ಆ್ಯಪ್ನಗರ

ಮಂಡ್ಯ: ಕೆಆರ್‌ಎಸ್‌, ಕಬಿನಿಗೆ ಹೆಚ್ಚಿದ ಒಳ ಹರಿವು

ಕೊಡಗು ಮತ್ತು ವೈನಾಡು ಪ್ರದೇಶದಲ್ಲಿ ಧಾರಾಕಾರ ಮಳೆ ಸುರಿಯುತ್ತಿರುವುದರಿಂದ ಕೆಆರ್‌ಎಸ್‌ ಹಾಗೂ ಕಬಿನಿ ಜಲಾಶಯದ ಒಳ ಹರಿವಿನ ಪ್ರಮಾಣ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗಿದೆ.

Vijaya Karnataka 11 Jun 2018, 5:00 am
ಮಂಡ್ಯ/ಎಚ್‌.ಡಿ.ಕೋಟೆ: ಕೊಡಗು ಮತ್ತು ವೈನಾಡು ಪ್ರದೇಶದಲ್ಲಿ ಧಾರಾಕಾರ ಮಳೆ ಸುರಿಯುತ್ತಿರುವುದರಿಂದ ಕೆಆರ್‌ಎಸ್‌ ಹಾಗೂ ಕಬಿನಿ ಜಲಾಶಯದ ಒಳ ಹರಿವಿನ ಪ್ರಮಾಣ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗಿದೆ.
Vijaya Karnataka Web mandya increased inner flow to krs kabini
ಮಂಡ್ಯ: ಕೆಆರ್‌ಎಸ್‌, ಕಬಿನಿಗೆ ಹೆಚ್ಚಿದ ಒಳ ಹರಿವು


ಗರಿಷ್ಠ 124.80 ಅಡಿಯ ಕೆಆರ್‌ಎಸ್‌ ಡ್ಯಾಂ ನೀರಿನ ಮಟ್ಟ 78 ಅಡಿ ತಲುಪಿದೆ. ಕಳೆದೊಂದು ವಾರದಿಂದ ಸರಾಸರಿ 1500 ಕ್ಯೂಸೆಕ್‌ ಒಳ ಹರಿವಿತ್ತು. ಈ ಪ್ರಮಾಣ ಭಾನುವಾರ ಬೆಳಗ್ಗೆ 2,037 ಕ್ಯೂಸೆಕ್‌ಗೆ ಹೆಚ್ಚಿದೆ. 308 ಕ್ಯೂಸೆಕ್‌ ನೀರನ್ನು ಮಾತ್ರ ಜಲಾಶಯದಿಂದ ಹೊರಗೆ ಬಿಡಲಾಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 470 ಕ್ಯೂಸೆಕ್‌ ಒಳ ಹರಿವು, 581 ಕ್ಯೂಸೆಕ್‌ ಒಳ ಹರಿವಿನೊಂದಿಗೆ ಜಲಾಶಯದ ನೀರಿನ ಮಟ್ಟ 67.67 ಅಡಿ ನೀರಿತ್ತು.

ಸ್ಯಾಂಡರ್ಡ್‌ ಗೇಜ್‌ನ ಮಾಹಿತಿ ಪ್ರಕಾರ ಜಲಾಶಯಕ್ಕೆ ಕಾವೇರಿ ನದಿ ಮೂಲಕ 6780 ಕ್ಯೂಸೆಕ್‌, ಹೇಮಾವತಿ ನದಿಯಿಂದ 575 ಕ್ಯೂಸೆಕ್‌ ಹಾಗೂ ಲಕ್ಷ್ಮಣತೀರ್ಥದಿಂದ 6 ಕ್ಯೂಸೆಕ್‌ ನೀರು ಬರುತ್ತಿದೆ. ಹೀಗಾಗಿ ಸೋಮವಾರ ಬೆಳಗ್ಗೆ ವೇಳೆಗೆ ಜಲಾಶಯದ ಒಳ ಹರಿವಿನ ಪ್ರಮಾಣ 8 ಸಾವಿರ ಕ್ಯೂಸೆಕ್‌ ದಾಟುವ ಹಾಗೂ ನೀರಿನ ಮಟ್ಟ 80 ಅಡಿ ತಲುಪುವ ಸಾಧ್ಯತೆಯಿದೆ.

ಎಚ್‌.ಡಿ.ಕೋಟೆ ವರದಿ: ಕೇರಳ ರಾಜ್ಯದ ವೈನಾಡು ಜಿಲ್ಲೆಯಲ್ಲಿ ಎರಡು ದಿನಗಳಿಂದ ಸತತವಾಗಿ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ಎಚ್‌.ಡಿ.ಕೋಟೆ ತಾಲೂಕಿನ ಬೀಚನಹಳ್ಳಿ ಗ್ರಾಮದಲ್ಲಿರುವ ಕಬಿನಿ ಜಲಾಶಯಕ್ಕೆ ಒಳ ಹರಿವಿನ ಪ್ರಮಾಣ ದಿಢೀರ್‌ ಹೆಚ್ಚಿದೆ.

ಶನಿವಾರ ಸಂಜೆ 6 ಗಂಟೆಗೆ 1108 ಕ್ಯೂಸೆಕ್‌ ಇದ್ದ ಒಳ ಹರಿವಿನ ಪ್ರಮಾಣ ಭಾನುವಾರ ಸಂಜೆ 6ಕ್ಕೆ 21 ಸಾವಿರ ಕ್ಯೂಸೆಕ್‌ಗೆ ಏರಿತ್ತು. ಹಾಗಾಗಿ ಜಲಾಶಯದ ಮಟ್ಟ ಒಂದೇ ದಿನದಲ್ಲಿ 2259 ಅಡಿಯಿಂದ 2264 ಅಡಿಗೆ ಏರಿದೆ. ಜಲಾಶಯದ ಗರಿಷ್ಠ ಮಟ್ಟ 2284 ಅಡಿಯಿದೆ. ಕೇವಲ 100 ಕ್ಯೂಸೆಕ್‌ ನೀರು ಮಾತ್ರ ಹೊರ ಬಿಡಲಾಗುತ್ತಿದೆ.

ಜತೆಗೆ ಜಲಾಶಯ ವ್ಯಾಪ್ತಿಯ ನಾಗರಹೊಳೆ ಮತ್ತು ಬಂಡೀಪುರ ರಾಷ್ಟ್ರೀಯ ಉದ್ಯಾನ ವ್ಯಾಪ್ತಿಯಲ್ಲೂ ಮುಂಗಾರು ಮಳೆ ಸತತವಾಗಿ ಬೀಳುತ್ತಿರುವುದರಿಂದ ಜಲಾಶಯಕ್ಕೆ ಮತ್ತಷ್ಟು ಒಳ ಹರಿವು ಹೆಚ್ಚಾಗುವ ಸಂಭವ ಇದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ