ಆ್ಯಪ್ನಗರ

ಮರ್ಯಾದೆ ಹತ್ಯೆ: ಕಾವೇರಿ ನದಿಗೆ ಎಸೆದು ಪ್ರೇಮಿಗಳ ಕೊಲೆ

ತಾಲೂಕಿನ ಶಿವನಸಮುದ್ರಂನ ಬಳಿ ಕಾವೇರಿ ನದಿಯಲ್ಲಿ ಸಿಕ್ಕ ಎರಡು ಮೃತದೇಹಗಳ ಸಂಬಂಧ ಕೊಲೆ ಶಂಕೆ ವ್ಯಕ್ತವಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ತಮಿಳುನಾಡು ಮೂಲದ ಐವರನ್ನು ಕರೆದುತಂದು ವಿಚಾರಣೆ ನಡೆಸುತ್ತಿದ್ದಾರೆ.

Vijaya Karnataka 17 Nov 2018, 9:09 am
ಪೊಲೀಸರಿಂದ ತಮಿಳುನಾಡು ಮೂಲದ ಐವರ ವಿಚಾರಣೆ
Vijaya Karnataka Web cauvery


ಮಳವಳ್ಳಿ:
ತಾಲೂಕಿನ ಶಿವನಸಮುದ್ರಂನ ಬಳಿ ಕಾವೇರಿ ನದಿಯಲ್ಲಿ ಸಿಕ್ಕ ಎರಡು ಮೃತದೇಹಗಳ ಸಂಬಂಧ ಕೊಲೆ ಶಂಕೆ ವ್ಯಕ್ತವಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ತಮಿಳುನಾಡು ಮೂಲದ ಐವರನ್ನು ಕರೆದುತಂದು ವಿಚಾರಣೆ ನಡೆಸುತ್ತಿದ್ದಾರೆ.

ತಮಿಳುನಾಡಿನ ಹೊಸೂರು ತಾಲೂಕು ಚೂಡಗೌಂಡನಹಳ್ಳಿಯ ನಿವಾಸಿ ನಂದೀಶ್‌(26) ಹಾಗೂ ಇದೇ ಗ್ರಾಮದ ಸ್ವಾತಿ(19) ಮೃತದೇಹ ಎರಡು ದಿನದ ಹಿಂದೆ ಶಿವನಸಮುದ್ರಂ ಬಳಿ ಕಾವೇರಿ ನದಿಯಲ್ಲಿ ಒಂದೇ ಸ್ಥಳದಲ್ಲಿ ಸಿಕ್ಕಿದ್ದವು. ಇವರನ್ನು ಕೊಲೆ ಮಾಡಿರಬಹುದೆಂದು ಶಂಕಿಸಲಾಗಿತ್ತು. ಬೆಳಕವಾಡಿ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿತ್ತು.

ಕೊಲೆಗೆ ಜಾತಿ ಕಾರಣ?: ಈ ಇಬ್ಬರು ಪರಸ್ಪರ ಪ್ರೀತಿಸುತ್ತಿದ್ದು, ಬೇರೆ ಬೇರೆ ಜಾತಿಯವರಾಗಿದ್ದರು. ಹಾರ್ಡ್‌ವೇರ್‌ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ನಂದೀಶ್‌ ಹಾಗೂ ಕೃಷ್ಣಗಿರಿಯ ಕಾಲೇಜಿನಲ್ಲಿ ಬಿಎ ವ್ಯಾಸಂಗ ಮಾಡುತ್ತಿದ್ದ ಸ್ವಾತಿ ಪರಸ್ಪರ ಪ್ರೀತಿಸುತ್ತಿದ್ದರು.

ಮೂರು ತಿಂಗಳ ಹಿಂದೆ ಕಾಲೇಜಿಗೆ ಹೋಗಿದ್ದ ಸ್ವಾತಿ ಮನೆಗೆ ಬಾರದೇ ನಂದೀಶ್‌ನ ಜತೆ ಮದುವೆಯಾಗಿದ್ದಳು. ಇದು ಆಕೆಯ ಮನೆಯವರನ್ನು ಕೆರಳಿಸಿತ್ತು. ಈ ಮಧ್ಯೆ ನ.10ರಂದು ಸ್ವಾತಿ ಹೊಸೂರಿಗೆ ಹೋಗಿದ್ದಳು. ಸಂಬಂಧಿಯೊಬ್ಬರು ಈ ವಿಷಯ ತಿಳಿದು ಈಕೆಯ ಮನೆಯವರಿಗೆ ವಿಷಯ ತಿಳಿಸಿದ್ದರು ಎನ್ನಲಾಗಿದೆ. ನಂತರ ಈಕೆಯ ಸಹೋದರರು ಈ ಜೋಡಿಯನ್ನು ಸಂಪರ್ಕಿಸಿ ವಿಚಾರವನ್ನು ಪೊಲೀಸ್‌ ಠಾಣೆಯಲ್ಲಿ ಸರಿಪಡಿಸಿಕೊಳ್ಳೋಣ ಎಂದು ಹೇಳಿ ಇಬ್ಬರನ್ನೂ ಕಾರಿನಲ್ಲಿ ಕನಕಪುರ ಮಾರ್ಗವಾಗಿ ಕರೆದುಕೊಂಡು ಬಂದು ತಾಲೂಕಿನ ಶಿವನಸಮುದ್ರಂನ ಕಾವೇರಿ ನದಿ ಬಳಿ ಮೊದಲಿಗೆ ನಂದೀಶ್‌ ಕೈಕಾಲು ಕಟ್ಟಿ ನದಿಗೆ ಬಿಸಾಡಿ, ಬಳಿಕ ಸ್ವಾತಿ ಧರಿಸಿದ್ದ ವೇಲ್‌ನಿಂದಲೇ ಆಕೆ ಕೈಕಾಲು ಕಟ್ಟಿಹಾಕಿ ಆಕೆಯನ್ನೂ ನದಿಗೆ ಎಸೆದು ಪರಾರಿಯಾಗಿದ್ದರು ಎನ್ನಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಳಕವಾಡಿ ಪೊಲೀಸರು ಐವರನ್ನು ವಶಕ್ಕೆ ತೆಗೆದುಕೊಂಡಿದ್ದು, ವಿಚಾರಣೆ ನಡೆಸುತ್ತಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ