ಮದ್ದೂರು: ದೇಶಕ್ಕೆ ಹಸಿರು ಕ್ರಾಂತಿಯ ಮೂಲಕ ಆಹಾರ ಭದ್ರತೆ ಒದಗಿಸಿದ ಮಾಜಿ ಪ್ರಧಾನಿ ಡಾ.ಬಾಬುಜಗಜೀವನರಾಂ ಅವರ ಆದರ್ಶ ಹಾಗೂ ಹೋರಾಟದ ಗುಣವನ್ನು ಪ್ರತಿಯೊಬ್ಬರು ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ತಹಸೀಲ್ದಾರ್ ಎಚ್.ಜೆ.ನಾಗರಾಜು ತಿಳಿಸಿದರು.
ಪಟ್ಟಣದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ತಾಲೂಕು ಆಡಳಿತ, ಪುರಸಭೆ ಹಾಗೂ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಜಂಟಿಯಾಗಿ ಆಯೋಜಿಸಿದ್ದ ಡಾ.ಬಾಬುಜಗಜೀವನರಾಂ ರವರ 111ನೇ ಜಯಂತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಸಮಾಜದ ಕೆಳವರ್ಗದ ಜನರ ಅಭ್ಯುದಯಕ್ಕೆ ಶ್ರಮಿಸಿ ಜಾರಿಗೆ ತಂದ ಅನೇಕ ಯೋಜನೆಗಳು ಪ್ರಸ್ತುತ ದಿನಗಳಲ್ಲೂ ಮುಂದುವರಿದಿರುವುದು ಶ್ಲಾಘನೀಯ. ಪರಿಶಿಷ್ಟ ಜಾತಿ, ವರ್ಗಗಳ ಹಕ್ಕಿಗಾಗಿ ಹಗಲಿರುಳು ಹೋರಾಡಿದ ಬಾಬೂಜಿ ಅವರು ಅನುಸೂಚಿತ ಜಾತಿಗಳು ಹಾಗೂ ಬುಡಕಟ್ಟು ಉಪಯೋಜನೆ ವಿಧೇಯಕವನ್ನು ಜಾರಿಗೆ ತರುವ ಮೂಲಕ ಸರಕಾರ ವಿಶೇಷ ಗೌರವ ಸಲ್ಲಿಸುತ್ತಿದೆ ಎಂದು ತಿಳಿಸಿದರು.
ಪುರಸಭೆ ಮುಖ್ಯಾಧಿಕಾರಿ ಕರಿಬಸವಯ್ಯ, ಮುಖಂಡರಾದ ಚಂದ್ರಶೇಖರ್, ಹೊಂಬಯ್ಯ, ಮರಿದೇವರು, ಮಹದೇವು, ಜಗದೀಶ್, ಕೆಂಪಯ್ಯ, ವೆಂಕಟಾಚಲಯ್ಯ, ಜಿ.ಬಿ.ಶಂಕರ್, ಶ್ರೀನಿವಾಸ್, ಮಂಜು ಹಾಜರಿದ್ದರು.
ಪುರಸಭೆ ವರದಿ: ಪಟ್ಟಣದ ಪುರಸಭೆ ಕಚೇರಿಯಲ್ಲಿ ಡಾ.ಬಾಬು ಜಗಜೀವನರಾಮ್ ಅವರ 111ನೇ ಜನ್ಮ ದಿನಾಚರಣೆ ಅಂಗವಾಗಿ ಪುರಸಭೆ ಮುಖ್ಯಾಧಿಕಾರಿ ಕುಮಾರ್ ಬಾಬೂಜಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ನೆರವೇರಿಸಿದರು.
ಪ್ರತಿಯೊಬ್ಬರು ಡಾ.ಬಿ.ಆರ್.ಅಂಬೇಡ್ಕರ್ ಹಾಗೂ ಬಾಬೂಜಿ ಅವರ ತತ್ವ ಆದರ್ಶಗಳನ್ನು ಮೈಗೂಡಿಸಿಕೊಂಡು ಸದೃಢ ಸಮಾಜ ನಿರ್ಮಾಣಕ್ಕೆ ಮುಂದಾಗಬೇಕು. ಹಿಂದುಳಿದ ವರ್ಗಗಳ ಏಳಿಗೆಗೆ ಶ್ರಮಿಸಿದ ಮಹಾನ್ ವ್ಯಕ್ತಿ ಎಂದು ಬಣ್ಣಿಸಿದರು.
ಕಾರ್ಯಕ್ರಮದ ವೇಳೆ ಪುರಸಭೆ ಅಧಿಕಾರಿಗಳಾದ ಮೀನಾಕ್ಷಿ, ಶಿವಕುಮಾರ್, ಶ್ರೀಕಾಂತ್, ಕೃಷ್ಣ, ವೆಂಕಟೇಶ್, ನಾಗೇಂದ್ರ ಇದ್ದರು.