ಆ್ಯಪ್ನಗರ

ಕೆರೆಗಳಿಗೆ ನೀರು ತುಂಬಿಸಲು ಆದ್ಯತೆ

ದುದ್ದ ಹೋಬಳಿ ಮಟ್ಟದ ಜನಸಂಪರ್ಕ ಸಭೆ ನಡೆಸಿ ಸಮಸ್ಯೆ ಆಲಿಸಿದ ಸಚಿವ ಸಿಎಸ್‌ಪಿ ವಿಕ ಸುದ್ದಿಲೋಕ ಮಂಡ್ಯ ಸಣ್ಣ ನೀರಾವರಿ ಸಚಿವ ಸಿಎಸ್‌...

Vijaya Karnataka 24 Jul 2018, 5:00 am
ದುದ್ದ ಹೋಬಳಿ ಮಟ್ಟದ ಜನಸಂಪರ್ಕ ಸಭೆ ನಡೆಸಿ ಸಮಸ್ಯೆ ಆಲಿಸಿದ ಸಚಿವ ಸಿಎಸ್‌ಪಿ
Vijaya Karnataka Web prefer water to lakes says minister cs puttaraju
ಕೆರೆಗಳಿಗೆ ನೀರು ತುಂಬಿಸಲು ಆದ್ಯತೆ

ಮಂಡ್ಯ: ಸಣ್ಣ ನೀರಾವರಿ ಸಚಿವ ಸಿ.ಎಸ್‌.ಪುಟ್ಟರಾಜು ಸೋಮವಾರ ದುದ್ದ ಗ್ರಾಮದಲ್ಲಿ ದುದ್ದ ಹೋಬಳಿ ಮಟ್ಟದ ಜನಸಂಪರ್ಕ ಸಭೆ ನಡೆಸಿ ಜನರ ಸಮಸ್ಯೆಗಳನ್ನು ಆಲಿಸಿದರು.

ದುದ್ದ ಹೋಬಳಿ ಮೇಲುಕೋಟೆ ವಿಧಾನಸಭೆ ಕ್ಷೇತ್ರ ವ್ಯಾಪ್ತಿಯಲ್ಲಿರುವುದರಿಂದ ಕ್ಷೇತ್ರದ ಶಾಸಕರೂ ಆದ ಸಚಿವ ಪುಟ್ಟರಾಜು ಜನಸಂಪರ್ಕ ಸಭೆ ಮೂಲಕ ಜನರ ಅಹವಾಲು ಸ್ವೀಕರಿಸಿದರು. ಕಂದಾಯ, ನೀರಾವರಿ, ವಿದ್ಯುತ್‌ ಸೇರಿದಂತೆ ನಾನಾ ಇಲಾಖೆಗಳ ಸಮಸ್ಯೆಗಳ ಕುರಿತು ಸಾರ್ವಜನಿಕರು ತಮ್ಮ ಅಹವಾಲು ತೋಡಿಕೊಂಡರು. ಅದರಲ್ಲೂ ವಿದ್ಯುತ್‌ ಸಮಸ್ಯೆ, ಟ್ರಾನ್ಸ್‌ಫಾರ್ಮನ್‌ ಅಳವಡಿಕೆ/ಬದಲಾವಣೆ, ಕಂದಾಯ ಇಲಾಖೆಗೆ ಸಂಬಂಧಿಸಿದ ದೂರುಗಳೇ ಹೆಚ್ಚು ಕೇಳಿಬಂದವು.

ಸಣ್ಣಪುಟ್ಟ ಸಮಸ್ಯೆಗಳಿಗೆ ಸಚಿವರು ಸ್ಥಳದಲ್ಲೇ ಪರಿಹಾರ ಸೂಚಿಸಿದರು. ಸಭೆಯಲ್ಲಿ ಭಾಗವಹಿಸಿದ್ದ ಸಂಬಂಧಿಸಿದ ಅಧಿಕಾರಿಗಳನ್ನು ಕರೆದು ರೈತರ ದೂರುಗಳನ್ನು ತ್ವರಿತವಾಗಿ ಇತ್ಯರ್ಥಪಡಿಸಲು ತಕ್ಷಣ ಕ್ರಮ ವಹಿಸಬೇಕು ಎಂದು ಸೂಚನೆ ನೀಡಿದರು. ಗ್ರಾಮೀಣರು ಮತ್ತು ರೈತರ ಸಮಸ್ಯೆಗಳ ಪರಿಹಾರಕ್ಕೆ ಅಧಿಕಾರಿಗಳು ಸಬೂಬು ಹೇಳದೆ ಕೂಡಲೇ ಕ್ರಮ ವಹಿಸಬೇಕು. ಯಾವುದೇ ಕಾರಣಕ್ಕೂ ವಿಳಂಬ ಸಲ್ಲದು ಎಂದು ಎಚ್ಚರಿಸಿದರು.

ಮೇಲುಕೋಟೆ ವಿಧಾನಸಭೆ ಕ್ಷೇತ್ರ ವ್ಯಾಪ್ತಿಯ ದುದ್ದ ಹೋಬಳಿ ಹಲವು ರಾಜಕೀಯ ದಿಗ್ಗಜರ ಏಳಿಗೆಗೆ ನಾಂದಿ ಹಾಡಿದೆ. ಈ ಹೋಬಳಿಯ ಸಮಗ್ರ ಅಭಿವೃದ್ಧಿಗೆ ಕಟಿಬದ್ಧನಾಗಿ ನಾನು ದುಡಿಯಲು ಮುಂದಾಗುತ್ತೇನೆ. ಹೋಬಳಿ ವ್ಯಾಪ್ತಿಯ ನೀರಾವರಿ ಸಮಸ್ಯೆ ಹೋಗಲಾಡಿಸಲು 2008ರಲ್ಲೇ ನೀಲನಕ್ಷೆ ತಯಾರಿಸಲು ಸೂಚಿಸಲಾಗಿತ್ತು. ರಾಜಕೀಯ ಬದಲಾವಣೆಯಿಂದ ವಿಳಂಬವಾಗಿದ್ದ ಬೋಳೇನಹಳ್ಳಿ ಪಿಕಪ್‌, ಗಂಗವಾಡಿ ಪಿಕಪ್‌ ಸೇರಿದಂತೆ ಈ ವ್ಯಾಪ್ತಿಯ ಕೆರೆಗಳನ್ನು ತುಂಬಿಸುವ ಯೋಜನೆ ಅನುಷ್ಠಾನಕ್ಕೆ ತ್ವರಿತವಾಗಿ ಕ್ರಮ ವಹಿಸಲಾಗುವುದು ಎಂದು ತಿಳಿಸಿದರು.

ಸಣ್ಣ ನೀರಾವರಿ ಇಲಾಖೆಯಿಂದ 110 ಕೋಟಿ ರೂ. ವೆಚ್ಚದಲ್ಲಿ ಕೆರೆಗಳನ್ನು ತುಂಬಿಸುವ ಯೋಜನೆಗೆ 30 ಕೋಟಿ ರೂ. ಅನುದಾನ ಬಿಡುಗಡೆಯಾಗಿದೆ. ರೈತರ ಹಿತದೃಷ್ಟಿಯಿಂದ ಕಾವೇರಿ ನದಿ ನೀರು ನಿರ್ವಹಣಾ ಪ್ರಾಧಿಕಾರದ ನಿಲುವು ಮತ್ತು ಕೆಆರ್‌ಎಸ್‌ ಸಲಹಾ ಸಮಿತಿಯ ಸಭೆ ನಿರ್ಧಾರಕ್ಕಾಗಿ ಕಾಯದೆ ಮುಖ್ಯಮಂತ್ರಿಗಳ ಆದೇಶದಂತೆ ನಾಲೆಗಳಿಗೆ ಕನ್ನಂಬಾಡಿಕಟ್ಟೆಯಿಂದ ಕಳೆದ 15 ದಿನಗಳ ಹಿಂದಿನಿಂದಲೇ ನೀರು ಹರಿಸಲಾಗುತ್ತಿದೆ. ಜು.28ರಿಂದ ಹೇಮಾವತಿ ವ್ಯಾಪ್ತಿಯ ಕೆರೆ-ಕಟ್ಟೆಗಳನ್ನು ತುಂಬಿಸಲಾಗುವುದು ಎಂದು ಹೇಳಿದರು.

ಮುಖ್ಯಮಂತ್ರಿಯಿಂದ ಭತ್ತ ನಾಟಿ: ಬರಗಾಲದ ಬವಣೆಯಲ್ಲಿ ನಲುಗಿದ್ದ ರೈತಸಂಕುಲ ಭತ್ತದ ಕೃಷಿಗೆ ಮುಂದಾಗಿರಲಿಲ್ಲ. ಈ ಬಾರಿ ಕನ್ನಂಬಾಡಿ ತುಂಬಿದ್ದು, ಭತ್ತದ ನಾಟಿ ಕಾರ್ಯಕ್ಕೆ ವಿ.ಸಿ.ಫಾರಂನಲ್ಲಿ ಕಲೆವೇ ದಿನಗಳಲ್ಲಿ ಮುಖ್ಯಮಂತ್ರಿಗಳೇ ಚಾಲನೆ ನೀಡಲಿದ್ದಾರೆ. ಅಂದೇ ಕೆರೆ ತುಂಬಿಸುವ ಯೋಜನೆ ಹಾಗೂ ರಸ್ತೆ ದುರಸ್ತಿ ಕಾಮಗಾರಿಗೆ ಅಡಿಗಲ್ಲು ಹಾಕಲಾಗುವುದೆಂದು ಪುಟ್ಟರಾಜು ತಿಳಿಸಿದರು. ಕ್ಷೇತ್ರ ವ್ಯಾಪ್ತಿಯ ದುದ್ದ, ಶಿವಳ್ಳಿ ಗ್ರಾಮಗಳಲ್ಲಿ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣ ನಿರ್ಮಿಸಲಾಗುವುದು. ದುದ್ದ ಹೋಬಳಿ ವ್ಯಾಪ್ತಿಯಲ್ಲಿ ಹೊಸದಾಗಿ 2 ವಿದ್ಯುತ್‌ ಸಬ್‌ಸ್ಟೇಷನ್‌ ಸ್ಥಾಪಿಸಲಾಗುವುದು ಎಂದು ಹೇಳಿದ ಅವರು, ಮುಖ್ಯಮಂತ್ರಿಗಳು ಜಿಲ್ಲೆಯ ಅಭಿವೃದ್ಧಿ ಬಗ್ಗೆ ವಿಶೇಷ ಆಸಕ್ತಿವಹಿಸಿದ್ದು, ಅಧಿಕಾರಿಗಳು ಜನಸಾಮಾನ್ಯರ ಅಹವಾಲು ಗಳನ್ನು ಕಾಲಮಿತಿಯೊಳಗೆ ಇತ್ಯರ್ಥಗೊಳಿಸಬೇಕು ಎಂದು ಸೂಚಿಸಿದರು.

ಸಭೆ ಉದ್ಘಾಟಿಸಿದ ಮಾಜಿ ಶಾಸಕ ಜಿ.ಬಿ.ಶಿವಕುಮಾರ್‌ ಮಾತನಾಡಿ, ಹೋಬಳಿ ವ್ಯಾಪ್ತಿಯಲ್ಲಿ ಅಪೂರ್ಣಗೊಂಡಿರುವ ನೀರಾವರಿ ಯೋಜನೆಗಳನ್ನು ಮುಗಿಸಲು ಸಚಿವರು ಕಾರ್ಯಪ್ರವೃತ್ತರಾಗಬೇಕು. ಮೈಷುಗರ್‌ ಅಭಿವೃದ್ಧಿ, ಮಂಡ್ಯ ನಗರದಲ್ಲಿ ವರ್ತುಲ ರಸ್ತೆ ನಿರ್ಮಾಣ, ವಿ.ಸಿ.ಫಾರ್ಮ್‌ನಲ್ಲಿ ಇಸ್ರೇಲ್‌ ಮಾದರಿ ಕೃಷಿಗೆ ಒತ್ತು ನೀಡುವ ಮೂಲಕ ಜಿಲ್ಲೆಯ ಅಭಿವೃದ್ಧಿಗೆ ಮುಂದಾಗಬೇಕೆಂದು ಮೌಖಿಕ ಪ್ರಸ್ತಾವನೆ ಸಲ್ಲಿಸಿದರು.

ಜಿ.ಪಂ. ಸದಸ್ಯರಾದ ಅನುಪಮ, ಸುಧಾ, ತಾ.ಪಂ. ಸದಸ್ಯರಾದ ಕೆ.ಎಂ.ಬೀರಪ್ಪ, ಚಿಕ್ಕಹೊನ್ನೇಗೌಡ, ಬೆಟ್ಟಸ್ವಾಮಿ, ರೇಖಾ, ದುದ್ದ ಗ್ರಾ.ಪಂ. ಅಧ್ಯಕ್ಷ ಮಹದೇವಪ್ಪ, ಉಪ ತಹಸೀಲ್ದಾರ್‌ ಮಂಜುನಾಥ್‌, ಮುಖಂಡರಾದ ಎಚ್‌.ಎಲ್‌.ಶಿವಣ್ಣ, ಶಂಕರೇಗೌಡ, ಬಾಲರಾಜು, ಸಂಜಯ್‌ ಹಾಗೂ ನಾನಾ ಇಲಾಖೆ ಅಧಿಕಾರಿಗಳು ಭಾಗವಹಿಸಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ