ಆ್ಯಪ್ನಗರ

ಕಂದಾಚಾರ ಹೊತ್ತು ತಿರುಗುವ ರಾಜಕಾರಣಿಗಳು: ಟೀಕೆ

ಲೋಕಸಭೆ, ವಿಧಾನಸಭೆಗಳಲ್ಲಿರುವ ಕೊಳ್ಳಿ ದೆವ್ವ (ರಾಜಕಾರಣಿಗಳು)ಗಳನ್ನು ಹಾಗೂ ಸರಕಾರಿ ವ್ಯವಸ್ಥೆಯನ್ನು ಸರಿಪಡಿಸಲು ಪ್ರಜ್ಞಾವಂತ ಸಮಾಜ ಎಚ್ಚೆತ್ತುಕೊಳ್ಳಬೇಕು ಎಂದು ಲೇಖಕ ಡಾ.ಮೊಗಳ್ಳಿ ಗಣೇಶ್‌ ಹೇಳಿದರು.

Vijaya Karnataka 10 Jun 2018, 5:00 am
ಡಾ.ಮೊಗಳ್ಳಿ ಗಣೇಶ್‌ಗೆ ಡಾ.ಬೆಸಗರಹಳ್ಳಿ ರಾಮಣ್ಣ ಕಥಾಸಂಕಲನ ಪ್ರಶಸ್ತಿ ಪ್ರದಾನ
Vijaya Karnataka Web mandya dr besagarahally ramanna prathishtana kathasankalana award
ಕಂದಾಚಾರ ಹೊತ್ತು ತಿರುಗುವ ರಾಜಕಾರಣಿಗಳು: ಟೀಕೆ


ಮಂಡ್ಯ:
ಲೋಕಸಭೆ, ವಿಧಾನಸಭೆಗಳಲ್ಲಿರುವ ಕೊಳ್ಳಿ ದೆವ್ವ (ರಾಜಕಾರಣಿಗಳು)ಗಳನ್ನು ಹಾಗೂ ಸರಕಾರಿ ವ್ಯವಸ್ಥೆಯನ್ನು ಸರಿಪಡಿಸಲು ಪ್ರಜ್ಞಾವಂತ ಸಮಾಜ ಎಚ್ಚೆತ್ತುಕೊಳ್ಳಬೇಕು ಎಂದು ಲೇಖಕ ಡಾ.ಮೊಗಳ್ಳಿ ಗಣೇಶ್‌ ಹೇಳಿದರು.

ನಗರದ ನಾಲ್ವಡಿ ಕೃಷ್ಣರಾಜ ಒಡೆಯರ್‌ ಕಲಾಮಂದಿರದಲ್ಲಿ ಡಾ.ಬೆಸಗರಹಳ್ಳಿ ರಾಮಣ್ಣ ಪ್ರತಿಷ್ಠಾನದಿಂದ ಶನಿವಾರ ಆಯೋಜಿಸಿದ್ದ ಸಮಾರಂಭದಲ್ಲಿ 2017ನೇ ಸಾಲಿನ ಡಾ.ಬೆಸಗರಹಳ್ಳಿ ರಾಮಣ್ಣ ಕಥಾಸಂಕಲನ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಅವರು, ''ಪ್ರಜಾಪ್ರಭುತ್ವ ವ್ಯವಸ್ಥೆಯೊಳಗಿರುವ ಕತ್ತಲೆಯನ್ನೇ ತೊಲಗಿಸಬೇಕಾದ ಸ್ಥಳದಲ್ಲಿ ಅರ್ಹರಿಗಿಂತ ಅನರ್ಹರೇ ಹೆಚ್ಚು ಕುಳಿತಿದ್ದಾರೆ,'' ಎಂದು ಟೀಕಿಸಿದರು.

''ಕಂದಾಚಾರಗಳನ್ನು ತಲೆ ಮೇಲೆ ಹೊತ್ತು ತಿರುಗುತ್ತಿರುವ ರಾಜಕಾರಣಿಗಳು ಇಡೀ ವ್ಯವಸ್ಥೆಯನ್ನು ಹೇಸಿಗೆ ಮಾಡಿ ಬಿಟ್ಟಿದ್ದಾರೆ. ಇಂತಹ ಅಸಹನೀಯ ವಾತಾವರಣದಿಂದ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಕಾಪಾಡುವುದು ಹೇಗೆಂಬ ಬಗ್ಗೆ ಎಲ್ಲರೂ ಆಲೋಚಿಸಬೇಕಿದೆ. ಅದಕ್ಕಾಗಿ ಪ್ರಜ್ಞಾವಂತ ಸಮಾಜ ಕತ್ತಲಿನ ವಿರುದ್ಧ ಸಾಹಿತ್ಯ ಸಂವೇದನೆಯ ಹಣತೆಯನ್ನು ಬೆಳಗಿಸಬೇಕು,'' ಎಂದು ಹುರಿದುಂಬಿಸಿದರು.

''ಕುವೆಂಪು, ದ.ರಾ.ಬೇಂದ್ರೆ, ಜಿ.ಪಿ.ರಾಜರತ್ನಂ, ವಿ.ಕೃ.ಗೋಕಾಕ್‌, ಮಾಸ್ತಿ ವೆಂಕಟೇಶ ಅಯ್ಯಂಗಾರ್‌ ಸೇರಿದಂತೆ ಅನೇಕ ಸಾಹಿತಿಗಳು ಕನ್ನಡ ಕಥಾ ಜಗತ್ತಿನಲ್ಲಿ ದಿವ್ಯ ಹಣತೆಗಳಾಗಿದ್ದಾರೆ. ಅವೆಲ್ಲವೂ ನಮಗೆ ದಾರಿದೀಪವಾಗಿ ಪರಂಪರೆಯನ್ನು ಉಳಿಸುವ ಕೆಲಸಕ್ಕೆ ನಾವೆಲ್ಲರೂ ತೊಡಗಿಸಿಕೊಳ್ಳಬೇಕಿದೆ. ಪರಂಪರೆಯಲ್ಲಿ ಸಾಗಿ ಬಂದ ಪ್ರೀತಿ-ವಿಶ್ವಾಸವನ್ನು ಉಳಿಸಿಕೊಂಡು ಸಾಹಿತ್ಯದ ಬೆಳಕಿನೊಂದಿಗೆ ಕತ್ತಲೆಯನ್ನು ಸರಿಸಬೇಕಿದೆ. ಆ ಮೂಲಕ ವ್ಯವಸ್ಥೆಯೊಳಗಿನ ಜನರಿಗೆ ನಿಜವಾದ ಬೆಳಕನ್ನು ತೋರಿಸುವ ದಾರಿ ದೀವಿಗೆಯಾಗಿ ಸಾಹಿತ್ಯದ ಪ್ರಖರತೆಯನ್ನು ಹೆಚ್ಚಿಸುವ ಅವಶ್ಯಕತೆ ಇದೆ,'' ಎಂದು ಅಭಿಪ್ರಾಯಪಟ್ಟರು.

ವಿಮರ್ಶಕಿ ಧಾರವಾಡದ ಡಾ.ವಿನಯಾ ವಕ್ಕುಂದ ಮಾತನಾಡಿ, ''ನಾವಿಂದು ರೋಗಗ್ರಸ್ತ ಸಮಾಜದಲ್ಲಿದ್ದೇವೆ. ಸಂವಿಧಾನದ ಅನುಸಾರ ಪ್ರಮಾಣ ಸ್ವೀಕರಿಸಿದವರೇ ಸಂವಿಧಾನ ವಿರೋಧಿ ನಡೆ ಅನುಸರಿಸುತ್ತಿದ್ದಾರೆ. ಪ್ರಜಾಸತ್ತಾತ್ಮಕ ವಿರೋಧಿ ಮಾತುಗಳನ್ನಾಡುತ್ತಿದ್ದಾರೆ. ಇವರೆಲ್ಲರೂ ಸಮಾಜದಲ್ಲಿರುವುದಕ್ಕೆ ಯೋಗ್ಯರಲ್ಲ. ಇಂತಹವರನ್ನು ಹಿಡಿದು ಜೈಲಿಗೆ ಹಾಕಬೇಕು,'' ಎಂದು ಕಿಡಿಕಾರಿದರು.

''ಮನುಷ್ಯ ಇಂದು ದರ್ಪ, ದುರಹಂಕಾರದಿಂದ ಬದುಕುತ್ತಿದ್ದಾನೆ. ಸಮಾಜದ ವ್ಯವಸ್ಥೆಯಲ್ಲಿ ಬದಲಾವಣೆ ತರುವ ಶಕ್ತಿ ಧರ್ಮ ಮತ್ತು ರಾಜಕಾರಣಕ್ಕಿದೆ. ಆದರೆ, ಇವೆರಡೂ ಇಂದು ಅನೈತಿಕ ಮಾರ್ಗ ಹಿಡಿದಿವೆ. ಅದನ್ನು ಸರಿದಾರಿಗೆ ತರುವ ಶಕ್ತಿ ಸಾಹಿತ್ಯ ಮತ್ತು ಸಂಸ್ಕೃತಿಗೆ ಇದೆ. ಹೆಣ್ಣನ್ನು ಸಮಾಜ ಇಂದು ಭೋಗದ ವಸ್ತುವಾಗಷ್ಟೇ ಕಾಣುತ್ತಿದೆ. ಆಕೆಯನ್ನು ಬೇರೆ ದೃಷ್ಟಿಯಿಂದ ನೋಡುವ, ಗೌರವಿಸುವ, ಸತ್ಕರಿಸುವ ಸಂಸ್ಕೃತಿ ಮಾಯವಾಗಿದೆ. ಹೆಣ್ಣಿನ ಮೇಲೆ ನಡೆಯುವ ಶೋಷಣೆ, ದೌರ್ಜನ್ಯವನ್ನು ಡಾ.ಬೆಸಗರಹಳ್ಳಿ ರಾಮಣ್ಣ ಅವರು ತಮ್ಮ ಕಥೆಗಳಲ್ಲಿ ಚಿತ್ರಿಸಿಕೊಟ್ಟಿದ್ದಾರೆ. ಸ್ತ್ರೀಪರವಾದ ನಿಲುವನ್ನು ಪ್ರತಿಪಾದಿಸಿದ್ದಾರೆ,'' ಎಂದು ಸ್ಮರಿಸಿದರು.

ಇದೇ ವೇಳೆ ಕವಿ ಪ್ರೊ.ಎಚ್‌.ಎಸ್‌.ಶಿವಪ್ರಕಾಶ್‌ ಅವರು 'ಧಿದೇವರ ದಾರಿ' ಕಥಾಸಂಕಲನ ಕರ್ತೃ ಡಾ.ಮೊಗಳ್ಳಿ ಗಣೇಶ್‌ ಅವರಿಗೆ 2017ನೇ ಸಾಲಿನ ಪ್ರಶಸ್ತಿ ನೀಡಿ ಗೌರವಿಸಿದರು. ಡಾ.ಬೆಸಗರಹಳ್ಳಿ ರಾಮಣ್ಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಕೆ.ಪುಟ್ಟಸ್ವಾಮಿ ಅಧ್ಯಕ್ಷತೆ ವಹಿಸಿದ್ದರು. ಕೃತಿ ಕುರಿತು ಬೆಂಗಳೂರಿನ ಮಹಾರಾಣಿ ಅಮ್ಮಣ್ಣಿ ಕಾಲೇಜಿನ ಪ್ರಾಧ್ಯಾಪಕ ಡಾ.ಟಿ.ಎಸ್‌.ರಘುನಾಥ್‌ ಮಾತನಾಡಿದರು. ಪ್ರತಿಷ್ಠಾನದ ಅಜೀವ ಪೋಷಕಿ ಡಿ.ಪಿ.ರಾಜಮ್ಮ ರಾಮಣ್ಣ, ರವಿಕಾಂತೇಗೌಡ ಭಾಗವಹಿಸಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ