ಆ್ಯಪ್ನಗರ

ಯಾರಿಂದ ಯಾರನ್ನೂ ಮುಗಿಸಲು ಸಾಧ್ಯವಿಲ್ಲ: ಎಚ್‌.ಡಿ.ದೇವೇಗೌಡ

ಎಚ್‌ಡಿದೇವೇಗೌಡ ವಿಕ ಸುದ್ದಿಲೊಕ ಮಂಡ್ಯ ದೇಶವನ್ನು ಕಾಂಗ್ರೆಸ್‌ ಮುಕ್ತ ಮಾಡುತ್ತೇನೆಂದು ಪ್ರಧಾನಿ ಮೋದಿ ಹೇಳಿದ್ದಾರೆ...

Vijaya Karnataka 15 Mar 2019, 5:00 am
ಮಂಡ್ಯ: ದೇಶವನ್ನು ಕಾಂಗ್ರೆಸ್‌ ಮುಕ್ತ ಮಾಡುತ್ತೇನೆಂದು ಪ್ರಧಾನಿ ಮೋದಿ ಹೇಳಿದ್ದಾರೆ. ಆದರೆ, ಯಾರಿಂದಲೂ ಯಾರನ್ನೂ ಮುಗಿಸಲು ಸಾಧ್ಯವಿಲ್ಲ ಎಂದು ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಹೇಳಿದರು.
Vijaya Karnataka Web hd devegowda talks about modi and bjp
ಯಾರಿಂದ ಯಾರನ್ನೂ ಮುಗಿಸಲು ಸಾಧ್ಯವಿಲ್ಲ: ಎಚ್‌.ಡಿ.ದೇವೇಗೌಡ


ನಗರದ ಸಿಲ್ವರ್‌ ಜ್ಯುಬಿಲಿ ಪಾರ್ಕಿನಲ್ಲಿ ಗುರುವಾರ ನಡೆದ ಜೆಡಿಎಸ್‌ ಕಾರ‍್ಯಕರ್ತರ ಬೃಹತ್‌ ಸಮಾವೇಶದಲ್ಲಿ ಮಾತನಾಡಿದ ಅವರು, ''ಮೇಲೊಬ್ಬ ಇದ್ದಾನೆ. ಎಲ್ಲವೂ ಅವನು ಆಡಿಸಿದಂತೆಯೇ ನಡೆಯುತ್ತದೆ. ದೇಶದ ರಾಜಕೀಯ ಇತಿಹಾಸದಲ್ಲೇ ಇಂತಹ ದೊಡ್ಡ ರಾಜಕೀಯ ಸಂಘರ್ಷ ನೋಡಿರಲಿಲ್ಲ'' ಎಂದರು.

''ರಾಜ್ಯದ 13 ಉಪ ಚುನಾವಣೆಗಳಲ್ಲಿ ಬಿಜೆಪಿ ಒಂದರಲ್ಲೂ ಗೆಲ್ಲಲಿಲ್ಲ. ಮಧ್ಯಪ್ರದೇಶ, ರಾಜಸ್ಥಾನ, ಛತ್ತೀಸ್‌ಗಡ್‌ನಲ್ಲೂ ಅಧಿಕಾರ ಬಿಜೆಪಿಯಿಂದ ಕೈ ಜಾರಿತು. ಈ ಮೂಲಕ ಕಾಂಗ್ರೆಸ್‌ ಪುನಃ ಶಕ್ತಿ ಪಡೆದುಕೊಂಡಿದೆ. ಇದನ್ನು ಬಿಜೆಪಿ ನಾಯಕರು ಅರ್ಥ ಮಾಡಿಕೊಳ್ಳಬೇಕು. ಲೋಕಸಭೆ ಚುನಾವಣೆ ಹೊಸ್ತಿಲಲ್ಲಿ ರೈತರಿಗೆ 6000 ರೂ. ಪ್ರೋತ್ಸಾಹಧನ ನೀಡುವುದಾಗಿ ಪ್ರಧಾನಿ ಘೋಷಿಸಿದ್ದಾರೆ. ಆದರೆ, ರಾಜಕೀಯಕ್ಕಾಗಿ ಏನೆಲ್ಲಾ ಮಾಡುತ್ತಿದ್ದಾರೆ'' ಎಂದು ಕಿಡಿಕಾರಿದರು.

''ಸಮಾಜವನ್ನು ಛಿದ್ರಗೊಳಿಸಲು ಹೊರಟಿರುವ ಬಿಜೆಪಿ ಶಕ್ತಿಯನ್ನು ಕುಗ್ಗಿಸಲು ನಾನು ಇರುವವರೆಗೂ ಹೋರಾಟ ಮಾಡುತ್ತೇನೆ. ರಾಜ್ಯದಲ್ಲಿ ಬಿಜೆಪಿಯ ಸ್ಥಾನಗಳನ್ನು 17ರಿಂದ 4-5ಕ್ಕೆ ಇಳಿಸಬೇಕು. ದೇಶದ ಒಳಿತಿಗಾಗಿ ಕಾಂಗ್ರೆಸ್‌-ಜೆಡಿಎಸ್‌ ಒಂದಾಗಬೇಕಾಗಿದೆ'' ಎಂದರು.

''ನಾನು ಮತ್ತು ನನ್ನ ಕುಟುಂಬದವರು ದೈವ ಬಲದ ಮೇಲೆ ನಂಬಿಕೆಯಿಂದಲೇ 60 ವರ್ಷದ ರಾಜಕಾರಣ ಮಾಡಿದ್ದೇವೆ. ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಮತ ಎಣಿಕೆಯಾಗುತ್ತಿದ್ದಂತೆ ರಾಹುಲ್‌ಗಾಂಧಿ ಅವರೇ ಎಚ್‌.ಡಿ. ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿ ಮಾಡಲು ಮುಂದೆ ಬಂದರು. ಆದರೆ, ನಾನು ಅವರಿಗೆ ಅನಾರೋಗ್ಯ ಅಂತೇಳಿ, ಮಲ್ಲಿಕಾರ್ಜುನ ಖರ್ಗೆ ಹೆಸರನ್ನು ಸೂಚಿಸಿದೆ. ಆದರೂ ಅದಕ್ಕೆ ಅವರು ಒಪ್ಪಲಿಲ್ಲ. ದೇಶ ಒಡೆಯೋರನ್ನು ಅಧಿಕಾರದಿಂದ ದೂರವಿಡಬೇಕೆಂಬ ಆಶಯದಿಂದ ಕುಮಾರಸ್ವಾಮಿ ಸಿಎಂ ಆಗಲು ಸಮ್ಮತಿಸಿದೆ '' ಎಂದು ತಿಳಿಸಿದರು.

ಎಚ್‌.ಡಿ. ಕುಮಾರಸ್ವಾಮಿಗೆ ಎರಡನೇ ಬಾರಿ ತೆರೆದ ಹೃದಯ ಶಸ್ತ್ರ ಚಿಕಿತ್ಸೆಯಾದಾಗ ನಿಖಿಲ್‌ ಕುಮಾರಸ್ವಾಮಿ, ತಂದೆ ಹಿಂದೆ ನಿಲ್ತೀನಿ ಎಂದು ಹೇಳಿದ. ಅದಕ್ಕೆ ರಾಜಕೀಯಕ್ಕೆ ತಂದಿದ್ದೇನೆ. ಮಂಡ್ಯ ಜನ ಭಯ ಪಡೋದು ಬೇಡ. ನಿಖಿಲ್‌ನನ್ನು ಬಹುಮತಗಳಿಂದ ಗೆಲ್ಲಿಸಿ ಲೋಕಸಭೆಗೆ ಕಳುಹಿಸಿದರೆ ಆತ ತನ್ನ ಜೀವವಿರುವವರೆಗೂ ನಿಮ್ಮ ಸೇವೆ ಮಾಡುತ್ತಾನೆ. ಇದರಲ್ಲಿ ಯಾವುದೇ ಅಪನಂಬಿಕೆ ಬೇಡ'' ಎಂದು ಹೇಳಿದರು.

ನಾನು ಪ್ರಧಾನಿಯಾಗಿ ಮಾಡಿದ ಅಭಿವೃದ್ಧಿ ಕೆಲಸಗಳನ್ನು ಯಾವುದೇ ಮಾಧ್ಯಮದವರು ಬರೆಯಲಿಲ್ಲ. ಪಿಎಂ ಆದ ತಕ್ಷಣ ಯೂರಿಯಾ ಬೆಲೆ ಇಳಿಸಿದೆ. ಮುಸ್ಲಿಂರಿಗೆ ಸೈನ್ಯದಲ್ಲಿ ಉದ್ಯೋಗ ಕೊಡೋದು ಬೇಡ ಅಂತಿತ್ತು. ಅದನ್ನು ತೆಗೆದು ಹಾಕಿ, ಉದ್ಯೋಗ ಕೊಡಿಸಿದ್ದು ನಾನು. ಮೀಸಲು ವ್ಯವಸ್ಥೆ ಜಾರಿಯಾಗಿದ್ದ ತಮ್ಮ ಅಧಿಕಾರಾವಧಿಯಲ್ಲಿ. ಜೆಡಿಎಸ್‌ ಅನ್ನು ನನ್ನ ಮಕ್ಕಳಿಗೋಸ್ಕರ ಕಟ್ಟಲಿಲ್ಲ. ಜೆಡಿಎಸ್‌ನಲ್ಲಿ ಸಿದ್ದರಾಮಯ್ಯ, ಇಬ್ರಾಹಿಂ, ಮಹದೇವಪ್ಪ ಎಲ್ಲರೂ ಇದ್ದರು. ಈ ಬಗ್ಗೆ ಬಹಿರಂಗ ಚರ್ಚೆಗೆ ಬರಲಿ, ನಾನೂ ಸಿದ್ಧ. ಇವತ್ತು ದೇಶ ಉಳಿಸಬೇಕು. ಕಾಂಗ್ರೆಸ್‌-ಜೆಡಿಎಸ್‌ ಒಂದು ತಾಯಿ ಮಕ್ಕಳಂತೆ ದುಡಿಯಬೇಕು. ಅವರು ಕರೆದ ಎಲ್ಲೆಡೆ ಹೋಗ್ತೀನಿ. ಪ್ರಚಾರ ಮಾಡುತ್ತೇನೆ'' ಎಂದರು.

ಮಂಡ್ಯ ನನ್ನ ಹಾರ್ಟ್‌ ಆಫ್‌ ಪಾಲಿಟಿಕ್ಸ್‌: ಜೀವನದಲ್ಲಿ ಮಂಡ್ಯ ಜನರನ್ನ ಮರೆಯೋದಿಲ್ಲ. ಅಂತಹ ಕುಟುಂಬವೂ ನಮ್ಮದಲ್ಲ. ಮಂಡ್ಯ ನನ್ನ ಹಾರ್ಟ್‌ ಆಫ್‌ ಪಾಲಿಟಿಕ್ಸ್‌. ಇಲ್ಲೆಯವರು ನನ್ನ ಜನ. ನೀವೆಲ್ಲರೂ ನನ್ನ ಮೊಮ್ಮಗನನ್ನು ಗೆಲ್ಲಿಸುತ್ತೀರಾ ಅನ್ನೋ ನಂಬಿಕೆ ಇದೆ. ಆತ ಇಲ್ಲೇ ಮನೆ ಮಾಡ್ತಾನೆ. 8 ಕ್ಷೇತ್ರಗಳ ಜತೆ ನಿರಂತರ ಸಂಪರ್ಕದಲ್ಲಿರುತ್ತಾನೆ. ಅವನಿಗೆ ಕೆಲಸ ಮಾಡುವ ಬದ್ಧತೆ ಇದೆ. ಅದರ ಬಗ್ಗೆ ನಿಮಗ್ಯಾರಿಗೂ ಸಂಶಯಬೇಡ. ಅತ್ಯಂತ ಬಹುಮತಗಳ ಅಂತರದಿಂದ ಗೆಲ್ಲಿಸಿಕೊಡಿ ಎಂದು ಮನವಿ ಮಾಡಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ