ಆ್ಯಪ್ನಗರ

ಮದ್ದೂರು: ರೈತ ಸಂಘದಿಂದ ತಾಲೂಕು ಕಚೇರಿಗೆ ಮುತ್ತಿಗೆ

ಬೆಳೆ ನಷ್ಟಕ್ಕೆ ಪರಿಹಾರ ನೀಡಿ ವಿಕ ಸುದ್ದಿಲೋಕ ಮದ್ದೂರು ನಾನಾ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಕರ್ನಾಟಕ ಪ್ರಾಂತ ರೈತ ಸಂಘದ ಪದಾಧಿಕಾರಿಗಳು ತಾಲೂಕು ಕಚೇರಿಗೆ ...

Vijaya Karnataka 25 Oct 2017, 5:00 am

ಬೆಳೆ ನಷ್ಟಕ್ಕೆ ಪರಿಹಾರ ನೀಡಿ

ಮದ್ದೂರು: ನಾನಾ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಕರ್ನಾಟಕ ಪ್ರಾಂತ ರೈತ ಸಂಘದ ಪದಾಧಿಕಾರಿಗಳು ತಾಲೂಕು ಕಚೇರಿಗೆ ಮಂಗಳವಾರ ಮುತ್ತಿಗೆಹಾಕಿ ಗ್ರೇಡ್‌-2 ತಹಸೀಲ್ದಾರ್‌ ನಾಗೇಂದ್ರ ಅವರಿಗೆ ಮನವಿ ಪತ್ರ ಅರ್ಪಿಸಿದರು.

ಪಟ್ಟಣದ ಪ್ರವಾಸಿಮಂದಿರದ ಬಳಿ ಜಮಾಯಿಸಿದ ಪ್ರತಿಭಟನಾಕಾರರು ಪೇಟೆ ಬೀದಿ ಮೂಲಕ ಮೆರವಣಿಗೆ ನಡೆಸಿ ಕೇಂದ್ರ ಮತ್ತು ರಾಜ್ಯ ಸರಕಾರಗಳ ವಿರುದ್ಧ ಘೋಷಣೆಕೂಗಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.

ಮೂರು ವರ್ಷಗಳಿಂದಲೂ ಮಳೆ, ಬೆಳೆ ಇಲ್ಲದೆ ರೈತರು ಆರ್ಥಿಕ ಸಂಕಷ್ಟದ ಪರಿಸ್ಥಿತಿಯಲ್ಲಿದ್ದು, ಆಡಳಿತ ನಡೆಸುವ ಸರಕಾರಗಳು ರೈತರ ನೆರವಿಗೆ ಧಾವಿಸದೆ ನಿರ್ಲಕ್ಷ ್ಯ ಧೋರಣೆ ಅನುಸರಿಸುತ್ತಿದ್ದಾರೆಂದು ಆರೋಪಿಸಿದ ಪ್ರತಿಭಟನಾಕಾರರು, ಈ ಕೂಡಲೇ ಬೇಡಿಕೆಗಳ ಈಡೇರಿಕೆಗೆ ಸರಕಾರ ಮುಂದಾಗಬೇಕೆಂದು ಆಗ್ರಹಿಸಿದರು.

ತಾಲೂಕಿನಾದ್ಯಂತ ಎಡೆಬಿಡದೆ ಸುರಿದ ಅಕಾಲಿಕ ಮಳೆಯಿಂದಾಗಿ ರೈತರ ಗಾಯದ ಮೇಲೆ ಬರೆ ಹಾಕಿದಂತಾಗಿದ್ದು, ರಾಗಿ, ದ್ವಿದಳ ದಾನ್ಯ, ಜೋಳ ಸೇರಿದಂತೆ ಇನ್ನಿತರೆ ಬೆಳೆಗಳು ನಷ್ಟಕ್ಕೀಡಾಗಿದ್ದು ಸಕಾಲದಲ್ಲಿ ಮಳೆಯಾಗದ ಕಾರಣ ಶೇ.75ರಷ್ಟು ಜಮೀನುಗಳು ಖಾಲಿ ಉಳಿದಿವೆ.

ತಾಲೂಕು ಕಚೇರಿಯಲ್ಲಿ ರೈತರ ಕೆಲಸ ಕಾರ್ಯಗಳು ವಿಳಂಭವಾಗುತ್ತಿದ್ದು, ಪಡಿತರ ಕಾರ್ಡ್‌ ಸೇರಿದಂತೆ ಇನ್ನಿತರೆ ಕೆಲಸಗಳಿಗೆಂದು ಬರುವ ರೈತರನ್ನು ಅಲೆದಾಡಿಸುವ ಅಧಿಕಾರಿಗಳ ಪ್ರವೃತ್ತಿ ಹೆಚ್ಚಾಗಿರುವುದನ್ನು ಖಂಡಿಸಿ ಸ್ಥಳದಲ್ಲಿದ್ದ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ಸಂಘಟನೆಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಟಿ. ಯಶವಂತ್‌ ಮಾತನಾಡಿ ಹೈನುಗಾರಿಕೆ, ರೇಷ್ಮೆ, ಕೃಷಿಕರಿಗೆ ಮಳೆ ನೆಪ ಹೇಳಿ ಸರಕಾರ ದರ ಕಡಿತಗೊಳಿಸುತ್ತಿದೆ ಎಂದು ಆರೋಪಿಸಿದ ಅವರು ಹಾಲು ಉತ್ಪಾದಕರಿಂದ ಖರೀದಿಸುವ ಹಾಲಿಗೆ ಮನ್‌ಮುಲ್‌ 1 ರೂ. ಕಡಿತಗೊಳಿಸುವ ಜತೆಗೆ ರೇಷ್ಮೆ ಮಾರುಕಟ್ಟೆಗಳಲ್ಲಿ ಅಂತರ್ಜಲ ಹೆಚ್ಚಳದ ನೆಪ ಹೇಳಿ 1 ಕೆ.ಜಿ.ಗೆ 60ರೂ. ಕಡಿಮೆಗೆ ಖರೀದಿಸುವ ಪ್ರಯತ್ನಗಳು ಜರುಗುತ್ತಿವೆ ಎಂದು ದೂರಿದರು.

ಸಕಾಲದಲ್ಲಿ ಮಳೆಯಾಗದೆ ಕೃಷಿ ಚಟುವಟಿಕೆ ಸ್ತಬ್ಧವಾಗಿದ್ದು ನಿರುದ್ಯೋಗ ನಿವಾರಿಸಲು ಉದ್ಯೋಗ ಖಾತರಿ ಯೋಜನೆಯಡಿ ಕೆಲಸ ನೀಡಬೇಕು ಹಾಗೂ ತಾಲೂಕನ್ನು ಬರಪಿಡಿತ ಪ್ರದೇಶವೆಂದು ಘೋಷಿಸಿ 150 ದಿನಗಳ ಕಾಲ ಉದ್ಯೋಗ ಒದಗಿಸುವ ಜತೆಗೆ ಪ್ರತಿ ಕುಟುಂಬಕ್ಕೆ 35 ಕೆ.ಜಿ. ಆಹಾರ ಧಾನ್ಯವನ್ನು ವಿತರಿಸಲು ಕ್ರಮವಹಿಸಬೇಕೆಂದರು.

ಅಕಾಲಿಕ ಮಳೆಯಿಂದಾಗಿ ಬೆಳೆ ನಷ್ಟ, ಮನೆಕುಸಿತಕ್ಕೆ ಸಮರ್ಪಕ ಪರಿಹಾರ, ವಿಜಯ ಬ್ಯಾಂಕ್‌ನಿಂದ ಜಪ್ತಿಯಾಗಿರುವ ಆತಗೂರು ಹೋಬಳಿಯ ಕುಂದನಕುಪ್ಪೆ ರೈತ ಚಂದ್ರಶೇಖರ್‌ ಮನೆ ಜಪ್ತಿ ತೆರವು ಮಾಡಿಸಿ ವಾಸಕ್ಕೆ ಅನುಕೂಲ ಕಲ್ಪಿಸುವುದು, ಪಟ್ಟಣದ ಟಿಎಪಿಸಿಎಂಎಸ್‌ ಗೋದಾಮು ಅಕ್ರಮ ಗುತ್ತಿಗೆ ಸಂಬಂಧ ಸಹಕಾರ ಇಲಾಖೆ ಉನ್ನತ ಅಧಿಕಾರಿಗಳಿಂದ ತನಿಖೆ ನಡೆಸುವುದು ಮತ್ತು ಬಡ ಹಾಗೂ ಮಧ್ಯಮ ರೈತ ಕೃಷಿ ಕೂಲಿಕಾರರ ಎಲ್ಲಾ ರೀತಿಯ ಸಾಲ ಮನ್ನಾ ಮಾಡುವಂತೆ ಆಗ್ರಹಿಸಿದರು.

ಸರಕಾರ ರೈತರ ಬೇಡಿಕೆಗಳ ಈಡೇರಿಕೆಗೆ ಮುಂದಾಗದಿದ್ದಲ್ಲಿ ರಾಜ್ಯವ್ಯಾಪ್ತಿ ಸಂಘಟನೆ ವತಿಯಿಂದ ಪ್ರತಿಭಟನೆ ಹಮ್ಮಿಕೊಳ್ಳುವ ಎಚ್ಚರಿಕೆ ನೀಡಿ ಪ್ರತಿಭಟನೆ ಹಿಂಪಡೆದರು.

ಪ್ರತಿಭಟನೆ ವೇಳೆ ಸಂಘಟನೆಯ ತಾಲೂಕು ಅಧ್ಯಕ್ಷ ಶಿವಣ್ಣ, ಉಪಾಧ್ಯಕ್ಷ ಧನಂಜಯ್ಯ, ಪದಾಧಿಕಾರಿಗಳಾದ ಗಂಗಾಧರ್‌, ಕಮಲಾಕ್ಷ ಮ್ಮ, ಭವಾನಿ, ಮುತ್ತುರಾಜು, ಬೋರೇಗೌಡ, ಪ್ರಕಾಶ್‌, ಪುಟ್ಟಸ್ವಾಮಿ, ರಾಮಸ್ವಾಮಿ ಸೇರಿದಂತೆ ಮುಖಂಡರು ನೇತೃತ್ವವಹಿಸಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ