ಆ್ಯಪ್ನಗರ

ಅತಿ ಹೆಚ್ಚು ಮತ: ದಾಖಲೆ ಬರೆದ ತಮ್ಮಣ್ಣ

ಮಂಡ್ಯ : ಮದ್ದೂರು ಕ್ಷೇತ್ರದ ಜೆಡಿಎಸ್‌ ಅಭ್ಯರ್ಥಿ ಡಿ.ಸಿ.ತಮ್ಮಣ್ಣ ಮಂಡ್ಯ ಜಿಲ್ಲೆಯಲ್ಲಿ ಅತೀ ಹೆಚ್ಚು ಮತ ಪಡೆದು ದಾಖಲೆ ಮತಗಳ ಅಂತರದಿಂದ ಭರ್ಜರಿ ಜಯ ಸಾಧಿಸಿ ಹೊಸ ದಾಖಲೆ ಬರೆದಿದ್ದಾರೆ.

Vijaya Karnataka Web 16 May 2018, 5:00 am
ಮಂಡ್ಯ : ಮದ್ದೂರು ಕ್ಷೇತ್ರದ ಜೆಡಿಎಸ್‌ ಅಭ್ಯರ್ಥಿ ಡಿ.ಸಿ.ತಮ್ಮಣ್ಣ ಮಂಡ್ಯ ಜಿಲ್ಲೆಯಲ್ಲಿ ಅತೀ ಹೆಚ್ಚು ಮತ ಪಡೆದು ದಾಖಲೆ ಮತಗಳ ಅಂತರದಿಂದ ಭರ್ಜರಿ ಜಯ ಸಾಧಿಸಿ ಹೊಸ ದಾಖಲೆ ಬರೆದಿದ್ದಾರೆ.
Vijaya Karnataka Web highest vote written record
ಅತಿ ಹೆಚ್ಚು ಮತ: ದಾಖಲೆ ಬರೆದ ತಮ್ಮಣ್ಣ


ಕಳೆದ ಚುನಾವಣೆಯಲ್ಲಿ ಮಂಡ್ಯ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ, ನಟ ಅಂಬರೀಷ್‌ 42,180 ಮತಗಳ ಅಂತರದಿಂದ ಗೆಲುವು ಸಾಧಿಸಿ ದಾಖಲೆ ನಿರ್ಮಿಸಿದ್ದರು. ಮಂಡ್ಯ ಜಿಲ್ಲೆಯಲ್ಲಿ ಇಷ್ಟು ಮತಗಳ ಅಂತರದಲ್ಲಿ ಅಭ್ಯರ್ಥಿ ಗೆಲುವು ಸಾಧಿಸಿರುವುದು ಅದೇ ಮೊದಲಾಗಿತ್ತು. 1989ರಲ್ಲಿ ಎಸ್‌.ಡಿ. ಜಯರಾಂ ವಿರುದ್ಧ 33 ಸಾವಿರ ಮತಗಳ ಅಂತರದಲ್ಲಿ ಎಂ.ಎಸ್‌.ಆತ್ಮಾನಂದ ಜಯ ದಾಖಲಿಸಿದ್ದರು.

1994ರಲ್ಲಿ ಅಷ್ಟೇ ಮತಗಳ ಅಂತರದಲ್ಲಿ ಆತ್ಮಾನಂದ ವಿರುದ್ಧ ಎಸ್‌.ಡಿ. ಜಯರಾಂ ಜಯಗಳಿಸಿದ್ದರು. ಆದರೆ, 2013ರ ಚುನಾವಣೆಯಲ್ಲಿ 89,240 ಮತ ಪಡೆದ ಅಂಬರೀಷ್‌, ಎಂ.ಶ್ರೀನಿವಾಸ್‌(47,060) ಅತ್ಯಧಿಕ ಮತಗಳಿಂದ ಪರಾಭವಗೊಳಿಸಿ ದಾಖಲೆ ಸೃಷ್ಟಿಸಿದ್ದರು. ಇದೀಗ ಇವರ ದಾಖಲೆಯನ್ನು ಡಿ.ಸಿ.ತಮ್ಮಣ್ಣ ಮುರಿದಿದ್ದಾರೆ. 1,09,239 ಮತಗಳನ್ನು ಪಡೆದ ಡಿ.ಸಿ.ತಮ್ಮಣ್ಣ 55,209 ಮತಗಳನ್ನು ಪಡೆದ ಕಾಂಗ್ರೆಸ್‌ ಅಭ್ಯರ್ಥಿ ಜಿ.ಎಂ.ಮಧು ಮಾದೇಗೌಡ ಅವರನ್ನು 54,030 ಮತಗಳ ಅಂತರದಿಂದ ಮಣಿಸಿ ಹೊಸ ದಾಖಲೆ ಸೃಷ್ಟಿಸಿದ್ದಾರೆ.

ಕಣ್ಣೀರಿಟ್ಟ ದರ್ಶನ್‌ ಪುಟ್ಟಣ್ಣಯ್ಯ: ಮೇಲುಕೋಟೆ ವಿಧಾನಸಭೆ ಕ್ಷೇತ್ರದ ಸ್ವರಾಜ್‌ ಇಂಡಿಯಾ ಪಕ್ಷದ ಅಭ್ಯರ್ಥಿ ದರ್ಶನ್‌ ಪುಟ್ಟಣ್ಣಯ್ಯ ಸೋಲು ಖಚಿತವಾಗುತ್ತಿದ್ದಂತೆ ಎಣಿಕೆ ಕೇಂದ್ರದಿಂದ ನಿರ್ಗಮಿಸಿದರು. ಎಣಿಕೆ ಕೇಂದ್ರದಿಂದ ಹೊರ ಬರುತ್ತಿದ್ದಂತೆ ತಮಗಾಗಿ ಕಾಯುತ್ತಿದ್ದ ನೂರಾರು ಅಭಿಮಾನಿಗಳನ್ನು ಕಂಡು ಕಣ್ಣೀರಿಟ್ಟರು. ಕಣ್ಣಿನಲ್ಲಿ ಜಿನುಗುತ್ತಿದ್ದ ಕಣ್ಣೀರನ್ನು ಒರೆಸಿಕೊಂಡು ಅಭಿಮಾನಿಗಳಿಗೆ ಕೈಮುಗಿಯುತ್ತಾ ಅವರೊಂದಿಗೆ ನಿರ್ಗಮಿಸಿದರು.

ಠೇವಣಿ ಜಪ್ತಿ: ಮಂಡ್ಯ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎನ್‌.ಚಂದಗಾಲು ಶಿವಣ್ಣ ಹೊರತಾಗಿ ಜಿಲ್ಲೆಯ ಉಳಿದ 6 ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳ ಠೇವಣಿ ಜಪ್ತಿಯಾಗಿದೆ. ಇದರಲ್ಲಿ ಮಳವಳ್ಳಿ ಕ್ಷೇತ್ರದ ಮಾಜಿ ಸಚಿವ ಬಿ.ಸೋಮಶೇಖರ್‌ ಕೂಡ ಸೇರಿದ್ದಾರೆ. ಒಟ್ಟು ಚಲಾವಣೆಯಾದ ಮತಗಳ 16ನೇ ಒಂದು ಭಾಗಕ್ಕಿಂತ ಒಂದು ಮತವನ್ನು ಹೆಚ್ಚು ಪಡೆದಾಗ(ಮೀಸಲು ಅಭ್ಯರ್ಥಿಗೆ) 6ನೇ ಒಂದು ಭಾಗಕ್ಕಿಂತ 1 ಮತ ಹೆಚ್ಚು ಪಡೆದಾಗ(ಸಾಮಾನ್ಯ) ಅಭ್ಯರ್ಥಿ ಠೇವಣಿ ಉಳಿಯುತ್ತದೆ. ಮಳವಳ್ಳಿ ಕ್ಷೇತ್ರದಲ್ಲಿ(ಒಟ್ಟು ಚಲಾವಣೆ 1,93,667) ಠೇವಣಿ ಉಳಿಯಬೇಕಾದರೆ ಪ್ರತಿ ಅಭ್ಯರ್ಥಿಗಳು 12,104 ಮತಗಳನ್ನು ಪಡೆಯಬೇಕಿತ್ತು. ಆದರೆ, ಬಿ.ಸೋಮಶೇಖರ್‌ ಅವರು ಪಡೆದಿರುವುದು 10,808 ಮತಗಳು ಮಾತ್ರ. ಹೀಗಾಗಿ ಅವರ ಠೇವಣಿಯೂ ಜಪ್ತಿಯಾಗಿದೆ. ಉಳಿದಂತೆ ಮಂಡ್ಯ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿ 5 ರೂ. ವೈದ್ಯ ಡಾ.ಎಸ್‌.ಸಿ.ಶಂಕರೇಗೌಡ(10,564), ಬಿಜೆಪಿ ಅಭ್ಯರ್ಥಿಗಳಾದ ಮೇಲುಕೋಟೆ ಕ್ಷೇತ್ರದ ಸುಂಡಹಳ್ಳಿ ಸೋಮಶೇಖರ್‌(1595), ಮದ್ದೂರು ಕ್ಷೇತ್ರದ ಸತೀಶ್‌(4159), ಕೆ.ಆರ್‌.ಪೇಟೆ ಕ್ಷೇತ್ರದ ಬಿ.ಸಿ.ಮಂಜು(9819), ನಾಗಮಂಗಲ ಕ್ಷೇತ್ರದ ಡಾ.ಪಾರ್ಥಸಾರಥಿ(1915), ಶ್ರೀರಂಗಪಟ್ಟಣ ಕ್ಷೇತ್ರದ ಕೆ.ಎಸ್‌.ನಂಜುಂಡೇಗೌಡ(11,326) ಠೇವಣಿ ಕಳೆದುಕೊಂಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ