ಆ್ಯಪ್ನಗರ

ನೀಲಗಿರಿ ಮರಗಳಿಗೆ ಬೈ, ಪರಿಸರ ಸ್ನೇಹಿ ಗಿಡಗಳಿಗೆ ಜೈ

ತಾಲೂಕಿನ ಕೆ.ಶೆಟ್ಟಹಳ್ಳಿ ಮೀಸಲು ಅರಣ್ಯ ಪ್ರದೇಶದಲ್ಲಿ ನೀಲಗಿರಿ ಮರಗಳು ಇದ್ದ ಸ್ಥಳದಲ್ಲಿ ಅವುಗಳನ್ನು ಕಟಾವು ಮಾಡಿ, ಬೇರು ಸಮೇತ ತೆರವುಗೊಳಿಸಿ ಆ ಪ್ರದೇಶದಲ್ಲಿ ಪ್ರಕೃತಿಗೆ ಪೂರಕವಾದ ಮರ, ಗಿಡಗಳನ್ನು ನೆಡುವ ಕಾಮಗಾರಿ ಭರದಿಂದ ಸಾಗಿದೆ.

Vijaya Karnataka 19 Jul 2019, 5:00 am
ಜಿ.ಎನ್‌.ರವೀಶ್‌ಗೌಡ ಶ್ರೀರಂಗಪಟ್ಟಣ
Vijaya Karnataka Web MDY-MDY17SRP1

ತಾಲೂಕಿನ ಕೆ.ಶೆಟ್ಟಹಳ್ಳಿ ಮೀಸಲು ಅರಣ್ಯ ಪ್ರದೇಶದಲ್ಲಿ ನೀಲಗಿರಿ ಮರಗಳು ಇದ್ದ ಸ್ಥಳದಲ್ಲಿ ಅವುಗಳನ್ನು ಕಟಾವು ಮಾಡಿ, ಬೇರು ಸಮೇತ ತೆರವುಗೊಳಿಸಿ ಆ ಪ್ರದೇಶದಲ್ಲಿ ಪ್ರಕೃತಿಗೆ ಪೂರಕವಾದ ಮರ, ಗಿಡಗಳನ್ನು ನೆಡುವ ಕಾಮಗಾರಿ ಭರದಿಂದ ಸಾಗಿದೆ.

ಬೆಂಗಳೂರು-ಮೈಸೂರು ಹೆದ್ದಾರಿ ಗಣಂಗೂರು ಗ್ರಾಮದಿಂದ ಮಲ್ಲೇಗೌಡನಕೊಪ್ಪಲು ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಬಳಿ ದೊಡ್ಡ ಬೆಟ್ಟ ಅರಣ್ಯ ಪ್ರದೇಶದಲ್ಲಿ ಸುಮಾರು ನೂರು ಎಕರೆ ಪ್ರದೇಶದಲ್ಲಿ ನೀಲಗಿರಿ ಮರಗಳನ್ನು ಕಟಾವು ಮಾಡಿ, ಮತ್ತೆ ಬೆಳೆಯದಂತೆ ಬೇರು ಸಮೇತ ಕಿತ್ತು ಹಾಕಲಾಗಿದೆ. ಆ ಪ್ರದೇಶದಲ್ಲಿ ಹೊನ್ನೆ, ಆಲ, ಹೊಂಗೆ, ತಪ್ಸಿ ಸೇರಿದಂತೆ ನಾನಾ ಜಾತಿಯ ಗಿಡಗಳನ್ನು ನೆಡಲು ಜೆಸಿಬಿ ಯಂತ್ರದ ಸಹಾಯದಿಂದ ಗುಂಡಿ ತೆಗೆಯಲಾಗಿದೆ.

ನೀಲಗಿರಿ ಮರಗಳು ಇರುವ ಸ್ಥಳಗಳಲ್ಲಿ ಹೆಚ್ಚು ತೇವಾಂಶ ಇರುವುದಿಲ್ಲ. ಜತೆಗೆ ಇಲ್ಲಿ ಬೇರೆ ಯಾವುದೇ ಮರ, ಗಿಡಗಳು ಬೆಳೆಯುವುದಿಲ್ಲ. ಇದರಿಂದ ಅರಣ್ಯ ಅಭಿವೃದ್ಧಿಯಾಗುವುದಿಲ್ಲ ಎಂಬ ತಜ್ಞರ ವರದಿ ಹಿನ್ನೆಲೆಯಲ್ಲಿ ಎರಡು ವರ್ಷಗಳ ಹಿಂದೆ ಸರಕಾರ, ಅರಣ್ಯ ಪ್ರದೇಶಗಳಲ್ಲಿರುವ ನೀಲಗಿರಿ ಮರಗಳನ್ನು ತೆರವುಗೊಳಿಸಿ ಆ ಸ್ಥಳದಲ್ಲಿ ಬೇರೆ ಜಾತಿಯ ಗಿಡಗಳನ್ನು ನೆಟ್ಟು ಪೋಷಣೆ ಮಾಡುವಂತೆ ಅರಣ್ಯ ಇಲಾಖೆಗೆ ಆದೇಶ ನೀಡಿತ್ತು.

ಕೆ.ಶೆಟ್ಟಹಳ್ಳಿ ಮೀಸಲು ಅರಣ್ಯ ಪ್ರದೇಶ ಒಟ್ಟು 1800 ಎಕರೆ ವಿಸ್ತೀರ್ಣ ಹೊಂದಿದೆ. ಅರಣ್ಯಪ್ರದೇಶದಲ್ಲಿ ನೀಲಗಿರಿ ಮರಗಳನ್ನು ಹೊರತುಪಡಿಸಿ ಬೇರೆ ಯಾವುದೇ ಜಾತಿಯ ಮರಗಳು ಬೆಳೆದಿರಲಿಲ್ಲ. ಶೇಕಡಾ 90 ರಷ್ಟು ನೀಲಗಿರಿ ಮರಗಳೇ ಇದ್ದವು. ಇವುಗಳನ್ನು ಕಟಾವು ಮಾಡಿ ಮತ್ತೆ ನೀಲಗಿರಿ ಮರಗಳನ್ನೇ ಬೆಳೆಸಲಾಗುತ್ತಿತ್ತು. ಹಲವು ವರ್ಷಗಳ ನಂತರ ಇದೀಗ ಕೆ.ಶೆಟ್ಟಹಳ್ಳಿ ಮೀಸಲು ಅರಣ್ಯ ಪ್ರದೇಶದಲ್ಲಿ ಮೂರು ಬಾರಿ ಕಟಾವು ಮಾಡಿದ ನೀಲಗಿರಿ ಮರಗಳು ಮತ್ತೆ ಚಿಗುರದಂತೆ ಬೇರು ಸಮೇತ ತೆಗೆದು ಆ ಜಾಗದಲ್ಲಿ ಇದೇ ಮೊದಲ ಬಾರಿಗೆ ಹೊನ್ನೆಮರ, ತಂಪು ನೀಡುವ ಹೊಂಗೆ ಮರ, ಪ್ರಕೃತಿಗೆ ಪೂರಕ ಆಲದ ಮರ, ತಪ್ಸಿ ಗಿಡಗಳನ್ನು ನೆಟ್ಟು ಬೆಳೆಸಲು ಅರಣ್ಯ ಇಲಾಖೆ ಮುಂದಾಗಿದೆ.

ಕೆ.ಶೆಟ್ಟಹಳ್ಳಿ ಮೀಸಲು ಅರಣ್ಯ ಪ್ರದೇಶದ ಮಲ್ಲೇಗೌಡನಕೊಪ್ಪಲು ಗ್ರಾಮಕ್ಕೆ ಹೊಂದಿಕೊಂಡಂತಿರುವ ದೊಡ್ಡ ಬೆಟ್ಟ ಅರಣ್ಯ ಪ್ರದೇಶದ 100 ಎಕರೆ ಜಾಗದಲ್ಲಿ ನಾನಾ ಜಾತಿಯ ಗಿಡ, ಮರಗಳನ್ನು ನೆಟ್ಟು ಬೆಳೆಸಲು ಅರಣ್ಯ ಇಲಾಖೆ ಕಾಮಗಾರಿ ಕೈಗೆತ್ತಿಗೊಂಡಿದೆ. ಈಗಾಗಲೇ ಹೊನ್ನೆ, ಆಲ, ತಪ್ಸಿ, ಹೊಂಗೆ ಜಾತಿಯ 10 ಸಾವಿರ ಸಸಿಗಳನ್ನು ಬೆಳೆಸಿ ಸಿದ್ಧಮಾಡಿಕೊಂಡಿರುವ ಅರಣ್ಯ ಇಲಾಖೆ ಅಧಿಕಾರಿಗಳು ಆ ಸಸಿಗಳನ್ನು ನೆಡಲು ಮಳೆಗಾಗಿ ಕಾಯುತ್ತಿದ್ದಾರೆ.

ಆಹಾರ ಧಾನ್ಯ ಬೆಳೆಯುವ ಪ್ರದೇಶದಲ್ಲಿ ನೀಲಗಿರಿ ಮರಗಳನ್ನು ಬೆಳೆಸಿದರೆ ಬೇರೆ ಬೆಳೆಗೆ ಹಾನಿ ಮಾಡುತ್ತದೆ. ಭೂಮಿ ಬಂಜರು ಮಾಡುತ್ತದೆ. ನೀರು ಇರುವ ಸ್ಥಳದವರೆಗೂ ಬೇರು ಬಿಟ್ಟು ನೀರನ್ನು ಹೀರಿಕೊಳ್ಳುತ್ತದೆ. ಇದರಿಂದ ಭೂಮಿ ಫಲವತ್ತತೆ ಹಾಳಾಗುತ್ತದೆ. ಎಣ್ಣೆ ಮತ್ತು ಸೌದೆಗೆ ಉಪಯೋಗ ಮಾಡುವ ಎರಡು ಜಾತಿಯ ನೀಲಗಿರಿ ಮರಗಳು ಇದ್ದು, ಎರಡು ಮರಗಳನ್ನು ಬಂಜರು ಭೂಮಿಯಲ್ಲಷ್ಟೇ ನೆಡಬೇಕು. ರೈತರು ನೀಲಗಿರಿ ಮರಗಳನ್ನೇ ನೆಟ್ಟರೆ ಅಲ್ಲಿ ಬೇರೇ ಯಾವುದೇ ಬೆಳೆ ಬೆಳೆಯಲು ಸಾಧ್ಯವಾಗುವುದಿಲ್ಲ.
- ಚಂದ್ರು, ಹಿರಿಯ ಸಹಾಯಕ ನಿರ್ದೇಶಕ, ತೋಟಗಾರಿಕೆ ಇಲಾಖೆ.

ಮೇಲಧಿಕಾರಿಗಳ ಸೂಚನೆಯಂತೆ ಕೆ.ಶೆಟ್ಟಹಳ್ಳಿ ಮೀಸಲು ಅರಣ್ಯ ಪ್ರದೇಶದ 25 ಎಕರೆ ಪ್ರದೇಶದಲ್ಲಿ ಮಲ್ಲೇಗೌಡನಕೊಪ್ಪಲು ಬಳಿ ಇರುವ ದೊಡ್ಡ ಬೆಟ್ಟ ಅರಣ್ಯ ಪ್ರದೇಶದಲ್ಲಿ ನೀಲಗಿರಿ ಮರಗಳನ್ನು ತೆರವುಗೊಳಿಸಲಾಗಿದೆ. 5 ಮೀಟರ್‌ಗೆ ಒಂದರೆಂತೆ ಗುಂಡಿಯನ್ನು ತೆಗೆಸಲಾಗಿದೆ. ಈಗಾಗಲೇ ಹೊನ್ನೆ, ಆಲ, ತಪ್ಸಿ, ಹೊಂಗೆ ಜಾತಿಯ 10 ಸಾವಿರ ಸಸಿಗಳನ್ನು ಬೆಳೆಸಲಾಗಿದೆ. ಮಳೆ ಆರಂಭವಾದರೆ ಅಲ್ಲಿ ಹೊಸದಾಗಿ ನಾನಾ ಜಾತಿಯ ಮರ, ಗಿಡಗಳನ್ನು ನೆಟ್ಟು ಬೆಳೆಸಲಾಗುವುದು.
- ಆನಂದೇಗೌಡ, ಡಿಆರ್‌ಎಫ್‌ಒ, ಕೆ.ಶೆಟ್ಟಹಳ್ಳಿ, ಮೀಸಲು ಅರಣ್ಯ ಪ್ರದೇಶ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ