ಶ್ರೀರಂಗಪಟ್ಟಣ: ಖಾಸಗಿ ಸಮಾರಂಭವೊಂದಕ್ಕೆ ನೀರು ಸರಬರಾಜು ಮಾಡುತ್ತಿದ್ದ ಟ್ರ್ಯಾಕ್ಟರ್ ಚಾಲಕನ ವಿರುದ್ಧ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ದೂರು ದಾಖಲಾಗಿದೆ.
ತಾಲೂಕಿನ ಗಣಂಗೂರು ಹೊರವಲಯದಲ್ಲಿರುವ ಶ್ರೀ ಆದಿಶಕ್ತಿ ಹಿರಿಯಮ್ಮ ದೇಗುಲ ಬಳಿ ವ್ಯಕ್ತಿಯೊಬ್ಬರು ಆಯೋಜಿಸಿದ್ದ ಖಾಸಗಿ ಸಮಾರಂಭಕ್ಕೆ ಪುರಸಭೆಗೆ ಸೇರಿದ ವಾಹನದಲ್ಲಿ ಕುಡಿಯುವ ನೀರು ಸರಬರಾಜು ಮಾಡುತ್ತಿದ್ದ ಸಂಬಂಧ ಚುನಾವಣಾಧಿಕಾರಿಗಳು ಶುಕ್ರವಾರ ಪುರಸಭೆ ಟ್ರ್ಯಾಕ್ಟರ್ ಚಾಲಕನ ವಿರುದ್ಧ ದೂರು ದಾಖಲಿಸಿಕೊಂಡಿದ್ದಾರೆ.
ಖಾಸಗಿ ಸಮಾರಂಭಗಳಿಗೆ ಚುನಾವಣೆ ಸಮಯದಲ್ಲಿ ಸರಕಾರಿ ಇಲಾಖೆಗಳ ವ್ಯಾಪ್ತಿಗೆ ಸೇರಿದ ವಾಹನಗಳನ್ನು ಬಳಸುವಂತಿಲ್ಲ. ಸರಕಾರಿ ಇಲಾಖೆ ವ್ಯಾಪ್ತಿಯ ವಾಹನದಲ್ಲಿ ಪುರಸಭೆ ಟ್ರ್ಯಾಕ್ಟರ್ ಚಾಲಕ ಕುಡಿಯುವ ನೀರು ಸರಬರಾಜು ಮಾಡಲು ಹೋಗುತ್ತಿದ್ದಾಗ ಟ್ರ್ಯಾಕ್ಟರ್ ಹಿಡಿಯಲಾಗಿದೆ. ಟ್ರ್ಯಾಕ್ಟರ್ ಬಳಸಿಕೊಂಡಿರುವ ಸಂಬಂಧ ಚಾಲಕನ ವಿರುದ್ಧ ಪ್ರಕರಣ ದಾಖಲಿಸಿ ಜಿಲ್ಲಾಧಿಕಾರಿಗೆ ದೂರು ಸಲ್ಲಿಸಲಾಗಿದೆ. ಅವರ ಸೂಚನೆ ಮೇರೆಗೆ ಕ್ರಮ ಕೈಗೊಳ್ಳಲಾಗುವುದು ಎಂದು ಚುನಾವಣಾಧಿಕಾರಿ ಡಾ.ಎಂ.ಕೃಷ್ಣರಾಜು ತಿಳಿಸಿದ್ದಾರೆ.
ಖಾಸಗಿ ವ್ಯಕ್ತಿ ಪುರಸಭೆ ವಾಹನದಲ್ಲಿ ಕುಡಿಯುವ ನೀರು ಸರಬರಾಜು ಮಾಡಲು ಪುರಸಭೆಗೆ ಬಿಲ್ ಪಾವತಿ ಮಾಡಿದ್ದಾರೆ. ಹಾಗಾಗಿ ಟ್ರ್ಯಾಕ್ಟರ್ನಲ್ಲಿ ನೀರು ಸರಬರಾಜು ಮಾಡಲಾಗುತ್ತಿತ್ತು. ಖಾಸಗಿ ವ್ಯಕ್ತಿಗಳು ನೀರು ಸರಬರಾಜು ಮಾಡಲು ಮನವಿ ಮಾಡಿದಾಗ ಸರಬರಾಜು ಹಣ ಪಾವತಿಸಿದರೆ ಟ್ರ್ಯಾಕ್ಟರ್ನಲ್ಲಿ ನೀರು ಸರಬರಾಜು ಮಾಡಲಾಗುತ್ತದೆ ಎಂದು ಪುರಸಭೆ ಮುಖ್ಯಾಧಿಕಾರಿ ವಿಜಯಕುಮಾರ್ ತಿಳಿಸಿದ್ದಾರೆ.