ಆ್ಯಪ್ನಗರ

ಕೊಪ್ಪ ಜಿಪಂ ವ್ಯಾಪ್ತಿಯಲ್ಲಿ ಅಭಿವೃದ್ಧಿ ಕಾಮಗಾರಿ

ನಾಗಮಂಗಲ ವಿಧಾನಸಭೆ ಕ್ಷೇತ್ರ ವ್ಯಾಪ್ತಿಯ ಕೊಪ್ಪ ಜಿಪಂಗೆ ಸೇರಿದ ಗ್ರಾಮಗಳ ಸಮಗ್ರ ಅಭಿವೃದ್ಧಿಗೆ ಸಾಕಷ್ಟು ಹಣ ಬಿಡುಗಡೆಗೊಳಿಸಿದ್ದು ಹಂತಹಂತವಾಗಿ ಕಾಮಗಾರಿಗಳನ್ನು ಆರಂಭಿಸಲಾಗುವುದು ಶಾಸಕ ಕೆ. ಸುರೇಶ್‌ಗೌಡ ತಿಳಿಸಿದರು.

Vijaya Karnataka 9 Jun 2019, 5:00 am
ಮದ್ದೂರು: ನಾಗಮಂಗಲ ವಿಧಾನಸಭೆ ಕ್ಷೇತ್ರ ವ್ಯಾಪ್ತಿಯ ಕೊಪ್ಪ ಜಿಪಂಗೆ ಸೇರಿದ ಗ್ರಾಮಗಳ ಸಮಗ್ರ ಅಭಿವೃದ್ಧಿಗೆ ಸಾಕಷ್ಟು ಹಣ ಬಿಡುಗಡೆಗೊಳಿಸಿದ್ದು ಹಂತಹಂತವಾಗಿ ಕಾಮಗಾರಿಗಳನ್ನು ಆರಂಭಿಸಲಾಗುವುದು ಶಾಸಕ ಕೆ. ಸುರೇಶ್‌ಗೌಡ ತಿಳಿಸಿದರು.
Vijaya Karnataka Web MDY-MDY8MDR2


ಶನಿವಾರ ಕೊಪ್ಪ ಜಿಪಂ ವ್ಯಾಪ್ತಿಯ ಮೂಡ್ಯಾ ಗ್ರಾಮದಲ್ಲಿ ನಾನಾ ಅಭಿವೃದ್ಧಿ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು.

ಲೋಕಸಭಾ ಚುನಾವಣೆ ನೀತಿ ಸಂಹಿತೆ ಅಡ್ಡಿ ಹಿನ್ನೆಲೆಯಲ್ಲಿ ಹಲವು ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡಲಾರದ ಸ್ಥಿತಿ ಇದ್ದು, ಇಂದಿನಿಂದ ಈ ಕಾರ್ಯ ಆರಂಭಿಸಿರುವುದಾಗಿ ಹೇಳಿದರು.

ಕ್ಷೇತ್ರ ವ್ಯಾಪ್ತಿಯಲ್ಲಿ ನನೆಗುದಿಗೆ ಬಿದ್ದಿರುವ ಕುಡಿಯುವ ನೀರು, ಚರಂಡಿ, ರಸ್ತೆ ಡಾಂಬರೀಕರಣ, ಕಾಂಕ್ರಿಟ್‌ ರಸ್ತೆ ನಿರ್ಮಾಣ ಹಾಗೂ ಅಪೂರ್ಣವಾಗಿರುವ ಕೋಣಸಾಲೆ ಸರಕಾರಿ ಪ್ರೌಢಶಾಲೆ ನಿರ್ಮಾಣಕ್ಕೆ ಅನುದಾನ ಮತ್ತಿತರ ಕಾರ್ಯಗಳು ಮುಂದಿನ ದಿನಗಳಲ್ಲಿ ಆರಂಭವಾಗಲಿವೆ ಎಂದರು.

ನಾಲೆಗಳ ಆಧುನೀಕರಣ, ಕೆರೆ ತುಂಬಿಸುವಿಕೆ, ಕೊಪ್ಪ ಕೆರೆ ಅಭಿವೃದ್ಧಿ, ಏತನೀರಾವರಿ ಪುನಶ್ಚೇತನ ಇನ್ನಿತರೆ ಕಾಮಗಾರಿಗಳಿಗೆ ಈಗಾಗಲೇ ಮಂಜೂರು ದೊರೆತಿದ್ದು ತುರ್ತಾಗಿ ಕೆಲಸ ಪೂರ್ಣಗೊಳಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಹೇಳಿದರು.

ತಾಲೂಕಿನ ಕೀಳಘಟ್ಟ, ಅಣೆದೊಡ್ಡಿ, ಅರಗಿನಮೆಳೆ, ಮೂಡ್ಯ, ಬೆಕ್ಕಳಲೆ, ಯಡವನಹಳ್ಳಿ, ಬಿದರಕೋಟೆ, ಕೆ.ಎಚ್‌. ಕೊಪ್ಪಲು, ರುದ್ರೇಗೌಡನಕೊಪ್ಪಲು, ಹುರಗಲವಾಡಿ, ಕೋಣಸಾಲೆ ಗ್ರಾಮಗಳಲ್ಲಿ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿದರು.

ಜಿಪಂ ಸದಸ್ಯರಾದ ಮರಿಹೆಗಡೆ, ರೇಣುಕಾರಾಮಕೃಷ್ಣ, ತಾಪಂ ಮಾಜಿ ಉಪಾಧ್ಯಕ್ಷ ರಾಮಚಂದ್ರು, ಮುಖಂಡರಾದ ಜಗದೀಶ್‌, ಕುಶಾಲ್‌, ಸುಶೀಲ್‌ಕುಮಾರ್‌, ಸೋಮಣ್ಣ, ವೆಂಕಟೇಶ್‌ ಇತರರು ಹಾಜರಿದ್ದರು.


ಸಿಆರ್‌ಎಸ್‌ ವಿರುದ್ಧ ಟೀಕೆ

ಮಾಜಿ ಸಚಿವ, ಕಾಂಗ್ರೆಸ್‌ ಮುಖಂಡ ಎನ್‌.ಚಲುವರಾಯಸ್ವಾಮಿ ವಿರುದ್ಧ ಹರಿಹಾಯ್ದ ಶಾಸಕ ಕೆ. ಸುರೇಶ್‌ಗೌಡ ಅವರು, ಪಕ್ಷ ದಲ್ಲೇ ಇದ್ದುಕೊಂಡು ಮೈತ್ರಿ ಧರ್ಮವನ್ನು ಟೀಕಿಸುವ ಮೂಲಕ ಸೋತು ಮನೆ ಸೇರಿರುವ ಹಿಂದಿನ ಶಾಸಕರು ಟೀಕಿಸುತ್ತಲೇ ಪಕ್ಷ ಬಿಟ್ಟು ಬಿಜೆಪಿ ಸೇರುವ ಹುನ್ನಾರ ನಡೆಸಿದ್ದಾರೆ ಎಂದು ಟೀಕಿಸಿದರು.

''ಧರ್ಮಸಿಂಗ್‌ ಮುಖ್ಯಮಂತ್ರಿಯಾಗಿದ್ದ ವೇಳೆ ಮೈತ್ರಿ ಧರ್ಮ ಪಾಲನೆ ವಿಚಾರದಲ್ಲಿ ಚಲುವರಾಯಸ್ವಾಮಿ ಅವರು ನಡೆದುಕೊಂಡ ರೀತಿ ಈಗಲೂ ಪ್ರಚಲಿತದಲ್ಲಿದ್ದು ಮೈತ್ರಿಧರ್ಮ ಪಾಲನೆ ಸಂಬಂಧ ತಿಳಿವಳಿಕೆ ಹೇಳಿದಲ್ಲಿ ತಾವು ಮಾಜಿ ಶಾಸಕರ ಬಳಿ ಟ್ಯೂಷನ್‌ಗೆ ತೆರಳುತ್ತೇನೆ,'' ಎಂದು ಮಾರ್ಮಿಕವಾಗಿ ಹೇಳಿದರು.

ನಿಖಿಲ್‌ಕುಮಾರಸ್ವಾಮಿ ಮೈತ್ರಿ ಸರಕಾರದ ಭವಿಷ್ಯ ಕುರಿತಾಗಿ ಕಾರ‍್ಯಕರ್ತರೊಡನೆ ಚರ್ಚಿಸಿರುವ ಸಂಬಂಧ ಪ್ರತಿಕ್ರಿಯಿಸಿದ ಅವರು, ''ಯಾವ ಸಂದರ್ಭದಲ್ಲಿ ಏನು ಬೇಕಾದರೂ ಆಗಬಹುದಿದ್ದು ಇದಕ್ಕೆಲ್ಲ ಪಕ್ಷ ಮತ್ತು ವರಿಷ್ಠರು ಸಿದ್ಧರಿದ್ದಾರೆ,'' ಎಂದು ಸ್ಪಷ್ಟನೆ ನೀಡಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ