ಮದ್ದೂರು: ಬೆಳೆ ನಷ್ಟ ಪರಿಹಾರ ಸೇರಿದಂತೆ ನಾನಾ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ರಾಜ್ಯ ರೈತ ಸಂಘದ ತಾಲೂಕು ಘಟಕದ ಪದಾಧಿಕಾರಿಗಳು ತಾಲೂಕು ಕಚೇರಿಗೆ ಮುತ್ತಿಗೆ ಹಾಕಿ ಸೋಮವಾರ ಪ್ರತಿಭಟನೆ ನಡೆಸಿದರು.
ತಾಲೂಕು ಕಚೇರಿ ಬಳಿ ಜಮಾಯಿಸಿದ ಪ್ರತಿಭಟನಾಕಾರರು ಕೇಂದ್ರ ಹಾಗೂ ರಾಜ್ಯ ಸರಕಾರದ ವಿರುದ್ಧ ಘೋಷಣೆ ಕೂಗಿದರು. ವಿಸಿ ನಾಲಾ ಕೊನೆಭಾಗಕ್ಕೆ ನೀರು ಹರಿಸುವ ಮೂಲಕ ಕೆರೆಕಟ್ಟೆಗಳ ಉಳಿವಿಗೆ ಮುಂದಾಗಬೇಕು. ಸಂಕ್ರಾಂತಿ ಹಬ್ಬದ ವೇಳೆ ಜಾನುವಾರುಗಳನ್ನು ಶುಚಿಗೊಳಿಸಲು ನೀರಿನ ಅಭಾವವಿದ್ದು ಕೆರೆ ಕಟ್ಟೆಗಳನ್ನು ತುಂಬಿಸಬೇಕು ಎಂದು ಆಗ್ರಹಿಸಿದರು.
ಜ.11ರೊಳಗೆ ಕೆಆರ್ಎಸ್ ಅಣೆಕಟ್ಟೆಯಿಂದ ವಿಸಿ ನಾಲೆಗೆ ನೀರು ಬಿಡುಗಡೆ ಮಾಡದಿದ್ದಲ್ಲಿ ಕಾವೇರಿ ನೀರಾವರಿ ನಿಗಮದ ಕಚೇರಿಗಳಿಗೆ ರೈತರೊಂದಿಗೆ ಬೀಗ ಜಡಿದು ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಕಾರ್ಯಕರ್ತರ ಸಭೆ :
ಪ್ರತಿಭಟನೆಗೂ ಮುನ್ನಾ ಪಟ್ಟಣದ ಪ್ರವಾಸಿಮಂದಿರದಲ್ಲಿ ನಡೆದ ಕಾರ್ಯಕರ್ತರ ಸಭೆ ವೇಳೆ ರೈತ ಮುಖಂಡ, ಕೃಷಿ ತಜ್ಞ, ಹೋರಾಟಗಾರ ಪ್ರೊ.ನಂಜುಂಡಸ್ವಾಮಿ ಅವರ ಪ್ರತಿಮೆ ಅನಾವರಣ ಕಾರ್ಯಕ್ರಮ ಮದ್ದೂರು, ಮಳವಳ್ಳಿ ಹೆದ್ದಾರಿಯ ಟಿಎಪಿಸಿಎಂಎಸ್ ಗೋದಾಮು ಬಳಿ ಫೆ.13ರಂದು ನಿಗದಿಯಾಗಿದ್ದು ಪ್ರತಿಮೆ ನಿರ್ಮಾಣ ಸಂಬಂಧ ಅಗತ್ಯ ಧನ ಸಹಾಯಕ್ಕೆ ನಿರ್ಣಯ ಕೈಗೊಳ್ಳಲಾಯಿತು.
ಸರಕಾರ ಟನ್ ಕಬ್ಬಿಗೆ 2,500 ರೂ. ಎಫ್ಆರ್ಪಿ ನಿಗದಿಗೊಳಿಸಿದ್ದು ಇದನ್ನು ಪಾಲಿಸದ ಸಕ್ಕರೆ ಕಾರ್ಖಾನೆಗಳ ವಿರುದ್ಧ ಜಿಲ್ಲಾಡಳಿತ ಕ್ರಮವಹಿಸುವಂತೆ, ತಕ್ಷ ಣ ಬರ ಪರಿಹಾರ ವಿತರಣೆ, ನಾಲೆಗಳಿಗೆ ನೀರು ಬಿಡುಗಡೆಗೊಳಿಸುವುದೂ ಸೇರಿದಂತೆ ಇತರೆ ಹಕ್ಕೊತ್ತಾಯಗಳನ್ನು ಮಂಡಿಸಲಾಯಿತು.
ರೈತ ಸಂಘದ ಉಪಾಧ್ಯಕ್ಷ ಕೋಣಸಾಲೆ ನರಸರಾಜು, ಜಿಲ್ಲಾ ಉಪಾಧ್ಯಕ್ಷ ಅಣ್ಣೂರು ಮಹೇಂದ್ರ, ತಾಲೂಕು ಅಧ್ಯಕ್ಷ ಜಿ.ಎ. ಶಂಕರ್, ಪದಾಧಿಕಾರಿಗಳಾದ ರವಿಕುಮಾರ್, ಸುರೇಶ್, ಬೋರೇಗೌಡ, ಸೀತಾರಾಮು, ವರದರಾಜು, ಸ್ವಾಮಿ, ಲಿಂಗಪ್ಪಾಜಿ, ಕೀಳಘಟ್ಟ ನಂಜುಂಡಯ್ಯ, ರಾಮಲಿಂಗು, ಜಗದೀಶ್ ಭಾಗವಹಿಸಿದ್ದರು.