ಆ್ಯಪ್ನಗರ

ಅಪಾಯದಲ್ಲಿ ಶ್ರೀರಂಗಪಟ್ಟಣ ಕೋಟೆ

ಎಡೆಬಿಡದೇ ಸುರಿಯುತ್ತಿರುವ ಧಾರಾಕಾರ ಮಳೆಗೆ ಪಾರಂಪರಿಕ ನಗರಿ ಶ್ರೀರಂಗಪಟ್ಟಣದ ಐತಿಹಾಸಿಕ ಕೋಟೆಯ ಒಂದಿಷ್ಟು ಭಾಗ ಕುಸಿದು ಬಿದ್ದಿದೆ !

Vijaya Karnataka 18 Oct 2017, 5:36 am
ನಾಲ್ಕುನೂರು ವರ್ಷಗಳ ಐತಿಹ್ಯದ ಮೂರು ಸುತ್ತಿನ ಕೋಟೆ ಕುಸಿಯಲಾರಂಭಿಸಿದೆ !
Vijaya Karnataka Web srirangapatna fort in danger
ಅಪಾಯದಲ್ಲಿ ಶ್ರೀರಂಗಪಟ್ಟಣ ಕೋಟೆ


ಜಿ.ಎನ್.ರವೀಶ್‌ಗೌಡ ಶ್ರೀರಂಗಪಟ್ಟಣ: ಎಡೆಬಿಡದೇ ಸುರಿಯುತ್ತಿರುವ ಧಾರಾಕಾರ ಮಳೆಗೆ ಪಾರಂಪರಿಕ ನಗರಿ ಶ್ರೀರಂಗಪಟ್ಟಣದ ಐತಿಹಾಸಿಕ ಕೋಟೆಯ ಒಂದಿಷ್ಟು ಭಾಗ ಕುಸಿದು ಬಿದ್ದಿದೆ !

ಮಂಡ್ಯ ಜಿಲ್ಲೆಯಲ್ಲಿ ಈ ಬಾರಿ ಉತ್ತಮ ಮಳೆಯಾಗುತ್ತಿರುವುದರಿಂದ ಸುಮಾರು 400 ವರ್ಷಗಳ ಇತಿಹಾಸವಿರುವ ಕೋಟೆಗೆ ಶಿಥಿಲ ಭಾಗಗಳು ಅಪಾಯಕ್ಕೆ ಸಿಲುಕಿವೆ. ಪಾರಂಪರಿಕ ಸ್ಮಾರಕ ಹಾಗೂ ಪ್ರಾಚ್ಯವಸ್ತುಗಳ ವಿಷಯದಲ್ಲಿ ಮೈಸೂರಿಗಿಂತಲೂ ಶ್ರೀಮಂತ ವಾಗಿರುವ ಶ್ರೀರಂಗಪಟ್ಟಣ- ಮೂರು ಸುತ್ತಿನ ಕೋಟೆಗಳನ್ನು ಹೊಂದಿದೆ. ಐತಿಹಾಸಿಕ ದಾಖಲೆಗಳ ಪ್ರಕಾರ- 1450ರಲ್ಲಿ ಶ್ರೀರಂಗ ಪಟ್ಟಣವನ್ನು ಆಳುತ್ತಿದ್ದ ವಿಜಯನಗರ ಅರಸರ ಕಾಲದಲ್ಲಿ ಶ್ರೀರಂಗಪಟ್ಟಣಕ್ಕೆ ದಂಡನಾಯಕನಾಗಿ ನೇಮಕಗೊಂಡಿದ್ದ ನಾಗಮಂಗಲ ತಿಮ್ಮಣ್ಣ ಹಾಗೂ ನಂತರ ಪಟ್ಟಣವನ್ನು ಆಳಿದ ಟಿಪ್ಪು-ಹೈದರಾಲಿಯರು ಕೋಟೆಯನ್ನು ಅಭಿವೃದ್ಧಿ ಪಡಿಸಿದ್ದರು. ದಂಡನಾಯಕ ಈ ಕೋಟೆಗಳನ್ನು ನಿರ್ಮಾಣ ಮಾಡಿದ್ದ.

ಕೋಟೆಯ ಸುತ್ತ ಸಂಚರಿಸಿದ ವಿಜಯ ಕರ್ನಾಟಕ ಪ್ರತಿನಿಧಿಗೂ ಈ ಅವಸ್ಥೆ ಕಂಡು ಬಂದಿತು. ‘‘ಪಟ್ಟಣದ ಪುರಸಭೆ ಕಚೇರಿಗೆ ಹೊಂದಿಕೊಂಡಿರುವ ಕೋಟೆ ಬಾಗಿಲು ಬಳಿ 30 ಮೀಟರ್ ಉದ್ದ ಕುಸಿದಿದ್ದು ಕೋಟೆಗೆ ಅಳವಡಿಸಿದ್ದ ಕಲ್ಲುಗಳು ನೆಲಕ್ಕೆ ಜಾರಿವೆ. ಶ್ರೀರಂಗನಾಥಸ್ವಾಮಿ ದೇವಾಲಯ ಎದುರು ಇರುವ ಕಾರಾಗೃಹ ಹಿಂಭಾಗ 40 ಮೀಟರ್ ಉದ್ದ ಕೋಟೆ ಗೋಡೆ ಕುಸಿದಿದ್ದು, ಚುರುಕಿಗಾರೆ ಸಮೇತ ಕಲ್ಲುಗಳು ಜಾರಿಕೊಂಡಿವೆ. ಶಂಭೂಲಿಂಗನಕಟ್ಟೆ ಬಳಿ ಎತ್ತರದಲ್ಲಿ ನಿರ್ಮಾಣ ಮಾಡಿದ್ದ ಕೋಟೆ ಗೋಡೆಯ ಮಣ್ಣು ಕುಸಿದಿದ್ದು ನೆಲ ಭಾಗದಲ್ಲಿ ನಿರ್ಮಾಣ ಮಾಡಿದ್ದ ಚರಂಡಿ ಮುಚ್ಚಿಹೋಗಿದೆ. ಆನೆ ಕೋಟೆಯೂ 30 ಮೀಟರ್ ಉದ್ದ ಕುಸಿದಿದ್ದು ಕೋಟೆಗೆ ಅಳವಡಿಸಿದ್ದ ಕಲ್ಲುಗಳು ಜಾರಿಕೊಂಡಿವೆ. ಕೋಟೆಗೋಡೆಯಲ್ಲಿ ಆಳೆತ್ತರ ಗಿಡ,ಗಂಟಿಗಳು ಬೆಳೆದು ನಿಂತಿವೆ. ಸೂಕ್ತ ನಿರ್ವಹಣೆ ಇಲ್ಲದೆ ನಾನಾ ಜಾತಿಯ ಗಿಡ,ಗಂಟಿಗಳು ಬೇರುಗಳಿಂದ ಕಲ್ಲುಗಳು ಸಡಿಲಗೊಳ್ಳುತ್ತಿವೆ, ಸುರಿವ ಮಳೆಗೆ ಮಣ್ಣು ಸಮೇತ ಕೋಟೆ ಗೋಡೆ ಕುಸಿದು ಬೀಳುತ್ತಿದೆ,’’ ಎಂದು ಜಿಲ್ಲಾ ಪಾರಂಪರಿಕ ಸಮಿತಿಯ ಸದಸ್ಯರೊಬ್ಬರು ಪತ್ರಿಕೆಗೆ ತಿಳಿಸಿದರು.
ಭಾರತೀಯ ಪ್ರಾಚ್ಯವಸ್ತು ಸರ್ವೇ ಕ್ಷಣಾಲಯ ಹಾಗೂ ರಾಜ್ಯ ಪ್ರಾಚ್ಯವಸ್ತು ಇಲಾಖೆ ಅಧಿಕಾರಿಗಳು ಕೂಡಲೇ ಕೋಟೆ ಯ ಬಗ್ಗೆ ನಿಗಾ ವಹಿಸಿ, ಅದರ ದುರಸ್ತಿಗೆ ಕ್ರಮ ವಹಿಸಬೇಕೆಂದು ಅವರು ಆಗ್ರಹಿಸಿದರು.

ಕೋಟೆ ಕಟ್ಟಿದ ದಂಡನಾಯಕ
1450ರಲ್ಲಿ ಶ್ರೀರಂಗಪಟ್ಟಣವನ್ನು ಆಳುತ್ತಿದ್ದ ನಾಗಮಂಗಲ ತಿಮ್ಮಣ್ಣ ನಾಯಕ ಕೋಟೆ ಕಟ್ಟುವ ಕೆಲಸ ಶುರು ಮಾಡಿದೆ. ಬಳಿಕ ವಿಜಯನಗರ ಅರಸರು, ಯದುವಂಶದ ಅರಸರು, ಹೈದರಾಲಿ. ಟಿಪ್ಪು ಸುಲ್ತಾನ್ ಆಡಳಿತ ಅವಧಿಯವರೆಗೂ ಕೋಟೆ ಹಂತ, ಹಂತವಾಗಿ ಅಭಿವೃದ್ಧಿ ಪಡಿಸಿದರು. ಶ್ರೀರಂಗಪಟ್ಟಣ ಸುತ್ತ ಮೂರು ಸುತ್ತು ಕೋಟೆ ನಿರ್ಮಾಣ ಮಾಡಲಾಗಿತ್ತು. ಕೋಟೆ ಸುತ್ತಲೂ ಕಂದಕಗಳನ್ನು ನಿರ್ಮಾಣ ಮಾಡಿ ಕಾವೇರಿ ನದಿ ನೀರು ಕಂದಕದಲ್ಲಿ ಹರಿಯುವಂತೆ ವ್ಯವಸ್ಥೆ ಮಾಡಲಾಗಿತ್ತು. ಶತ್ರು ಸೈನಿಕರು ಕೋಟೆಯೊಳಗೆ ಪ್ರವೇಶ ಮಾಡದಂತೆ ಈ ವ್ಯವಸ್ಥೆ ಮಾಡಲಾಗಿತ್ತು. ಮೈಸೂರು ಗೇಟ್, ಬೆಂಗಳೂರು ಗೇಟ್, ದಿಲ್ಲಿಗೇಟ್ ಹೆಸರಿನಲ್ಲಿ ಗೇಟ್‌ಗಳನ್ನು ನಿರ್ಮಾಣ ಮಾಡಲಾಗಿತ್ತು. ಆನೆಯ ಮೇಲೆ ರಾಜ ಮಹಾರಾಜರು ಪುರ ಪ್ರವೇಶ ಮಾಡು ತ್ತಿದ್ದರು. ಹಾಗಾಗಿ ಎತ್ತರದ ಬಾಗಿಲು ಗಳನ್ನು ಕೋಟೆಗೆ ಅಳವಡಿಸಲಾಗಿತ್ತು. ಕೋಟೆಯ ಮೇಲ್ಬಾಗದಲ್ಲಿ ಕಾವಲು ಗೋಪುರಗಳನ್ನು ನಿರ್ಮಾಣ ಮಾಡಲಾಗಿತ್ತು. ಸೈನಿಕರು 24 ಗಂಟೆಯೂ ಗೋಪುರಗಳ ಮೇಲೆ ನಿಂತು ಕಾವಲು ಕಾಯುತ್ತಿದ್ದರು ಎಂದು ಇತಿಹಾಸ ವನ್ನು ವಿವರಿಸುತ್ತಾರೆ ಶ್ರೀರಂಗಪಟ್ಟಣ ಪಾರಂಪರಿಕ ಸಮಿತಿ ಸದಸ್ಯ ತೈಲೂರು ವೆಂಕಟಕೃಷ್ಣ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ