ಭಾರತೀನಗರ: ಜನ ಜಾನುವಾರುಗಳಿಗೆ ಅನುಕೂಲವಾಗುವಂತೆ ಸಂಕ್ರಾಂತಿ ಹಬ್ಬಕ್ಕೆ ನಾಲೆಗೆ ನೀರು ಹರಿಸಬೇಕು. ಬರ ಪರಿಹಾರ ವಿತರಣೆಗೆ ಶೀಘ್ರ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ರೈತ ಸಂಘದ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಹಲಗೂರು ರಸ್ತೆ ವಿಶ್ವೇಶ್ವರಯ್ಯ ಪ್ರತಿಮೆ ಬಳಿ ಜಮಾಯಿಸಿದ ಕಾರ್ಯಕರ್ತರು ಸರಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಸಂಕ್ರಾಂತಿ ಹಬ್ಬದಲ್ಲಿ ರಾಸುಗಳನ್ನು ಸಿಂಗರಿಸುವುದು ವಾಡಿಕೆ. ಆದರೆ, ನಾಲೆಯಲ್ಲಿ ನೀರಿಲ್ಲ. ಹಬ್ಬಕ್ಕೆ ನೀರು ಹರಿಸಿದರೆ ಜಾನುವಾರುಗಳಿಗೆ ಅನುಕೂಲವಾಗಲಿದೆ. ಹಾಗಾಗಿ ನಾಲೆಗಳಲ್ಲಿ ನೀರು ಹರಿಸಬೇಕೆಂದು ಆಗ್ರಹಿಸಿದರು.
ಸುಪ್ರೀಂಕೋರ್ಟ್ ತೀರ್ಪಿನಿಂತೆ ತಮಿಳುನಾಡಿಗೆ ನೀರು ಹರಿಸಬಾರದು. ಸರಕಾರ ಸಮರೋಪಾದಿಯಲ್ಲಿ ಬರಪರಿಹಾರ ಕಾರ್ಯಗಳನ್ನು ಕೈಗೊಳ್ಳಬೇಕು ಎಂದು ಮನವಿ ಮಾಡಿದರು.
ಚಾಂಷುಗರ್ಸ್ಗೆ ಮುತ್ತಿಗೆ:
ಚಾಮುಂಡೇಶ್ವರಿ ಸಕ್ಕರೆ ಕಾರ್ಖಾನೆಗೆ ತೆರಳಿದ ಕಾರ್ಯಕರ್ತರು ಚಾಂಷುಗರ್ಸ್ ಆಡಳಿತ ಕಚೇರಿಗೆ ಮುತ್ತಿಗೆ ಹಾಕಿ ಕಬ್ಬು ಪೂರೈಕೆ ಬಾಕಿ ಹಣವನ್ನು ನೀಡಬೇಕು ಎಂದು ಒತ್ತಾಯಿಸಿದರು. ಟನ್ ಕಬ್ಬಿಗೆ 2,500ರೂ ಬೆಲೆ ನಿಗದಿ ಮಾಡಿದ್ದರೂ ಕಾರ್ಖಾನೆಯವರು 2,300ರೂ ನೀಡುತ್ತಿದ್ದಾರೆ. ಕೂಡಲೇ ರೈತರಿಗೆ 200 ರೂ. ಉಳಿದ ಹಣ ನೀಡಬೇಕು. ಇಲ್ಲವಾದಲ್ಲಿ ಪ್ರತಿಭಟನೆ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.
ರಾಜ್ಯ ರೈತ ಸಂಘದ ಜಿಲ್ಲಾ ಉಪಾಧ್ಯಕ್ಷ ಮಹೇಂದ್ರ, ತಾಲೂಕು ಪ್ರಧಾನ ಕಾರ್ಯದರ್ಶಿ ರವಿಕುಮಾರ್, ಕೆ.ಎಂದೊಡ್ಡಿ ಘಟಕದ ಅಧ್ಯಕ್ಷ ಪುಟ್ಟಸ್ವಾಮಿ, ಚಿಕ್ಕಣ್ಣ, ಚಿಕ್ಕಮರಿ, ಮಾದೇಗೌಡ, ಸ್ವಾಮಿ, ರಮೇಶ್, ಸಿದ್ದೇಗೌಡ, ಕೆ.ಸಿ.ಮಾದೇಗೌಡ, ನಂಜುಂಡೇಗೌಡ, ಕಾಡೇಗೌಡÜ ಇದ್ದರು.