ಆ್ಯಪ್ನಗರ

ಧಾರಾಕಾರ ಮಳೆಗೆ ಕೋಡಿ ಹರಿದ ಕೆರೆ, ಕಟ್ಟೆ

ಹಲವೆಡೆ ಜಮೀನು ಜಲಾವೃತ ವಿಕ ಸುದ್ದಿಲೋಕ ಮಂಡ್ಯ ಜಿಲ್ಲೆಯಲ್ಲಿ ಭಾನುವಾರ ಮಧ್ಯರಾತ್ರಿಯಿಂದ ಸೋಮವಾರ ಬೆಳಗ್ಗೆವರೆಗೆ ಧಾರಾಕಾರ ಮಳೆಯಾಗಿದ್ದು, ತಗ್ಗು ಪ್ರದೇಶಗಳಿಗೆ ನೀರು ...

Vijaya Karnataka 25 Sep 2018, 5:00 am
ಹಲವೆಡೆ ಜಮೀನು ಜಲಾವೃತ
Vijaya Karnataka Web rain effect in mandya district lakes filled up and crop loss
ಧಾರಾಕಾರ ಮಳೆಗೆ ಕೋಡಿ ಹರಿದ ಕೆರೆ, ಕಟ್ಟೆ

ಮಂಡ್ಯ: ಜಿಲ್ಲೆಯಲ್ಲಿ ಭಾನುವಾರ ಮಧ್ಯರಾತ್ರಿಯಿಂದ ಸೋಮವಾರ ಬೆಳಗ್ಗೆವರೆಗೆ ಧಾರಾಕಾರ ಮಳೆಯಾಗಿದ್ದು, ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದೆ. ಇದಲ್ಲದೆ ಜಮೀನುಗಳು ಜಲಾವೃತಗೊಂಡು ಬೆಳೆಯೂ ಹಾನಿಯಾಗಿದೆ. ಭರ್ತಿಯಂಚಿನಲ್ಲಿದ್ದ ಕೆರೆಕಟ್ಟೆಗಳು ತುಂಬಿ ಕೋಡಿ ಬಿದ್ದು ಹರಿಯುತ್ತಿವೆ.

ಮಧ್ಯರಾತ್ರಿ 1ರ ಸಮಯದಲ್ಲಿ ಶುರುವಾದ ಮಳೆ ಬೆಳಗ್ಗೆ 8ರವರೆಗೂ ಧಾರಾಕಾರವಾಗಿ ಸುರಿಯಿತು. ಮಳೆಯೊಂದಿಗೆ ಭಾರಿ ಗುಡುಗು, ಸಿಡಿಲುಗಳು ಮಲಗಿದ್ದ ಜನರನ್ನು ಬೆಚ್ಚಿ ಬೀಳಿಸುತ್ತಿದ್ದವು. ಬೆಳಗ್ಗೆ 8ರ ವೇಳೆಗೆ ಜೋರು ಮಳೆ ಸ್ವಲ್ಪ ಕಡಿಮೆಯಾಯಿತಾದರೂ 10.30ರವರೆಗೂ ಸಣ್ಣ ಹನಿಗಳೊಂದಿಗೆ ಮುಂದುವರಿದಿತ್ತು.

ಸಿಡಿಲಿನಿಂದ ಯಾವುದೇ ಅನಾಹುತವಾಗಿಲ್ಲವಾದರೂ ಮಳೆ ನೀರು ನುಗ್ಗಿದ್ದರಿಂದ ತಗ್ಗು ಪ್ರದೇಶಗಳಲ್ಲಿ ಜನರು ರಸ್ತೆಯಲ್ಲಿ ನೀರು ನಿಂತು ಪರದಾಡುವಂತಾಗಿತ್ತು. ಮಂಡ್ಯ ತಾಲೂಕು ಹೊಳಲು ಗ್ರಾಮದ ಎಚ್‌.ಡಿ.ಚೌಡಯ್ಯ ಬಡಾವಣೆಯಲ್ಲಿ ಮನೆಗೆ ನೀರು ನುಗ್ಗಿದ್ದು, ರಸ್ತೆ ತುಂಬೆಲ್ಲಾ ನೀರು ನಿಂತಿತ್ತು. ಸೇತುವೆ ಬಳಿ ಕಟ್ಟಿಕೊಂಡಿದ್ದ ಚರಂಡಿ ತೆರವುಗೊಳಿಸಿ, ಸರಾಗವಾಗಿ ನೀರು ಹರಿಯುವಂತೆ ಮಾಡಲು ಸ್ಥಳೀಯರು ಹರಸಾಹಸಪಟ್ಟರು.

ಇದರೊಂದಿಗೆ ಮಂಡ್ಯ ನಗರದ ಹೊರವಲಯದ ಕಿರಂಗೂರು ಗೇಟ್‌ ಬಳಿ ಬೆಂಗಳೂರು-ಮೈಸೂರು ಹೆದ್ದಾರಿ ಬದಿಯಲ್ಲಿನ ಜಮೀನುಗಳು ಜಲಾವೃತಗೊಂಡಿದ್ದವು. ಸತೀಶ್‌ ಎಂಬುವರಿಗೆ ಸೇರಿದ 1 ಎಕರೆ ಜಮೀನಿನಲ್ಲಿ ವ್ಯಕ್ತಿಯ ಸೊಂಟದವರೆಗೆ ನೀರು ನಿಂತಿದ್ದು, ಭತ್ತ ಬೆಳೆ ಹಾಗೂ ತೆಂಗಿನ ಸಸಿಗಳು ನಾಶವಾಗಿವೆ. ಇದಲ್ಲದೆ ಅಕ್ಕಪಕ್ಕದ ಜಮೀನಿನ ಭತ್ತದ ಗದ್ದೆಗಳಲ್ಲೂ ನೀರು ನಿಂತಿತ್ತು.

ಕಿರಗಂದೂರು ಗ್ರಾಮದ ಬಳಿಯಿಂದ ಹೆದ್ದಾರಿ ಬಳಿಗೆ ಸಂಪರ್ಕ ಕಲ್ಪಿಸುವ ಕಾಲುವೆಯಲ್ಲಿ ನೀರು ತುಂಬಿದ್ದು ಇದಕ್ಕೆ ಕಾರಣವಾಗಿತ್ತು. ಹಳ್ಳದ ನೀರು ಜಮೀನಿಗೆ ನುಗ್ಗುತ್ತದೆ. ಪಟ್ಟಲದಮ್ಮನ ದೇವಾಲಯ ಕಡೆಯಿಂದ ಕಾಲುವೆ ಮಾಡಿದರೆ ಜಮೀನುಗಳಿಗೆ ನೀರು ನುಗ್ಗುವುದಿಲ್ಲ. ಆದರೀಗ ಮಳೆಯಿಂದಾಗಿ ಹಳ್ಳ ತುಂಬಿ ನಮ್ಮ 1 ಎಕರೆ ಜಮೀನಿನಲ್ಲಿ ಮೂರು ಅಡಿಯಷ್ಟು ನಿಂತಿದೆ. ಬೆಳೆಯೂ ನಾಶವಾಗಿದೆ ಎಂದು ಕಿರಗಂದೂರು ಗ್ರಾಮದ ಸತೀಶ್‌ ಅಳಲು ತೋಡಿಕೊಂಡರು.

ಇಲ್ಲದೆ ನಗರದ ಹೊರವಲಯದ ಅರ್ಕೇಶ್ವರ ದೇವಾಲಯ ಬಳಿಯ ಹಳ್ಳವೂ ತುಂಬಿ, ಸೇತುವೆ ಮೇಲೆ ನೀರು ಹರಿಯುತ್ತಿತ್ತು. ಹಲವು ವರ್ಷಗಳಿಂದ ಈ ಹಳ್ಳ ತುಂಬಿರಲಿಲ್ಲ. ತುಂಬಿದರೂ ಸೇತುವೆ ಮಟ್ಟದಲ್ಲಿ ನೀರು ಹರಿದಿರಲಿಲ್ಲ. ಆದರೆ, ಭಾನುವಾರ ರಾತ್ರಿ ಸುರಿದ ಮಳೆಯಿಂದಾಗಿ ಹಳ್ಳದ ಸೇತುವೆ ಮೇಲೂ ನೀರು ಹರಿದಿದ್ದು, ಸ್ಥಳೀಯರು ಆಶ್ಚರ್ಯ ವ್ಯಕ್ತಪಡಿಸಿದರು.

ಉಕ್ಕಿ ಹರಿದ ವಿರಿಜಾ ನಾಲೆ

ಭಾನುವಾರ ರಾತ್ರಿ ಸುರಿದ ಮಳೆಗೆ ವಿರಿಜಾ ನಾಲೆ ಉಕ್ಕಿ ಹರಿದ ಪರಿಣಾಮ ಶ್ರೀರಂಗಪಟ್ಟಣ ತಾಲೂಕಿನ ಬೊಮ್ಮೂರು ಅಗ್ರಹಾರ, ನಗುವನಹಳ್ಳಿ, ಮೇಳಾಪುರ, ಹಂಪಾಪುರ, ಚೆನ್ನಹಳ್ಳಿ, ತರೀಪುರ, ಮಹದೇವಪುರ, ಹೆಬ್ಬಾಡಿ ಗ್ರಾಮಗಳಲ್ಲಿ ನಾಲೆ ವ್ಯಾಪ್ತಿಯ ನೂರಾರು ಎಕರೆ ಭತ್ತ, ಕಬ್ಬು, ತರಕಾರಿ ಬೆಳೆಗೆ ನೀರು ನುಗ್ಗಿದೆ.

ಜಿಲ್ಲೆಯಲ್ಲಿ ಸರಾಸರಿ 36.90 ಮಿ.ಮೀ. ಮಳೆ

ಮಂಡ್ಯ: ಭಾನುವಾರ ರಾತ್ರಿಯಿಂದ ಸೋಮವಾರ ಬೆಳಗ್ಗೆವರೆಗೆ ಸುರಿದ ಮಳೆಯಿಂದಾಗಿ ಜಿಲ್ಲೆಯಲ್ಲಿ ಸರಾಸರಿ 36.90 ಮಿ.ಮೀ. ಮಳೆಯಾಗಿದೆ. ಕಳೆದೆರಡು ತಿಂಗಳಿಂದ ಜಿಲ್ಲೆಯಲ್ಲಿ ಇಂತಹ ಮಳೆಯಾಗಿರಲಿಲ್ಲ. ಎರಡು ತಿಂಗಳಲ್ಲಿ ಇದೇ ದೊಡ್ಡ ಪ್ರಮಾಣದ ಮಳೆಯಾಗಿದೆ.

ಶ್ರೀರಂಗಪಟ್ಟಣ ತಾಲೂಕಿನಲ್ಲಿ ಅತಿ ಹೆಚ್ಚು(52.1 ಮಿ.ಮೀ.) ಹಾಗೂ ಕೆ.ಆರ್‌.ಪೇಟೆ ತಾಲೂಕಿನಲ್ಲಿ ಅತಿ ಕಡಿಮೆ(29.5 ಮಿ.ಮೀ.) ಮಳೆಯಾಗಿದೆ. ಉಳಿದಂತೆ ಮದ್ದೂರಿನಲ್ಲಿ 48.9 ಮಿ.ಮೀ., ಮಂಡ್ಯ ತಾಲೂಕಿನಲ್ಲಿ 45.2 ಮಿ.ಮೀ., ಮಳವಳ್ಳಿಯಲ್ಲಿ 40.1 ಮಿ.ಮೀ., ಪಾಂಡವಪುರದಲ್ಲಿ 33.4 ಮಿ.ಮೀ. ಹಾಗೂ ನಾಗಮಂಗಲ ತಾಲೂಕಿನಲ್ಲಿ 24.3 ಮಿ.ಮೀ. ಮಳೆ ಬಿದ್ದಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ