ಆ್ಯಪ್ನಗರ

ನಾಳೆಯಿಂದ ವಿ.ಸಿ.ಫಾರ್ಮ್‌ನಲ್ಲಿ ಕೃಷಿ ಮೇಳ

ವಿಕ ಸುದ್ದಿಲೋಕ ಮಂಡ್ಯ ತಾಲೂಕಿನ ವಿಸಿಫಾರ್ಮ್‌ನಲ್ಲಿ ನ...

Vijaya Karnataka 23 Nov 2018, 5:00 am
ಮಂಡ್ಯ: ತಾಲೂಕಿನ ವಿ.ಸಿ.ಫಾರ್ಮ್‌ನಲ್ಲಿ ನ.24 ಮತ್ತು 25ರಂದು ಕೃಷಿ ವಸ್ತು ಪ್ರದರ್ಶನ ಹಾಗೂ ಕೃಷಿ ಮೇಳ-2018 ಆಯೋಜಿಸಲಾಗಿದೆ ಎಂದು ವಲಯ ಕೃಷಿ ಸಂಶೋಧನಾ ಕೇಂದ್ರದ ಸಹ ಸಂಶೋಧನಾ ನಿರ್ದೇಶಕ ಡಾ.ಎನ್‌.ಎಸ್‌.ವಾಸುದೇವನ್‌ ತಿಳಿಸಿದರು.
Vijaya Karnataka Web krushi mela at mandya vc form from tomorrow
ನಾಳೆಯಿಂದ ವಿ.ಸಿ.ಫಾರ್ಮ್‌ನಲ್ಲಿ ಕೃಷಿ ಮೇಳ


ಬೆಂಗಳೂರಿನ ಕೃಷಿ ವಿಶ್ವವಿದ್ಯಾಲಯ, ವಿ.ಸಿ.ಫಾರ್ಮ್‌ನ ಕೃಷಿ ಮಹಾವಿದ್ಯಾಲಯ, ಕೃಷಿ ವಿಜ್ಞಾನ ಕೇಂದ್ರ, ಕೃಷಿ, ತೋಟಗಾರಿಕೆ, ರೇಷ್ಮೆ, ಅರಣ್ಯ, ಪಶು ಸಂಗೋಪನೆ, ಮೀನುಗಾರಿಕೆ ಇಲಾಖೆಗಳು ಹಾಗೂ ಕಾವೇರಿ ಅಚ್ಚುಕಟ್ಟು ಪ್ರಾಧಿಕಾರದ ಸಹಯೋಗದಲ್ಲಿ ಕೃಷಿ ಮೇಳ ಸಂಘಟಿಸಲಾಗಿದೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಎರಡೂ ದಿನಗಳಂದು ಬೆಳಗ್ಗೆ 9ರಿಂದ ಸಂಜೆ 5.30ರವರೆಗೆ ಸಾರ್ವಜನಿಕರು, ರೈತರಿಗೆ ಪ್ರವೇಶಾವಕಾಶವಿದೆ. ರೈತರು ಕೃಷಿ ಮೇಳಕ್ಕೆ ಬರಲು ಅನುಕೂಲವಾಗುವಂತೆ ಮಂಡ್ಯದಿಂದ ಜೆ.ಸಿ.ವೃತ್ತದಲ್ಲಿನ ಲೋಕೋಪಯೋಗಿ ಇಲಾಖೆ ಕಚೇರಿ ಆವರಣದಿಂದ ವಿ.ಸಿ.ಫಾರ್ಮ್‌ಗೆ ಉಚಿತವಾಗಿ ಸಾರಿಗೆ ಸೌಲಭ್ಯ ಕಲ್ಪಿಸಲಾಗಿದೆ. ಪ್ರತಿ ಅರ್ಧ ಗಂಟೆಗೊಮ್ಮೆ ಮಂಡ್ಯದಿಂದ ವಿ.ಸಿ.ಫಾರ್ಮ್‌ಗೆ ಬಸ್‌ಗಳು ಹೊರಡಲಿವೆ. ರೈತರು ಈ ಸೌಲಭ್ಯವನ್ನು ಸದುಪಯೋಗ ಪಡಿಸಿಕೊಳ್ಳಬೇಕು.

ಕೃಷಿ ಮೇಳಕ್ಕೆ ಬರುವ ರೈತರು, ಸಾರ್ವಜನಿಕರು, ಕೃಷಿ ಆಸಕ್ತರಿಗಾಗಿ ವಿ.ಸಿ.ಫಾರ್ಮ್‌ನಲ್ಲಿ 20 ರೂ.ಗೆ ಫುಲ್‌ ಮೀಲ್ಸ್‌ ನೀಡಲಾಗುವುದು. ಹಳ್ಳಿ ಶೈಲಿಯಲ್ಲಿ ರಾಗಿಮುದ್ದೆ, ಅವರೆಕಾಳು ಕೂಟು, ಸಾಂಬಾರ್‌, ಪಾಯಸ, ಮಜ್ಜಿಗೆ ಸಹಿತ ಊಟ ನೀಡಲು ಈಗಾಗಲೇ ಸಿದ್ಧತೆ ನಡೆಸಲಾಗಿದೆ. ಕಳೆದ ವರ್ಷ ನಡೆದ ಕೃಷಿ ಮೇಳಕ್ಕೆ 40 ಸಾವಿರ ರೈತರು, ಕೃಷಿಯಾಸಕ್ತರು ಭೇಟಿ ನೀಡಿದ್ದರು. ಆದರೆ, ಈ ವರ್ಷ 50 ಸಾವಿರ ಮಂದಿ ಆಗಮಿಸುವ ನಿರೀಕ್ಷೆಯಿದೆ. ಜಿಲ್ಲೆಯ ಇತರ ತಾಲೂಕುಗಳ ಗ್ರಾಮೀಣ ಭಾಗದಿಂದಲೂ ವಿ.ಸಿ.ಫಾರ್ಮ್‌ಗೆ ರೈತರನ್ನು ಕರೆತರುವಂತೆ ಸಂಬಂಧಿಸಿದ ಇಲಾಖೆಗಳಿಗೆ ಸೂಚನೆ ನೀಡಲಾಗಿದೆ ಎಂದು ಮಾಹಿತಿ ನೀಡಿದರು.

ಮೇಳದ ಆಕರ್ಷಣೆಗಳಿವು: ಬಿತ್ತನೆ ಬೀಜದ ನಾನಾ ವರ್ಗಗಳ ಬೀಜೋತ್ಪದನಾ ತಾಕುಗಳು, ಡ್ರಂ ಸೀಡರ್‌ನಿಂದ ಭತ್ತದ ಬಿತ್ನತೆ ಮತ್ತು ಯಂತ್ರಚಾಲಿತ ನಾಟಿ ಪ್ರಾತ್ಯಕ್ಷಿಕೆ, ಶ್ರೀಪದ್ಧತಿ, ಏರೋಬಿಕ್‌ ಭತ್ತದ ಬೇಸಾಯ, ನಾನಾ ತಳಿಗಳ ಸಾಕ್ಷೀಕರಣ ತಾಕುಗಳು, ಭತ್ತದಲ್ಲಿ ನೇರ ಬಿತ್ತನೆ ಪ್ರಾತ್ಯಕ್ಷಿಕೆ, ಸುದಾರಿತ ರಾಗಿ ಮತ್ತು ಇತರ ಸಿರಿಧಾನ್ಯ ತಳಿಗಳ ಪ್ರಾತ್ಯಕ್ಷಿಕೆ, ಹೈಬ್ರಿಡ್‌/ಸಂಕರಣ ತಳಿಗಳ ಪ್ರಾತ್ಯಕ್ಷಿಕೆ ಸೇರಿದಂತೆ ಹತ್ತಾರು ವಿಶೇಷತೆಗಳನ್ನು ಈ ಬಾರಿಯ ಕೃಷಿ ಮೇಳದಲ್ಲಿ ಕಾಣಬಹುದು.

ಕಬ್ಬನ್ನು ನಾಟಿ ಮಾಡುವ/ತರಗು ಪುಡಿ ಮಾಡುವ ಯಂತ್ರಗಳ ಪ್ರಾತ್ಯಕ್ಷಿಕೆ, ಅಧಿಕ ಇಳುವರಿ/ಸಕ್ಕರೆ ಅಂಶವುಳ್ಳ ಕಬ್ಬಿನ ತಳಿಗಳು ಹಾಗೂ ಉತ್ಪಾದನಾ ತಾಂತ್ರಿಕೆಗಳು, ಅಂಗಾಂಶ ಕೃಷಿ ತಂತ್ರಜ್ಞಾನದಲ್ಲಿ ರೋಗಮುಕ್ತ ಕಬ್ಬಿನ ಸಸಿಗಳ ಉತ್ಪಾದನೆ, ರಾಸಾಯನಿಕ ಮುಕ್ತ ಬೆಲ್ಲ ತಯಾರಿಕೆ ತಾಂತ್ರಿಕತೆ, ನಾನಾ ಹತ್ತಿ ತಳಿಗಳ ಪ್ರಾತ್ಯಕ್ಷಿಕೆ, ಇಸ್ರೇಲ್‌ನ ನೀರು ನಿರ್ವಹಣಾ ತಂತ್ರಜ್ಞಾನಗಳ ಸಮಗ್ರ ಮಾಹಿತಿ ಸೇರಿದಂತೆ ಹತ್ತಾರು ಹಲವು ವಿಶೇಷತೆಗಳಿವೆ.

ಪ್ರಗತಿಪರ ರೈತರೊಂದಿಗೆ ಸಂವಾದ, ಮಣ್ಣಿನ ಆರೋಗ್ಯ ಹಾಗೂ ಸಮಗ್ರ ಪೋಷಕಾಂಶ ನಿರ್ವಹಣೆಯ ತಾಂತ್ರಿಕ ಸಲಹೆಗಳು, ಔಷಧ ಮತ್ತು ಸುಗಂಧ ದ್ರವ್ಯ ಸಸ್ಯಗಳು, ಎರೆಗೊಬ್ಬರ ತಯಾರಿಕೆ, ಕೃಷಿ ಯಂತ್ರೋಪಕರಣಗಳ ಪ್ರಾತ್ಯಕ್ಷಿಕೆ, ಇತರ ಕೃಷಿ ಪರಿಕರ ಸಂಸ್ಥೆಗಳಿಂದ ವಸ್ತು ಪ್ರದರ್ಶನ, ಸಮಗ್ರ ಮೀನು ಸಾಕಾಣಿಕೆ ಪದ್ಧತಿಗಳು, ನಾನಾ ಅಭಿವೃದ್ಧಿ ಇಲಾಖೆಗಳ ತಂತ್ರಿಕೆಗಳ ಪ್ರದರ್ಶನವನ್ನೂ ಏರ್ಪಡಿಸಲಾಗಿದೆ ಎಂದು ವಿವರಿಸಿದರು.

ಉದ್ಘಾಟನಾ ಸಮಾರಂಭ: ವಿ.ಸಿ.ಫಾರ್ಮ್‌ನಲ್ಲಿ ನ.24ರಂದು ಬೆಳಗ್ಗೆ 10ಕ್ಕೆ ಜಿಲ್ಲಾ ಉಸ್ತುವಾರಿ ಹಾಗೂ ಸಣ್ಣ ನೀರಾವರಿ ಸಚಿವ ಸಿ.ಎಸ್‌.ಪುಟ್ಟರಾಜು ಅಧ್ಯಕ್ಷತೆಯಲ್ಲಿ ಕೃಷಿ ಮೇಳದ ಉದ್ಘಾಟನಾ ಸಮಾರಂಭ ನಡೆಯಲಿದೆ. ಕೃಷಿ ಮೇಳ ಮತ್ತು ಪ್ರಾತ್ಯಕ್ಷಿಕೆಗಳನ್ನು ಕೃಷಿ ಸಚಿವ ಎನ್‌.ಎಚ್‌.ಶಿವಶಂಕರರೆಡ್ಡಿ, ಕೃಷಿ ವಸ್ತು ಪ್ರದರ್ಶನವನ್ನು ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ ಉದ್ಘಾಟಿಸುವರು. ಜಿ.ಪಂ. ಅಧ್ಯಕ್ಷೆ ನಾಗರತ್ನ ಸ್ವಾಮಿ, ಸಂಸದ ಎಲ್‌.ಆರ್‌.ಶಿವರಾಮೇಗೌಡ, ಜಿಲ್ಲೆಯ ಎಲ್ಲ ಶಾಸಕರು, ಜಿ.ಪಂ. ಉಪಾಧ್ಯಕ್ಷ ಪಿ.ಕೆ.ಗಾಯಿತ್ರಿ ರೇವಣ್ಣ, ತಾ.ಪಂ. ಅಧ್ಯಕ್ಷೆ ಶೈಲಜಾ, ಗಾಣದಾಳು ಗ್ರಾ.ಪಂ. ಅಧ್ಯಕ್ಷ ಎಂ.ಕೆ.ನಿತಿನ್‌ ಸೇರಿದಂತೆ ಹಲವು ಗಣ್ಯರು ಭಾಗವಹಿಸುವರು ಎಂದು ತಿಳಿಸಿದರು. ಗೋಷ್ಠಿಯಲ್ಲಿ ಕೃಷಿ ಮಹಾವಿದ್ಯಾಲಯದ ಡೀನ್‌(ಕೃಷಿ) ಡಾ.ಟಿ.ಶಿವಶಂಕರ್‌, ಸಹ ವಿಸ್ತರಣಾ ನಿರ್ದೇಶಕ ಡಾ.ವೆಂಕಟೇಶ್‌, ತೋಟಗಾರಿಕೆ ವಿಭಾಗದ ಪ್ರೊ.ವೆಂಕಟೇಶ್‌ ಹಾಜರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ