ಪಾಂಡವಪುರ: ಜಿಲ್ಲಾ ಖಜಾನೆಯಿಂದ ತರಲಾದ ವೈರಮುಡಿ ಮತ್ತು ರಾಜಮುಡಿ ಕಿರೀಟಗಳನ್ನು ಪಟ್ಟಣದಲ್ಲಿ ತಾಲೂಕು ಆಡಳಿತ ಹಾಗೂ ಭಕ್ತರು, ಸಾರ್ವಜನಿಕರು ವಿಶೇಷ ಪೂಜೆ ಸಲ್ಲಿಸುವ ಮೂಲಕ ಬರಮಾಡಿಕೊಳ್ಳಲಾಯಿತು.
ಮಂಡ್ಯ ಜಿಲ್ಲಾ ಖಜಾನೆಯಿಂದ ಪೊಲೀಸ್ ಬಂದೋಬಸ್ತ್ ಮೂಲಕ ಮೈಸೂರಿನ ಪರಕಾಲಮಠದ ವಾಹನದಲ್ಲಿ ತರಲಾದ ವೈರಮುಡಿ ಮತ್ತು ರಾಜಮುಡಿ ಕಿರೀಟವನ್ನು ಪಟ್ಟಣಕ್ಕೆ ಆಗಮಿಸುತ್ತಿದ್ದಂತೆ ಭಕ್ತ ಸಮೂಹ ಬರಮಾಡಿಕೊಂಡಿತು.
ಮಂಡ್ಯದಿಂದ ಬೆಂಗಳೂರು-ಶ್ರೀರಂಗಪಟ್ಟಣದ ಕಿರಂಗೂರು -ದರಸಕುಪ್ಪೆ ಮೂಲಕ ಬಂದ ಕೀರಿಟವನ್ನು ರೈಲ್ವೆ ನಿಲ್ದಾಣದ ಶ್ರೀ ವೆಂಕಟೇಶ್ವರ ದೇವಸ್ಥಾನದಲ್ಲಿರಿಸಿ ಭಕ್ತರು ಪೂಜೆ ಸಲ್ಲಿಸಲು ಅವಕಾಶ ನೀಡಲಾಯಿತು. ನಂತರ ಕೆನ್ನಾಳು ಗೇಟ್, ಹರಳಹಳ್ಳಿ ಮಾರಮ್ಮನ ದೇವಸ್ಥಾನ, ಪಟ್ಟಣದ ಬನ್ನಾರಮ್ಮನ ದೇವಸ್ಥಾನ, ಮೂಲಕ ಪಟ್ಟಣದ ಮಿನಿ ವಿಧಾನ ಸೌಧಕ್ಕೆ ತೆರಳಿತು. ಅಲ್ಲಿ ತಾಲೂಕು ಕಚೇರಿಯ ಅಧಿಕಾರಿಗಳು ವೈರಮುಡಿ ಮತ್ತು ರಾಜಮುಡಿ ಕೀರಿಟವನ್ನು ತಲೆ ಮೇಲೆ ಹೊತ್ತು ತಾಲೂಕು ಕಚೇರಿ ಆವರಣದಲ್ಲಿ ಕೆಲ ಕಾಲ ಇರಿಸಿ ಪೂಜೆ ಸಲ್ಲಿಸಿದರು. ಈ ವೇಳೆ ಆವರಣದಲ್ಲಿ ನೆರೆದಿದ್ದ ಸಾರ್ವಜನಿಕರಿಗೆ ನೀರು ಮಜ್ಜಿಗೆ, ಬೆಲ್ಲದ ಪಾನಕ ವಿತರಿಸಲಾಯಿತು.
ನಂತರ ಪಟ್ಟಣದ ಡಾ.ರಾಜ್ಕುಮಾರ್ ವೃತ್ತ, ಕುಂಟೇಗೌಡರ ರೈಸ್ಮಿಲ್ ಬಳಿ, ಸಿದ್ದಿಮಂಟಪ, ಹಿರೇಮರಳಿ ವೃತ್ತ, ಮಾಳವಯ್ಯನ ಛತ್ರ, ಬೀರಶೆಟ್ಟಹಳ್ಳಿ, ಹಿರೇಮರಳಿ ಗೇಟ್, ಬನಘಟ್ಟ ಆಂಜನೇಯ ದೇವಸ್ಥಾನ, ಕೆ.ಹೊಸೂರು ಗೇಟ್ನಲ್ಲಿ ಸಾರ್ವಜನಿಕರು ಕಿರೀಟಗಳಿಗೆ ಪೂಜೆ ಸಲ್ಲಿಸಿ ನಮಿಸಿದರು. ನಂತರ ಟಿ.ಎಸ್.ಛತ್ರದ ಲಕ್ಷ್ಮೀವೆಂಕಟರಮಣಸ್ವಾಮಿ ದೇವಸ್ಥಾನದ ಅರ್ಚಕರು ವೈರಮುಡಿ ಮತ್ತು ರಾಜಮುಡಿಯನ್ನು ಬರಮಾಡಿಕೊಂಡು ಪೂಜೆ ಪುನಸ್ಕಾರ ಸಲ್ಲಿಸಿದರು. ಇಲ್ಲಿ ನೆರೆದಿದ್ದ ಭಕ್ತರಿಗೆ ಲಘು ಉಪಹಾರದ ವ್ಯವಸ್ಥೆಯನ್ನು ಸಹಾ ಮಾಡಲಾಗಿತ್ತು. ನಂತರ ಅದೇ ಮಾರ್ಗವಾಗಿ ಇಂಗಲಕುಪ್ಪೆ ಗೇಟ್, ಮಹದೇಶ್ವರಪುರ, ನೀಲನಹಳ್ಳಿ ಗೇಟ್, ಹೊಸಕೋಟೆ, ಹಳೇಬೀಡು ಗೇಟ್, ಬೆಳ್ಳಾಳೆ, ಮಾಣಿಕ್ಯನಹಳ್ಳಿ, ಅಮೃತಿ, ನ್ಯಾಮನಹಳ್ಳಿ ಮೂಲಕ ಜಕ್ಕನಹಳ್ಳಿ ಸರ್ಕಲ್ ಪ್ರವೇಶಿಸಿ, ತದನಂತರ ಕದಲಗೆರೆ ಮಾರ್ಗವಾಗಿ ಸಂಜೆ ವೇಳೆಗೆ ಮೇಲುಕೋಟೆ ತಲುಪಿತು. ದಾರಿಯುದ್ದಕ್ಕೂ ವೈರಮುಡಿ ಹಾಗೂ ರಾಜಮುಡಿ ಕಿರೀಟಕ್ಕೆ ಭಕ್ತರಿಂದ ವಿಶೇಷ ಪೂಜೆಸಲ್ಲಿಸಲಾಯಿತು. ಇದೇ ವೇಳೆ ಅಲ್ಲಲ್ಲಿ ಅರವಟ್ಟಿಗೆಗಳನ್ನು ನಿರ್ಮಿಸಿ ಸಾರ್ವಜನಿಕರಿಗೆ ಮಜ್ಜಿಗೆ, ಪಾನಕ, ಕೋಸಂಬರಿ ಹಾಗೂ ವಿವಿಧ ರೀತಿಯ ಸಿಹಿ ತಿನಿಸುಗಳನ್ನು ವಿತರಿಸಲಾಯಿತು.