ಆ್ಯಪ್ನಗರ

ಉರುಳಿಗೆ ಸಿಲುಕಿದ್ದ ಚಿರತೆ ರಕ್ಷಣೆ

ಕಬ್ಬಿನ ಗದ್ದೆಯಲ್ಲಿ ಕಾಡು ಹಂದಿ ಹಿಡಿಯಲು ಹಾಕಿದ್ದ ಉರುಳಿಗೆ ಸಿಲುಕಿದ್ದ ಚಿರತೆಯನ್ನು ಸೋಮವಾರ ಅರಣ್ಯ ಇಲಾಖೆ ಅಧಿಕಾರಿಗಳು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ

Vijaya Karnataka 30 Apr 2019, 5:00 am
ಮಂಡ್ಯ : ಕಬ್ಬಿನ ಗದ್ದೆಯಲ್ಲಿ ಕಾಡು ಹಂದಿ ಹಿಡಿಯಲು ಹಾಕಿದ್ದ ಉರುಳಿಗೆ ಸಿಲುಕಿದ್ದ ಚಿರತೆಯನ್ನು ಸೋಮವಾರ ಅರಣ್ಯ ಇಲಾಖೆ ಅಧಿಕಾರಿಗಳು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ.
Vijaya Karnataka Web leopard protection
ಉರುಳಿಗೆ ಸಿಲುಕಿದ್ದ ಚಿರತೆ ರಕ್ಷಣೆ


ಕಳೆದ ಒಂದು ವರ್ಷದಿಂದ ಬೋನಿಗೆ ಬೀಳದೆ ಸತಾಯಿಸುತ್ತಿದ್ದ ಚಿರತೆ, ಈಗ ಉರುಳಿಗೆ ಸಿಕ್ಕಿಬಿದ್ದಿದೆ. ಹಲವಾರು ದಿನಗಳಿಂದ ತಾಲೂಕಿನ ಗುನ್ನನಾಯಕನಹಳ್ಳಿ, ಕರಡಿ ಕೊಪ್ಪಲು, ಹಂಪಾಪುರ, ಬಿಳಿದೇಗಲು ಗ್ರಾಮಗಳ ನಡುವಿನ ಅರಣ್ಯ ಪ್ರದೇಶದಲ್ಲಿ ಚಿರತೆ ಸಂಚರಿಸಿ ಭೀತಿಯನ್ನು ಹುಟ್ಟಿಸಿತು. ಚಿರತೆಗೆ ಹೆದರಿದ ಗ್ರಾಮಸ್ಥರು ಅರಣ್ಯ ಇಲಾಖೆಗೆ ಸೆರೆಹಿಡಿಯುವಂತೆ ಮನವಿ ಸಲ್ಲಿಸಿದ್ದರು.

ಗ್ರಾಮಸ್ಥರ ಮನವಿಯ ಮೇರೆಗೆ ಅರಣ್ಯಾಧಿಕಾರಿಗಳು ಚಿರತೆಯನ್ನು ಸೆರೆಹಿಡಿಯಲು ಬೋನ್‌ ಇರಿಸಿದ್ದರು. ಆದರೂ ಚಿರತೆ ಸೆರೆ ಸಿಕ್ಕಿರಲಿಲ್ಲ. ಇದು ಅರಣ್ಯಾಧಿಕಾರಿಗಳಿಗೆ ಹಾಗೂ ಗ್ರಾಮಸ್ಥರಿಗೆ ತಲೆನೋವು ತಂದಿತ್ತು.

ಉರುಳಿಗೆ ಸಿಲುಕಿದ ಚಿರತೆ: ಗ್ರಾಮದ ಜೈಸ್ವಾಮಿ ಎಂಬುವವರ ಕಬ್ಬಿನ ಗದ್ದೆಯಲ್ಲಿ ಕಾಡುಹಂದಿಯನ್ನು ಹಿಡಿಯುವ ಸಲುವಾಗಿ ಉರುಳು ಹಾಕಲಾಗಿತ್ತು. ಇದರ ಅರಿವಿಲ್ಲದೆ ಕಬ್ಬಿನಗದ್ದೆಯೊಳಗೆ ಬಂದ ಚಿರತೆ ಉರುಳಿಗೆ ಸೆರೆ ಸಿಕ್ಕಿದೆ. ಉರುಳಿಗೆ ಸಿಲುಕಿ ಚಿರತೆ ಒದ್ದಾಡುತ್ತಿರುವ ವಿಚಾರ ತಿಳಿಯುತ್ತಿದ್ದಂತೆ ಸುತ್ತಮುತ್ತಲ ಗ್ರಾಮಸ್ಥರು ನೂರಾರು ಸಂಖ್ಯೆಯಲ್ಲಿ ಸ್ಥಳಕ್ಕೆ ಆಗಮಿಸಿದರು. ಸ್ಥಳದಲ್ಲಿ ನೆರೆದಿದ್ದ ಜನರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸಪಟ್ಟರು.

ಗ್ರಾಮಸ್ಥರ ಆಕ್ರೋಶ: ಚಿರತೆ ಉರುಳಿಗೆ ಬಿದ್ದಿರುವ ವಿಷಯವನ್ನು ಅರಣ್ಯ ಇಲಾಖೆಗೆ ತಿಳಿಸಿದರೂ ಸಹ ಅಧಿಕಾರಿಗಳು ಮೂರು ಗಂಟೆ ತಡವಾಗಿ ಅಧಿಕಾರಿಗಳು ಬಂದರು. ತಡವಾಗಿ ಬಂದ ಡೆಪ್ಯುಟಿ ರೇಂಜ್‌ ಆಫೀಸರ್‌ ಸುರೇಶ್‌ ಅವರು ಚಿರತೆ ಸೆರೆ ಹಿಡಿಯಲು ಮೇಲಧಿಕಾರಿಗಳ ಅನುಮತಿ ಬೇಕು. ಅದಕ್ಕಾಗಿ ಕಾಯುತ್ತಿದ್ದೆವು ಎಂದು ಹೇಳಿದಾಗ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.

ಅರವಳಿಕೆ ತಜ್ಞರು: ಉರುಳಿಗೆ ಬಿದ್ದಿದ್ದ ಚಿರತೆಯನ್ನು ಸೆರೆ ಹಿಡಿಯಲು ಅರಿವಳಿಕೆ ಚುಚ್ಚುಮದ್ದು ನೀಡಬೇಕಿದ್ದ ತಜ್ಞರು ಸುಮಾರು 8 ಗಂಟೆ ತಡವಾಗಿ ಆಗಮಿಸಿದರು. ಇದರಿಂದ ಮತ್ತಷ್ಟು ಕುಪಿತರಾದ ಗ್ರಾಮಸ್ಥರು ಮೈಸೂರಿನಿಂದ ಬರಲು 8 ಗಂಟೆ ಬೇಕೇ? ಎಂದು ಮತ್ತೆ ಅಧಿಕಾರಿಗಳ ವಿರುದ್ಧ ಕಿಡಿಕಾರಿದರು. ಅರವಳಿಕೆ ತಜ್ಞರಾದ ಡಾ.ನಾಗರಾಜು, ಸಹಾಯಕ ಅಕ್ರಮ್‌ ಅವರು ಚಿರತೆಗೆ ಅರಿವಳಿಕೆ ಚುಚ್ಚುಮದ್ದು ನೀಡಿದರು. ಚಿರತೆಯನ್ನು ಉರುಳಿನಿಂದ ರಕ್ಷಣೆ ಮಾಡಿದರು. ಬಳಿಕ ಮೇಲಧಿಕಾರಿಗಳ ನಿರ್ದೇಶನದಂತೆ ಕಾಡಿಗೆ ಬಿಡಲಾಯಿತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ