ಜಿಪಂ ಸಾಮಾನ್ಯ ಸಭೆಯಲ್ಲಿ ಕಾವೇರಿದ ಚರ್ಚೆ
ತಿದ್ದುಪಡಿಯೊಂದಿಗೆ ಕ್ರಿಯಾಯೋಜನೆಗೆ ಅನುಮೋದನೆ
ಮಂಡ್ಯ: ಅನುದಾನ ಹಂಚಿಕೆಯಲ್ಲಿನ ಅಸಮಾನತೆ ಬಗ್ಗೆ ಜಿಲ್ಲಾ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಸದಸ್ಯರು ಹಾಗೂ ಅಧ್ಯಕ್ಷೆ ನಡುವೆ ಕಾವೇರಿದ ಚರ್ಚೆ ನಡೆಯಿತು. ಸುದೀರ್ಘ ಚರ್ಚೆ ಬಳಿಕ ಅಂತಿಮವಾಗಿ ತಾರತಮ್ಯ ನಿವಾರಣೆಗಾಗಿ ತಿದ್ದುಪಡಿಯೊಂದಿಗೆ ಕ್ರಿಯಾಯೋಜನೆಗೆ ಅನುಮೋದನೆ ನೀಡಲಾಯಿತು.
ಜಿ.ಪಂ.ಅಧ್ಯಕ್ಷೆ ಜೆ.ಪ್ರೇಮಕುಮಾರಿ ಅಧ್ಯಕ್ಷತೆಯಲ್ಲಿ ಕಾವೇರಿ ಸಭಾಂಗಣದಲ್ಲಿ ಶುಕ್ರವಾರ ಸಾಮಾನ್ಯ ಸಭೆ ಆರಂಭಗೊಳ್ಳುತ್ತಿದ್ದಂತೆ ಅಭಿವೃದ್ಧಿ ಕಾಮಗಾರಿಗಳ ಕ್ರಿಯಾಯೋಜನೆಗೆ ಅನುಮೋದನೆ ನೀಡುವಂತೆ ಸಭೆಗೆ ಮನವಿ ಮಾಡಲಾಯಿತು. ಜಿಲ್ಲಾ ಪಂಚಾಯಿತಿ ಅಭಿವೃದ್ಧಿ ಅನುದಾನವನ್ನು ಸದಸ್ಯರಿಗೆ ಹಂಚಿಕೆ ಮಾಡಿದ ಅನುದಾನದ ಪಟ್ಟಿ ನೀಡುವಂತೆ ಅಧ್ಯಕ್ಷೆ ಪ್ರೇಮಕುಮಾರಿ ಹೇಳಿದರು.
ಪ್ರತಿಕ್ರಿಯಿಸಿದ ಸದಸ್ಯ ಕೋಡಿಮಾರನಹಳ್ಳಿ ದೇವರಾಜು, ''ಹಳೆಯ ಕ್ರಿಯಾ ಯೋಜನೆಯನ್ನೇ ಮತ್ತೆ ಮಂಡನೆ ಮಾಡಿದ್ದೀರಿ. ಇದನ್ನು ಒಪ್ಪಲು ಸಾಧ್ಯವಿಲ್ಲ. ಎಲ್ಲ ಸದಸ್ಯರಿಗೂ ಸಮಾನವಾಗಿ ಅನುದಾನ ಹಂಚಿಕೆ ಮಾಡಿದರಷ್ಟೇ ಒಪ್ಪಿಗೆ ನೀಡಲಾಗುವುದು ಎಂದು ಪಟ್ಟು ಹಿಡಿದರು. ಇದಕ್ಕೆ ದನಿಗೂಡಿಸಿದ ಸದಸ್ಯ ರಾಜೀವ್, ಸರಕಾರದ ಸೂಚನೆಯಂತೆ ಕ್ರಿಯಾ ಯೋಜನೆ ರೂಪಿತವಾಗಿಲ್ಲ. ಇದು ನಮಗೆ ಸಮಾಧಾನ ತಂದಿಲ್ಲ. ಕ್ಷೇತ್ರವಾರು ಸಮಾನ ಹಂಚಿಕೆ ಮಾಡಿ. ಅನುದಾನ ಹಂಚಿಕೆಯಲ್ಲಿ ತಾರತಮ್ಯ ಮಾಡಬೇಡಿ, ಹೊಸದಾಗಿ ಕ್ರಿಯಾ ಯೋಜನೆ ಮಾಡಿ ಅನುಮೋದನೆಗಿಡಿ ಎಂದು ಒತ್ತಾಯಿಸಿದರು.
ಮಧ್ಯ ಪ್ರವೇಶಿಸಿದ ಜಿ.ಪಂ.ಅಧ್ಯಕ್ಷೆ ಜೆ.ಪ್ರೇಮಕುಮಾರಿ, ''ಏನೇ ವ್ಯತ್ಯಾಸಗಳಿದ್ದರೂ ಮುಂದೆ ಸರಿಪಡಿಸಿಕೊಳ್ಳೋಣ. ಈಗ ಒಪ್ಪಿಗೆ ಕೊಡಿ ಎಂದಾಗ, ಅನುದಾನವನ್ನು ಸಮಾನವಾಗಿ ಹಂಚಿಕೊಳ್ಳಲು ಹಠವೇಕೆ? ಮುಂದೆ ಸರಿಪಡಿಸುವುದನ್ನು ಈಗಲೇ ಸರಿಪಡಿಸಿ'' ಎಂದು ಸದಸ್ಯ ತ್ಯಾಗರಾಜು ಆಗ್ರಹಿಸಿದರು.
ಈ ವೇಳೆ ಅಧ್ಯಕ್ಷರ ಬೆಂಬಲಕ್ಕೆ ನಿಂತ ಸದಸ್ಯ ಸಿ.ಅಶೋಕ್, ಹಿಂದಿನ ವರ್ಷ 2.80 ಕೋಟಿ ರೂ. ಅನುದಾನ ಬಂದಾಗ ಪ್ರತಿ ಸದಸ್ಯರಿಗೆ ಸಮಾನವಾಗಿ ಹಂಚಲಾಗಿದೆ. ಕೇವಲ 2-3 ಲಕ್ಷ ರೂ.ಗಳಿಗೆ ಸಮಯ ವ್ಯರ್ಥ ಮಾಡುವುದು ಬೇಡ. ಈಗ ಆಗಿರುವ ವ್ಯತ್ಯಾಸಗಳನ್ನು ಮುಂದೆ ಸರಿ ಮಾಡೋಣ ಎಂದು ಸಮಾಧಾನಪಡಿಸಲು ಪ್ರಯತ್ನಿಸಿದರು.
ಇದನ್ನು ಒಪ್ಪದ ತ್ಯಾಗರಾಜು, ''ಹಿಂದಿನಿಂದಲೂ ಇದೇ ಡೈಲಾಗ್ಗಳನ್ನು ಹೇಳಿಕೊಂಡು ಬರುತ್ತಿದ್ದೀರಿ. ಒಳಗೊಳಗೆ ಏನು ಮಾಡಬೇಕೋ ಅದನ್ನು ಮಾಡಿಕೊಂಡು ಬರುತ್ತಿದ್ದೀರಿ. ನೀವು ಕೋಟ್ಯಾಧೀಶ್ವರರು. ನಮಗೆ 2-3 ಲಕ್ಷನೇ ದೊಡ್ಡದು. ಅಷ್ಟೇ ಕೊಡಿ ನಮಗೆ ಸಾಕು'' ಎಂದರು. ಮತ್ತೆ ಮರು ಪ್ರವೇಶ ಮಾಡಿದ ಅಧ್ಯಕ್ಷೆ ಜೆ.ಪ್ರೇಮಕುಮರಿ, ''ಸಭೆಯಲ್ಲಿ ಕೋಳಿ ಜಗಳ ಆಡಬೇಡಿ. ನೀವಿಬ್ಬರು ಮಾತನಾಡಿಕೊಂಡರೆ ನಾವಿಲ್ಲಿ ಇರೋದು ಏಕೆ. ನೀವು ನನಗೆ ಮಾತನಾಡಿ'' ಎಂದರು.
ಅಲ್ಲದೆ ಈಗಿರುವ ಕ್ರಿಯಾಯೋಜನೆಯನ್ನು ಬದಲಾವಣೆ ಮಾಡಿದರೆ ಮತ್ತೆ ಇನ್ನೇನಾದರೂ ತಪ್ಪುಗಳನ್ನು ಹುಡುಕುತ್ತೀರಿ, ವಿರೋಧಿಸುತ್ತೀರಿ. ಇದರಿಂದ ಸಮಯ ವ್ಯರ್ಥವಾಗುತ್ತದೆ. ಹೀಗಾಗಿ ಹಾಲಿ ತಯಾರಿಸಿರುವ ಕ್ರಿಯಾಯೋಜನೆ ಮತ್ತು ಅನುದಾನ ಹಂಚಿಕೆ ಪಟ್ಟಿಗೆ ಅನುಮೋದನೆ ನೀಡಿ ಎಂದಾಗ ಆಡಳಿತ ಪಕ್ಷದ ಸದಸ್ಯರು ಮೇಜುಕುಟ್ಟಿ ಸ್ವಾಗತಿಸಿದರು.
ರೂಲಿಂಗ್ ಆಯ್ತು, ಉತ್ತರ ನೀಡುವುದಿಲ್ಲ
ಪ್ರತಿಪಕ್ಷದ ನಾಯಕ ಹನುಮಂತು ಎದ್ದು ನಿಂತು, ಸರಕಾರದ ಆದೇಶಕ್ಕೆ ನಿಮ್ಮ ಉತ್ತರವೇನು? ಅದನ್ನು ದಾಖಲಿಸುವಂತೆ ಕೇಳಿದರು. ಈಗ ರೂಲಿಂಗ್ ಆಯ್ತು. ಇನ್ನೇನೂ ಉತ್ತರ ನೀಡುವುದಿಲ್ಲ. ಕಾನೂನು ಪ್ರಕಾರವೇ ಅನುದಾನ ಹಂಚಿಕೆ ಮಾಡಿದ್ದೇವೆ. ಗೊಂದಲವಿದ್ದರೆ ಮುಂದಿನ ದಿನಗಳಲ್ಲಿ ಸರಿಪಡಿಸುತ್ತೇವೆ. ಇದಕ್ಕಿಂತ ಇನ್ನು ಏನು ಹೇಳೋದು ಎಂದು ಅಧ್ಯಕ್ಷೆ ಪ್ರೇಮಕುಮಾರಿ ಪ್ರಶ್ನಿಸಿದರು.
ಸರಕಾರದ ಆದೇಶಕ್ಕೆ ನಿಮ್ಮ ಉತ್ತರವೇನು?
''ರಾಜ್ಯ ಸರಕಾರ ಕ್ರಿಯಾಯೋಜನೆಯನ್ನು ಮರು ಮಂಡನೆ ಮಾಡುವಂತೆ ಹೇಳಿಲ್ಲ. ಹೊಸದಾಗಿ ಕ್ರಿಯಾಯೋಜನೆ ಮಾಡುವಂತೆ ಹೇಳಿದೆ. ಇದಕ್ಕೆ ನಿಮ್ಮ ಉತ್ತರವೇನು'' ಎಂದು ಸದಸ್ಯ ಹನುಮಂತು ಮತ್ತೆ ಪ್ರಶ್ನಿಸಿದರು. ''ಸರಕಾರದ ಆದೇಶಾನುಸಾರ ಕ್ರಿಯಾಯೋಜನೆ ಮಂಡಿಸಲಾಗಿದೆ. ಬಹುಮತದ ಆಧಾರದ ಮೇಲೆ ಒಪ್ಪಿಗೆ ಪಡೆದು ಸ್ಥಿರೀಕರಿಸಲಾಗಿದೆ. ಬದಲಾವಣೆ ಮಾಡುವ ಅವಶ್ಯಕತೆ ಇಲ್ಲ . ನಾವು ಯಾರಿಗೂ ಅನ್ಯಾಯ ಮಾಡಿಲ್ಲ'' ಎಂದು ಅಧ್ಯಕ್ಷರು ಸಮಜಾಯಿಷಿ ನೀಡಿದರು.
''ನೀವು ಸಾಮಾಜಿಕ ನ್ಯಾಯ ಕೊಟ್ಟಿಲ್ಲ. ಅನ್ಯಾಯನೇ ಮಾಡಿದ್ದೀರಿ. ಇಷ್ಟ ಬಂದ ರೀತಿ ಅನುದಾನ ಹಂಚಿಕೆ ಮಾಡಿರುವಿರಿ. ಸ್ವಜನಪಕ್ಷಪಾತ ಮಾಡುತ್ತಿದ್ದೀರಿ. ನಾವು ನಿಮ್ಮ ಬಳಿ ಅನುದಾನದ ಭಿಕ್ಷೆ ಕೇಳುತ್ತಿಲ್ಲ. ಸರಕಾರ ಕೊಟ್ಟಿರುವ ಅನುದಾನವನ್ನು ಸಮಾನವಾಗಿ ಹಂಚಿಕೆ ಮಾಡಿ. ನಿಮಗೆ ಕರುಣೆಯೂ ಇಲ್ಲ, ಮನುಷ್ಯತ್ವವೂ ಇಲ್ಲ'' ಎಂದು ಏರಿದ ದನಿಯಲ್ಲಿ ಹನುಮಂತು ಕಿಡಿಕಾರಿದರು. ಆಗ ಸದಸ್ಯ ರಾಜೀವ್ ಅವರು, ಅಧ್ಯಕ್ಷರೇ ಹಠ ಬೇಡ. ನೀವು ಮನಸ್ಸು ಮಾಡಿದರೆ ಒಂದು ಗಂಟೆಯೊಳಗೆ ಸಮಸ್ಯೆ ಬಗೆಹರಿಸಬಹುದು. ಈಗಲೇ ಸಮಸ್ಯೆಗೆ ಪರಿಹಾರ ಸೂಚಿಸಿದರೆ ಒಳ್ಳೆಯದು ಸಲಹೆ ನೀಡಿದರು.
ಸುಮ್ಮನೆ ಚರ್ಚೆಯಲ್ಲೇ ಸಭೆಯ ಸಮಯ ವ್ಯರ್ಥವಾಗುತ್ತಿದ್ದನ್ನು ಗಮನಿಸಿದ ಜಿ.ಪಂ. ಸಿಇಒ ಬಿ.ಶರತ್ ಅವರು ಅಧ್ಯಕ್ಷೆ ಪ್ರೇಮಕುಮಾರಿ ಅವರೊಂದಿಗೆ ಮಾತನಾಡಿ, ಸದಸ್ಯರನ್ನು ಕರೆದುಕೊಂಡು ಹೋಗಿ ಚರ್ಚೆ ನಡೆಸಿ ಒಂದು ತೀರ್ಮಾನಕ್ಕೆ ಬರುವಂತೆ ಸಲಹೆ ನೀಡಿದರು. ಅದರಂತೆ ಅರ್ಧ ಗಂಟೆ ಸಭೆಗೆ ವಿರಾಮ ಹೇಳಿ ಅಧ್ಯಕ್ಷರು ತಮ್ಮ ಕೊಠಡಿಯಲ್ಲಿ ಪ್ರತಿಪಕ್ಷದ ಸದಸ್ಯರೊಂದಿಗೆ ಸಮಾಲೋಚನೆ ನಡೆಸಿದರು.
ಅಲ್ಲಿನ ಮಾತುಕತೆ, ಚರ್ಚೆಯ ಪರಿಣಾಮ ಕಾಮಗಾರಿಗಳ ಕ್ರಿಯಾಯೋಜನೆಗೆ ಮತ್ತೆ ಪುನಾರಂಭಗೊಂಡ ಸಭೆಯಲ್ಲಿ ಅನುಮೋದನೆ ನೀಡಲಾಯಿತು. ಆದರೆ, ಹಳೆಯ ಕ್ರಿಯಾ ಯೋಜನೆಯಲ್ಲಿ ಹಂಚಿಕೆಯಲ್ಲಾಗಿರುವ ತಾರತಮ್ಯವನ್ನು ತಿದ್ದುಪಡಿಯೊಂದಿಗೆ ನಿವಾರಿಸಿ ಎಂದು ಕಾಂಗ್ರೆಸ್ ಸದಸ್ಯರ ಒತ್ತಾಯಿಸಿದರು. ಅದಕ್ಕೆ ಅಧ್ಯಕ್ಷೆ ಪ್ರೇಮಕುಮಾರಿ ಸಹಮತ ವ್ಯಕ್ತಪಡಿಸಿದರು. ಬಳಿಕ ಸಭೆಯ ಇತರ ಸಂಗತಿಗಳ ಮೇಲೆ ಚರ್ಚೆ ಮುಂದುವರಿಯಿತು.
ಸಭೆಯಲ್ಲಿ ಉಪಾಧ್ಯಕ್ಷೆ ಪಿ.ಕೆ.ಗಾಯಿತ್ರಿ, ನಾನಾ ಸ್ಥಾಯಿ ಸಮಿತಿಗಳ ಅಧ್ಯಕ್ಷರಾದ ಎಚ್.ಎನ್.ಯೋಗೇಶ್, ಬೋರಯ್ಯ, ಮಂಜುನಾಥ್ ಹಾಜರಿದ್ದರು.