ಆ್ಯಪ್ನಗರ

ದೇವಾಲಯ ಸ್ವತ್ತು ಅಕ್ರಮ ಪರಭಾರೆ ಮದಲಹಳ್ಳಿ ಗ್ರಾಮಸ್ಥರ ಪ್ರತಿಭಟನೆ

ತಾಲೂಕಿನ ಮದಲಹಳ್ಳಿ ಗ್ರಾಮದ ಶ್ರೀಲಕ್ಷ್ಮೀದೇವಿ ದೇವಾಲಯದ ಸ್ವತ್ತನ್ನು ಖಾಸಗಿ ವ್ಯಕ್ತಿಗಳಿಗೆ ಅಕ್ರಮವಾಗಿ ರಿಜಿಸ್ಟಾರ್‌(ಪರಭಾರೆ) ಮಾಡಿರುವುದನ್ನು ಖಂಡಿಸಿ ಗ್ರಾಮಸ್ಥರು ಸೋಮವಾರ ಪಟ್ಟಣದ ಮಿನಿ ವಿಧಾನಸೌಧಕ್ಕೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿ, ಕಂದಾಯ ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿದರು.

Vijaya Karnataka 1 Jan 2019, 5:00 am
ನಾಗಮಂಗಲ : ತಾಲೂಕಿನ ಮದಲಹಳ್ಳಿ ಗ್ರಾಮದ ಶ್ರೀಲಕ್ಷ್ಮೀದೇವಿ ದೇವಾಲಯದ ಸ್ವತ್ತನ್ನು ಖಾಸಗಿ ವ್ಯಕ್ತಿಗಳಿಗೆ ಅಕ್ರಮವಾಗಿ ರಿಜಿಸ್ಟಾರ್‌(ಪರಭಾರೆ) ಮಾಡಿರುವುದನ್ನು ಖಂಡಿಸಿ ಗ್ರಾಮಸ್ಥರು ಸೋಮವಾರ ಪಟ್ಟಣದ ಮಿನಿ ವಿಧಾನಸೌಧಕ್ಕೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿ, ಕಂದಾಯ ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿದರು.
Vijaya Karnataka Web protest by madalahalli villagers
ದೇವಾಲಯ ಸ್ವತ್ತು ಅಕ್ರಮ ಪರಭಾರೆ ಮದಲಹಳ್ಳಿ ಗ್ರಾಮಸ್ಥರ ಪ್ರತಿಭಟನೆ


ಗ್ರಾಮದಿಂದ ಹೊರಟ ನೂರಾರು ಗ್ರಾಮಸ್ಥರು ಟಿ.ಬಿ.ಬಡಾವಣೆಯ ಬಿಜಿಎಸ್‌ ಸರ್ಕಲ್‌ನಲ್ಲಿ ಜಮಾವಣೆಗೊಂಡು ಜೇವರ್ಗಿ-ಚಾಮರಾಜನಗರ ರಾಷ್ಟ್ರೀಯ ಹೆದ್ದಾರಿಯಲ್ಲಿ ಮೆರವಣಿಗೆ ತೆರಳಿ, ಮಿನಿ ವಿಧಾನಸೌಧಕ್ಕೆ ಮುತ್ತಿಗೆ ಹಾಕಿದರು. ಟಿ.ಮರಿಯಪ್ಪ ವೃತ್ತದಲ್ಲಿ ಹೆದ್ದಾರಿ ತಡೆ ಮಾಡಲು ಮುಂದಾದಾಗ ಪೊಲೀಸರು ತಡೆದರು. ಮೆರವಣಿಗೆಯಲ್ಲಿ ಸರಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಜೆ.ಕುಮಾರ್‌ ಹಾಗೂ ಕಂದಾಯ ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿದರು,

''ಕಸಬಾ ಹೋಬಳಿಯ ಮುಳಕಟ್ಟೆ ದಾಖಲೆ ಗ್ರಾಮವಾದ ಮದಲಹಳ್ಳಿಯಲ್ಲಿ ಶ್ರೀ ಲಕ್ಷ್ಮಿ ದೇವಾಲಯಕ್ಕೆ ಸೇರಿದೆ ಎನ್ನಲಾದ ಸರ್ವೆ ನಂ.190ರಲ್ಲಿನ 4.10 ಎಕರೆ ಜಮೀನನ್ನು ಕಂದಾಯ ಅಧಿಕಾರಿಗಳು ತಾಲೂಕು ಸರಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಜೆ.ಕುಮಾರ್‌ ಅವರು ತಮ್ಮ ಅಕ್ಕ ಲಕ್ಷ್ಮಿದೇವಮ್ಮ ಎಂಬುವವರ ಹೆಸರಿಗೆ ರಿಜಿಸ್ಟ್ರಾರ್‌ ಮಾಡಿಸಿಕೊಂಡಿದ್ದಾರೆ. ಈ ಜಮೀನಿನಲ್ಲಿ ಸರಕಾರಿ ಶಾಲೆ, ದೇವಸ್ಥಾನ ಮತ್ತು 35 ಮನೆಗಳಿವೆ. ಸಿ.ಜೆ.ಕುಮಾರ್‌ ಅವರು ತಮ್ಮ ಬೆಂಬಲಿಗರನ್ನು ಕಳುಹಿಸಿ, ಗ್ರಾಮಸ್ಥರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ ಬೆದರಿಕೆಯೊಡ್ಡಿದ್ದಾರೆ. ಜತೆಗೆ 30 ದಿನಗಳಲ್ಲಿ ಮನೆ ಖಾಲಿ ಮಾಡುವಂತೆ ಧಮ್ಕಿ ಹಾಕಿದ್ದಾರೆ,'' ಎಂದು ದೂರಿದರು.

''ಗ್ರಾಮ ಠಾಣಾ ಜಾಗದಲ್ಲಿ ಮನೆಗಳಿದ್ದರೂ ಕಂದಾಯ ಅಧಿಕಾರಿಗಳು ಈ ಜಮೀನಿನಲ್ಲಿ ರಾಗಿ ಬೆಳೆಯಲಾಗುತ್ತಿದೆ ಎಂದು ನಮೂದಿಸಿದ್ದಾರೆ, ಇದರಲ್ಲಿ ಸ್ಥಳೀಯ ಗ್ರಾಮ ಲೆಕ್ಕಿಗ, ರಾಜಸ್ವ ನಿರೀಕ್ಷಕ ಮತ್ತು ಸರ್ವೆಯರ್‌ಗಳ ಪಾತ್ರ ಇದೆ. ಇವರ ಮೇಲೆ ಜಿಲ್ಲಾಧಿಕಾರಿಗಳು ಕ್ರಮ ಕೈಗೊಳ್ಳಬೇಕು,'' ಎಂದು ಅಗ್ರಹಿಸಿದರು. ''ಕೂಡಲೇ ಸಂಬಂಧಪಟ್ಟ ಭ್ರಷ್ಟ ಅಧಿಕಾರಿಗಳು ಮತ್ತು ಸರಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಜೆ.ಕುಮಾರ್‌ ಅವರನ್ನು ತಕ್ಷಣ ಸೇವೆಯಿಂದ ವಜಾ ಮಾಡಬೇಕು,'' ಎಂದು ಒತ್ತಾಯಿಸಿದರು.

''ಕಂದಾಯ ಅಧಿಕಾರಿಗಳು ರೈತರಿಗೆ ಸೂಕ್ತ ಸಮಯದಲ್ಲಿ ಯಾವುದೇ ಕೆಲಸ ಮಾಡಿಕೊಡುತ್ತಿಲ್ಲ. ಇದರಿಂದ ರೈತರಿಗೆ ಸಾಕಷ್ಟು ತೊಂದರೆಯಾಗುತ್ತಿದೆ. ಆದರೆ ಭೂಗಳ್ಳರಿಂದ ಲಂಚ ಪಡೆದು ಅವರ ಕೆಲಸಗಳನ್ನು ತಕ್ಷಣ ಮಾಡಿಕೊಡಲಾಗುತ್ತಿದೆ,'' ಎಂದು ಆರೋಪಿಸಿದರು.

''ತಹಸೀಲ್ದಾರ್‌ ಗ್ರಾಮಕ್ಕೆ ಭೇಟಿ ನೀಡಿ ಸ್ಥಳ ಪರಿಶೀಲನೆ ಮಾಡಬೇಕು. ನಮಗೆ ನ್ಯಾಯ ಸಿಗದಿದ್ದಲ್ಲಿ ಮುಂದಿನ ದಿನಗಳಲ್ಲಿ ಮಿನಿ ವಿಧಾನಸೌಧಕ್ಕೆ ಬೀಗ ಜಡಿದು ಸತ್ಯಾಗ್ರಹ ನಡೆಸಲಾಗುವುದು,'' ಎಂದು ಎಚ್ಚರಿಸಿದರು. ಪ್ರತಿಭಟನೆಗೆ ಮುಳುಕಟ್ಟೆ, ಸಾರಿಮೇಗಲ ಕೊಪ್ಪಲು, ಬದರಿಕೊಪ್ಪಲು ಹಾಗೂ ಉಪ್ಪಾರಹಳ್ಳಿ ಗ್ರಾಮದ ಕೆಲ ಮುಖಂಡರು ಕೂಡ ಬೆಂಬಲ ವ್ಯಕ್ತಪಡಿಸಿದರು.

ಬಳಿಕ ತಹಸೀಲ್ದಾರ್‌ ಎಂ.ನಂಜುಂಡಯ್ಯ ಅವರಿಗೆ ಮನವಿ ಸಲ್ಲಿಸಿದ ಪ್ರತಿಭಟನಾಕಾರರು, ನ್ಯಾಯ ಒದಗಿಸುವಂತೆ ಮನವಿ ಮಾಡಿದರು.

ಪುರಸಭಾ ಸದಸ್ಯ ಮಂಜುನಾಥ್‌, ಗ್ರಾ.ಪಂ. ಸದಸ್ಯ ವಿನೋದ್‌, ಮುಖಂಡರಾದ ಮುಳುಕಟ್ಟೆ ಶಿವರಾಮಯ್ಯ, ತಾಲೂಕು ಕುರುಬರ ಸಂಘದ ಅಧ್ಯಕ್ಷ ಬಸವೇಗೌಡ, ಗ್ರಾಮಸ್ಥರಾದ ಸಂಪತ್‌ಕುಮಾರ್‌, ಮೂರ್ತಿ, ಶಂಕರ್‌, ಬಸವರಾಜು, ಕುಮಾರ್‌, ಸ್ತ್ರೀ ಶಕ್ತಿ ಸಂಘದ ಸದಸ್ಯೆಯರು ಸೇರಿದಂತೆ ಮುಳುಕಟ್ಟೆ ಮತ್ತು ತೊಳಲಿ ಗ್ರಾಮದ ನೂರಾರು ಮಂದಿ ಪಾಲ್ಗೊಂಡಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ