ಮಂಡ್ಯ: ಮಂಡ್ಯ ಯೂತ್ ಗ್ರೂಪ್ನಿಂದ ಜ.19 ರಿಂದ 22ರವರೆಗೆ ನಗರದ ಸರ್.ಎಂ.ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ಬಹುರುಚಿ ಮೇಳ ಮತ್ತು ಯುವಯಾನ ಕಾರ್ಯಕ್ರಮ ಆಯೋಜಿಸಲಾಗಿದೆ.
ಯುವಯಾನ ಕಾರ್ಯಕ್ರಮದಲ್ಲಿ ನಾಲ್ಕು ದಿನಗಳು ನಾನಾ ಸಾಂಸ್ಕೃತಿಕ ಕಾರ್ಯಕ್ರಮಗಳಿವೆ. ರಿಚರ್ಡ್ ಲೂಯಿಸ್ ಮತ್ತು ತಂಡದಿಂದ ನಗೆ ಹಬ್ಬ, ಡ್ರಾಮಾ ಜೂನಿಯರ್ಸ್ ತಂಡದಿಂದ ಅಭಿನಯ ಚಾತುರ್ಯ ಪ್ರದರ್ಶನ, ಸರಿಗಮಪ ಲಿಟ್ಲ್ ಚಾಂಫ್ಸ್ ವಿಜೇತರಿಂದ ಗಾಯನ ಕಾರ್ಯಕ್ರಮವಿದೆ.
ಕಥಕ್ಕಳಿ, ಭರತನಾಟ್ಯ, ಮೈಲಾರಿ ಮತ್ತು ತಂಡದಿಂದ ಸಾಹಸ ಕ್ರೀಡೆಗಳು, ಸುಮಾ ರಾಜ್ಕುಮಾರ್ ತಂಡದಿಂದ ಮಾತನಾಡುವ ಗೊಂಬೆ, ಮ್ಯಾಜಿಕ್ ಷೋ ಕಾರ್ಯಕ್ರಮ, ನಾನಾ ಸಂಸ್ಕೃತಿಯ ಅಪರೂಪದ ನೃತ್ಯ ಕಲಾತಂಡಗಳಿಂದ ಆಕರ್ಷಕ ನೃತ್ಯ ಪ್ರದರ್ಶನವಿದೆ. ಇದೇ ವೇಳೆ ತಿಥಿ, ತರ್ಲೆ ವಿಲೇಜ್ ಚಿತ್ರದ ನಟರಾದ ಗಡ್ಡಪ್ಪ ಮತ್ತು ಸೆಂಚುರಿಗೌಡ ಅವರನ್ನು ಸನ್ಮಾನಿಸಲಾಗುವುದು ಎಂದು ಗ್ರೂಪ್ ಅಧ್ಯಕ್ಷ ಡಾ.ಅನಿಲ್ ಆನಂದ್ ತಿಳಿಸಿದ್ದಾರೆ.
ಉತ್ತರ ಕರ್ನಾಟಕ ಮತ್ತು ದಕ್ಷಿಣ ಕರ್ನಾಟಕ, ಪಂಜಾಬಿ, ರಾಜಸ್ತಾನಿ ಶೈಲಿಯ ತಿನಿಸುಗಳಿಗೂ ಮೇಳದಲ್ಲಿ ಅವಕಾಶ ಕಲ್ಪಿಸಲಾಗಿದೆ. ಕರಾವಳಿ ಶೈಲಿಯ ತಿನಿಸುಗಳು ಸೇರಿದಂತೆ ಸುಮಾರು 70ಕ್ಕೂ ಹೆಚ್ಚು ಮಳಿಗೆಗಳಲ್ಲಿ ಬಹುರುಚಿ ಮೇಳ ಇರಲಿದೆ.
ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಕೇಂದ್ರ ಮಾಜಿ ಸಚಿವ ಎಸ್.ಎಂ.ಕೃಷ್ಣ, ಮಾಜಿ ಸಂಸದ ಜಿ.ಮಾದೇಗೌಡ ಹಾಗೂ ಮಾಜಿ ಶಾಸಕ ಎಚ್.ಡಿ.ಚೌಡಯ್ಯ ಅವರನ್ನು ಸನ್ಮಾನಿಸಲಾಗುವುದು. ಸಂಸದ ಸಿ.ಎಸ್.ಪುಟ್ಟರಾಜು, ಶಾಸಕ ಅಂಬರೀಷ್ ಭಾಗವಹಿಸುವರು. ಡಾ.ರಾಜ್ಕುಮಾರ್ ನೇತ್ರದಾನ ಸಂಸ್ಥೆಗೆ ಈವರೆಗೆ ನೇತ್ರದಾನ ಮಾಡಿರುವ ಕುಟುಂಬದ ಸದಸ್ಯರು, ಸಾಧಕರನ್ನು ಸನ್ಮಾನಿಸಲಾಗುವುದು.