ಆ್ಯಪ್ನಗರ

ಕಾವೇರಿಗೆ ಬಾಗಿನ ಸಲ್ಲಿಸಿದ ಸಿಎಂ

ಕಾವೇರಿಗೆ ಬಾಗಿನ ಸಲ್ಲಿಸಿದ ಸಿಎಂ -ಮುಖ್ಯಮಂತ್ರಿಯಾಗಿ 4ನೇ ಬಾರಿ ಜೀವನದಿಗೆ ಪೂಜೆ: ಯಡಿಯೂರಪ್ಪ ಹೆಗ್ಗಳಿಕೆ ನವೀನ್‌ ಮಂಡ್ಯ ಮಂಡ್ಯ ಮತ್ತು ಮೈಸೂರು ಜಿಲ್ಲೆಗಳ 'ಧಿಜೀವನಾಡಿ' ...

Vijaya Karnataka 30 Aug 2019, 5:00 am
ಮುಖ್ಯಮಂತ್ರಿಯಾಗಿ 4ನೇ ಬಾರಿ ಜೀವನದಿಗೆ ಪೂಜೆ: ಯಡಿಯೂರಪ್ಪ ಹೆಗ್ಗಳಿಕೆ
Vijaya Karnataka Web cm offerd bagina to river cauvery
ಕಾವೇರಿಗೆ ಬಾಗಿನ ಸಲ್ಲಿಸಿದ ಸಿಎಂ

ನವೀನ್‌ ಮಂಡ್ಯ
ಮಂಡ್ಯ ಮತ್ತು ಮೈಸೂರು ಜಿಲ್ಲೆಗಳ 'ಜೀವನಾಡಿ' ಕನ್ನಂಬಾಡಿಕಟ್ಟೆ ಭರ್ತಿಯಾಗಿರುವ ಹಿನ್ನೆಲೆಯಲ್ಲಿ ಕಾವೇರಿ ಮಾತೆಗೆ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಗುರುವಾರ ವಿಶೇಷ ಪೂಜೆ ನೆರವೇರಿಸಿ ಬಾಗಿನ ಸಲ್ಲಿಸಿದರು.

2008ರಿಂದ ಸತತ ಮೂರು ವರ್ಷ ಮುಖ್ಯಮಂತ್ರಿಯಾಗಿ ಕೆಆರ್‌ಎಸ್‌ನಲ್ಲಿ ಕಾವೇರಿಗೆ ಮಾತೆಗೆ ಬಾಗಿನ ಸಲ್ಲಿಸಿದ್ದ ಸಿಎಂ ಯಡಿಯೂರಪ್ಪ ಅವರು, 4ನೇ ಬಾರಿಗೆ ಬಾಗಿನ ಸಲ್ಲಿಸಿದ ಮುಖ್ಯಮಂತ್ರಿ ಎಂಬ ಹೆಗ್ಗಳಿಕೆಗೂ ಪಾತ್ರರಾದರು. ಇವರ ಹೊರತಾಗಿ ಈವರೆಗೆ ಯಾವೊಬ್ಬ ಮುಖ್ಯಮಂತ್ರಿಯೂ 4 ಬಾರಿ ಬಾಗಿನ ಅರ್ಪಿಸಿಲ್ಲ. ಕೆಲವರು 2-3 ಬಾರಿ ಸಲ್ಲಿಸಿದ್ದು, ಕೆಲವರು ಒಂದು ಸಾರಿಗೆ ಸೀಮಿತರಾಗಿದ್ದಾರೆ. ಈ ಪೈಕಿ ಆರ್‌.ಗುಂಡೂರಾವ್‌, ಎಸ್‌.ಬಂಗಾರಪ್ಪ ಹಾಗೂ ಎಚ್‌.ಡಿ.ಕುಮಾರಸ್ವಾಮಿ ಮಾತ್ರವೇ ಮೂರು ಬಾರಿ ಕೆಆರ್‌ಎಸ್‌ನಲ್ಲಿ ಒಡಲು ತುಂಬಿದ ಕಾವೇರಿ ಮಾತೆಗೆ ಬಾಗಿ ಅರ್ಪಿಸಿದ್ದಾರೆ. ಕಳೆದ ವರ್ಷ ಜುಲೈ 20ರಂದೇ ಜಲಾಶಯ ಭರ್ತಿಯಾದ ಹಿನ್ನಲೆಯಲ್ಲಿ ಅದೇ ದಿನದಂದು ಆಗಿನ ಮುಖ್ಯಮಂತ್ರಿ ಕುಮಾರಸ್ವಾಮಿ ಕಾವೇರಿಗೆ ಬಾಗಿನ ಸಲ್ಲಿಸಿ ಪೂಜೆ ನೆರವೇರಿಸಿದ್ದರು.

ವಿಶೇಷವೆಂದರೆ ಯಡಿಯೂರಪ್ಪ ಬಾಗಿನ ಸಲ್ಲಿಸಿದ ನಾಲ್ಕು ವರ್ಷಗಳಲ್ಲಿ ಮೂರು ವರ್ಷ ಆಗಸ್ಟ್‌ನಲ್ಲೇ ಜಲಾಶಯ ಭರ್ತಿಯಾಗಿದೆ. 2009ರಲ್ಲಿಜು.24ರಂದು ಜಲಾಶಯ ಭರ್ತಿಯಾಗಿತ್ತು. 2008ರಲ್ಲಿಆ.15ರಂದು, 2009ರಲ್ಲಿಆ.18ರಂದು ಜಲಾಶಯ ಭರ್ತಿಯಾಗಿತ್ತು. ಅದೇ ದಿನಗಳು ಯಡಿಯೂರಪ್ಪ ಅವರು ಬಾಗಿನ ಸಲ್ಲಿಸಿದ್ದರು. ಕಾಕತಾಳೀಯ ಎಂಬಂತೆ ಈ ವರ್ಷವೂ ಆಗಸ್ಟ್‌ನಲ್ಲೇ(ಆ.29) ಕಾವೇರಿ ಮಾತೆಗೆ ಬಾಗಿನ ನೀಡಿದರು.

ಗುರುವಾರ ಮಧ್ಯಾಹ್ನ 12.20ಕ್ಕೆ ಕೆಆರ್‌ಎಸ್‌ ಹೆಲಿಪ್ಯಾಡ್‌ಗೆ ಕಾಪ್ಟರ್‌ನಲ್ಲಿ ಆಗಮಿಸಿದ ಸಿಎಂ ಯಡಿಯೂರಪ್ಪ ಅಲ್ಲಿಂದ ರಸ್ತೆ ಮಾರ್ಗವಾಗಿ ಕಾರಿನಲ್ಲಿಜಲಾಶಯಕ್ಕೆ ತೆರಳಿದರು. 12.35ಕ್ಕೆ ಜಲಾಶಯದ ಪ್ರವೇಶ ದ್ವಾರದಲ್ಲಿ ಯಡಿಯೂರಪ್ಪ ಅವರಿಗೆ ಪೂರ್ಣಕುಂಭ ಸ್ವಾಗತ ಕೋರಲಾಯಿತು. ಈ ಸಂದರ್ಭದಲ್ಲಿಸಂಸದೆ ಸುಮಲತಾ ಅಂಬರೀಷ್‌, ಮೈಸೂರು ಮೇಯರ್‌ ಪುಷ್ಪಲತಾ ಜಗನ್ನಾಥ್‌, ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್‌, ಶಾಸಕ ಎ.ಎಸ್‌.ರವೀಂದ್ರ ಶ್ರೀಕಂಠಯ್ಯ ಅವರೊಂದಿಗೆ ಯಡಿಯೂರಪ್ಪ ಅವರು ಜಲಾಶಯದ ಮೇಲಿನ ರಸ್ತೆಯಲ್ಲಿ ನಡೆದುಕೊಂಡೇ ಕಾವೇರಿ ಮಾತೆ ಪ್ರತಿಮೆಯ ಸ್ಥಳದ ಕಟ್ಟೆಯ ಮೇಲ್ಭಾಗದಲ್ಲಿ ಬಾಗಿನ ಸಲ್ಲಿಕೆಗೆ ನಿಗದಿಪಡಿಸಿದ್ದ ಸ್ಥಳಕ್ಕೆ ಆಗಮಿಸಿದರು.

ಈ ವೇಳೆ ಶಾಸಕರು ಹಾಗೂ ಮಾಜಿ ಸಚಿವರಾದ ಸಿ.ಎಸ್‌.ಪುಟ್ಟರಾಜು, ಡಿ.ಸಿ.ತಮ್ಮಣ್ಣ ಅವರು ಯಡಿಯೂರಪ್ಪ ಅವರಿಗೆ ಹಾರ ಹಾಕಿ ಬರಮಾಡಿಕೊಂಡರು. ಈ ವೇಳೆಗಾಗಲೇ ಬಾಗಿನ ಸಲ್ಲಿಕೆಗೆ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿತ್ತು. ವೇದಬ್ರಹ್ಮ ಶ್ರೀ ಭಾನುಪ್ರಕಾಶ ಶರ್ಮ ಅವರ ನೇತೃತ್ವದ 8 ಮಂದಿಯ ವೈದಿಕರ ತಂಡವು ಪೂಜಾ ವಿಧಿವಿಧಾನಗಳನ್ನು ನೆರವೇರಿಸಿತು. ಮುಖ್ಯಮಂತ್ರಿ ಆಗಮನಕ್ಕೂ ಮೊದಲೇ ಗಂಗಾಪೂಜೆ, ಮಹಾಗಣಪತಿ ಪ್ರಾರ್ಥನೆ, ಪುಣ್ಯಾಹ ಮತ್ತಿತರ ಪೂಜೆಗಳನ್ನು ನೆರವೇರಿಸಲಾಗಿತ್ತು. ಸಿಎಂ ಮತ್ತು ಶಾಸಕರ ತಂಡ ಬರುತ್ತಿದ್ದಂತೆ ಅರಿಶಿನ-ಕುಂಕುಮ, ಹೂವು, ಕುಪ್ಪಸ, ನವಧಾನ್ಯಗಳು, ಅರಿಶಿಣದ ಕೊಂಬು, ಕನ್ನಡಿ, ಬಳೆ, ಬಿಚ್ಚೋಲೆ, ಮಂಗಳದ್ರವ್ಯಗಳನ್ನು ಮೊರಗಳಲ್ಲಿ ಇಟ್ಟು ಮೊದಲೇ ಸಿದ್ಧಪಡಿಸಿದ ಬಾಗಿನಕ್ಕೆ ಅಭಿಜಿನ್‌ ಲಗ್ನದಲ್ಲಿಪೂಜೆ ನೆರವೇರಿಸಲಾಯಿತು. ಬಳಿಕ ಮಧ್ಯಾಹ್ನ 12.48ರ ಸಮಯದಲ್ಲಿ ಸಿಎಂ ಯಡಿಯೂರಪ್ಪ ಅವರು ಮಂಗಳವಾದ್ಯಗಳ ಸದ್ದಿನೊಂದಿಗೆ ಕಾವೇರಿ ಮಾತೆಗೆ ಅರ್ಪಿಸಿದರು.

ಧೂಪ-ದೀಪಗಳನ್ನು ಬೆಳಗಿ, ನೈವೇದ್ಯವಿಟ್ಟು ಕಾವೇರಿ ಜಗನ್ಮಾತೆಗೆ ಮಂಗಳ ಅಷ್ಟೋತ್ತರ ಸ್ತೋತ್ರಗಳನ್ನು ಹೇಳುತ್ತಾ ಬಾಗಿನ ಸಲ್ಲಿಸಿ, ನಾಡಿನ ಸಮೃದ್ಧಿಗಾಗಿ ಕಾವೇರಿ ಮಾತೆಯನ್ನು ಪ್ರಾರ್ಥಿಸಲಾಯಿತು. 12 ಜೋಡಿ ಮೊರಗಳಲ್ಲಿಇಟ್ಟಿದ್ದ ಬಾಗಿನವನ್ನು ಮುಖ್ಯಮಂತ್ರಿ ಯಡಿಯೂರಪ್ಪ ಸೇರಿದಂತೆ ಸಚಿವರು, ಶಾಸಕರು ಭರ್ತಿಯಾಗಿದ್ದ ಕನ್ನಂಬಾಡಿಕಟ್ಟೆಯ ಒಡಲಿಗೆ ಅರ್ಪಿಸಿ ಭಕ್ತಿಭಾವ ಮೆರೆದರು.

ಬಳಿಕ ಅಣೆಕಟ್ಟೆಯಿಂದ ಕೆಳಗಿಳಿದು ಕಾವೇರಿ ಮಾತೆಯ ಪ್ರತಿಮೆಗೆ ಮುಖ್ಯಮಂತ್ರಿಯಾದಿಯಾಗಿ ಎಲ್ಲ ಸಚಿವರು, ಶಾಸಕರು ಹಾಗೂ ಗಣ್ಯರು ಪೂಜೆ ನೆರವೇರಿಸಿದರು. ನಂತರ ಮಧ್ಯಾಹ್ನ 12.55ಕ್ಕೆ ವೇದಿಕೆ ಕಾರ‍್ಯಕ್ರಮಕ್ಕೆ ಚಾಲನೆ ದೊರೆಯಿತು. ನಂತರ ಕೇವಲ 25 ನಿಮಿಷಗಳಲ್ಲಿ ಕಾರ‍್ಯಕ್ರಮ ಮುಗಿಸಿ ಯಡಿಯೂರಪ್ಪ ಅವರು ಅಲ್ಲಿಂದ ನಿರ್ಗಮಿಸಿದರು. ಕಂದಾಯ ಸಚಿವ ಆರ್‌.ಅಶೋಕ್‌, ಸಂಸದರಾದ ಸುಮಲತಾ ಅಂಬರೀಷ್‌, ಪ್ರತಾಪ್‌ಸಿಂಹ ಹಾಗೂ ಮಂಡ್ಯ, ಮೈಸೂರು ಜಿಲ್ಲೆಗಳ ಶಾಸಕರು, ರಾಜ್ಯ ಮತ್ತು ಜಿಲ್ಲಾಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು.

ಕಳೆದ ಮೂರು ದಶಕಗಳಿಂದಲೂ ಬಾಗಿನ ಸಲ್ಲಿಕೆಯ ಪೂಜಾ ಕಾರ‍್ಯವನ್ನು ನಡೆಸಿಕೊಂಡು ಬರುತ್ತಿದ್ದೇನೆ. ಬಾಗಿನ ಸಲ್ಲಿಸುವ ಪ್ರಕ್ರಿಯೆಯನ್ನು ದೇವರಾಜ ಅರಸು ಅವರು ಆರಂಭಿಸಿದರು. ಅದನ್ನು ಗುಂಡೂರಾವ್‌ ಅವರು ಮುಂದುವರೆಸಿಕೊಂಡು ಬಂದರು. ಇದೀಗ ಯಡಿಯೂರಪ್ಪ ಅವರು 16ನೇ ಮುಖ್ಯಮಂತ್ರಿಯಾಗಿ ಬಾಗಿನ ಸಲ್ಲಿಸುತ್ತಿದ್ದಾರೆ. ಮನೆಯ ಹೆಣ್ಣು ಮಗಳಿಗೆ ಬಾಗಿನ ಕೊಡುವಂತೆಯೇ ಕನ್ನಂಬಾಡಿಕಟ್ಟೆ ಒಡಲು ತುಂಬಿದ ಕಾವೇರಿ ಮಾತೆಗೆ ಬಾಗಿನ ಸಲ್ಲಿಸುವ ಸಂಪ್ರದಾಯವಿದೆ.
- ವೇದಬ್ರಹ್ಮ ಶ್ರೀ ಭಾನುಪ್ರಕಾಶ ಶರ್ಮ, ಜ್ಯೋತಿಷಿ, ಶ್ರೀರಂಗಪಟ್ಟಣ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ