ಆಂಗ್ಲಭಾಷೆಯ ನಾಮಫಲಕಕ್ಕೆ ಆಕ್ರೋಶ
ಮಂಡ್ಯ: ನಗರದಲ್ಲಿ ಅಂಗಡಿ-ಮುಂಗಟ್ಟುಗಳ ಮಾಲೀಕರು ಆಂಗ್ಲಭಾಷೆಯ ನಾಮಫಲಕಗಳನ್ನು ಅಳವಡಿಸಿರುವುದನ್ನು ಖಂಡಿಸಿ ಜಯ ಕರ್ನಾಟಕ ಸಂಘಟನೆ ಕಾರ್ಯಕರ್ತರು ಶುಕ್ರವಾರ ಪ್ರತಿಭಟನೆ ನಡೆಸಿದರು.
ವಿ.ವಿ.ರಸ್ತೆಯಲ್ಲಿ ಆಂಗ್ಲಭಾಷೆಯ ನಾಮಫಲಕಗಳಿದ್ದ ಮೊಬೈಲ್ ಶಾಪ್ಗಳು ಹಾಗೂ ಇತರ ಅಂಗಡಿಗಳ ಮುಂದೆ ನಿಂತು ಜಯ ಕರ್ನಾಟಕ ಸಂಘಟನೆ ಕಾರ್ಯಕರ್ತರು ಪ್ರತಿಭಟಿಸಿ ಘೋಷಣೆ ಮೊಳಗಿಸಿದರು. ಕರ್ನಾಟಕದಲ್ಲಿ ಕನ್ನಡ ಕಡ್ಡಾಯ. ಎಲ್ಲ ಸರಕಾರಿ ಕಚೇರಿಗಳಲ್ಲೂ ಕನ್ನಡದಲ್ಲೇ ವ್ಯವಹರಿಸಬೇಕೆಂಬ ನಿಯಮವಿದೆ. ಆದರಿದು ಎಲ್ಲೂ ಸರಿಯಾಗಿ ಪಾಲನೆಯಾಗುತ್ತಿಲ್ಲ ಎಂದು ಅಸಮಧಾನ ವ್ಯಕ್ತಪಡಿಸಿದರು.
ನಗರದ ಬಹುತೇಕ ಅಂಗಡಿ-ಮುಂಗಟ್ಟುಗಳ ನಾಮಫಲಕಗಳು ಆಂಗ್ಲ ಭಾಷೆಯಲ್ಲೇ ರಾರಾಜಿಸುತ್ತಿವೆ. ಕನ್ನಡದಲ್ಲಿ ಸಣ್ಣದಾಗಿ ಬರೆದು, ಆಂಗ್ಲ ಭಾಷೆಯಲ್ಲಿ ದೊಡ್ಡ ಪ್ರಮಾಣದಲ್ಲಿ ನಾಮಫಲಕ ಅಳವಡಿಸಲಾಗಿದೆ. ಇದು ಸರಿಯಲ್ಲ. ಪ್ರತಿಯೊಬ್ಬರೂ ಕನ್ನಡಾಭಿಮಾನ ಬೆಳೆಸಿಕೊಳ್ಳಬೇಕು. ಮಾತೃ ಭಾಷೆಯ ಅಭಿಮಾನದ ವಿಚಾರದಲ್ಲಿ ತಮಿಳರು ಹಾಗೂ ಅನ್ಯಭಾಷಿಗರು ನಮಗೆ ಮಾದರಿಯಾಗಬೇಕಿದೆ ಎಂದು ಅಭಿಪ್ರಾಯಪಟ್ಟರು.
ಬೇರೆ ರಾಜ್ಯಗಳಲ್ಲಿ ಮಾತೃ ಭಾಷೆಗೆ ಹೆಚ್ಚು ಆದ್ಯತೆ ನೀಡಲಾಗುತ್ತದೆ. ಆದರೆ, ನಮ್ಮಲ್ಲಿ ಆ ಪರಿಸ್ಥಿತಿ ಇಲ್ಲ. ಇದು ನಿಲ್ಲಬೇಕು. ನಮ್ಮ ಜನರಲ್ಲಿ ಮೊದಲು ಮಾತೃ ಭಾಷೆಯ ಅಭಿಮಾನ ಮೂಡಬೇಕು. ಆಗ ಭಾಷೆ ತಾನಾಗಿಯೇ ಉಳಿಯುತ್ತದೆ. ಬೆಳೆಯುತ್ತದೆ ಎಂದು ಪ್ರತಿಪಾದಿಸಿದರು. ಸಂಘಟನೆಯ ಜಿಲ್ಲಾಧ್ಯಕ್ಷ ಯೋಗಣ್ಣ, ಮುಖಂಡರಾದ ರವೀಂದ್ರ, ಸಿ.ಮಂಜುನಾಥ್, ನಿತಿನ್ಕುಮಾರ್, ದರ್ಶನ್, ನಂದನ್, ಕುಮಾರಸ್ವಾಮಿ, ವಿಶಾಲಾಕ್ಷಿ, ವಸಂತ, ಎಂ.ಎಸ್.ಮಾಲತಿ, ಜಯಂತಿ, ವಿಶಾಲಾಕ್ಷಿ, ಅನುರಾಧಾ, ಅರುಣ್, ರಾಘು, ಆನಂದ್ ಇತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.