ಆ್ಯಪ್ನಗರ

ಫ್ಯಾಸಿಸಂ ತಡೆಯದಿದ್ದರೆ ದೇಶಕ್ಕೆ ಅಪಾಯ

ನನ್ನದೇ ಮಾತು ನಡೆಯಬೇಕು. ನಾನಿಲ್ಲದೆ ಏನೂ ಇಲ್ಲ ಎನ್ನುವ ಫ್ಯಾಸಿಸ್ಟ್‌ ಮನೋಧರ್ಮದವರು ಸಮಾಜದಲ್ಲಿ ಭೀತಿಯನ್ನು ತಂದೊಡ್ಡುತ್ತಿದ್ದಾರೆ ಎಂದು ಮೈಸೂರಿನ ರಾಜ್ಯ ಸಂಪನ್ಮೂಲ ಕೇಂದ್ರದ ನಿರ್ದೇಶಕ ಡಾ.ಎಸ್‌.ತುಕಾರಾಂ ವಿಷಾದಿಸಿದರು.

Vijaya Karnataka 20 Jan 2019, 5:00 am
ಮಂಡ್ಯ : ನನ್ನದೇ ಮಾತು ನಡೆಯಬೇಕು. ನಾನಿಲ್ಲದೆ ಏನೂ ಇಲ್ಲ ಎನ್ನುವ ಫ್ಯಾಸಿಸ್ಟ್‌ ಮನೋಧರ್ಮದವರು ಸಮಾಜದಲ್ಲಿ ಭೀತಿಯನ್ನು ತಂದೊಡ್ಡುತ್ತಿದ್ದಾರೆ ಎಂದು ಮೈಸೂರಿನ ರಾಜ್ಯ ಸಂಪನ್ಮೂಲ ಕೇಂದ್ರದ ನಿರ್ದೇಶಕ ಡಾ.ಎಸ್‌.ತುಕಾರಾಂ ವಿಷಾದಿಸಿದರು.
Vijaya Karnataka Web district level seminar
ಫ್ಯಾಸಿಸಂ ತಡೆಯದಿದ್ದರೆ ದೇಶಕ್ಕೆ ಅಪಾಯ


ನಗರದ ಅಂಬೇಡ್ಕರ್‌ ಭವನದಲ್ಲಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಯು ಶನಿವಾರ ಏರ್ಪಡಿಸಿದ್ದ ಕೋಮುವಾದಿ-ಫ್ಯಾಸಿಸ್ಟ್‌ ಶಕ್ತಿಗಳ ಹುನ್ನಾರವನ್ನು ಹಿಮ್ಮೆಟ್ಟಿಸಿ ಸಂವಿಧಾನ ಆಶಯಗಳ ಉಳಿಸಲು ಜಿಲ್ಲಾ ಮಟ್ಟದ ವಿಚಾರ ಸಂಕಿರಣದಲ್ಲಿ ಮಾತನಾಡಿದ ಅವರು, ಪ್ರಜಾಪ್ರಭುತ್ವ, ಸಂವಿಧಾನದ ಬಗ್ಗೆ ವಿವೇಕ ಕಳೆದುಕೊಂಡವರು ಫ್ಯಾಸಿಸ್ಟ್‌ನಂತೆ ವರ್ತಿಸುತ್ತಿದ್ದಾರೆ. ನಾವೆಲ್ಲ ಇಂದು ಒಂದಾಗಿ ಫ್ಯಾಸಿಸಂ ತಡೆಯದಿದ್ದರೆ ಮುಂದಿನ ಪೀಳಿಗೆ ನಮ್ಮನ್ನು ಎಂದಿಗೂ ಕ್ಷಮಿಸದು ಎಂದು ಎಚ್ಚರಿಸಿದರು.

ಸಂವಿಧಾನ ಧಿಕ್ಕರಿಸುವ ಮಾತುಗಳ ಮೂಲಕ ಸಂವಿಧಾನದ ಮೂಲಕ ರೂಪಿಸಿರುವ ಕಾನೂನನ್ನು ಮುರಿಯುತ್ತಿದ್ದಾರೆ. ಅಂಬೇಡ್ಕರ್‌ ಅವರ ಮತದಾನ ಮತ್ತು ಮತ ಪಡೆಯುವವನ ಮಾತು ಒಂದೇ ಆಗಿರಬೇಕು ಎಂದಿದ್ದರು. ಹಾಗಾಗಿ ಅವರ ಮಾತು ಇಂದಿಗೂ ಪ್ರಸ್ತುತವಾಗಿದೆ. ಫ್ಯಾಸಿಸ್ಟ್‌ ಮನೋಭಾವದವರು ಅಧಿಕಾರದಲ್ಲಿರುವುದು ಪ್ರಜಾಪ್ರಭುತ್ವ ವ್ಯವಸ್ಥೆಗೆ ದೊಡ್ಡ ಗಂಡಾಂತರ ತಂದಿದ್ದಾರೆ. ಫ್ಯಾಸಿಸಂ ತಡೆಯದಿದ್ದರೆ ಭವಿಷ್ಯದಲ್ಲಿ ಭಾರತಕ್ಕೆ ದೊಡ್ಡ ಅನಾಹುತ ಕಾದಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಬುದ್ಧ, ಗಾಂಧಿ, ಅಂಬೇಡ್ಕರ್‌ ಹೇಳಿದ ದಾರಿಯಲ್ಲಿ ನಡೆದು ಕೋಮುವಾದಿ ಫ್ಯಾಸಿಸ್ಟ್‌ ಆಡಳಿತವನ್ನು ಪ್ರಶ್ನಿಸಬೇಕು. ಒಬ್ಬ ಕೋಮುವಾದಿ ಕಂಡಾಗ ಆತನಿಗೆ ಕುವೆಂಪು ಹೇಳಿದಂತೆ ಭಾರತ ಸರ್ವಜನಾಂಗದ ಶಾಂತಿಯ ತೋಟ ಎಂಬುದನ್ನು ಆತನ ಎದೆಯಾಳಕ್ಕೆ ತಲುಪಿಸುವ ಕೆಲಸ ಮಾಡಬೇಕು. ದ್ವೇಷ ಕಾರುವ ಮನಸ್ಸು ಫ್ಯಾಸಿಸಂ. ಮಹಾತ್ಮಗಾಂಧಿಯನ್ನು ಕೊಂದ ಕ್ಷಣದಿಂದಲೇ ಫ್ಯಾಸಿಸಂ ಬಂತು. ಗಾಂಧಿ ಎಂದರೆ ಸಮಾನತೆಯ ಭಾರತ. ಬಡ ವ್ಯಕ್ತಿ ಕ್ರಿಶ್ಚಿಯನ್‌, ದಲಿತ, ಮುಸ್ಲಿಂ ಯಾರೂ ಕೂಡ ಯಾರಿಗೂ ಹೆದರಬಾರದು. ಅಂಬೇಡ್ಕರ್‌, ಗಾಂಧಿ ಹಾದಿಯಲ್ಲಿ ಸಮಾನತೆ ಸಮಾಜ ನಿರ್ಮಾಣ ಮಾಡಲು ಒಗ್ಗೂಡಿ ಹೋರಾಟ ಮಾಡಬೇಕೆಂದು ಕರೆ ನೀಡಿದರು.

ಇಂದು ಮಾತುಗಳು ಸೋತು ಹೋಗುತ್ತಿವೆ. ನೈತಿಕತೆ ಸತ್ತು ಹೋಗಿ ಒಳ ಮತ್ತು ಹೊರ ಬದುಕಿನಲ್ಲಿ ವ್ಯತ್ಯಾಸವಾಗಿದೆ. ಗಾಂಧಿ ಮತ್ತು ಅಂಬೇಡ್ಕರ್‌ ಒಳ ಮತ್ತು ಹೊರ ಬದುಕಿನಲ್ಲಿ ತಾವು ಆಡಿದ ಮಾತಿನಂತೆ ನಡೆದುಕೊಂಡರು. ಹಾಗಾಗಿ ಇಂದಿಗೂ ಕೂಡ ಅವರು ಜೀವಂತವಾಗಿದ್ದಾರೆ. ಆದರಿಂದ ಕೆಲವರು ಮಾತಿಗೂ ಕೃತಿಗೂ ವ್ಯತ್ಯಾಸವಿಲ್ಲದಂತೆ ನಡೆದುಕೊಳ್ಳುತ್ತಿದ್ದಾರೆ. ಹೀಗಾಗಿ ಅವರು ಮಾತುಗಳು ಸೋತು ಹೋಗಿದೆ ಎಂದು ಟೀಕಿಸಿದರು.

ಭಾರತ ದೇಶ ಹಲವು ಸಂಪ್ರದಾಯಗಳ, ವಿವಿಧತೆಯಲ್ಲಿ ಏಕತೆ ಹೊಂದಿರುವ ದೇಶ. ಮನುಷ್ಯನ ರೂಪ, ಬಣ್ಣ, ಆಕಾರ, ಉಡುಪುಗಳಲ್ಲಿ ವ್ಯತ್ಯಾಸವಿರುವುದು ಪ್ರಕೃತಿಯ ನಿರ್ಧಾರ. ಆದರೆ, ಅದನ್ನು ಒಪ್ಪಿಕೊಳ್ಳುವ ಶಿಕ್ಷಣ ನಮ್ಮಲ್ಲಿಲ್ಲ. ನಮ್ಮಲ್ಲಿ ಔದಾರ್ಯತೆ ಮಾಯವಾಗಿದೆ. ಏಕವ್ಯಕ್ತಿ ನಿರೀಕ್ಷೆಗೆ ತಕ್ಕಂತೆ ನಡೆಯಬೇಕೆನ್ನುವ ಪರಿಸ್ಥಿತಿ ನಿರ್ಮಾಣವಾಗಿರುವುದರಿಂದ ನಿರಕುಂಶ ಪ್ರಭುತ್ವ ಜನ್ಮತಾಳಿದೆ ಎಂದು ಅಸಮಧಾನ ವ್ಯಕ್ತಪಡಿಸಿದರು.

ಇದೇ ಸಂದರ್ಭದಲ್ಲಿ ಗೌರವ ಡಾಕ್ಟರೇಟ್‌ಗೆ ಭಾಜನರಾಗಿರುವ ದಲಿತ ಸಂಘರ್ಷ ರಾಜ್ಯ ಸಂಚಾಲಕ ಎಂ.ಬಿ.ಶ್ರೀನಿವಾಸ್‌ ಅವರನ್ನು ಸನ್ಮಾನಿಸಲಾಯಿತು. ಜಿಲ್ಲಾ ಉಸ್ತುವಾರಿ ಸಚಿವ ಸಿ.ಎಸ್‌.ಪುಟ್ಟರಾಜು ಕಾರ್ಯಕ್ರಮ ಉದ್ಘಾಟಿಸಿದರು. ದಸಂಸ ರಾಜ್ಯ ಸಂಚಾಲಕ ಡಾ.ಡಿ.ಜಿ.ಸಾಗರ್‌ ಅಧ್ಯಕ್ಷತೆ ವಹಿಸಿದ್ದರು. ಶಾಸಕ ಎಂ.ಶ್ರೀನಿವಾಸ್‌, ಮಾಜಿ ಸಚಿವ ಆತ್ಮಾನಂದ, ಜಿ.ಪಂ.ಅಧ್ಯಕ್ಷೆ ನಾಗರತ್ನ, ಉಪಾಧ್ಯಕ್ಷೆ ಗಾಯಿತ್ರಿ, ದಲಿತ ಮುಖಂಡರಾದ ಪುಟ್ಟಂಕಯ್ಯ, ಕಣಿವೆ ಯೋಗೇಶ್‌, ಎಸ್‌.ಸಂತೋಷ್‌, ಅಂದಾನಿ ಸೋಮನಹಳ್ಳಿ, ಎಂ.ಬಿ.ರಾಜು, ಎಂ.ವಿ.ಕೃಷ್ಣ, ಸೋಮಶೇಖರ್‌ ಕೆರಗೋಡು, ಬಾಲಕೃಷ್ಣ ಹಾಜರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ