ಆ್ಯಪ್ನಗರ

ಮೇಲುಕೋಟೆ ಚೆಲುವನಾರಾಯಣಸ್ವಾಮಿ ದರ್ಶನ ಪಡೆದ ಭಕ್ತರು

ವಿಕ ಸುದ್ದಿಲೋಕ ಮೇಲುಕೋಟೆ ಶ್ರದ್ಧಾಭಕ್ತಿಯಿಂದ ಚೆಲುವನಾರಾಯಣಸ್ವಾಮಿಯ ದರ್ಶನ ಪಡೆದ 50 ಸಾವಿರಕ್ಕೂ ಹೆಚ್ಚು ಭಕ್ತರು ಮೇಲುಕೋಟೆಯಲ್ಲಿ ಕಡೆಯ ಶನಿವಾರದ ಸಂಭ್ರಮಕ್ಕೆ ಸಾಕ್ಷಿಯಾದರು...

Vijaya Karnataka 9 Sep 2018, 5:00 am
ಮೇಲುಕೋಟೆ: ಶ್ರದ್ಧಾಭಕ್ತಿಯಿಂದ ಚೆಲುವನಾರಾಯಣಸ್ವಾಮಿಯ ದರ್ಶನ ಪಡೆದ 50 ಸಾವಿರಕ್ಕೂ ಹೆಚ್ಚು ಭಕ್ತರು ಮೇಲುಕೋಟೆಯಲ್ಲಿ ಕಡೆಯ ಶನಿವಾರದ ಸಂಭ್ರಮಕ್ಕೆ ಸಾಕ್ಷಿಯಾದರು.
Vijaya Karnataka Web devotees visits to melukote cheluvanarayana swamy temple
ಮೇಲುಕೋಟೆ ಚೆಲುವನಾರಾಯಣಸ್ವಾಮಿ ದರ್ಶನ ಪಡೆದ ಭಕ್ತರು


ಇಡೀ ಪಟ್ಟಣದ ಪ್ರವಾಸಿ ತಾಣಗಳ ಕಡೆಯಲ್ಲಿ ತುಂಬಿತುಳುಕಿದ ಭಕ್ತರ ದಂಡು ಗೋವಿಂದ ನಾಮಸ್ಮರಿಸುವುದರೊಂದಿಗೆ ಸಾಕ್ಷಾತ್‌ ಭೂ ವೈಕುಂಠವನ್ನೇ ಸೃಷ್ಟಿಸಿದರು. ಬಹುತೇಕ ಗ್ರಾಮೀಣ ಪ್ರದೇಶಗಳಿಂದ ಕುಟುಂಬ ಪರಿವಾರದೊಂದಿಗೆ ಆಗಮಿಸುತ್ತಿದ್ದ ಭಕ್ತರು ದೇವರ ದರ್ಶನ ಪಡೆದು ಮಣೆಸೇವೆ, ಮುಡಿಹರಕೆ ಸಲ್ಲಿಸಿ ಕಲ್ಯಾಣಿ, ಮಂಟಪಗಳ ಬಳಿ ಕುಳಿತು ಊಟಮಾಡುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಕಲ್ಯಾಣಿಯಲ್ಲಿ ಸ್ನಾನ ಮಾಡಿದ ಭಕ್ತರು ದಾಸಯ್ಯರ ಆಶೀರ್ವಾದ ಪಡೆದು ನಾಮಧರಿಸಿ ಗುಂಪಾಗಿ ದೇವಾಯಗಳಿಗೆ ಬರುತ್ತಿದ್ದ ದೃಶ್ಯಗಳು ಭಕ್ತಿಭಾವ ಹೆಚ್ಚಿಸಿತ್ತು.

ಕಡೆ ಶ್ರಾವಣ ಶನಿವಾರದ ಪ್ರಯುಕ್ತ ದೇವಾಲಯದ ಪೂಜಾ ಕೈಂಕರ್ಯವನ್ನು ಬೆಳಗ್ಗೆ 5.30ಕ್ಕೆ ಆರಂಭಿಸಿ 7 ಗಂಟೆಗೆ ಭಕ್ತರ ದರ್ಶನಕ್ಕೆ ಅವಕಾಶ ಮಾಡಿಕೊಡಲಾಯಿತು. ಬೆಳಗ್ಗೆ 6 ಗಂಟೆಯಿಂದಲೇ ಆಗಮಿಸುತ್ತಿದ್ದ ಭಕ್ತರ ದಂಡು ಮಧ್ಯಾಹ್ನ 12 ಗಂಟೆಗೆ ಹೆಚ್ಚಾಯಿತು. ದೇವರ ದರ್ಶನಕ್ಕೆ ನಿಂತ ಭಕ್ತರು ಸಾಲು ಸಂಜೆಯವರೆಗೆ ಕಡಿಮೆಯಾಗಲೇ ಇಲ್ಲ. ಇನ್ನು ಬೆಟ್ಟದೊಡೆಯ ಯೋಗನರಸಿಂಹಸ್ವಾಮಿ ಬೆಟ್ಟದ ದೇವಾಲಯದಲ್ಲಿ ಸಹ ಭಕ್ತರ ದಟ್ಟಣೆ ಹೆಚ್ಚಾಗಿ, ಬೆಟ್ಟದ ತಳಭಾಗದ ಸತ್ಯನಾರಾಯಣಸ್ವಾಮಿ ದೇವಾಲಯದವರೆಗೂ ತಲುಪಿತ್ತು.

ಭಕ್ತರ ವಾಹನ ಪ್ರವೇಶಕ್ಕೆ ನಿರ್ಬಂಧ ವಿಧಿಸಿದ್ದ ಪೊಲೀಸರು ಆಸ್ಪತ್ರೆಯ ಮುಂಭಾಗದ ಮೈದಾನ ಮತ್ತು ಇತರೆಡೆ ವಾಹನ ನಿಲುಗಡೆ ವ್ಯವಸ್ಥೆ ಮಾಡಿ ಸಂಚಾರ ದಟ್ಟಣೆಯನ್ನು ನಿಯಂತ್ರಿಸಿದ್ದರು.

ಜಿ.ಪಂ ಸಿಇಒ ಯಾಲಕ್ಕೀಗೌಡ, ಕೆ.ಆರ್‌.ಡಿ.ಎಲ್‌, ನಿರ್ದೇಶಕ ಕೆಂಪೇಗೌಡ, ವಕೀಲ ಅರವಿಂದರಾಘವನ್‌, ಡಿ.ವೈ.ಎಸ್‌.ಪಿ. ಮಂಜುನಾಥ್‌, ರೈತ ಸಂಘದ ನಾಯಕ ಹೊಸಕೋಟೆ ವಿಜಯಕುಮಾರ್‌, ಮನ್‌ಮುಲ್‌ ಉಪಾಧ್ಯಕ್ಷ ರವಿಕುಮಾರ್‌ ಸೇರಿದಂತೆ ಹಲವು ಗಣ್ಯರು ದೇವರದರ್ಶನ ಪಡೆದರು.

ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ನಂಜೇಗೌಡ, ಎಸ್‌.ಐ.ಮೋಹನ್‌, ಎ.ಎಸ್‌.ಐ ಮಲ್ಲಪ್ಪ, ಮತ್ತು ಸಿಬ್ಬಂದಿ ಭಕ್ತರ ಸುಗಮ ದರ್ಶನಕ್ಕೆ ಶ್ರಮಿಸಿದರು.

ಪ್ರಮುಖ ಬೀದಿಗಳಲ್ಲಿ ನೂರಾರು ಸಂಖ್ಯೆಯಲ್ಲಿದ್ದ ಕಡಲೆಪುರಿ, ಪುಳಿಯೋಗರೆ ವ್ಯಾಪಾರಸ್ಥರು ಮಕ್ಕಳ ಆಟಿಕೆ ಸಾಮಗ್ರಿಗಳ ವ್ಯಾಪಾರಿಗಳು ಭರ್ಜರಿ ವ್ಯಾಪಾರ ಮಾಡಿದರು. ಮೇಲುಕೋಟೆ ಶನೀಶ್ವರಸ್ವಾಮಿ ದೇವಸ್ಥಾನ ಹಾಗೂ ವೀರಾಂಜನೇಯಸ್ವಾಮಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು. ಲಾರಿ ಮಾಲೀಕರ ಸಂಘದ ಅಧ್ಯಕ್ಷ ಚಿನಕುರಳಿ ಶಿವಕುಮಾರ್‌ ದಂಪತಿ ಸಮೇತ ಆಗಮಿಸಿ ದೇವರ ದರ್ಶನ ಪಡೆದು ಸಾವಿರ ಭಕ್ತರಿಗೆ ಪುಳಿಯೊಗರೆ ಮತ್ತು ಸಕ್ಕರೆ ಪೊಂಗಲ್‌ ಪ್ರಸಾದ ವಿತರಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ