ಆ್ಯಪ್ನಗರ

ಕೆ.ಆರ್.ಪೇಟೆ ವಿಜಯಯಾತ್ರೆ ನಿಲ್ಲದು, ಇನ್ನು ಇದು ಕಮಲದ ಭದ್ರಕೋಟೆ: ಡಿಸಿಎಂ ಅಶ್ವತ್ಥನಾರಾಯಣ

ಜಿಲ್ಲಾಸ್ಪತ್ರೆಯನ್ನು ಆಧುನೀಕರಣಗೊಳಿಸಲಾಗುವುದು. ಕೋವಿಡ್ 19 ಚಿಕಿತ್ಸೆಗೆ ಬೇಕಾದ ಎಲ್ಲ ರೀತಿಯ ವ್ಯವಸ್ಥೆ ಮಾಡಲಾಗುತ್ತಿದೆ. ತಂತ್ರಜ್ಞಾನವನ್ನು ವ್ಯಾಪಕವಾಗಿ ಬಳಸಿಕೊಂಡು ಉತ್ತಮ ಸೌಲಭ್ಯಗಳನ್ನು ಕಲ್ಪಿಸಲಾಗಿದೆ ಎಂದು ಉಪ ಮುಖ್ಯಮಂತ್ರಿ ಡಾ. ಸಿ.ಎನ್. ಅಶ್ವತ್ಥನಾರಾಯಣ ತಿಳಿಸಿದರು.

Vijaya Karnataka Web 12 Jun 2020, 5:40 pm
ಮಂಡ್ಯ: ಕಳೆದ ಉಪ ಚುನಾವಣೆಯಲ್ಲಿ ಕೆ.ಆರ್.ಪೇಟೆ ಕ್ಷೇತ್ರದಲ್ಲಿ ಬಿಜೆಪಿ ಜಯಭೇರಿ ಬಾರಿಸಿದೆ. ಅದೇ ರೀತಿ ಮುಂದಿನ ಚುನಾವಣೆಯಲ್ಲಿ ನಮ್ಮ ಪಕ್ಷ ಇಡೀ ಜಿಲ್ಲೆಯ ಎಲ್ಲ ವಿಧಾನಸಭೆ ಕ್ಷೇತ್ರಗಳಲ್ಲಿಯೂ ಗೆಲವು ಸಾಧಿಸುವ ರೀತಿಯಲ್ಲಿ ಅರ್ಪಣಾ ಮನೋಭಾವದಿಂದ ಕೆಲಸ ಮಾಡಬೇಕು ಎಂದು ಉಪ ಮುಖ್ಯಮಂತ್ರಿ ಡಾ. ಸಿ.ಎನ್. ಅಶ್ವತ್ಥನಾರಾಯಣ ಪಕ್ಷದ ಕಾರ್ಯಕರ್ತರಿಗೆ ಕರೆ ನೀಡಿದ್ದಾರೆ.
Vijaya Karnataka Web kr pete will become bjp strong hold says dcm ashwathnarayan
ಕೆ.ಆರ್.ಪೇಟೆ ವಿಜಯಯಾತ್ರೆ ನಿಲ್ಲದು, ಇನ್ನು ಇದು ಕಮಲದ ಭದ್ರಕೋಟೆ: ಡಿಸಿಎಂ ಅಶ್ವತ್ಥನಾರಾಯಣ

ಜಿಲ್ಲಾ ಬಿಜೆಪಿ ಕಚೇರಿಗೆ ಶುಕ್ರವಾರ ಭೇಟಿ ನೀಡಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು, ಕೇಂದ್ರ ಮತ್ತು ರಾಜ್ಯದಲ್ಲಿಯೂ ಜನಪರವಾದ ಸರಕಾರಗಳೇ ಇವೆ. ಅತ್ತ ನರೇಂದ್ರ ಮೋದಿ ಅವರ ಕಾರ್ಯಕ್ರಮಗಳು ವಿಶ್ವದ ಗಮನ ಸೆಳೆಯುತ್ತಿವೆ. ಅವುಗಳ ವಿವರಗಳನ್ನು ಮನೆಮನೆಗೂ ಮುಟ್ಟಿಸಬೇಕಾದ ಹೊಣೆಗಾರಿಕೆ ಕಾರ್ಯಕರ್ತರ ಮೇಲಿದೆ. ಹಾಗೆಯೇ, ರಾಜ್ಯದಲ್ಲಿಯೂ ಯಡಿಯೂರಪ್ಪ ಸರಕಾರವು ಅತ್ಯಂತ ಪರಿಣಾಕಾರಿ, ಜನಪರವಾಗಿ ಕೆಲಸ ಮಾಡುತ್ತಿದೆ ಎಂಬುದನ್ನು ಜನರಿಗೆ ತಿಳಿಸಬೇಕು. ಈ ಹಿನ್ನೆಲೆಯಲ್ಲಿ ಪ್ರತಿ ಕಾರ್ಯಕರ್ತನೂ ಪಕ್ಷದ ಕಟ್ಟಾಳುವಾಗಿ ಕೆಲಸ ಮಾಡಬೇಕು. ಕೆ.ಆರ್.ಪೇಟೆಯಲ್ಲಿ ಶುರುವಾದ ವಿಜಯಯಾತ್ರೆ ಇತರೆ ಕ್ಷೇತ್ರಗಳಿಗೂ ವಿಸ್ತರಿಸಬೇಕು ಎಂದು ಅಶ್ವತ್ಥನಾರಾಯಣ ಕಿವಿಮಾತು ಹೇಳಿದರು.


​ಪ್ರಧಾನಿ ಮೋದಿ ನೇತೃತ್ವದಲ್ಲಿ ದೇಶ ಬದಲಾಗುತ್ತಿದೆ

ಇಡೀ ದೇಶದ ಪ್ರೀತಿ-ನಂಬುಗೆಯನ್ನು ಗಳಿಸಿರುವ ಏಕೈಕ ಪಕ್ಷವೆಂದರೆ ಬಿಜೆಪಿ ಮಾತ್ರ. ನಮ್ಮದು ತಳಮಟ್ಟದ ಕಾರ್ಯಕರ್ತರ ಪಕ್ಷ. ಕಾರ್ಯಕರ್ತರೇ ಪಕ್ಷದ ಸಂಪತ್ತು ಮತ್ತು ಶಕ್ತಿ. ಇದನ್ನು ಎಲ್ಲರೂ ಅರ್ಥ ಮಾಡಿಕೊಡು ಕೆಲಸ ಮಾಡಬೇಕು. ಈ ಮೂಲಕ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಜಿಲ್ಲೆಯ ಎಲ್ಲ ಕ್ಷೇತ್ರಗಳನ್ನು ಗೆಲ್ಲುವ ರೀತಿಯಲ್ಲಿ ನಾವು ಹೆಜ್ಜೆಗಳನ್ನು ಇಡಬೇಕಾಗಿದೆ ಎಂದು ಅಶ್ವತ್ಥನಾರಾಯಣ ಹೇಳಿದರು.

ಅನೇಕ ವರ್ಷಗಳಿಂದ ಜಿಲ್ಲೆಯ ಸಮಸ್ಯೆಗಳು ಸಮಸ್ಯೆಗಳಾಗಿಯೇ ಇವೆ. ಆ ಸಮಸ್ಯೆಗಳೇ ಮತ ಗಳಿಕೆಯ ಯಂತ್ರಗಳಾಗಿವೆ. ಈ ಪರಿಸ್ಥಿತಿ ಬದಲಾಗಬೇಕು. ಆ ಬದಲಾವಣೆ ಈಗಷ್ಟೇ ಆರಂಭವಾಗಿದೆ. ಅದು ನಿಲ್ಲಬಾರದು, ನಿಲ್ಲುವುದೂ ಇಲ್ಲ. ಹೀಗಾಗಿ ಸಹಜವಾಗಿಯೇ ಕೆಲವರಲ್ಲಿ ತಳಮಳ ಉಂಟಾಗಿದೆ. ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ಭಾರತ ಬದಲಾಗುತ್ತಿರುವದನ್ನು ನಾವೆಲ್ಲರೂ ಜನರಿಗೆ ಮನವರಿಕೆ ಮಾಡಿಕೊಡಬೇಕು. ಜಾಗತಿಕವಾಗಿ ಭಾರತದ ಪ್ರತಿಷ್ಠೆ ದಿನೇದಿನೆ ವೃದ್ಧಿಸುತ್ತಿದೆ. ಬಿಜೆಪಿ ಕಾರ್ಯಕರ್ತರಾದ ನಾವು ಹೆಮ್ಮೆಪಡಬೇಕು. ಕೋವಿಡ್ ಬಿಕ್ಕಟ್ಟನ್ನು ಎದುರಿಸಿದ ರೀತಿ ಇಡೀ ಜಗತ್ತೇ ನಮ್ಮತ್ತ ನೋಡುವಂತೆ ಮಾಡಿದೆ. ಅಗಾಧ ಜನಸಾಂಧ್ರತೆಯುಳ್ಳ ದೇಶದಲ್ಲಿ ಮಾರಣಾಂತಿಕ ವೈರಸ್ಸನ್ನು ಎದುರಿಸಿದ ಬಗೆಗೆ ಅಭಿವೃದ್ಧಿಯಾದ ದೇಶಗಳು ಭಾರತವನ್ನು ಹಾಡುಹೊಗಳುತ್ತಿವೆ ಎಂಬುದನ್ನು ನಾವು ಮರೆಯಬಾರದು ಎಂದು ಡಿಸಿಎಂ ಹೇಳಿದರು.

​ಕಬ್ಬು ಬೆಳೆಗಾರರಗೆ ಅಭಯ

ಅಧಿಕಾರದಲ್ಲಿರುವುದು ನಿಮ್ಮ ಸರಕಾರ. ಹೀಗಾಗಿ ಕಬ್ಬು ಬೆಳೆಗಾರರು ಅತಂಕಕ್ಕೆ ಒಳಗಾಗಬೇಕಾದ ಅಗತ್ಯವಿಲ್ಲ. ಈಗಾಗಲೇ ಬೆಳೆಗಾರರು ಎದುರಿಸುತ್ತಿರುವ ಸಮಸ್ಯೆಗಳು ಸರಕಾರಕ್ಕೆ ಗೊತ್ತಿದೆ. ಶ್ರೀರಂಗಪಟ್ಟಣ, ಪಾಂಡವಪುರ ಕಬ್ಬು ಬೆಳೆಗಾರರ ಜೀವನಾಡಿಯಾಗಿರುವ ಪಿಎಸ್‌ಎಸ್‌ಕೆ ಸಕ್ಕರೆ ಕಾರ್ಖಾನೆಯನ್ನು ನಿರಾಣಿ ಷುಗರ್ಸ್ ಅವರು 40 ವರ್ಷಗಿಳಿಗೆ ಗುತ್ತಿಗೆ ಪಡೆದಿದ್ದಾರೆ. ಲಿಖಿತ ಒಪ್ಪಂದದಂತೆ ಅವರು ಬೆಳೆಗಾರರ ಎಲ್ಲ ಬೇಡಿಕೆಗಳನ್ನು ತಪ್ಪದೇ ಈಡೇರಿಸುವ ಭರವಸೆ ನನಗಿದೆ. ಅದೇ ರೀತಿ ಮೈಷುಗರ್ ಸಮಸ್ಯೆಗಳನ್ನು ಅದಷ್ಟು ಬೇಗ ಬಗೆಹರಿಸಲಾಗುವುದು. ಎಲ್ಲವೂ ಕಾಲಮಿತಿಯಲ್ಲೆ ಪರಿಷ್ಕಾರವಾಗಲಿವೆ ಎಂದು ಇದೇ ವೇಳೆ ಉಪ ಮುಖ್ಯಮಂತ್ರಿ ಭರವಸೆ ನೀಡಿದರು.

​ಎಲ್ಲರಿಗೂ ಸಿಗಲಿದೆ ಉದ್ಯೋಗ

ನಿರುದ್ಯೋಗ, ಬಡತನವನ್ನೂ ಜಿಲ್ಲೆಯಿಂದ ಮೂಲೋತ್ಪಾಟನೆ ಮಾಡಲು ಕೌಶಾಲ್ಯಾಭಿವೃದ್ಧಿ ಮತ್ತು ಉದ್ಯಮಶೀಲತಾ ಇಲಾಖೆಗಳಿಂದ ಸಮರೋಪಾದಿಯಲ್ಲಿ ಕಾರ್ಯಕ್ರಮಗಳನ್ನು ಹಾಕಿಕೊಂಡು ಕೆಲಸವಿಲ್ಲದ ಕೈಗಳಿಗೆ ಕೆಲಸ ನೀಡಲಾಗುವುದು. ಪ್ರತಿ ಕುಟುಂಬದಲ್ಲಿರುವ ಮಕ್ಕಳಿಗೆ, ಯುವಕರಿಗೆ ಸೂಕ್ತ ತರಬೇತಿ ನೀಡಲಾಗುವುದು. ಕಾಯಕವೇ ಕೈಲಾಸ ಎಂಬ ತತ್ತ್ವದಡಿಯಲ್ಲಿ ಜಿಲ್ಲೆಯಲ್ಲಿ ಉದ್ಯಮಶೀಲತೆಯನ್ನು ಅಭಿವೃದ್ಧಿಗೊಳಿಸಲಾಗುವುದು. ಜಿಲ್ಲಾಸ್ಪತ್ರೆಯನ್ನು ಆಧುನೀಕರಣಗೊಳಿಸಲಾಗುವುದು. ಕೋವಿಡ್ 19 ಚಿಕಿತ್ಸೆಗೆ ಬೇಕಾದ ಎಲ್ಲ ರೀತಿಯ ವ್ಯವಸ್ಥೆ ಮಾಡಲಾಗುತ್ತಿದೆ. ತಂತ್ರಜ್ಞಾನವನ್ನು ವ್ಯಾಪಕವಾಗಿ ಬಳಸಿಕೊಂಡು ಉತ್ತಮ ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ಅದೇ ರೀತಿ ಇತರೆ ಕ್ಷೇತ್ರಗಳಲ್ಲಿಯೂ ಜನತೆಯ ಸಹಕಾರದಿಂದ ಜಿಲ್ಲೆಯನ್ನು ಅಭಿವೃದ್ಧಿಪಥದತ್ತ ಮುನ್ನೆಡೆಸಲು ಸರಕಾರ ಬದ್ಧವಾಗಿದೆ ಎಂದು ಅಶ್ವತ್ಥನಾರಾಯಣ ಭರವಸೆ ನೀಡಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ