ಆ್ಯಪ್ನಗರ

ರೌಡಿಸಂನಲ್ಲಿ ದೊಡ್ಡ ಹೆಸರು ಮಾಡುವುದಕ್ಕಾಗಿ ಕೊಲೆ

ರೌಡಿಯಾಗಿ ಗುರುಸಿತಿಕೊಳ್ಳಬೇಕೆಂದು ಯುವಕನ ಕೊಲೆ ಮಾಡಿದ ಪ್ರಕರಣವಿದು.

Vijaya Karnataka 16 Aug 2019, 9:57 am
ಮಂಡ್ಯ: ಜಿಲ್ಲೆಯ ಮಳವಳ್ಳಿ ತಾಲೂಕಿನ ಹಲಗೂರು ಟೌನ್‌ನಲ್ಲಿ ಹಾಡಹಗಲೇ ವ್ಯಕ್ತಿಯೊಬ್ಬನನ್ನು ಅಮಾನುಷವಾಗಿ ಕೊಚ್ಚಿ ಕೊಲೆ ಮಾಡಿದ್ದ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕೆ.ಪರಶುರಾಮ್‌ ಹೇಳಿದರು.
Vijaya Karnataka Web Crime knife


ಹಲಗೂರಿನ ಬಿ.ಕೆ.ಪ್ರಾವಿಷನ್‌ ಸ್ಟೋರ್‌ನಲ್ಲಿದ್ದ ರಾಮನಗರ ಜಿಲ್ಲೆಯ ಕನಕಪುರ ತಾಲೂಕಿನ ಕಾಳೇಗೌಡನದೊಡ್ಡಿಯ ಚಿಕ್ಕದ್ಯಾವಯ್ಯ ಅವರ ಮಗ ರಾಮು ಎಂಬುವ ವ್ಯಕ್ತಿಯನ್ನು ಹಳೆವೈಷಮ್ಯದ ಹಿನ್ನಲೆಯಲ್ಲಿ ಆ.7 ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಲಾಗಿದೆ ಎಂದು ಮೃತರ ಸಹೋದರ ಸಿ.ಪ್ರದೀಪ್‌ ಹಲಗೂರು ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಈ ಕುರಿತು ತನಿಖೆ ನಡೆಸಿ ಹಲಗೂರು ಟೌನ್‌ ಆಚಾರ ಬೀದಿಯ ಆರ್‌.ಪ್ರಮೋದ್‌(20), ಕನಕಪುರ ಟೌನ್‌ನ ಕುವೆಂಪು ನಗರದ ರಾಹುಲ್‌ನಾಯಕ(21), ಹಲಗೂರು ಟೌನ್‌ ಇಂದಿರಾ ಕಾಲನಿಯ ಜನಾರ್ಧನ ಅಲಿಯಾಸ್‌ ಜಾನು(20), ಮಳವಳ್ಳಿ ತಾಲೂಕಿನ ಹೊಸಪುರ ಗ್ರಾಮದ ಜೆ.ದರ್ಶನ್‌(20), ಬಾಳೆಹೊನ್ನಿಗ ಗ್ರಾಮದ ಮುತ್ತುರಾಜ್‌ ಅಲಿಯಾಸ್‌ ಡಕಾಯಿತ(21), ಹಲಗೂರು ಟೌನ್‌ ಮುಸ್ಲಿಂ ಬ್ಲಾಕ್‌ ನಿವಾಸಿ ಖಾಲಿದ್‌ ಅಹಮ್ಮದ್‌(21) ಹಾಗೂ ಕನಕಪುರ ಟೌನ್‌ನ ಮೇಗಲ ಬೀದಿಯ ಸುಹಾಸ್‌(20) ಎಂಬಾತನನ್ನು ಚನ್ನಪಟ್ಟಣದಲ್ಲಿ ಆ.9 ರಂದು ಬಂಧಿಸಿದ್ದರು ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಪ್ರಕರಣದ ಆರೋಪಿಗಳ ಪತ್ತೆಗೆ ಪೊಲೀಸ್‌ ತಂಡ ರಚನೆ ಮಾಡಲಾಗಿತ್ತು. ಈ ತಂಡವು ಕೊಲೆ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಯಿತು ಎಂದು ಶ್ಲಾಘಿಸಿದರು.

ಏನಿದು ಪ್ರಕರಣ? ಜು.31ರಂದು ಕೀರ್ತಿ ಹಲಗೂರಿನ ಬಾರ್‌ನಲ್ಲಿ ಮದ್ಯಪಾನ ಮಾಡಿ ಬಿಲ್‌ ಪಾವತಿಸಿಲ್ಲ. ಈ ಕಾರಣಕ್ಕೆ ಬಾರ್‌ನಲ್ಲಿ ಕೆಲಸ ಮಾಡುತ್ತಿದ್ದ ಮಲ್ಲೇಶ ಎಂಬಾತ ಕೀರ್ತಿ ಮೇಲೆ ಹಲ್ಲೆ ನಡೆಸಿದ್ದರು. ಈ ವೇಳೆ ರಾಮು ಅಲ್ಲಿಯೇ ಇದ್ದು ಸಹಕಾರ ನೀಡಿದ್ದ ಎಂಬ ಹಿನ್ನೆಲೆಯಲ್ಲಿ ದ್ವೇಷ ಬೆಳೆದುಕೊಂಡಿತ್ತು. ಈ ನಡುವೆ ಗಾಯಗೊಂಡು ಮೈಸೂರಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಕೀರ್ತಿಯನ್ನು ನೋಡಲು ಸ್ನೇಹಿತರಾದ ಆರ್‌.ಪ್ರಮೋದ್‌, ರಾಹುಲ್‌ನಾಯಕ, ಜನಾರ್ಧನ ಬಂದಿದ್ದ ವೇಳೆ ಕೊಲೆ ಬಗ್ಗೆ ಮಾತುಕತೆ ನಡೆದಿದೆ. ಜತೆಗೆ ರಾಮುನನ್ನು ಕೊಲೆ ಮಾಡಿದ ಬಳಿಕ ಜಾಮೀನು ಕೊಡುತ್ತೇನೆಂದು ಪ್ರಚೋದನೆ ನೀಡಿದ್ದಾನೆ. ಈ ಹಿನ್ನೆಲೆಯಲ್ಲಿ ಕೊಲೆ ಮಾಡಿದ್ದಾರೆ ಎಂದು ತಿಳಿಸಿದರು.

ವಿಡಿಯೋ ನೆರವು

ಆರೋಪಿಗಳು ನಡೆಸಿದ ಕೊಲೆ ಸಂಚು ಹಾಗೂ ಕೊಲೆ ಮಾಡಿ ರಾಜಾರೋಷವಾಗಿ ಕೃತ್ಯಕ್ಕೆ ಬಳಸಿದ್ದ ಲಾಂಗ್‌ನ್ನು ಕೈಯಲ್ಲಿಡಿದು ಬೀಸುತ್ತಾ ಬರುವುದು ವೀಡಿಯೋದಲ್ಲಿ ಸ್ಪಷ್ಟವಾಗಿ ಗೋಚರಿಸಿದೆ. ಅಂದು ಕೃತ್ಯದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ಅಂತೆಯೇ, ಆ ವಿಡಿಯೋ ಆರೋಪಿಗಳನ್ನು ಬಂಧಿಸಲು ಸಹಕಾರಿಯಾಯಿತು. ಎರಡೇ ದಿನದಲ್ಲಿ ಬಂಧಿಸುವಲ್ಲಿಯೂ ವೀಡಿಯೋ ಪ್ರಮುಖವಾಗಿದೆ. ವೀಡಿಯೋ ಸಾಕ್ಷಿ ಆಧರಿಸಿ ಆರೋಪಿಗಳನ್ನು ಬಂಧಿಸಲಾಗಿದೆ. ಆದರೆ ವಿಡಿಯೋ ಮಾಡಿದವರ ಹೆಸರು ಹಾಗೂ ವಿಳಾಸವನ್ನು ಗೌಪ್ಯವಾಗಿಡಲಾಗಿದೆ.ವಿಡಿಯೋ ಮಾಡಿದವರಿಗೆ ಸೂಕ್ತ ರಕ್ಷಣೆ ನೀಡಲಾಗುವುದು, ಯಾವುದೇ ಕಾರಣಕ್ಕೂ ಭಯ ಪಡುವ ಅಗತ್ಯವಿಲ್ಲ ಎಂದು ಸ್ಪಷ್ಟಪಡಿಸಿದರು.

ರೌಡಿಸಂನಲ್ಲಿ ಉಳಿಯುವ ಆಸೆಯಿಂದ ಕೃತ್ಯ


ಕೀರ್ತಿ, ಪ್ರಮೋದ, ಜೆ.ದರ್ಶನ, ರಾಹುಲ್‌ನಾಯಕ ಎಂಬುವವರ ಮೇಲೆ ಈ ಹಿಂದೆಯೂ ಹಲವು ಪ್ರಕರಣ ದಾಖಲಾಗಿದೆ. ಇವರು ಸಾರ್ವಜನಿಕರಿಗೆ ಭಯ ಹುಟ್ಟಿಸಿ ರೌಡಿಸಂನಲ್ಲಿ ದೊಡ್ಡ ಹೆಸರು ಮಾಡುವ ಉದ್ದೇಶದಿಂದಲೇ ಇಂತಹ ಕೊಲೆ ಪ್ರಕರಣಗಳಲ್ಲಿ ಭಾಗಿಯಾಗಿದ್ದಾಗಿಯೂ ವಿಚಾರಣೆ ವೇಳೆ ಪೊಲೀಸರಿಗೆ ಹೇಳಿಕೆ ನೀಡುವುದು ಗೊತ್ತಾಗಿದೆ. ಎಲ್ಲ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದೆ. ಕಾನೂನಿನಡಿ ಸಾಕ್ಷಿಗಳನ್ನು ಕಲೆ ಹಾಕಿ ಇವರಿಗೆ ಶಿಕ್ಷೆ ಕೊಡಿಸಲು ಕ್ರಮ ವಹಿಸಲಾಗಿದೆ ಎಂದು ತಿಳಿಸಿದರು.

ಜಿಲ್ಲೆಯಲ್ಲಿ ರೌಡಿಶೀಟರ್‌ಗಳ ಬಗ್ಗೆ ಗಮನ ಹರಿಸಲಾಗಿದೆ. ಕೊಲೆ, ಸುಲಿಗೆ, ಮಾರಾಣಾಂತಿಕ ಕೃತ್ಯಗಳಲ್ಲಿ ಭಾಗವಹಿಸಿದ ವ್ಯಕ್ತಿಗಳ ವಿರುದ್ಧ ಗಡಿಪಾರು ಮಾಡಲು ಜಿಲ್ಲಾಧಿಕಾರಿ ಅವರೊಂದಿಗೂ ಚರ್ಚೆ ನಡೆಸಲಾಗಿದೆ. ಜನರು ಆತಂಕ ಪಡುವ ಅವಶ್ಯಕತೆಯಿಲ್ಲ- ಕೆ.ಪರಶುರಾಮ್‌, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ, ಮಂಡ್ಯ.

ಮಂಡ್ಯ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಎಸ್ಪಿ ಕೆ.ಪರಶುರಾಮ್‌ ಮಾತನಾಡಿದರು. ಡಿವೈಎಸ್ಪಿ ಶೈಲೇಂದ್ರ, ಸಿಪಿಐ ಎಂ.ಮಂಜುನಾಥ ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ