ಶ್ರೀರಂಗಪಟ್ಟಣ: ಪುರಸಭೆ ವ್ಯಾಪ್ತಿಯಲ್ಲಿ ಮನೆಗಳ ಕುಡಿಯುವ ನೀರು ನಲ್ಲಿಗಳಿಗೆ ಮೀಟರ್ ಅಳವಡಿಕೆ ವಿರೋಧಿಸಿ ಪಟ್ಟಣ ಹಾಗೂ ಗಂಜಾಂನ ನಾನಾ ವಾರ್ಡ್ಗಳ ನಿವಾಸಿಗಳು ಪುರಸಭೆ ಎದುರು ಶನಿವಾರ ಬೃಹತ್ ಪ್ರತಿಭಟನೆ ನಡೆಸಿದರು.
ಪಟ್ಟಣದ ಮುಖ್ಯ ಬೀದಿಯಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿ ಪುರಸಭೆ ವಿರುದ್ಧ ಘೋಷಣೆ ಕೂಗಿದರು. ಒಂದು ಗಂಟೆಗೂ ಕಾಲ ಹೆಚ್ಚು ಪ್ರತಿಭಟನೆ ನಡೆಸಿದರು. ನಲ್ಲಿಗಳ ಮೂಲಕ ಕುಡಿಯಲು ಬಳಸುತ್ತಿದ್ದೇವೆ. ಮೀಟರ್ ಅಳವಡಿಸುವುದರಿಂದ ಜನರು ಹೆಚ್ಚುವರಿಯಾಗಿ ನೀರಿಗೆ ತೆರಿಗೆ ಹಣ ಪಾವತಿಸಬೇಕು. ಇದರಿಂದ ಹೆಚ್ಚಿನ ಹೊರೆ ಬೀಳುತ್ತದೆ. ಮೀಟರ್ ಅಳವಡಿಸುವುದರಿಂದ ನಲ್ಲಿ ಸಂಪರ್ಕ ಇಲ್ಲದವರು ಅಕ್ಕ ಪಕ್ಕದ ಮನೆಗಳಿಂದ ನೀರು ಪಡೆಯುವುದು ಕಷ್ಟವಾಗುತ್ತದೆ. ಹಾಗಾಗಿ ಮೀಟರ್ ಅಳವಡಿಕೆ ಬೇಡ ಎಂದು ಒತ್ತಾಯಿಸಿದರು.
24/7 ಕುಡಿಯುವ ನೀರು ಪೈಪ್ಲೈನ್ ಅಳವಡಿಸುವ ನೆಪದಲ್ಲಿ ಪಟ್ಟಣದ ರಂಗನಾಥನಗರ, ಚಾಮುಂಡೇಶ್ವರಿ ಬೀದಿ, ಗೋವಿಂದಪ್ಪ ಬೀದಿ, ಜೈನ ಬಸೀದಿ ಹಿಂಭಾಗ, ರಾಂಪಾಲ್ ರಸ್ತೆಗಳನ್ನು ಬೇಕಾಬಿಟ್ಟಿ ಅಗೆಯಲಾಗಿದೆ. 6 ತಿಂಗಳ ಹಿಂದಷ್ಟೇ ಕಾಮಗಾರಿ ಮುಗಿದಿರುವ ರಸ್ತೆಗಳನ್ನು ಅಗೆದರೆ ಹೇಗೆ? ರಸ್ತೆಗಳ ಯಥಾಸ್ಥಿತಿ ಕಾಮಗಾರಿಗೆ ಆದ್ಯತೆ ನೀಡಬೇಕು ಎಂದು ಪುರಸಭೆ ಮುಖ್ಯಾಧಿಕಾರಿಗೆ ಮನವಿ ಸಲ್ಲಿಸಿದರು.
ಮನವಿ ಸ್ವೀಕರಿಸಿದ ಪುರಸಭೆ ಮುಖ್ಯಾಧಿಕಾರಿ ಲೋಕೇಶ್ ಮಾತನಾಡಿ, ಕುಡಿಯುವ ನೀರು ಸರಬರಾಜು ಮಾಡುವ ನಲ್ಲಿಗಳಿಗೆ ಮೀಟರ್ ಅಳವಡಿಕೆ ಮಾಡುವುದರಿಂದ ಹೆಚ್ಚಿನ ಹೊರೆ ಬೀಳುತ್ತದೆ ಎಂಬುದು ತಪ್ಪು ಮಾಹಿತಿ. ತಿಂಗಳಿಗೆ 25 ಸಾವಿರ ಲೀಟರ್ ನೀರು ಬಳಸಿದರೂ ಕನಿಷ್ಠ ಶುಲ್ಕ ಮಾತ್ರ ಪಾವತಿ ಮಾಡಬೇಕಾಗುತ್ತದೆ. ಅದಕ್ಕಿಂತ ಅಧಿಕ ನೀರು ಬಳಸುವವರಿಗೆ ಮಾತ್ರ ಹೆಚ್ಚು ಹಣ ಪಾವತಿಸಬೇಕಾಗ್ತುದೆ. ಹಾಗೆ ಬಳಕೆ ಮಾಡಿದ ನೀರಿನ ಆಧಾರದ ಮೇಲೆ ಮೀಟರ್ ಜಾರ್ಜ್ ವಿಧಿಸಲಾಗುತ್ತದೆ ಎಂದು ಮನವರಿಕೆ ಮಾಡಿಕೊಟ್ಟರು.
24/7 ಪೈಪ್ಲೈನ್ಗೆ ಕಾಮಗಾರಿಗೆ ಅಗೆದಿರುವ ರಸ್ತೆ ದುರಸ್ತಿ ಮಾಡುವಂತೆ ಕಾಮಗಾರಿ ನೀಡುವ ಮುನ್ನ ಗುತ್ತಿಗೆದಾರರಿಗೆ ಸೂಚಿಸಲಾಗಿದೆ. ಪೈಪ್ ಅಳವಡಿಸಿದ ನಂತರ ರಸ್ತೆ ಸರಿಪಡಿಸಲಾಗುವುದು ಎಂದರು. ಆದರೆ, ನಿವಾಸಿಗಳು ಮಾತ್ರ ಮೀಟರ್ ಅಳವಡಿಕೆ ಹಿಂಪಡೆಯಬೇಕು ಎಂದು ಪಟ್ಟ ಹಿಡಿದರು.
ಈ ಬಗ್ಗೆ ಸಾಧಕ, ಬಾಧಕಗಳ ಕುರಿತು ಪುರಸಭೆ ಸದಸ್ಯರ ಜತೆ ಚರ್ಚಿಸಿದ ನಂತರ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದ ಬಳಿಕ ಪ್ರತಿಭಟನೆ ಹಿಂಪಡೆದರು.
ಪುರಸಭೆ ಸದಸ್ಯರಾದ ಎಸ್.ಪ್ರಕಾಶ್, ನಳಿನಿ ಸತ್ಯಪ್ಪ, ಹಿಂದೂ ಜಾಗರಣ ವೇದಿಕೆ ಮುಖಂಡ ಚಂದನ್, ಗಂಜಾಂ ರವೀಶ್, ಲಕ್ಷ್ಮಿನಾರಾಯಣ, ಮನೋಹರ್, ಮಹೇಂದ್ರ ಸೇರಿದಂತೆ ನೂರಾರು ಮಹಿಳೆಯರು ಪಾಲ್ಗೊಂಡಿದ್ದರು.