ಆ್ಯಪ್ನಗರ

ಬೀದಿದೀಪಗಳ ಖರೀದಿಯಲ್ಲಿ ಅವ್ಯವಹಾರ, ನುಂಗಿದ ಹಣವನ್ನು ಪಿಡಿಒಗಳಿಂದ ಕಕ್ಕಿಸಿದ ಸಿಇಒ!

ಬೂದನೂರು ಗ್ರಾಪಂ ಕಚೇರಿಯಲ್ಲಿ 2016-17ನೇ ಸಾಲಿನಲ್ಲಿ ಮೂವರು ಪಿಡಿಒಗಳು ಬೀದಿದೀಪಗಳಿಗೆ ಸಿಎಫ್‌ಎಲ್‌ ಬಲ್ಪ್‌ ಖರೀದಿಸುವಾಗ ಹೆಚ್ಚುವರಿಯಾಗಿ 50,138 ರೂ. ಪಾವತಿಸಿದ್ದರು. ಇದನ್ನು ಬಡ್ಡಿ ಸಮೇತ ವಸೂಲಿ ಮಾಡಲು ಸಿಇಒ ಆದೇಶ ನೀಡಿದ್ದಾರೆ.

Vijaya Karnataka 5 Aug 2020, 10:54 pm
ಮಂಡ್ಯ: ತಾಲೂಕಿನ ಬೂದನೂರು ಗ್ರಾಮ ಪಂಚಾಯಿತಿಯಲ್ಲಿ ಕರ್ತವ್ಯದಲ್ಲಿದ್ದಾಗ ಬೀದಿ ದೀಪಗಳ ಖರೀದಿಯಲ್ಲಿ ಅವ್ಯವಹಾರ ನಡೆಸಿದ್ದ ಮೂವರು ಪಿಡಿಒಗಳಿಂದ ಅವರು ಹೆಚ್ಚುವರಿಯಾಗಿ ಪಾವತಿಸಿದ್ದ ಹಣವನ್ನು ಬಡ್ಡಿ ಸಹಿತ ವಸೂಲಿ ಮಾಡುವಂತೆ ಮಂಡ್ಯ ಜಿಲ್ಲಾ ಪಂಚಾಯಿತಿ ಸಿಇಒ ಆದೇಶ ಹೊರಡಿಸಿದ್ದಾರೆ. ಜತೆಗೆ, ಹಾಲಿ ಕರ್ತವ್ಯದಲ್ಲಿರುವ ಇಬ್ಬರು ಪಿಡಿಒಗಳ ಒಂದು ವರ್ಷದ ವೇತನ ಬಡ್ತಿಯನ್ನು ಸಂಚಿತ ರಹಿತವಾಗಿ ತಡೆಹಿಡಿದಿದ್ದಾರೆ.
Vijaya Karnataka Web Streetlight
ಸಾಂದರ್ಭಿಕ ಚಿತ್ರ


ಹತ್ತು ದಿನಗಳ ಹಿಂದಷ್ಟೇ ಬೆಂಗಳೂರಿಗೆ ವರ್ಗಾವಣೆಯಾಗಿರುವ ಈ ಹಿಂದಿನ ಸಿಇಒ ಕೆ.ಯಾಲಕ್ಕಿಗೌಡ ಅವರು ವರ್ಗಾವಣೆಗೂ ಮುನ್ನ ಜು.23ರಂದು ಈ ಆದೇಶ ಹೊರಡಿಸಿದ್ದಾರೆ. ಅದರಂತೆ ಬೂದನೂರು ಗ್ರಾ.ಪಂ.ನಲ್ಲಿ ಪಿಡಿಒಗಳಾಗಿ ಕಾರ್ಯ ನಿರ್ವಹಿಸಿದ್ದ ಹಾಲಿ ದುದ್ದ ಗ್ರಾ.ಪಂ. ಪಿಡಿಒ ಕೆ.ಸೌಭಾಗ್ಯಲಕ್ಷ್ಮೀ , ಹಲ್ಲೇಗೆರೆ ಪಿಡಿಒ ಎ.ಎಚ್.ಕಲಾ, ಈಗ ನಿವೃತ್ತಿಯಾಗಿರುವ ಕೆ.ಎಂ.ಶಿವಣ್ಣ ಅವರು ತಾವು ಅಕ್ರಮವೆಸಗಿ ಹೆಚ್ಚುವರಿಯಾಗಿ ಪಾವತಿಸಿದ್ದ ಹಣವನ್ನು ಇದೀಗ ಸ್ವಂತವಾಗಿ ಪಾವತಿಸಬೇಕಿದೆ.

ಬೂದನೂರು ಗ್ರಾಪಂ ಕಚೇರಿಯಲ್ಲಿ 2016-17ನೇ ಸಾಲಿನಲ್ಲಿ ಈ ಮೂವರು ಬೀದಿದೀಪಗಳಿಗೆ ಸಿಎಫ್‌ಎಲ್‌ ಬಲ್ಪ್‌ ಖರೀದಿಸುವಾಗ ಹೆಚ್ಚುವರಿಯಾಗಿ 50,138 ರೂ. ಪಾವತಿಸಿದ್ದಾರೆಂದು ನಿಕಟಪೂರ್ವ ಗ್ರಾ.ಪಂ. ಸದಸ್ಯ ಬಿ.ಕೆ.ಸತೀಶ್ ಅವರು ಜಮಾಬಂಧಿ ಕಾರ್ಯಕ್ರಮದಲ್ಲಿ ದೂರಿದ್ದರು. ಜತೆಗೆ, ಜಿ.ಪಂ. ಸಿಇಒ ಅವರಿಗೂ ದೂರು ನೀಡಿದ್ದರು. ಅಲ್ಲದೆ, ಸತೀಶ್ ಅವರ ದೂರಿನ ಮೇರೆಗೆ ಜಮಾಬಂಧಿ ಅಕಾರಿಯಾಗಿದ್ದ ಪಶುಪಾಲನಾ ಇಲಾಖೆಯ ಸಹಾಯಕ ನಿರ್ದೇಶಕ ವಿವೇಕಾನಂದ ಅವರು ಜಿಪಂ ಸಿಇಒ ಅವರಿಗೆ ಹೆಚ್ಚಿನ ತನಿಖೆಗೆ ಪತ್ರ ಬರೆದಿದ್ದರು.

ಈ ಹಿನ್ನಲೆಯಲ್ಲಿ ಹಲವು ವಿಚಾರಣೆ ಬಳಿಕ ಜಂಟಿ ಇಲಾಖಾ ವಿಚಾರಣೆ ನಡೆಸಿ ಹೆಚ್ಚುವರಿಯಾಗಿ ಪಾವತಿಯಾಗಿದ್ದ 50,138ರೂ. ಗಳಿಗೆ ಶೇ.8ರ ದರದಲ್ಲಿ 11,658ರೂ. ಬಡ್ಡಿ ಸೇರಿದಂತೆ 61,796ರೂ.ಗಳನ್ನು ಮೂವರು ಪಿಡಿಒಗಳು ಪಾವತಿಸುವಂತೆ ಆದೇಶಿಸಿದ್ದಾರೆ. ಸೌಭಾಗ್ಯಲಕ್ಷ್ಮಿ ಅವರು 39,385ರೂ., ಕಲಾ ಅವರು 4,190ರೂ. ಪಾವತಿಸಬೇಕಿದೆ. ಆದರೆ ಶಿವಣ್ಣ ಅವರು ಸಿಸಿಎ ನಿಯಮಗಳನ್ವಯ ವಿಚಾರಣೆಗೆ ಸರಕಾರದಿಂದ ಅನುಮತಿ ಪಡೆದು ಬೂದನೂರು ಗ್ರಾ.ಪಂ.ಗೆ 18,221ರೂ. ಪಾವತಿಸಿದ್ದು, ಉಳಿಕೆ 4851ರೂ.ಗಳನ್ನು ಪಾವತಿಸಬೇಕಿದೆ.

ಹೆಚ್ಚುವರಿ ಹಣ ಪಾವತಿಸುವಂತೆ ಜಿ.ಪಂ. ಸಿಇಒ ನೀಡಿರುವ ಆದೇಶ



ಸಾರ್ವಜನಿಕರ ತೆರಿಗೆ ಹಣ ಉಳಿಸಲು ನಾನು ಮಾಡಿದ ಹೋರಾಟಕ್ಕೆ ಗೆಲುವು ಸಿಕ್ಕಿರುವುದು ಸಂತಸ ತಂದಿದೆ. ಕೇವಲ ಒಂದು ವರ್ಷದ ಅವ್ಯವಹಾರವನ್ನು ತನಿಖೆಗೆ ಒಳಪಡಿಸಿದ್ದು, ಕಳೆದ 10 ವರ್ಷಗಳ ಖರೀದಿ ಬಗ್ಗೆ ತನಿಖೆ ನಡೆಸಬೇಕು. ಜಿಲ್ಲೆಯ ಇತರ ಗ್ರಾ.ಪಂ.ಗಳಲ್ಲೂ ಖರೀದಿ ಅಕ್ರಮಗಳಿಗೆ ಕಡಿವಾಣ ಹಾಕಬೇಕು ಎಂದು ಬೂದನೂರಿನ ದೂರುದಾರ ಬಿ.ಕೆ.ಸತೀಶ್‌ ಹೇಳಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ