ಆ್ಯಪ್ನಗರ

ಕನ್ನಡ ಕಾಯಲು ಪ್ರಾಧಿಕಾರ ಬೇಕಾ?

ಕನ್ನಡಿಗರು ಆತ್ಮಾವಲೋಕನ ಮಾಡಿಕೊಳ್ಳಬೇಕಾದ ಪ್ರಶ್ನೆ ನಾಗಮಂಗಲ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಡಾವಿ...

Vijaya Karnataka 30 Jul 2019, 5:00 am
ಕನ್ನಡಿಗರು ಆತ್ಮಾವಲೋಕನ ಮಾಡಿಕೊಳ್ಳಬೇಕಾದ ಪ್ರಶ್ನೆ : ನಾಗಮಂಗಲ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಡಾ.ವಿ.ನಾಗೇಂದ್ರಪ್ರಸಾದ್‌
Vijaya Karnataka Web do you need authority to save kannada says writer v nagendra prasad
ಕನ್ನಡ ಕಾಯಲು ಪ್ರಾಧಿಕಾರ ಬೇಕಾ?

ನಾಗಮಂಗಲ: ಎರಡು ಸಾವಿರ ವರ್ಷಗಳಿಗೂ ಹಳೆಯದಾದ ಕನ್ನಡ ಭಾಷೆಯನ್ನು ಉಳಿಸಲು, ಕಾವಲು ಕಾಯುವುದಕ್ಕೆ ಕನ್ನಡ ಅಭಿವೃದ್ಧಿ ಪ್ರಾಧಿಧಿಕಾರ ಬೇಕಾ? ಈ ಕುರಿತು ಕನ್ನಡಿಗರೆಲ್ಲರೂ ಆತ್ಮಾವಲೋಕನ ಮಾಡಿಕೊಳ್ಳಬೇಕಾಗಿದೆ ಎಂದು ಚಿತ್ರ ಸಾಹಿತಿ ಹಾಗೂ ಸಂಗೀತ ನಿರ್ದೇಶಕ ಡಾ.ವಿ.ನಾಗೇಂದ್ರಪ್ರಸಾದ್‌ ಹೇಳಿದರು.

ಪಟ್ಟಣದ ಎಂಆರ್‌ಪಿ ಶ್ರೀ ನಂಜುಂಡೇಶ್ವರ ಪ್ಯಾಲೇಸ್‌ನ ಬಿಎಂಶ್ರೀ ವೇದಿಕೆಯಲ್ಲಿ ಸೋಮವಾರ ನಡೆದ 6ನೇ ತಾಲೂಕು ಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷ ತೆ ವಹಿಸಿ ಮಾತನಾಡಿದ ಅವರು, ಭಾಷಾವಾರು ಪ್ರಾಂತ್ಯಗಳಾಗಿ ವಿಂಗಡಣೆಯಾದ ನಂತರ ಭಾರತೀಯತೆಯ ಸಾರ್ವಭೌಮತೆಯನ್ನು ಆತ್ಮೀಯತೆಯಿಂದ ಅಪ್ಪಿಕೊಂಡ ಎಲ್ಲ ರಾಜ್ಯಗಳಲ್ಲಿ ಮೈಸೂರು ರಾಜ್ಯ ಮೊದಲ ಸಾಲಿನಲ್ಲಿ ನಿಲ್ಲುತ್ತದೆ. ಈ ಹಿಂದೆ ಪಾಟೀಲ್‌ ಪುಟ್ಟಪ್ಪನವರು ಅಧ್ಯಕ್ಷ ರಾಗಿದ್ದ ಕನ್ನಡ ಕಾವಲು ಸಮಿತಿ ಹಾಗೂ ಪ್ರಸ್ತುತ ಕನ್ನಡ ಅಭಿವೃದ್ಧಿ ಪ್ರಾಧಿಧಿಕಾರ ಇವೆಲ್ಲವೂ ಒಮ್ಮೆ ಸೋಜಿಗ ಎನಿಸುತ್ತದೆ. ಸಂಸ್ಕೃತ, ಆಂಗ್ಲ, ಉರ್ದು ಸೇರಿದಂತೆ ಅನ್ಯಭಾಷೆ, ಅನ್ಯದೇಶಿಯ ಪದಗಳ ದಾಳಿಗೆ ಸತತವಾಗಿ ಕನ್ನಡ ತುತ್ತಾದರೂ ಅವೆಲ್ಲವನ್ನೂ ಜೀರ್ಣಿಸಿಕೊಂಡು ಮತ್ತೊಮ್ಮೆ ಹೊಸ ಪಟ್ಟುಗಳೊಂದಿಗೆ ಬೆಳೆಯುತ್ತಾ ಸಾಗುತ್ತಲೇ ಬಂದಿದೆ. ಕನ್ನಡ ಸಿರಿಗನ್ನಡ, ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಭಾಷಣವೆಂದರೆ ನೆರೆದ ಜನಕ್ಕೆ ಮತ್ತು ನಾಡಿಗೆ ಕೊಡುವ ಸಂದೇಶವೆಂದು ತಿಳಿಯುತ್ತಾ ಬರಲಾಗಿದೆ. ಜನ ಸಾಹಿತಿಗಳ ಚರ್ಚೆ, ಚಿಂತನೆಗಳ ಮೂಲಕ ಬೌದ್ಧಿಕ ಬೆಳಕು ಪಡೆಯಲು ಬರುತ್ತಾರೆ. ಸಮ್ಮೇಳನದ ಚಿಂತನೆಗಳಿಂದ ಒಂದಿಷ್ಟು ಕಲಿಯುತ್ತಾರೆಂದೂ ಅರಿಯಬೇಕೆಂದು ಆಶಿಸಲಾಗಿದೆ ಎಂದರು.

ಕನ್ನಡದ ಹೆಸರಿನಲ್ಲಿ ಸಾಹಿತ್ಯಾಸಕ್ತಿಯಲ್ಲಿ ನೆರೆದಿರುವ ಈ ಬಹುದೊಡ್ಡ ಸಮೂಹ ವೇದಿಕೆಯಲ್ಲಿ ಇರುವವರಿಗೊಂದು ವಿವೇಕದ ಎಚ್ಚರ ಎಂದು ಭಾವಿಸುತ್ತೇನೆ. ಕನ್ನಡ ಪ್ರಧಾನವಾಗಿರುವ ಪ್ರದೇಶಗಳೆಲ್ಲ ಒಂದಾಗಬೇಕೆಂಬ ಏಕೀಕರಣದ ಪ್ರಧಾನ ಆಶಯ ಬಹುಮಟ್ಟಿಗೆ ಈಡೇರಿದೆ. ಆದರೆ ಕೆಲ ಪ್ರದೇಶಗಳು ಇನ್ನೂ ಬೇರೆ ರಾಜ್ಯದಲ್ಲೇ ಉಳಿದಿವೆ. ಕೇರಳ ಮತ್ತು ಕರ್ನಾಟಕದ ಗಡಿ ವಿವಾದ ಬಗೆಹರಿಸಲು ರಚಿತವಾದ ಮಹಾಜನ್‌ ಆಯೋಗದ ವರದಿ ಅನುಷ್ಠಾನಗೊಂಡಿಲ್ಲ. ಕಾಸರಗೋಡು ಕರ್ನಾಟಕವಾಗಿಲ್ಲ, ಆಂಧ್ರದಲ್ಲಿರುವ ಕನ್ನಡ ಪ್ರಧಾನ ಗ್ರಾಮಗಳು ರಾಜ್ಯಕ್ಕೆ ಸೇರಿಲ್ಲ. ತಮಿಳುನಾಡು, ಕೇರಳ, ಮಹಾರಾಷ್ಟ್ರದ ಕನ್ನಡ ಪ್ರಧಾನ ಪ್ರದೇಶಗಳು ನಮ್ಮ ನಾಡಿನ ಭಾಗವಾಗಿಲ್ಲ. ರಾಜ್ಯ ಸರಕಾರ ಹೊರ ರಾಜ್ಯಗಳ ಕೆಲ ಪ್ರದೇಶಗಳಿಗೆ ನೀಡಿರುವ ಅಧಿಕೃತ ಗಡಿಗ್ರಾಮ ಮನ್ನಣೆ ರಾಯಚೂರಿನ ಪಕ್ಕದ ಕೃಷ್ಣಾ, ಗುರ್ಜಾಲೆ, ತಂಗಡಗಿ, ಕುಸಮುರ್ತಿ, ಹೈನಾಪುರ ಸೇರಿದಂತೆ ಹಲವು ಗ್ರಾಮಗಳಿಗೆ ಲಭ್ಯವಾಗಿಲ್ಲ . ಕಾವೇರಿಯಿಂದ ಮಹಾದಾಯಿವರೆಗೆ ಗಡಿ ಜಿಲ್ಲೆ ಸಮಸ್ಯೆಗಳಿಂದ ಹಿಡಿದು ಕನ್ನಡ ಶಾಲೆಗಳ ಉಳಿವು ಸೇರಿದಂತೆ ಕನ್ನಡಪರ ಹೋರಾಟಕ್ಕೆ ತನ್ನ ಬೆಂಬಲ ಯಾವಾಗಲೂ ಇರುತ್ತದೆ ಎಂದರು

ರಾಜ್ಯದ ಒಳನಾಡಿನವರಿಗೆ ಸಿಗುವ ಶೈಕ್ಷಣಿಕ ಮತ್ತು ಔದ್ಯೋಗಿಕ ಸೌಲಭ್ಯಗಳು ಕನ್ನಡ ಮಾಧ್ಯಮದಲ್ಲೇ ವ್ಯಾಸಂಗ ಮಾಡಿದ ಹೊರನಾಡಿನ ಕನ್ನಡಿಗರಿಗೆ ಪೂರ್ಣ ಪ್ರಮಾಣದಲ್ಲಿ ಸಿಗುತ್ತಿಲ್ಲ. ಕರ್ನಾಟಕ ಇನ್ನೂ ಒಳನಾಡು ಹೊರನಾಡು ಮತ್ತು ಗಡಿನಾಡು ಎಂಬ ವಿಂಗಡಣೆ ವಿಷಾದವನ್ನು ಒಡಲುರಿಯಾಗಿ ಅನುಭವಿಸುತ್ತಿದೆ. ಇಂತಹ ಒಡಲುರಿ ಇರಬಾರದೆಂದು ಏಕೀಕರಣದ ಹೋರಾಟ ಹುಟ್ಟಿಕೊಂಡಿತ್ತು ಎಂದು ಸ್ಮರಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ