ಆ್ಯಪ್ನಗರ

ಕೆಆರ್‌ಎಸ್‌ಗೆ ದಾಖಲೆಯ 2 ಲಕ್ಷ ಕ್ಯೂಸೆಕ್‌ ಒಳಹರಿವು

ಕೃಷ್ಣರಾಜ ಸಾಗರ ಅಣೆಕಟ್ಟೆಯ(ಕೆಆರ್‌ಎಸ್‌) ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಒಮ್ಮೆಗೆ ದಾಖಲೆಯ ಪ್ರಮಾಣ ನೀರು ಜಲಾಶಯಕ್ಕೆ ಹರಿದು ಬರುತ್ತಿದೆ. ಭಾನುವಾರ ಸಂಜೆ 2,07,852 ಕ್ಯೂಸೆಕ್‌ ಒಳ ಹರಿವು ದಾಖಲಾಗಿ ಹೊಸ ಇತಿಹಾಸ ಸೃಷ್ಟಿಸಿದೆ.

Vijaya Karnataka 12 Aug 2019, 5:00 am
ಜಲಾಶಯದ ಇತಿಹಾಸದಲ್ಲೇ ಹೊಸ ದಾಖಲೆ | 121 ಅಡಿ ತುಂಬಿದ ಕನ್ನಂಬಾಡಿಕಟ್ಟೆ
Vijaya Karnataka Web krs has a record 2 lakh cusec inputs
ಕೆಆರ್‌ಎಸ್‌ಗೆ ದಾಖಲೆಯ 2 ಲಕ್ಷ ಕ್ಯೂಸೆಕ್‌ ಒಳಹರಿವು


ನವೀನ್‌ ಮಂಡ್ಯ


ಕೃಷ್ಣರಾಜ ಸಾಗರ ಅಣೆಕಟ್ಟೆಯ(ಕೆಆರ್‌ಎಸ್‌) ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಒಮ್ಮೆಗೆ ದಾಖಲೆಯ ಪ್ರಮಾಣ ನೀರು ಜಲಾಶಯಕ್ಕೆ ಹರಿದು ಬರುತ್ತಿದೆ. ಭಾನುವಾರ ಸಂಜೆ 2,07,852 ಕ್ಯೂಸೆಕ್‌ ಒಳ ಹರಿವು ದಾಖಲಾಗಿ ಹೊಸ ಇತಿಹಾಸ ಸೃಷ್ಟಿಸಿದೆ.

ಕನ್ನಂಬಾಡಿಕಟ್ಟೆಗೆ 2 ಲಕ್ಷ ಕ್ಯೂಸೆಕ್‌ ಒಳ ಹರಿವು ಈವರೆಗೆ ಯಾವತ್ತೂ ಬಂದೇ ಇರಲಿಲ್ಲ. ಇದೇ ಪ್ರಥಮ ಎನ್ನುವಂತೆ ಇಷ್ಟೊಂದು ಬೃಹತ್‌ ಪ್ರಮಾಣದಲ್ಲಿ ನೀರು ಜಲಾಶಯಕ್ಕೆ ಹರಿದು ಬರುತ್ತಿದೆ. ಕಾಕತಾಳೀಯ ಎಂಬಂತೆ 55 ವರ್ಷಗಳ ಹಿಂದೆ ಆಗಸ್ಟ್‌ ತಿಂಗಳಲ್ಲೇ ಹರಿದು ಬಂದಿದ್ದ ನೀರಿನ ಅತಿ ಹೆಚ್ಚಿನ ಪ್ರಮಾಣವೇ ಈವರೆಗಿನ ದಾಖಲೆಯಾಗಿತ್ತು. ಈ ವರ್ಷವೂ ಆಗಸ್ಟ್‌ನಲ್ಲೇ ದಾಖಲೆ ಪ್ರಮಾಣದ ನೀರು ಹರಿದು ಬಂದಿದೆ.

1964ರ ಆಗಸ್ಟ್‌ 9ರಂದು 1,94,776 ಕ್ಯೂಸೆಕ್‌ ನೀರು ಜಲಾಶಯಕ್ಕೆ ಹರಿದು ಬಂದಿತ್ತು. ಅದೇ ದಿನದಂದು 1,87,282 ಕ್ಯೂಸೆಕ್‌ ನೀರನ್ನು ಕಟ್ಟೆಯಿಂದ ಹೊರ ಬಿಡಲಾಗಿತ್ತು. ಆ ಬಳಿಕ 1973ರಲ್ಲಿ 1,08,380 ಕ್ಯೂಸೆಕ್‌, 1980ರಲ್ಲಿ 1,13,081 ಕ್ಯೂಸೆಕ್‌, 1981ರಲ್ಲಿ 1,05,034 ಕ್ಯೂಸೆಕ್‌ ಒಳ ಹರಿವು ದಾಖಲಾಗಿದೆ. ಅದರ ನಂತರ 1991ರ ಜು.28ರಂದು 1,77,055 ಕ್ಯೂಸೆಕ್‌ ನೀರು ಹರಿದು ಬಂದಿತ್ತು. ಆ ದಿನದಂದು 2,11,736 ಕ್ಯೂಸೆಕ್‌ ನೀರನ್ನು ಹೊರ ಬಿಡಲಾಗಿತ್ತು. ಇದು ಕಳೆದ 60 ವರ್ಷಗಳಲ್ಲಿನ ಜಲಾಶಯದ ಹೊರ ಹರಿವಿನಲ್ಲಿ ಪ್ರಮಾಣದ ದಾಖಲೆಯಾಗಿದೆ.

ಇದರ ಹೊರತಾಗಿ 2005ರಲ್ಲಿ 1,01,840 ಕ್ಯೂಸೆಕ್‌ ನೀರು ಹರಿದು ಬಂದಿದ್ದು, ಅದೇ ದಿನ 1,06,057 ಕ್ಯೂಸೆಕ್‌ ನೀರನ್ನು ಹೊರ ಬಿಡಲಾಗಿತ್ತು. ಇದಾದ ಬಳಿಕ ಕಳೆದ ವರ್ಷ ಅಂದರೆ 2018ರಲ್ಲಿ ಆ.18ರಂದು 1,40,910 ಕ್ಯೂಸೆಕ್‌ ಒಳ ಹರಿವು, 1,20,964 ಕ್ಯೂಸೆಕ್‌ ಹೊರ ಹರಿವು ದಾಖಲಾಗಿತ್ತು. ಆದರೆ, ಈ ವರ್ಷ ಅದೆಲ್ಲವನ್ನೂ ಮೀರಿ ಒಳ ಹರಿವು ದಾಖಲಾಗಿದೆ. ಹಾಗೆಯೇ ಕಳೆದ 28 ವರ್ಷಗಳ ಅವಧಿಯಲ್ಲಿ ಇದೇ ಮೊದಲ ಬಾರಿಗೆ ಹೊರ ಹರಿವಿನ ಪ್ರಮಾಣವು 1.50 ಲಕ್ಷ ಕ್ಯೂಸೆಕ್‌ ದಾಟಿದೆ.

ಒಂದೆಡೆ ಸಂಭ್ರಮ, ಮತ್ತೊಂದೆಡೆ ಆತಂಕ

2,07,852 ಕ್ಯೂಸೆಕ್‌ ಒಳ ಹರಿವು ಬರುತ್ತಿರುವುದು ಒಂದೆಡೆ ಸಂಭ್ರಮವಾದರೆ ಮತ್ತೊಂದು ಆತಂಕ ತಂದಿದೆ. ಜಲಾಶಯದ ಭದ್ರತೆ ಕಾಯ್ದುಕೊಳ್ಳುವುದು ಅತಿ ಮುಖ್ಯವಾಗಿದ್ದು, ಕೇವಲ ಮೂರು ದಿನಗಳ ಅಂತರದಲ್ಲಿ ಜಲಾಶಯದ ಒಳ ಹರಿವಿನ ಪ್ರಮಾಣ 5000 ಕ್ಯೂಸೆಕ್‌ನಿಂದ 2 ಲಕ್ಷ ಕ್ಯೂಸೆಕ್‌ಗೆ ತಲುಪಿದೆ. ಇದರ ನಿರ್ವಹಣೆಯೂ ಕೂಡ ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳಿಗೆ ದೊಡ್ಡ ಸವಾಲಾಗಿದೆ.

ಹೀಗಾಗಿ ಜಲಾಶಯದ ಭದ್ರತೆ ಮತ್ತು ಮುಂಜಾಗ್ರತಾ ಕ್ರಮವಾಗಿ ಕನ್ನಂಬಾಡಿಕಟ್ಟೆಯಿಂದ 153769 ಕ್ಯೂಸೆಕ್‌ ನೀರನ್ನು ಜಲಾಶಯದಿಂದ ಹೊರ ಬಿಡಲಾಗುತ್ತಿದೆ. ಇದರಲ್ಲಿ 153719 ಕ್ಯೂಸೆಕ್‌ ನೀರು ನದಿಗೆ ಹೋಗುತ್ತಿದ್ದು, ಆರ್‌ಬಿಎಲ್‌ಎಲ್‌ ನಾಲೆಗೆ ಕೇವಲ 50 ಕ್ಯೂಸೆಕ್‌ ನೀರು ಹೋಗುತ್ತಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 30513 ಕ್ಯೂಸೆಕ್‌ ಒಳ ಹರಿವು, 46971 ಕ್ಯೂಸೆಕ್‌ ಹೊರ ಹರಿವಿತ್ತು.

ಪ್ರಸ್ತುತ ಒಳ ಮತ್ತು ಹೊರ ಹರಿವು ಎರಡೂ ಹೆಚ್ಚಾಗಿರುವುದರಿಂದ ಸಹಜವಾಗಿಯೇ ನದಿ ಪಾತ್ರದ ಪ್ರದೇಶಗಳಲ್ಲಿ ನೆರೆ ಹಾವಳಿ ಜನರನ್ನು ಬಾಧಿಸುತ್ತಿದೆ. ಪ್ರಾಣಹಾನಿ, ಆಸ್ತಿಪಾಸ್ತಿಗೆ ಏನೂ ನಷ್ಟವಾಗಿದ್ದರೂ ಸಹ ನದಿ ದಂಡೆಯ ಪ್ರದೇಶಗಳಲ್ಲಿ ಜಮೀನುಗಳಿಗೆ ನೀರು ನುಗ್ಗಿರುವುದರಿಂದ ಬೆಳೆಗಳು ಹಾನಿಯಾಗಿವೆ. ಕೆಲವು ಮನೆಗಳೂ ಜಲಾವೃತವಾಗಿರುವುದರಿಂದ ಆ ಮನೆಗಳ ನಿವಾಸಿಗಳನ್ನು ಸ್ಥಳಾಂತರಿಸಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ