ಆ್ಯಪ್ನಗರ

ಆಪರೇಷನ್ ಕಮಲದ ಪಿತಾಮಹ ಮಿಸ್ಟರ್ ಯಡಿಯೂರಪ್ಪ: ಸಿದ್ದರಾಮಯ್ಯ ಟೀಕೆ

"ಸುಪ್ರೀಂ ಕೋರ್ಟ್‌ ಅನರ್ಹರು ಎಂದ ಬಳಿಕ ಅಭ್ಯರ್ಥಿಗಳು ಈಗ ಜನತಾ ನ್ಯಾಯಾಲಯಕ್ಕೆ ಬಂದಿದ್ದಾರೆ. ಇವರು ಶಾಶ್ವತವಾಗಿ ರಾಜಕಾರಣದಲ್ಲಿರಲು ನಾಲಾಯಕ್ ಎಂಬ ತೀರ್ಪನ್ನು ನೀವು ನೀಡಬೇಕು,” ಎಂದು ಸಿದ್ದರಾಮಯ್ಯ ಕರೆ ನೀಡಿದ್ದಾರೆ.

Vijaya Karnataka 3 Dec 2019, 7:22 pm

ಕೆ.ಆರ್‌. ಪೇಟೆ (ಮಂಡ್ಯ): “ಬಿಎಸ್‌ ಯಡಿಯೂರಪ್ಪ ಮುಂಬಾಗಿಲಿಂದ ಯಾವತ್ತು ಅಧಿಕಾರಕ್ಕೆ ಬರಲೇ ಇಲ್ಲ. ಯಾವಾಗಲೂ ಹಿಂಬಾಗಿಲಿಂದ ಅಧಿಕಾರ ಹಿಡಿಯುತ್ತಾರೆ. 2008ರಲ್ಲಿ 9 ಜನ ಶಾಸಕರನ್ನು ಖರೀದಿಸಿ ಸಿಎಂ ಆಗಿದ್ರು. ಈಗ 17 ಜನರನ್ನು ಕೊಂಡುಕೊಂಡು ಸಿಎಂ ಆಗಿದ್ದಾರೆ. ಅದಕ್ಕೆ ನಾನು ಹೇಳೋದು ಆಪರೇಷನ್ ಕಮಲದ ಪಿತಾಮಹ ಮಿಸ್ಟರ್ ಯಡಿಯೂರಪ್ಪ ಅಂತ,” ಎಂಬುದಾಗಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.
Vijaya Karnataka Web Siddaramaiah


ಕಾಂಗ್ರೆಸ್‌ ಅಭ್ಯರ್ಥಿ ಕೆ.ಬಿ. ಚಂದ್ರಶೇಖರ್‌ ಪರ ಕ್ಷೇತ್ರದಲ್ಲಿ ಮತಯಾಚನೆ ನಡೆಸಿದ ಅವರು, “ಸಾರ್ವತ್ರಿಕ ಚುನಾವಣೆ ನಡೆದು‌ ಒಂದೂವರೆ ವರ್ಷ ಕಳೆದಿಲ್ಲ. ಈಗ ಮತ್ತೆ ಚುನಾವಣೆ ನಡೆಯುತ್ತಿದೆ. ಇದರಿಂದ ಸರಕಾರದ ಬೊಕ್ಕಸಕ್ಕೆ ನೂರಾರು ಕೋಟಿ ನಷ್ಟ ಉಂಟಾಗುತ್ತಿದೆ. ಇದು ಅನಗತ್ಯ, ಅನಾವಶ್ಯಕವಾಗಿ ಬಂದ‌ ಚುನಾವಣೆ. ಯಾರೂ ಬಯಸದ ಚುನಾವಣೆ ಇದು,” ಎಂದರು.

“ಪಕ್ಷಾಂತರ ನಿಷೇಧ ಕಾಯ್ದೆ ಉಲ್ಲಂಘಿಸಿದರೆ ಶಾಸಕ ಸ್ಥಾನ ಕಳೆದುಕೊಳ್ತಾರೆ. ಶಾಸಕರಾಗಿ ಮುಂದುವರೆಯಲು ನಾಲಾಯಕ್‌ ಆಗ್ತಾರೆ. ನಾನು ಸ್ಪೀಕರ್‌ಗೆ ಹೇಳಿ ಅನರ್ಹಗೊಳಿಸಿದ್ದೇನೆ ಅಂತ ಆರೋಪ ಮಾಡಿದರು. ಸ್ಪೀಕರ್ ಆದೇಶವನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದರು. ಸುಪ್ರೀಂ ಕೋರ್ಟ್‌ ಕೂಡ ನೀವು ನಾಲಾಯಕ್ ಅಂತ ಅನರ್ಹಗೊಳಿಸಿದೆ. ಸುಪ್ರೀಂ ಕೋರ್ಟ್‌ ಅನರ್ಹರು ಎಂದ ಬಳಿಕ ಈಗ ಜನತಾ ನ್ಯಾಯಾಲಯಕ್ಕೆ ಬಂದಿದ್ದಾರೆ. ಇವರು ಶಾಶ್ವತವಾಗಿ ರಾಜಕಾರಣದಲ್ಲಿರಲು ನಾಲಾಯಕ್ ಎಂಬ ತೀರ್ಪನ್ನು ನೀವು ನೀಡಬೇಕು,” ಎಂದು ಜನರಿಗೆ ಕರೆ ನೀಡಿದರು.

ಹುಣಸೂರಲ್ಲಿ ಜೆಡಿಎಸ್ ಸೋಲು ಖಚಿತ, ಎಲ್ಲರೂ 'ಕೈ'ಗೆ ಓಟ್ ಹಾಕಿ ಎಂದ ಸಿದ್ದರಾಮಯ್ಯ

“ಎರಡು ಮೂರು ಕ್ಷೇತ್ರದಲ್ಲಿ ಅಷ್ಟೇ ಜೆಡಿಎಸ್ ಇದೆ. ಉಳಿದಂತೆ ಕಾಂಗ್ರೆಸ್ ಬಿಜೆಪಿ ನಡುವೆ ಫೈಟ್ ಇದೆ. ಕೆಬಿ ಚಂದ್ರಶೇಖರ್‌ 6 ಚುನಾವಣೆ ಎದುರಿಸಿ ಎರಡು ಬಾರಿ ಅಷ್ಟೇ ಶಾಸಕರಾಗಿದ್ದಾರೆ. ನಾರಾಯಣಗೌಡ ಇವತ್ತು ತನ್ನನ್ನು ತಾನೇ ಮಾರಾಟ ಮಾಡಿಕೊಂಡು ಹೋಗಿದ್ದಾನೆ. ಕುರಿ ಕೋಳಿಯಂತೆ ಶಾಸಕರು ಮಾರಾಟವಾಗುವ ನೀಚ ಕೃತ್ಯ ಇನ್ನೊಂದಿಲ್ಲ. ನಾನು ಸಿಎಂ ಆದಾಗ ಕೆಬಿ ಚಂದ್ರಶೇಖರ್‌ ಸೋತರೂ ನೂರಾರು ಕೋಟಿ ಅನುದಾನವನ್ನು ಕೆ‌ಆರ್ ಪೇಟೆಗೆ ಕೊಟ್ಟೆ. ಚಂದ್ರಶೇಖರ್‌ ಗೆಲ್ಲಿಸಿದ್ರೆ ಕೆ.ಆರ್‌.ಪೇಟೆ ಮತ್ತಷ್ಟು ಅಭಿವೃದ್ಧಿ ಆಗುತ್ತಿತ್ತು,” ಎಂದು ಹೇಳಿದರು.

ದೇವರಾಜ ಅರಸು ನಂತರ ಐದು ವರ್ಷ ಸಂಪೂರ್ಣ ಅಧಿಕಾರ ನಡೆಸಿದವರು ನಿಮ್ಮ ಸಿದ್ದರಾಮಯ್ಯ ಮಾತ್ರ. ಐದು ವರ್ಷದಲ್ಲಿ ನಮ್ಮ ಸರ್ಕಾರದಲ್ಲಿ ಯಾವುದೇ ಕಳಂಕವಿರಲಿಲ್ಲ. ಹಗರಣ ಮುಕ್ತ ಸರ್ಕಾರ ನಡೆಸಿದ ಕೀರ್ತಿ ನಮ್ಮ ಸರ್ಕಾರಕ್ಕಿದೆ ಎಂದು ಸಿದ್ದರಾಮಯ್ಯ ತಿಳಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ