ಪಿಎಂಇಬಿ ನಿರ್ದೇಶಕ ಡಾ.ಎಚ್.ಎನ್.ರಮೇಶ್ ಸಲಹೆ
ಕೆ.ಅರ್.ಪೇಟೆ: ವಿಜ್ಞಾನ ಮತ್ತು ತಂತ್ರಜ್ಞಾನದ ಆವಿಷ್ಕಾರದ ಫಲವನ್ನು ಸುಭದ್ರ ರಾಷ್ಟ್ರದ ನಿರ್ಮಾಣಕ್ಕೆ ಭವಿಷ್ಯದ ಯುವ ಸಮುದಾಯ ಸದ್ಬಳಕೆ ಮಾಡಿಕೊಂಡು ನಾಡಿನ ಶ್ರೇಷ್ಠ ಎಂಜಿನಿಯರುಗಳಾಗಬೇಕು ಎಂದು ಬೆಂಗಳೂರು ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕ ಹಾಗೂ ಪಿಎಂಇಬಿ ನಿರ್ದೇಶಕ ಡಾ.ಎಚ್.ಎನ್.ರಮೇಶ್ ಸಲಹೆ ನೀಡಿದರು.
ಪಟ್ಟಣದ ಸರಕಾರಿ ಎಂಜಿನಿಯರಿಂಗ್ ಕಾಲೇಜಿನ 2017-18ನೇ ಸಾಲಿನ ಕ್ರೀಡಾ, ಸಾಂಸ್ಕೃತಿಕ ಹಾಗೂ ರಾಷ್ಟ್ರೀಯ ಸೇವಾ ಯೋಜನಾ ಚಟುವಟಿಕೆಗಳ ಸಮಾರೋಪ ಸಮಾರಂಭ ಸಂಭ್ರಮ-2018 ಉದ್ಘಾಟಿಸಿ ಮಾತನಾಡಿದರು.
ಕೃಷ್ಣರಾಜಪೇಟೆ ತಾಲೂಕು ಕೇಂದ್ರದಲ್ಲಿರುವ ಸರಕಾರಿ ಎಂಜಿನಿಯರಿಂಗ್ ಕಾಲೇಜು ರಾಜ್ಯಮಟ್ಟದಲ್ಲಿ ಒಳ್ಳೆಯ ಹೆಸರು ಮತ್ತು ಕೀರ್ತಿಯನ್ನು ಗಳಿಸಿರುವ ಕಾಲೇಜುಗಳಲ್ಲಿ ಒಂದಾಗಿದೆ. ಇಲ್ಲಿ ಸಿವಿಲ್ ಎಂಜಿನಿಯರಿಂಗ್ ವಿಭಾಗದಲ್ಲಿ ವ್ಯಾಸಂಗ ಮಾಡಿದ ಗ್ರಾಮೀಣ ಪ್ರದೇಶದ ವಿದ್ಯಾರ್ಥಿನಿ ಬಿ.ಎಸ್.ಪೂರ್ಣಿಮಾ ರಾಜ್ಯ ಮಟ್ಟದಲ್ಲಿ 10ನೇ ರಾರಯಂಕು ಪಡೆದು ಕಾಲೇಜಿಗೆ ಕೀರ್ತಿ ತಂದಿದ್ದಾರೆ. ಕಾಲೇಜು ಫಲಿತಾಂಶದಲ್ಲಿ ಶೇ.95ರಿಂದ ಶೇ.99ರಷ್ಟು ಫಲಿತಾಂಶವನ್ನು ಪಡೆಯುವ ಮೂಲಕ ಹೊಸ ದಾಖಲೆ ನಿರ್ಮಿಸಿದೆ. ಸರಕಾರಿ ಕಾಲೇಜಾಗಿದ್ದರೂ, ಪ್ರತಿಷ್ಠಿತ ಕಾಲೇಜಿನಲ್ಲಿ ಸಿಗುತ್ತಿರುವ ಎಲ್ಲ ಸೌಲಭ್ಯಗಳು ಇಲ್ಲಿ ದೊರೆಯುತ್ತಿವೆ ಎಂದು ಕೇಳಿ ಸಂತಸವಾಗಿದೆ ಎಂದು ಹೇಳಿದರು.
ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ನಗರ ಪ್ರದೇಶದ ವಿದ್ಯಾರ್ಥಿಗಳಿಗಿಂತಲೂ ಹೆಚ್ಚಿನ ಪ್ರತಿಭಾವಂತರಾಗಿದ್ದು, ಸಾಧಿಸುವ ಛಲವನ್ನು ಹೊಂದಿದ್ದಾರೆ. ಜೀವನದಲ್ಲಿ ಏನನ್ನಾದರೂ ಸಾಧಿಸಬೇಕು, ಹೊಸಹೊಸ ಆವಿಷ್ಕಾರಗಳನ್ನು ಮಾಡಬೇಕು ಎಂಬ ಹುಮ್ಮಸ್ಸು ಹೊಂದಿದ್ದಾರೆ. ಈ ಕಾಲೇಜಿನ ವಿದ್ಯಾರ್ಥಿಗಳಿಗೆ ಉಜ್ವಲವಾದ ಭವಿಷ್ಯವಿದೆ. ಒಬ್ಬ ಸಾಮಾನ್ಯ ಮೀನುಗಾರನ ಮಗ ಎಪಿಜೆ ಅಬ್ದುಲ್ ಕಲಾಂ ಈ ರಾಷ್ಟ್ರದ ರಾಷ್ಟ್ರಪತಿಯಾಗಿ ಕ್ಷಿಪಣಿ ತಂತ್ರಜ್ಞಾನದ ಶಿಲ್ಪಿಯಾದಂತೆ ನೀವೂ ದೊಡ್ಡ ಕನಸುಗಳನ್ನು ಕಾಣಬೇಕು. ಹೊಸ ಸಂಶೋಧನೆಗಳು ಮತ್ತು ಆವಿಷ್ಕಾರಗಳನ್ನು ಮಾಡಿ ತಂದೆ-ತಾಯಿಗಳ ಕೀರ್ತಿ ಬೆಳಗುವ ಜತೆಗೆ ರಾಷ್ಟ್ರವನ್ನು ಸುಭದ್ರವಾಗಿ ಕಟ್ಟಲು ಪಣತೊಡಬೇಕು ಎಂದು ಕಿವಿಮಾತು ಹೇಳಿದರು.
ಅಂಕೇಗೌಡ ಜ್ಞಾನ ಪ್ರತಿಷ್ಠಾನದ ಅಧ್ಯಕ್ಷ ಪುಸ್ತಕ ಮನೆಯ ಎಂ.ಅಂಕೇಗೌಡ ಮಾತನಾಡಿ, ಭವಿಷ್ಯದ ಎಂಜಿನಿಯರುಗಳಾದ ನೀವೂ ಕನ್ನಡಿಗರೆ. ನೀವು ಆಂಗ್ಲ ಭಾಷೆಯಲ್ಲಿ ವ್ಯಾಸಂಗ ಮಾಡುತ್ತಿದ್ದರೂ, ನಿಮ್ಮಲ್ಲಿ ಹರಿಯುತ್ತಿರುವುದು ಕನ್ನಡದ ರಕ್ತವಾಗಿದೆ. ಕನ್ನಡದ ನೆಲ-ಜಲದ ವಿಷಯದಲ್ಲಿ ನಾಡುನುಡಿಯ ಬಗ್ಗೆ ಧಕ್ಕೆ ಎದುರಾದ ಸಂದರ್ಭದಲ್ಲಿ ಕನ್ನಡಿಗರಾದ ನಾವುಗಳು ಯಾವುದೇ ತ್ಯಾಗ ಬಲಿದಾನಗಳಿಗೆ ಸಿದ್ಧರಿರಬೇಕಾಗುತ್ತದೆ. ಕನ್ನಡದ ನೆಲದಲ್ಲಿ ವಾಸಿಸುವ ಅನ್ಯ ಭಾಷಿಕರಿಗೆ ಕನ್ನಡವನ್ನು ಕಲಿಸಿಕೊಡುವ ಕೆಲಸವನ್ನು ಅಭಿಮಾನದಿಂದ ಮಾಡಬೇಕು. ಕನ್ನಡದ ವಿಷಯದಲ್ಲಿ ನಿರಭಿಮಾನಿಗಳಾಗದೆ ಭಾಷೆಯನ್ನು ಪ್ರೀತಿಸಿ ಗೌರವಿಸುವ ಗುಣಗಳನ್ನು ಬೆಳೆಸಿಕೊಂಡು ಮುನ್ನಡೆಯಬೇಕು ಎಂದು ಸಲಹೆ ನೀಡಿದರು.
ಪ್ರಾಂಶುಪಾಲ ಡಾ.ಕೆ.ಸಿ.ಕೃಷ್ಣ ಅಧ್ಯಕ್ಷ ತೆ ವಹಿಸಿದ್ದರು. ಕಾರ್ಯಕ್ರಮದ ಆರಂಭಕ್ಕೂ ಮುನ್ನ ಭಾರತ ರತ್ನ ಸರ್.ಎಂ.ವಿಶ್ವೇಶ್ವರಯ್ಯ ಅವರ ಪುತ್ಥಳಿಗೆ ಪುಷ್ಪಮಾಲೆ ಹಾಕಿ ಗೌರವಿಸಿ ಕಾಲೇಜಿನ ಆವರಣದಲ್ಲಿಹೂವು ಮತ್ತು ಹಣ್ಣಿನ ಸಸಿಗಳನ್ನು ನೆಟ್ಟು ಪರಿಸರ ಜಾಗೃತಿ ಮೂಡಿಸಲಾಯಿತು.
ಮತ ಜಾಗೃತಿ: ಮೇ12ರಂದು ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ನಡೆಯುತ್ತಿರುವುದರಿಂದ ಕೆ.ಆರ್.ಪೇಟೆ ಪುರಸಭೆ ಸ್ವೀಪ್ ಸಮಿತಿ ವತಿಯಿಂದ ಕಚೇರಿ ವ್ಯವಸ್ಥಾಪಕ ಸತೀಶ್ಕುಮಾರ್ ಕಡ್ಡಾಯ ಮತದಾನ ಹಾಗೂ ಮತದಾನದ ಹಕ್ಕಿನ ಮಹತ್ವ ಕುರಿತು ಪ್ರಮಾಣ ವಚನ ಭೋದಿಸಿದರು.
ಸಿವಿಲ್ ವಿಭಾಗದ ಮುಖ್ಯಸ್ಥ ಡಾ.ಸತೀಶ್, ಮೆಕ್ಯಾನಿಕಲ್ ವಿಭಾಗದ ಮುಖ್ಯಸ್ಥ ಟಿ.ಲೋಕೇಶ್, ಕಂಪ್ಯೂಟರ್ ಸೈನ್ಸ್ ವಿಭಾಗದ ರವೀಂದ್ರ, ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್ ವಿಭಾಗದ ಡಾ.ರುದ್ರಪ್ಪ, ಡಾ.ಹರೀಶ್, ನಾಗಭೂಷಣ್, ದೈಹಿಕ ಶಿಕ್ಷ ಣ ನಿರ್ದೇಶಕ ಶ್ರೀನಿವಾಸಮೂರ್ತಿ, ಕಾಲೇಜಿನ ಆಡÜಳಿತಾಧಿಕಾರಿ ದೇವರಾಜಶೆಟ್ಟಿ, ತಾಲೂಕು ಅಗ್ನಿಶಾಮಕ ಅಧಿಕಾರಿ ಶ್ರೀನಿವಾಸರಾವ್, ಜಿಲ್ಲಾ ಗ್ರಂಥಾಲಯ ಪ್ರಾಧಿಕಾರದ ಸದಸ್ಯ ಕೆ.ಆರ್.ನೀಲಕಂಠ, ಮತ್ತಿತರರು ಭಾಗವಹಿಸಿದ್ದರು. ಕಳೆದ ಸಾಲಿನಲ್ಲಿ ಸಿವಿಲ್ ಎಂಜಿನಿಯರಿಂಗ್ ವಿಭಾಗದಲ್ಲಿ 10ನೇ ರಾರಯಂಕ್ ಪಡೆದು ಸಾಧನೆ ಮಾಡಿದ ಗ್ರಾಮೀಣ ಪ್ರತಿಭೆ ಪೂರ್ಣಿಮಾ ಅವರ ಪೋಷಕರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು.