ಆ್ಯಪ್ನಗರ

ಕೆಣಕಬೇಡಿ: ಬಂಡಾಯ ಶಾಸಕರಿಗೆ ಎಚ್ಡಿಕೆ ಎಚ್ಚರಿಕೆ

ನನ್ನ ವಿರುದ್ಧ ನೀವು ಸುಳ್ಳು ಆರೋಪಗಳನ್ನು ಮಾಡುತ್ತಾ ಮತ್ತೆ ಮತ್ತೆ ಕೆಣಕಬೇಡಿ ಎಂದು ಬಂಡಾಯ ಶಾಸಕರಿಗೆ ಜೆಡಿಎಸ್‌ ರಾಜ್ಯಾಧ್ಯಕ್ಷ ಎಚ್‌.ಡಿ.ಕುಮಾರಸ್ವಾಮಿ ಎಚ್ಚರಿಕೆ ನೀಡಿದರು.

ವಿಕ ಸುದ್ದಿಲೋಕ 20 Apr 2017, 11:49 am

ನಾಗಮಂಗಲ: ನನ್ನ ವಿರುದ್ಧ ನೀವು ಸುಳ್ಳು ಆರೋಪಗಳನ್ನು ಮಾಡುತ್ತಾ ಮತ್ತೆ ಮತ್ತೆ ಕೆಣಕಬೇಡಿ ಎಂದು ಬಂಡಾಯ ಶಾಸಕರಿಗೆ ಜೆಡಿಎಸ್‌ ರಾಜ್ಯಾಧ್ಯಕ್ಷ ಎಚ್‌.ಡಿ.ಕುಮಾರಸ್ವಾಮಿ ಎಚ್ಚರಿಕೆ ನೀಡಿದರು.

ತಾಲೂಕಿನ ಬೆಳ್ಳೂರು ಕ್ರಾಸ್‌ ಸಮೀಪ ಖಾಸಗಿ ಹೋಟೆಲ್‌ನಲ್ಲಿ ಬುಧವಾರ ಕಾರ್ಯಕರ್ತರನ್ನು ಭೇಟಿ ಮಾಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.

'ರಾಜ್ಯಸಭಾ ಚುನಾವಣೆಯಲ್ಲಿ ತಮ್ಮ ಮತವನ್ನು ಮಾರಿಕೊಂಡ ಬಂಡಾಯ ಶಾಸಕರು ಈಗಾಗಲೇ ಸಂಕಷ್ಟದ ಸ್ಥಿತಿಯಲ್ಲಿದ್ದು, ಅನ್ಯ ಪಕ್ಷ ಗಳ ನಾಯಕರ ಮನೆಗೆ ಎಡತಾಕುತ್ತಿದ್ದಾರೆ. ನನ್ನನ್ನು ಕೆಣಕಿ ಇನ್ನಷ್ಟು ಸಂಕಷ್ಟಕ್ಕೆ ಸಿಲುಕುವ ಬದಲು, ಟೀಕೆ ಮಾಡುವುದನ್ನು ಬಿಟ್ಟು, ತಮ್ಮ ತಪ್ಪು ತಿದ್ದಿಕೊಂಡು, ತಮಗೆ ತೋಚಿದ ರಾಜಕೀಯ ಮಾಡಲು ಮುಂದಾಗಲಿ,'ಎಂದು ಸಲಹೆ ನೀಡಿದರು.

ಸಂಕುಚಿತ ವ್ಯಕ್ತಿ ನಾನಲ್ಲ

Vijaya Karnataka Web dont provocation hdk
ಕೆಣಕಬೇಡಿ: ಬಂಡಾಯ ಶಾಸಕರಿಗೆ ಎಚ್ಡಿಕೆ ಎಚ್ಚರಿಕೆ

'ಅಡ್ಡ ಮತದಾನ ಮಾಡಿ ಜನರ ಆಕ್ರೋಶದಿಂದ ಹೊರಬರಲು ರಾಜ್ಯಾದ್ಯಂತ ಹಲವು ಸಭೆಗಳಲ್ಲಿ ಬಂಡಾಯ ಶಾಸಕರು ನಾಟಕವಾಡುತ್ತಿದ್ದಾರೆ. ಅವರು ಆರೋಪಿಸುವಂತೆ ಒಂದು ಪಕ್ಷ ದ ರಾಜ್ಯಾಧ್ಯಕ್ಷ ನಾಗಿ ಅನ್ಯ ಪಕ್ಷ ಕ್ಕೆ ಮತ ಹಾಕಿ ಎಂದು ಹೇಳುವಷ್ಟು ಸಂಕುಚಿತ ವ್ಯಕ್ತಿ ನಾನಲ್ಲ, ಈ ಹೇಳಿಕೆ ಅವರಿಗೂ ಶೋಭೆಯಲ್ಲ,'ಎಂದು ಕಿಡಿಕಾರಿದರು.

ಲಘುವಾದ ಹೇಳಿಕೆ ಸರಿಯಲ್ಲ
'ಕುಮಾರಸ್ವಾಮಿಯವರನ್ನು ಮುಖ್ಯಮಂತ್ರಿ ಮಾಡಿದ್ದು ನಾವು ಎಂದು ಜೆಡಿಎಸ್‌ನಿಂದ ಹೊರ ಹೋಗಿರುವ ಕೆಲ ನಾಯಕರು ಹೇಳಿಕೊಳ್ಳುತ್ತಿದ್ದಾರೆ. ಇಂತಹ ಜಂಭದ ಮಾತುಗಳನ್ನು ಬಿಡಬೇಕು, ನಾನು ಮುಖ್ಯಮಂತ್ರಿಯಾಗಲು ಬಂಡಾಯ ಶಾಸಕರು ಮಾತ್ರವಲ್ಲದೇ, ಪಕ್ಷ ದ 39 ಶಾಸಕರ ನೆರವೂ ಅಗತ್ಯವಾಗಿತ್ತು. ನನ್ನನ್ನು ದೇವೇಗೌಡರ ಕುಟುಂಬದವರು ಬೀದಿಗೆ ನಿಲ್ಲಿಸಲಿದ್ದಾರೆ ಎಂಬ ಬಂಡಾಯ ಶಾಸಕರ ಆರೋಪ ಸರಿಯಲ್ಲ. ನಾನೇನು ಗಾಜಿನ ಮನೆಯ ವಾಸಿಯಲ್ಲ. ಮೂರನೇ ಮಹಡಿಯಲ್ಲೂ ವಾಸ್ತವ್ಯವಿಲ್ಲ. ಬೀದಿಯಲ್ಲೇ ನಿಂತು ಜನಪರ ಹೋರಾಟ ಮಾಡುತ್ತಿದ್ದೇನೆ. ಬೀದಿಯಲ್ಲಿ ನಿಂತು ಜನಸಾಮಾನ್ಯರ ಸಮಸ್ಯೆಗಳನ್ನು ಆಲಿಸುತ್ತಿದ್ದೇನೆ. ಇದರ ಬಗ್ಗೆ ಲಘುವಾದ ಹೇಳಿಕೆ ನೀಡುವುದು ಸರಿಯಲ್ಲ,'ಎಂದು ತಿರುಗೇಟು ನೀಡಿದರು.

23ಕ್ಕೆ ಸಮಾವೇಶ
'ಏ.23 ರಂದು ತಾಲೂಕಿನ ಬೆಳ್ಳೂರಿನಲ್ಲಿ ತಾಲೂಕು ಜೆಡಿಎಸ್‌ ಘಟಕದಿಂದ ಕಾರ್ಯಕರ್ತರ ಸಮಾವೇಶವನ್ನು ಇಲ್ಲಿನ ಮುಖಂಡರು ಮಾಡುತ್ತಿದ್ದು, ಆ ಕಾರ್ಯಕ್ರಮಕ್ಕೆ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಸೇರಿದಂತೆ ನಾನು ಹಾಗೂ ಜಿಲ್ಲಾ ಮತ್ತು ತಾಲೂಕು ಘಟಕದ ನಾಯಕರು ಆಗಮಿಸಲಿದ್ದಾರೆ,' ಎಂದರು.

ಫಾರೂಕ್‌ ಬಗ್ಗೆ ಭಯವೇಕೆ?

'ಪಕ್ಷ ದ ಪ್ರಧಾನ ಕಾರ್ಯದರ್ಶಿ ಫಾರೂಕ್‌ ಬಗ್ಗೆ ಬಂಡಾಯ ಶಾಸಕರಿಗೆ ಅಂಜಿಕೆ ಏಕೆ? ಫಾರೂಕ್‌ ಬಂಡಾಯ ಶಾಸಕರ ಸೋಲಿಗಷ್ಟೆ ಶ್ರಮಿಸುವುದಿಲ್ಲ. ರಾಜ್ಯದಲ್ಲಿ ಜೆಡಿಎಸ್‌ ಪಕ್ಷ ದ 224 ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸಲಿದ್ದಾರೆ,'ಎಂದು ಎಚ್‌ಡಿಕೆ ಹೇಳಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ