ಆ್ಯಪ್ನಗರ

ಮಳವಳ್ಳಿ ಪುರಸಭೆ ಚುನಾವಣೆ: ಎರಡೂ ಪಕ್ಷಗಳಿಗೆ ಬಂಡಾಯದ ಬಿಸಿ

ವಿಕ ಸುದ್ದಿಲೋಕ ಮಳವಳ್ಳಿ ಪುರಸಭೆ ಚುನಾವಣೆಯಿಂದ ರಾಜಕೀಯ ಪಕ್ಷ ಗಳಿಗೆ ಬಂಡಾಯದ ಕಾವು ಹೆಚ್ಚಾಗಿದ್ದು, ಮೇ 16ರವರೆಗೂ ಟಿಕೆಟ್‌ ಘೋಷಣೆ ಮಾಡದೆ ಕೊನೆವರೆಗೂ ಯಥಾಸ್ಥಿತಿ ...

Vijaya Karnataka 15 May 2019, 5:00 am
ಮಳವಳ್ಳಿ: ಪುರಸಭೆ ಚುನಾವಣೆಯಿಂದ ರಾಜಕೀಯ ಪಕ್ಷ ಗಳಿಗೆ ಬಂಡಾಯದ ಕಾವು ಹೆಚ್ಚಾಗಿದ್ದು, ಮೇ 16ರವರೆಗೂ ಟಿಕೆಟ್‌ ಘೋಷಣೆ ಮಾಡದೆ ಕೊನೆವರೆಗೂ ಯಥಾಸ್ಥಿತಿ ಕಾಯ್ದುಕೊಳ್ಳುವ ಯೋಚನೆಯನ್ನು ರಾಜಕೀಯ ನಾಯಕರು ಮಾಡುತ್ತಿದ್ದಾರೆ.
Vijaya Karnataka Web malavalli municipal elections heat of the rebellion for congress and jds
ಮಳವಳ್ಳಿ ಪುರಸಭೆ ಚುನಾವಣೆ: ಎರಡೂ ಪಕ್ಷಗಳಿಗೆ ಬಂಡಾಯದ ಬಿಸಿ


ಮಳವಳ್ಳಿ ಪುರಸಭೆಯಲ್ಲಿ ಒಟ್ಟು 23 ವಾರ್ಡ್‌ಗಳಿವೆ. ಇಲ್ಲಿ ಜೆಡಿಎಸ್‌ ಹಾಗೂ ಕಾಂಗ್ರೆಸ್‌ ಮಧ್ಯೆ ಜಿದ್ದಾಜಿದ್ದಿ ಇದೆ. ಬಿಜೆಪಿ ತಮ್ಮ ಪಕ್ಷ ದ ಮೂಲ ಕಾರ್ಯಕರ್ತರು ಇರುವ ವಾರ್ಡ್‌ಗಳು, ಸಾಂಪ್ರದಾಯಕ ಮತವಿರುವ ಕ್ಷೇತ್ರಗಳಿಗೆ ಹೆಚ್ಚು ಆದ್ಯತೆ ನೀಡಿ ಐದಾರು ಸದಸ್ಯರನ್ನಾದರೂ ಪಡೆಯಲು ಹವಣಿಸುತ್ತಿದೆ.

ಎಲ್ಲ ಕ್ಷೇತ್ರಗಳಲ್ಲಿ ಜೆಡಿಎಸ್‌ ಹಾಗೂ ಕಾಂಗ್ರೆಸ್‌ ಪ್ರಾಬಲ್ಯ ಹೊಂದಿದ್ದು, ಗೆಲ್ಲುವ ಕುದುರೆಗೆ ಪಟ್ಟಕಟ್ಟಿ ಟಿಕೆಟ್‌ ನೀಡಲು ಕಾಂಗ್ರೆಸ್‌ನ ಮಾಜಿ ಶಾಸಕ ನರೇಂದ್ರಸ್ವಾಮಿ ಹಾಗೂ ಜೆಡಿಎಸ್‌ ಶಾಸಕ ಡಾ.ಅನ್ನದಾನಿ ತಮ್ಮ ಕಾರ್ಯತಂತ್ರ ರೂಪಿಸುತ್ತಿದ್ದಾರೆ. ಮಾಜಿ ಸಚಿವ, ಬಿಜೆಪಿ ನಾಯಕ ಬಿ.ಸೋಮಶೇಖರ್‌ ಕೂಡ ಚುನಾವಣೆಯಲ್ಲಿ ಒಂದಷ್ಟು ಸ್ಥಾನಗಳನ್ನು ಪಡೆಯಲು ಕಾರ್ಯತಂತ್ರ ರೂಪಿಸುತ್ತಿದ್ದಾರೆ. ಕಾಂಗ್ರೆಸ್‌ ಹಾಗೂ ಜೆಡಿಎಸ್‌ನಲ್ಲಿ ಬಂಡಾಯ ಏಳುವ ಅಭ್ಯರ್ಥಿಗಳಿಗೆ ಗಾಳ ಹಾಕುವ ತಂತ್ರಗಾರಿಕೆಯಲ್ಲಿ ನಿರತರಾಗಿದ್ದಾರೆ. ಈ ನಡುವೆ ಜೆಡಿಎಸ್‌ ಹಾಗೂ ಕಾಂಗ್ರೆಸ್‌ಗೆ ತಂತಮ್ಮ ಪಕ್ಷ ಗಳಲ್ಲೇ ಇರುವ ಬಂಡಾಯದ ಬಿಸಿ ನುಂಗಲಾರದ ತುತ್ತಾಗಿದೆ.

ಜೆಡಿಎಸ್‌ ಹಾಗೂ ಕಾಂಗ್ರೆಸ್‌ ಎರಡು ಪಕ್ಷ ಗಳಲ್ಲೂ ಟಿಕೆಟ್‌ ಹಂಚಿಕೆ ಸಂಬಂಧ ಗೌಪ್ಯತೆ ಕಾಯ್ದುಕೊಳ್ಳಲಾಗಿದೆ. ಇಲ್ಲಿಯವರೆಗೂ ಯಾವುದೇ ವಾರ್ಡ್‌ನಲ್ಲಿ ಯಾರಿಗೂ ಟಿಕೆಟ್‌ ಖಾತರಿ ಕೊಟ್ಟಿಲ್ಲ. ಎರಡೂ ಪಕ್ಷ ಗಳ ಟಿಕೆಟ್‌ ಆಕಾಂಕ್ಷಿಗಳು ನಮಗೆ ಟಿಕೆಟ್‌ ಸಿಗದಿದ್ದರೆ ಪಕ್ಷೇತರರಾಗಿ ಸ್ಪರ್ಧೆ ಖಚಿತ ಎಂದು ಬಹಿರಂಗವಾಗಿಯೇ ಹೇಳಿಕೆ ನೀಡುತ್ತಿರುವ ನಾಯಕರಿಗೆ ಬಿಸಿ ತುಪ್ಪವಾಗಿದೆ.

ಹಿಂದುಳಿದ ವರ್ಗ ಬಿ ಗೆ ಮೀಸಲಿರುವ ಒಕ್ಕಲಿಗರು ಹಾಗೂ ಲಿಂಗಾಯಿತರಿಗೆ ಸೀಮಿತವಾಗಿದ್ದು, ಈ ವಾರ್ಡ್‌ನಲ್ಲೇ ಅಂತರ್‌ಜಾತಿ ವಿವಾಹ ಆಗಿರುವ ಮಹಿಳೆಯನ್ನು ಕಣಕ್ಕಿಳಿಸಲು ಕಾರ್ಯತಂತ್ರ ರೂಪಿಸಲಾಗಿದೆ. ಎಲ್ಲ ವಾರ್ಡ್‌ಗಳಲೂ ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಪಕ್ಷ ಗಳ ಟಿಕೆಟ್‌ ಆಕಾಂಕ್ಷಿಗಳ ಪಟ್ಟಿ ದೊಡ್ಡದಿದೆ. ಟಿಕೆಟ್‌ ಘೋಷಣೆ ಬೆನ್ನಲ್ಲೇ ಎರಡೂ ಪಕ್ಷಗಳಲ್ಲಿ ಬಂಡಾಯ ಹೆಚ್ಚುವ ಸಂಭವವಿದೆ.

ನಮ್ಮಲ್ಲಿ ಯಾವುದೇ ಬಂಡಾಯವಿಲ್ಲ. ಎಲ್ಲರೂ ಒಗ್ಗಟ್ಟಾಗಿದ್ದಾರೆ. ನಮ್ಮ ಪಕ್ಷದಲ್ಲಿ ಎಲ್ಲವೂ ಸರಿಯಿದೆ.
- ಡಾ.ಅನ್ನದಾನಿ ಶಾಸಕ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ