೆ ಹೇಳಿಕೆ ವಿರುದ್ಧ ಬಿಜೆಪಿ ಪ್ರತಿಭಟನೆ


ಸರ್‌ಎಂವಿ ಪ್ರತಿಮೆ ಬಳಿ ಜಮಾವಣೆಗೊಂಡ ಬಿಜೆಪಿ ಕಾರ‍್ಯಕರ್ತರು, ರಾಜ್ಯ ಸರಕಾರ ಮತ್ತು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ವಿರುದ್ಧ ಘೋಷಣೆ ಮೊಳಗಿಸಿದರು. ದಂಗೆ ಏಳುವಂತೆ ಜನರಿಗೆ ಕರೆ ನೀಡಬೇಕಾಗುತ್ತದೆ ಎನ್ನುವ ಮೂಲಕ ಸಂವಿಧಾನ ವಿರೋಧಿ ಹೇಳಿಕೆ ನೀಡಿ, ಪ್ರತಿಪಕ್ಷದವರನ್ನು ಬೆದರಿಸುವ ಪ್ರಯತ್ನ ಮಾಡಿದ್ದಾರೆ ಎಂದು ಕಿಡಿಕಾರಿದರು.

ರಾಜ್ಯದಲ್ಲಿ ಶಾಂತಿ, ಕಾನೂನು ಮತ್ತು ಸುವ್ಯವಸ್ಥೆ ಹದಗೆಡಲು ಸ್ವತಹ ಮುಖ್ಯಮಂತ್ರಿಯೇ ಕಾರಣರಾಗುತ್ತಿದ್ದಾರೆ. ರಾಜ್ಯದ ಕರಾಳ ಪರಿಸ್ಥಿತಿಗೂ ಅವರೇ ಮೂಲವಾಗಿದ್ದಾರೆ. ಅಷ್ಟೇ ಅಲ್ಲದೆ, ಪ್ರತಿಪಕ್ಷದ ನಾಯಕ ಬಿ.ಎಸ್‌.ಯಡಿಯೂರಪ್ಪ ಅವರಿಗೆ ಈವರೆಗೆ ಪೊಲೀಸ್‌ ರಕ್ಷಣೆಯನ್ನೂ ನೀಡಿಲ್ಲ. ಪರಿಣಾಮ ಜೆಡಿಎಸ್‌ ಕಾರ‍್ಯಕರ್ತರು ಬಿಎಸ್‌ವೈ ಮನೆಗೆ ನುಗ್ಗಲು ಪ್ರಯತ್ನಿಸಿದ್ದಾರೆ ಎಂದು ಅಸಮಧಾನ ವ್ಯಕ್ತಪಡಿಸಿದರು.

ಮಾಡುವ ಭಾಷಣಗಳಲ್ಲಿ ಒಳ್ಳೆಯವರಂತೆ ನಟಿಸುತ್ತಿರುವ ಮುಖ್ಯಮಂತ್ರಿಯವರು ಗೋಮುಖ ವ್ಯಾಘ್ರದ ಮನಃಸ್ಥಿತಿ, ಸರ್ವಾಧಿಕಾರಿ ಧೋರಣೆಯುಳ್ಳರಾಗಿದ್ದರೆ. ಬಿಜೆಪಿ ಮತ್ತು ಪಕ್ಷದ ನಾಯಕರನ್ನು ಬೆದರಿಸಲು ಹಾಗೂ ರಾಜ್ಯದ ಜನರನ್ನು ಹಿಂಸೆಗೆ ಪ್ರಚೋದಿಸುವಂತಹ ಹೇಳಿಕೆ ನೀಡಿರುವ ಸಿಎಂ ವಿರುದ್ಧ ರಾಜ್ಯಪಾಲರು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಜಿ.ಪಂ. ಸದಸ್ಯ ಚಂದಗಾಲು ಶಿವಣ್ಣ, ಜಿಲ್ಲಾ ಬಿಜೆಪಿ ಅಧ್ಯಕ್ಷ ಕೆ.ನಾಗಣ್ಣಗೌಡ, ಮಂಡ್ಯ ನಗರ ಘಟಕದ ಅಧ್ಯಕ್ಷ ಎಚ್‌.ಆರ್‌.ಅರವಿಂದ್‌, ನಗರಸಭೆ ಮಾಜಿ ಉಪಾಧ್ಯಕ್ಷೆ ಇಂದಿರಾ ಸತೀಶಬಾಬು, ಮುಖಂಡ ಕೆ.ಎಸ್‌.ನಂಜುಂಡೇಗೌಡ, ಶಿವಕುಮಾರ್‌ ಆರಾಧ್ಯ, ಸಿ.ಟಿ.ಮಂಜುನಾಥ್‌, ಸಿದ್ದರಾಜುಗೌಡ, ಹನಿಯಂಬಾಡಿ ನಾಗರಾಜು, ಬಿಳಿದೇಗಲು ಧನಂಜಯ, ರಾಮೇಗೌಡ, ಪಣ್ಣೇದೊಡ್ಡಿ ರಘು, ಬಿ.ಕೃಷ್ಣ, ಅರಕೆರೆ ಪ್ರಶಾಂತ್‌, ಮಹಾಂತಪ್ಪ, ನಾಗಣ್ಣ, ಮಲ್ಲಪ್ಪ ಇತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ಮಹಿಳೆ ಮೇಲಿನ ದೌರ್ಜನ್ಯ- ಪ್ರತಿಭಟನೆ ಮೂಲಕ ವ್ಯಕ್ತವಾದ ಆಕ್ರೋಶ

ಮಂಡ್ಯ: ಪತಿ ಮಾಡಿದ ಸಾಲವನ್ನು ಜೀತ ಮಾಡಿ ತೀರಿಸುವಂತೆ ಮಹಿಳೆಯನ್ನು ಎಳೆದೊಯ್ದು ದೌರ್ಜನ್ಯ ನಡೆಸಿದ ಘಟನೆಗೆ ಜಿಲ್ಲಾದ್ಯಂತ ವ್ಯಾಪಕ ವಿರೋಧ, ಖಂಡನೆ ವ್ಯಕ್ತವಾಗಿದೆ. ಜತೆಗೆ, ಆರೋಪಿಗಳ ವಿರುದ್ಧ ಕಠಿಣ ಕಾನೂನು ಕ್ರಮಕ್ಕೆ ಆಗ್ರಹಿಸಿ ಬಹುಜನ ವಿದ್ಯಾರ್ಥಿ ಸಂಘ ಹಾಗೂ ದಸಂಸ ಕಾರ‍್ಯಕರ್ತರು ನಗರದಲ್ಲಿ ಶುಕ್ರವಾರ ಪ್ರತ್ಯೇಕವಾಗಿ ಪ್ರತಿಭಟನೆ ನಡೆಸಿದರು.

ಬಹುಜನ ವಿದ್ಯಾರ್ಥಿ ಸಂಘದ ಕಾರ‍್ಯಕರ್ತರು ಮೊದಲು ಪ್ರತಿಭಟಿಸಿದರು. ಬಳಿಕ ದಲಿತ ಸಂಘರ್ಷ ಸಮಿತಿ ಕಾರ‍್ಯಕರ್ತ ಪ್ರತಿಭಟನೆ ನಡೆಸಿ ಘಟನೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಜೆ.ಸಿ.ವೃತ್ತದಲ್ಲಿ ಜಮಾವಣೆಗೊಂಡ ದಸಂಸ ಕಾರ‍್ಯಕರ್ತರು, ಬೆಂಗಳೂರು-ಮೈಸೂರು ಹೆದ್ದಾರಿ ಮೂಲಕ ಮೆರವಣಿಗೆ ಹೊರಟು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕಚೇರಿ ತಲುಪಿದರು. ಅಲ್ಲಿ ಎಸ್ಪಿ ಅವರಿಗೆ ಮನವಿ ಸಲ್ಲಿಸಿದರು.

ಮದ್ದೂರು ತಾಲೂಕು ಬೆಕ್ಕಳಲೆ ಗ್ರಾಮದ ದಲಿತ ಮಹಿಳೆ ಜಾನಕಮ್ಮ ಅವರ ಮೇಲೆ ಹಲ್ಲೆ ಮಾಡಿ ಜೀತಕ್ಕಾಗಿ ಎಳೆದೊಯ್ದು ದೌರ್ಜನ್ಯ ನಡೆಸಿದ ಮದ್ದೂರು ಎಪಿಎಂಸಿ ಮಾಜಿ ಅಧ್ಯಕ್ಷ ಕೆ.ಎಸ್‌.ನಾಗೇಶ್‌ ಮತ್ತವನ ಸಹಚರರಾದ ಪಾಂಡು, ಕರಿಯಪ್ಪ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕು. ಜೀತಗಾರಿಕೆ ನಿಷೇಧ ಜಾಯಿದೆ, ಮಹಿಳಾ ದೌರ್ಜನ್ಯ ವಿರೋಧಿ ಕಾಯಿದೆ ಮತ್ತು ಅಸ್ಪೃಶ್ಯತಾ ವಿರೋಧಿ ಕಾಯಿದೆಯಡಿ ಕ್ರಮ ಕೈಗೊಳ್ಳಬೇಕು. ಆರೋಪಿಗಳನ್ನು ಗಡಿಪಾರು ಮಾಡಬೇಕು ಆಗ್ರಹಿಸಿದರು.

ಜಿಲ್ಲೆಯಲ್ಲಿ ಇಂತಹ ದೌರ್ಜನ್ಯ, ಹಲ್ಲೆ ಮತ್ತು ಅಪಮಾನ ಪ್ರಕರಣಗಳು ಜರುಗಿದಂತೆ ಪೊಲೀಸ್‌ ಇಲಾಖೆ ಮುನ್ನೆಚ್ಚರಿಕೆ ಕ್ರಮ ವಹಿಸಬೇಕು ಎಂದು ಒತ್ತಾಯಿಸಿದರು. ದಸಂಸ ರಾಜ್ಯ ಸಂಚಾಲಕ ಗುರುಪ್ರಸಾದ್‌ ಕೆರೆಗೋಡು, ಜಿಲ್ಲಾ ಸಂಘಟನಾ ಸಂಚಾಲಕ ಪ್ರಸನ್ನ ತೂಬಿನಕೆರೆ, ಮುಖಂಡರಾದ ಎಸ್‌.ಪುಟ್ಟಅಂಕಯ್ಯ, ದೇವರಾಜ್‌, ಶಿವಲಿಂಗಯ್ಯ, ಬಳೆಅತ್ತಿಗುಪ್ಪೆ ವಿಜಯ್‌ಕುಮಾರ್‌, ತಿರುಮಲಸ್ವಾಮಿ ಇತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ