ಆ್ಯಪ್ನಗರ

ಮಿಮ್ಸ್‌ಗೆ ಎಪಿಎಂಸಿ ಮಾಜಿ ಅಧ್ಯಕ್ಷ ದೇಹದಾನ

ಅನಾರೋಗ್ಯದಿಂದ ಮೃತಪಟ್ಟ ಮಂಡ್ಯ ಎಪಿಎಂಸಿ ಮಾಜಿ ಅಧ್ಯಕ್ಷ ವೆಂಕಟೇಶ್‌ಕುಮಾರ್‌(55) ದೇಹವನ್ನು ಅವರ ಇಚ್ಛೆಯಿಂದ ನಗರದ ಮಂಡ್ಯ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಗೆ(ಮಿಮ್ಸ್‌) ದಾನ ಮಾಡಲಾಗಿದೆ. ಮೃತರ ಕಣ್ಣುಗಳನ್ನು ಮಂಡ್ಯ ಯೂತ್‌ ಗ್ರೂಪ್‌ನ ಡಾ.ರಾಜ್‌ಕುಮಾರ್‌ ನೇತ್ರ ಸಂಗ್ರಹಣಾ ಕೇಂದ್ರವು ಸಂಗ್ರಹಿಸಿ ಬೆಂಗಳೂರಿನ ನಾರಾಯಣ ನೇತ್ರಾಲಯಕ್ಕೆ ರವಾನಿಸಿದೆ.

Vijaya Karnataka 13 Dec 2017, 5:00 am

ಮಂಡ್ಯ: ಅನಾರೋಗ್ಯದಿಂದ ಮೃತಪಟ್ಟ ಮಂಡ್ಯ ಎಪಿಎಂಸಿ ಮಾಜಿ ಅಧ್ಯಕ್ಷ ವೆಂಕಟೇಶ್‌ಕುಮಾರ್‌(55) ದೇಹವನ್ನು ಅವರ ಇಚ್ಛೆಯಿಂದ ನಗರದ ಮಂಡ್ಯ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಗೆ(ಮಿಮ್ಸ್‌) ದಾನ ಮಾಡಲಾಗಿದೆ. ಮೃತರ ಕಣ್ಣುಗಳನ್ನು ಮಂಡ್ಯ ಯೂತ್‌ ಗ್ರೂಪ್‌ನ ಡಾ.ರಾಜ್‌ಕುಮಾರ್‌ ನೇತ್ರ ಸಂಗ್ರಹಣಾ ಕೇಂದ್ರವು ಸಂಗ್ರಹಿಸಿ ಬೆಂಗಳೂರಿನ ನಾರಾಯಣ ನೇತ್ರಾಲಯಕ್ಕೆ ರವಾನಿಸಿದೆ.

ಜೆಡಿಎಸ್‌ ಮುಖಂಡರಾಗಿ ಗುರುತಿಸಿಕೊಂಡಿದ್ದ ಮಂಡ್ಯ ತಾಲೂಕು ಗೋಪಾಲಪುರ ಗ್ರಾಮದವರಾದ ವೆಂಕಟೇಶ್‌ಕುಮಾರ್‌ ಅವರು ಮಾಜಿ ಶಾಸಕ ಎಂ.ಶ್ರೀನಿವಾಸ್‌ ಕಟ್ಟಾ ಬೆಂಬಲಿಗರಾಗಿ ಗುರುತಿಸಿಕೊಂಡಿದ್ದರು. 2011 ರಿಂದ 2016ರ ವರೆಗೆ ಎಪಿಎಂಸಿ ನಿರ್ದೇಶಕರಾಗಿದ್ದ ಇವರು ಒಮ್ಮೆ ಅಧ್ಯಕ್ಷರೂ ಆಗಿದ್ದರು. ಮಂಡ್ಯದ ಮಣ್ಣಿಗೆ ಹೊಸದೆನಿಸಿದ ಶುಂಠಿ ಬೆಳೆಯನ್ನು 10 ಎಕರೆಗೂ ಹೆಚ್ಚು ಪ್ರದೇಶದಲ್ಲಿ ಬೆಳೆದು ಗಮನ ಸೆಳೆದಿದ್ದರು.

ಶುಂಠಿ ಬೆಳೆಗಾರರಾಗಿ ಗಮನಾರ್ಹ ಸಾಧನೆ ಮಾಡಿದ ಇವರನ್ನು ಹಲವು ಸಂಘಸಂಸ್ಥೆಗಳು ಸನ್ಮಾನಿಸಿ ಗೌರವಿಸಿದ್ದವು. ಅವರಿಗೆ ಪತ್ನಿ, ಒಬ್ಬ ಪುತ್ರ ಹಾಗೂ ಒಬ್ಬ ಪುತ್ರಿ ಇದ್ದಾರೆ. ಇತ್ತೀಚೆಗೆ ಅನಾರೋಗ್ಯದಿಂದ ಬಳಲುತ್ತಿದ್ದ ವೆಂಕಟೇಶ್‌ಕುಮಾರ್‌ ಅವರು ಬೆಂಗಳೂರಿನ ಸಂಬಂಧಿಕರ ನಿವಾಸದಲ್ಲಿದ್ದ ವೇಳೆ ಅಸ್ವಸ್ಥಗೊಂಡು ಮಂಗಳವಾರ ನಸುಕಿನ ಜಾವ ಕೊನೆಯುಸಿರೆಳೆದಿದ್ದರು.

ಸಾಯುವ ಮೊದಲು ಅವರು ಮರಣಾನಂತರ ದೇಹದಾನದ ಇಂಗಿತ ವ್ಯಕ್ತಪಡಿಸಿದ್ದರು. ಜತೆಗೆ, 2016ರ ಜುಲೈನಲ್ಲಿ ಮಂಡ್ಯ ಯೂತ್‌ ಗ್ರೂಪ್‌ನಲ್ಲಿ ನೇತ್ರದಾನಕ್ಕೆ ನೋಂದಣಿ ಮಾಡಿಸಿದ್ದರು. ಈ ಹಿನ್ನೆಲೆಯಲ್ಲಿ ವೆಂಕಟೇಶ್‌ಕುಮಾರ್‌ ಅವರ ದೇಹವನ್ನು ಮಂಡ್ಯದ ಮಿಮ್ಸ್‌ಗೆ ದಾನ ಮಾಡಲಾಯಿತು. ಇದೇ ವೇಳೆ ಡಾ.ರಾಜ್‌ಕುಮಾರ್‌ನೇತ್ರ ಸಂಗ್ರಹಣಾ ಕೇಂದ್ರದ ಪರವಾಗಿ ಡಾ.ಅನಿಲ್‌ಕುಮಾರ್‌ ಅವರು ಮಿಮ್ಸ್‌ ಬೋಧಕ ಆಸ್ಪತ್ರೆಗೆ ತೆರಳಿ, ಮೃತರ ನೇತ್ರಗಳನ್ನು ಸಂಗ್ರಹಿಸಿ ಬೆಂಗಳೂರಿನ ನಾರಾಯಣ ನೇತ್ರಾಲಯಕ್ಕೆ ರವಾನಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ