ಆ್ಯಪ್ನಗರ

ರೈತ ಸಂಘದ ಕಾರ‍್ಯಕರ್ತರ ಪ್ರತಿಭಟನೆ

ವಿಕ ಸುದ್ದಿಲೋಕ ಮಂಡ್ಯ ತಮಿಳುನಾಡಿನ ತೂತುಕುಡಿಯಲ್ಲಿ ತಾಮ್ರ ಸ್ಥಾವರ ವಿರೋಧಿಸಿ ಪ್ರತಿಭಟಿಸುತ್ತಿದ್ದ ರೈತರ ಮೇಲೆ ಪೊಲೀಸರು ನಡೆಸಿದ ಗೋಲಿಬಾರ್‌ ಖಂಡಿಸಿ ನಗರದಲ್ಲಿ ರೈತಸಂಘದ ...

Vijaya Karnataka 25 May 2018, 5:00 am
ಮಂಡ್ಯ: ತಮಿಳುನಾಡಿನ ತೂತುಕುಡಿಯಲ್ಲಿ ತಾಮ್ರ ಸ್ಥಾವರ ವಿರೋಧಿಸಿ ಪ್ರತಿಭಟಿಸುತ್ತಿದ್ದ ರೈತರ ಮೇಲೆ ಪೊಲೀಸರು ನಡೆಸಿದ ಗೋಲಿಬಾರ್‌ ಖಂಡಿಸಿ ನಗರದಲ್ಲಿ ರೈತಸಂಘದ ಕಾರ‍್ಯಕರ್ತರು ಗುರುವಾರ ಪ್ರತಿಭಟಿಸಿದರು.
Vijaya Karnataka Web protesters of farmers union in mandya
ರೈತ ಸಂಘದ ಕಾರ‍್ಯಕರ್ತರ ಪ್ರತಿಭಟನೆ


ಸರ್‌ಎಂವಿ ಪ್ರತಿಮೆ ಎದುರು ಜಮಾವಣೆಗೊಂಡು ಪ್ರತಿಭಟಿಸಿದ ರೈತಸಂಘದ ಕಾರ‍್ಯಕರ್ತರು, ತಮಿಳುನಾಡು ಸರಕಾರ ಮತ್ತು ಪೊಲೀಸರ ವಿರುದ್ಧ ಘೋಷಣೆ ಮೊಳಗಿಸಿ ಕಿಡಿಕಾರಿದರು. ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ವಾಹನಗಳ ಸಂಚಾರಕ್ಕೆ ತಡೆಯೊಡ್ಡಿ ಆಕ್ರೋಶ ವ್ಯಕ್ತಪಡಿಸಿದರು. ಇದರಿಂದ ಕೆಲವೊತ್ತು ಹೆದ್ದಾರಿಯಲ್ಲಿ ವಾಹನಗಳ ಸಂಚಾರ ಅಸ್ತವ್ಯಸ್ತಗೊಂಡಿತ್ತು.

ತಮಿಳುನಾಡು ಮುಖ್ಯಮಂತ್ರಿ ಪಳನಿಸ್ವಾಮಿ ವಿರುದ್ಧ ಧಿಕ್ಕಾರ ಕೂಗಿದರು. ಮಾಲಿನ್ಯಕಾರಕ ಸ್ಟೆರ್‌ಲೈಟ್‌ ತಾಮ್ರ ಸ್ಥಾವರವನ್ನು ಮುಚ್ಚಬೇಕೆಂದು ಆಗ್ರಹಿಸಿ ಪ್ರತಿಭಟಿಸುತ್ತಿದ್ದ ರೈತರ ಮೇಲೆ ಗೋಲಿಬಾರ್‌ ನಡೆಸಿರುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು. ರೈತರ ಹೋರಾಟವನ್ನು ಹತ್ತಿಕ್ಕುವ ದೃಷ್ಟಿಯಿಂದ ರೈತರ ಮೇಲೆ ಗೋಲಿಬಾರ್‌ ನಡೆಸಿ 10 ಜನರನ್ನು ಕಗ್ಗೊಲೆ ಮಾಡಲಾಗಿದೆ ಎಂದು ಕಿಡಿಕಾರಿದರು.

ಗೋಲಿಬಾರ್‌ ನಡೆಸಿದವರನ್ನು ತಕ್ಷಣ ಸೇವೆಯಿಂದ ವಜಾಗೊಳಿಸಬೇಕು. ಗೋಲಿಬಾರ್‌ನಲ್ಲಿ ಮೃತಪಟ್ಟ ರೈತರ ಕುಟುಂಬಗಳಿಗೆ ಸೂಕ್ತ ಪರಿಹಾರ ವಿತರಿಸಬೇಕೆಂದು ಆಗ್ರಹಿಸಿದರು. ರೈತಸಂಘದ ಜಿಲ್ಲಾಧ್ಯಕ್ಷ ಶಂಭೂನಹಳ್ಳಿ ಸುರೇಶ್‌, ಮುಖಂಡರಾದ ಬಿ.ಬೊಮ್ಮೇಗೌಡ, ಲಿಂಗಪ್ಪಾಜಿ, ಲತಾ ಶಂಕರ್‌, ಎಚ್‌.ಡಿ.ಜಯರಾಂ ಇತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ಕರ್ನಾಟಕ ಜನಶಕ್ತಿ ಕಾರ‍್ಯಕರ್ತರ ಪ್ರತಿಭಟನೆ

ತಮಿಳುನಾಡಿನ ತೂತುಕುಡಿಯಲ್ಲಿ ರೈತರ ಮೇಲೆ ಪೊಲೀಸರು ನಡೆಸಿದ ಗೋಲಿಬಾರ್‌ ಖಂಡಿಸಿ ಬುಧವಾರ ರಾತ್ರಿಯೇ ನಗರದ ರೈಲು ನಿಲ್ದಾಣದ ಎದುರು ಕರ್ನಾಟಕ ಜನಶಕ್ತಿ ಸಂಘಟನೆ ಕಾರ‍್ಯಕರ್ತರು ಪ್ರತಿಭಟಿಸಿದರು.

ರೈಲು ನಿಲ್ದಾಣದ ಎದುರು ಕೆಲವೊತ್ತು ಪ್ರತಿಭಟಿಸಿದ ಜನಶಕ್ತಿ ಸಂಘಟನೆ ಕಾರ‍್ಯಕರ್ತರು, ಅದೇ ವೇಳೆ ಆಗಮಿಸಿದ ತೂತುಕುಡಿ ಎಕ್ಸ್‌ಪ್ರೆಸ್‌ ರೈಲಿನೊಳಗೆ ತೆರಳಿ ಪ್ರಯಾಣಿಕರಿಗೆ ಕರಪತ್ರಗಳನ್ನು ವಿತರಿಸಿ ಪೊಲೀಸರ ದೌರ್ಜನ್ಯದ ಬಗ್ಗೆ ಜಾಗೃತಿ ಮೂಡಿಸುವ ಪ್ರಯತ್ನ ಮಾಡಿದರು. ನಂತರ ಮದ್ದೂರು ನಿಲ್ದಾಣದವರೆಗೆ ರೈಲಿನಲ್ಲೇ ತೆರಳಿ ನೂರಾರು ಪ್ರಯಾಣಿಕರಿಗೆ ಕರಪತ್ರಗಳನ್ನು ವಿತರಿಸಿದರು.

ತಮಿಳುನಾಡು ಸರಕಾರವನ್ನು ತಕ್ಷಣ ವಜಾಗೊಳಿಸಬೇಕು. ಗೋಲಿಬಾರ್‌ ಸಂಬಂಧ ಉನ್ನತ ಮಟ್ಟದ ಸಮಗ್ರ ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು. ಸ್ವರಾಜ್‌ ಇಂಡಿಯಾ ಪಾರ್ಟಿಯ ಮುಖಂಡ ಎಚ್‌.ಎಸ್‌.ಲಿಂಗೇಗೌಡ, ಕರ್ನಾಟಕ ಜನಶಕ್ತಿ ಸಂಘಟನೆ ಮುಖಂಡ ಎನ್‌.ನಾಗೇಶ್‌,ಪ್ರಕಾಶ್‌, ಸಂತೋಷ್‌, ಪುಷ್ಪಾ, ರಜನಿಕಾಂತ್‌, ಸಿದ್ದರಾಜು, ಸುಬ್ರಮಣ್ಯ, ಸೋಮಶೇಖರ್‌ ಇತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ